Sunday, May 24, 2015

Shrimad BhAgavata in Kannada -Skandha-02-Ch-07(11)

ಹಯಗ್ರೀವರೂಪಿಯಾಗಿ ಚತುರ್ಮುಖನಿಗೆ ವೇದೋಪದೇಶ ಮಾಡಿದ ಭಗವಂತ

    ಸತ್ರೇ ಮಮಾಸ ಭಗವಾನ್ ಹಯಶೀರ್ಷ ಏಷಃ ಸಾಕ್ಷಾತ್  ಸ ಯಜ್ಞಪುರುಷಸ್ತಪನೀಯವರ್ಣಃ
    ಛಂದೋಮಯೋ ಮಖಮಯೋಖಿಲದೇವತಾತ್ಮಾ ವಾಚೋ ಬಭೂವುರುಶತೀಃ ಶ್ವಸತೋSಸ್ಯ ನಸ್ತಃ ೧೧

ಚತುರ್ಮುಖನಿಗೆವೇದೋಪದೇಶ ಮಾಡಿದ ಭಗವಂತನ ಅವತಾರ ಹಯಗ್ರೀವ ಅವತಾರ. ಇಲ್ಲಿ ಚತುರ್ಮುಖ ಹೇಳುತ್ತಾನೆ: “ ನಾನು ಭಗವಂತನನ್ನು ಯಜ್ಞದಲ್ಲಿ ಆರಾಧನೆ ಮಾಡಬೇಕು ಎಂದು ಸಂಕಲ್ಪ ಮಾಡಿದಾಗ, ನನ್ನ ಯಜ್ಞವನ್ನು ಸ್ವೀಕರಿಸಲು ಭಗವಂತ ಯಜ್ಞಪುರುಷ ಹಯಗ್ರೀವನಾಗಿ ಕಾಣಿಸಿಕೊಂಡ” ಎಂದು.  ಮುಂದುವರಿದು ಬ್ರಹ್ಮದೇವರು ಹೇಳುತ್ತಾರೆ: ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದ ಆ ಹಯಗ್ರೀವ ಮೂರ್ತಿಗೆ ನಾನು ಯಜ್ಞದ ಹವಿಸ್ಸನ್ನು ತಿನ್ನಿಸಿದೆ” ಎಂದು.
ಎಲ್ಲಾ ವೇದೋಪದೇಶಗಳೂ ಭಗವಂತನ ಹಯಗ್ರೀವ ರೂಪದಿಂದಲೇ  ಆಗಿರುವುದನ್ನು ನಾವು ಕಾಣುತ್ತೇವೆ.  ಶುಕ್ಲ ಯಜುರ್ವೇದವನ್ನು ಸೂರ್ಯನ ಅಂತರ್ಯಾಮಿಯಾಗಿ ಯಾಜ್ಞವಲ್ಕ್ಯರಿಗೆ ಉಪದೇಶಿಸಿದಾಗಲೂ ಸಹ ಭಗವಂತ ಯಾಜ್ಞವಲ್ಕ್ಯರಿಗೆ ದರ್ಶನ ಕೊಟ್ಟಿದ್ದು ಹಯಗ್ರೀವ ರೂಪದಿಂದಲೇ. ಕುದುರೆ(ಹಯ) ವೇಗದ ಸಂಕೇತ. ಇದು ಮನುಷ್ಯರು ‘ಪ್ರಯಾಣಕ್ಕೆ ಬಳಸುವ ಪ್ರಾಣಿ’ ಗಳಲ್ಲೇ ವೇಗವಾಗಿ ಸಾಗಬಲ್ಲ ಪ್ರಾಣಿ.  ಆಧ್ಯಾತ್ಮಿಕವಾಗಿ ನೋಡಿದರೆ  ವೇದ ಅರ್ಥವಾಗಲು ಬೇಕಾಗಿರುವುದು ಬುದ್ಧಿಶಕ್ತಿಯ ವೇಗ.  ವೇದ ನಮಗೆ ಅರ್ಥವಾಗಬೇಕಾದರೆ ಹತ್ತಾರು ಜನ್ಮಗಳ ಸಾಧನೆ ಬೇಕು. ಭಗವಂತನ ಹಯಗ್ರೀವ ರೂಪ ಬುದ್ಧಿಶಕ್ತಿಯ ವೇಗವನ್ನು  ಪ್ರತಿನಿಧಿಸುವ ರೂಪ ಎನ್ನಬಹುದು.
ಹೊಂಬಣ್ಣದ ಪುತ್ತಳಿಯಂತೆ ಕಾಣಿಸಿಕೊಂಡ ಭಗವಂತ ಚತುರ್ಮುಖನಿಗೆ ಹಯಗ್ರೀವ ರೂಪದಿಂದ ದರ್ಶನ ಕೊಟ್ಟ.  “ಸಮಸ್ತ ವೇದಗಳಿಂದ ಪ್ರತಿಪಾಧ್ಯನಾದ, ಸಮಸ್ತ ಯಜ್ಞಗಳಿಂದ ಆರಾಧ್ಯನಾದ, ಸಮಸ್ತ ದೇವತೆಗಳ ಒಳಗೆ ಅಂತರ್ಯಾಮಿಯಾಗಿ ನೆಲೆಸಿರುವ, ಸರ್ವಶಬ್ದವಾಚ್ಯ ಭಗವಂತ ಹಯಗ್ರೀವ ರೂಪದಲ್ಲಿ ಕಾಣಿಸಿಕೊಂಡು  ನನಗೆ ವೇದೋಪದೇಶ ಮಾಡಿದ” ಎನ್ನುತ್ತಾನೆ ಚತುರ್ಮುಖ. ಯಾವ ರೀತಿ ಕುದುರೆ ವೇದವನ್ನು ಉಪದೇಶ ಮಾಡಬಲ್ಲದು ಎಂದು ನೀವಿಲ್ಲಿ ಪ್ರಶ್ನಿಸಬಹುದು.  ಇದಕ್ಕೆ ಚತುರ್ಮುಖ ಹೇಳುತ್ತಾನೆ: “ ಭಗವಂತನ ಉಸಿರಿನಿಂದ ವೇದ ನನ್ನ ಕಿವಿಗೆ ಹರಿದು ಬಂತು” ಎಂದು. ಹೀಗೆ ಸ್ವಾಯಮ್ಬುವ ಮನ್ವಂತರದಲ್ಲಿ ವಿಶೇಷವಾಗಿ ಚತುರ್ಮುಖನಿಗೆ ಅನುಗ್ರಹ ಮಾಡಿದ ಭಗವಂತನ ರೂಪ ಈ ಹಯಗ್ರೀವ ರೂಪ. ಇಲ್ಲಿಗೆ  ಸ್ವಾಯಂಭುವ ಮನ್ವಂತರದಲ್ಲಿನ ಭಗವಂತನ ಅವತಾರಗಳ ವಿವರಣೆ ಮುಗಿಯಿತು. ಸ್ವಾಯಂಭುವ ಮನ್ವಂತರದಲ್ಲಿನ ಐತರೇಯ ನಾಮಕ ಅವತಾರ ಮತ್ತು ತಾಪಸ ಮನ್ವಂತರದಲ್ಲಿ ಭಗವಂತ ತಾಪಸ ಮನುವಾಗಿ ಅವತರಿಸಿರುವ ವಿವರಣೆಯನ್ನು ಇಲ್ಲಿ ವಿವರಿಸಿಲ್ಲ. ಇದರ ವಿವರಣೆಯನ್ನು ಭಾಗವತದಲ್ಲಿ ಮುಂದಿನ ಸ್ಕಂಧಗಳಲ್ಲಿ ನಾವು ಕಾಣಬಹುದು. ಆದರೆ ಇಲ್ಲಿ  ಇನ್ನು ಮುಂದೆ ನಾವು ವೈವಸ್ವತ ಮನ್ವಂತರದಲ್ಲಿ ನಡೆದಿರುವ ಭಗವಂತನ ಅವತಾರಗಳ ವಿವರಣೆಯನ್ನು ಕಾಣುತ್ತೇವೆ.

Saturday, May 23, 2015

Shrimad BhAgavata in Kannada -Skandha-02-Ch-07(10)

ವೈರಾಗ್ಯಮೂರ್ತಿ ವೃಷಭದೇವ  

ನಾಭೇರಸಾವೃಷಭ ಆಸ ಸುದೇವಿಸೂನುರ್ಯೋ ವೈ ಚಚಾರ ಸಮದೃಗ್ ಹೃದಿ ಯೋಗಚರ್ಯಾಮ್
ಯತ್ ಪಾರಮಹಂಸ್ಯಮೃಷಯಃ ಪದಮಾಮನಂತಿ ಸ್ವಸ್ಥಃ ಪ್ರಶಾಂತಕರಣಃ ಪರಿಮುಕ್ತಸಂಗಃ ೧೦

ಉತ್ತಾನಪಾದನ ಸಹೋದರ ಪ್ರಿಯವ್ರತ. ಈತ ಏನೂ ಬೇಡ ಎಂದು ವೈರಾಗ್ಯದಿಂದ ತಪಸ್ಸನ್ನಾಚರಿಸಿದ. ಆಗ ಬ್ರಹ್ಮದೇವರು ಬಂದು ಆತನ ತಪಸ್ಸಿನ ಉದ್ದೇಶ ಏನು ಎಂದು ಕೇಳುತ್ತಾರೆ. ಆಗ ಆತ “ಎಲ್ಲವನ್ನೂ ತೊರೆದು ನಿವೃತ್ತ ಜೀವನದಿಂದ ಭಗವಂತನ ಅನುಗ್ರಹ ಪಡೆಯಬೇಕು ಎನ್ನುವ ಉದ್ದೇಶದಿಂದ ತಾನು ತಪಸ್ಸನ್ನಾಚರಿಸುತ್ತಿದ್ದೇನೆ” ಎಂದನಂತೆ. ಆಗ ಬ್ರಹ್ಮದೇವರು ಹೇಳುತ್ತಾರೆ:  “ಕೇವಲ ಸಂನ್ಯಾಸ ಜೀವನದಿಂದ ಮಾತ್ರ ಭಗವಂತನ ಒಲುಮೆ  ಸಾಧ್ಯ ಎನ್ನುವ ನಿನ್ನ ಕಲ್ಪನೆ ತಪ್ಪು, ಕೆಲವರಿಗೆ ಸಂನ್ಯಾಸದಿಂದ ಭಗವಂತನ ಅನುಗ್ರಹ, ಇನ್ನು ಕೆಲವರಿಗೆ  ಗ್ರಹಸ್ತ ಜೀವನದಿಂದ ಅನುಗ್ರಹ.  ಯಾರು ಭಗವಂತನ ಉಪಾಸನೆ ಮಾಡುತ್ತಾರೋ ಅವರನ್ನು ಭಗವಂತ ಉದ್ಧಾರ ಮಾಡುತ್ತಾನೆ. ಜೀವಯೋಗ್ಯತೆಗೆ ಅನುಕೂಲವಾದಂತಹ ಸಾಧನೆ ಶ್ರೇಷ್ಠ. ನೀನು ಸಂನ್ಯಾಸಿಯಾಗಿ ಸಾಧನೆ ಮಾಡಲು ಹುಟ್ಟಿದವನಲ್ಲ.  ನೀನು ಗ್ರಹಸ್ಥನಾಗು, ರಾಜ್ಯಭಾರ ಮಾಡಿ ಅದರ ಮೂಲಕ ಭಗವಂತನ ಸೇವೆ ಮಾಡು” ಎಂದು. ಬ್ರಹ್ಮದೇವರ ಆದೇಶದಂತೆ ಪ್ರಿಯವ್ರತ ಗ್ರಹಸ್ತನಾದ. ಚಕ್ರವರ್ತಿಯಾಗಿ ಮೆರೆದ. ಪ್ರಿಯವ್ರತನ ಹೆಂಡದಿರರಲ್ಲಿ ಒಬ್ಬಳಾದ  ‘ಬರ್ಹಿಷ್ಮತಿ’  ಎನ್ನುವವಳಲ್ಲಿ ‘ಆಗ್ನೀಂಧ್ರ’ ಎನ್ನುವ ಮಗ ಹುಟ್ಟಿದ. ಈ ಆಗ್ನೀಂಧ್ರನ  ಮಗನ ಹೆಸರು ನಾಭಿ. ಈ ನಾಭಿ ರಾಜನ ಹೆಂಡತಿ ಸುದೇವಿ/ಸುಮೇರು. `ಈ ದಂಪತಿಗಳು ತಮಗೆ ಭಗವಂತನಂತಹ ಮಗ ಹುಟ್ಟಬೇಕು ಎಂದು ಅಪೇಕ್ಷೆಪಟ್ಟು ಯಜ್ಞ ಮಾಡುತ್ತಾರೆ. ಭಗವಂತನಂತಹ ಇನ್ನೊಬ್ಬ ಮಗ ಇರಲು ಸಾಧ್ಯವೇ? ಹೀಗಾಗಿ ದಂಪತಿಗಳ ಅಪೇಕ್ಷೆಯಂತೆ ಸ್ವಯಂ ಭಗವಂತನೇ ಅವರ ಮಗನಾಗಿ ಹುಟ್ಟಿದ.  ಅವನೇ ವೃಷಭದೇವ. ಈತ ಮುಂದೆ ಚಕ್ರವರ್ತಿಯಾಗಿ ಮೆರೆದ. ಈತನ ಮಗನ ಹೆಸರು ಭರತ. ಈ ಭರತ ಚಕ್ರವರ್ತಿಯಿಂದಾಗಿ ಈ ದೇಶಕ್ಕೆ ಭಾರತ ಎನ್ನುವ ಹೆಸರು ಬಂತು(ದುಷ್ಯಂತನ ಮಗ ಭರತ ಮತ್ತು ವೃಷಭದೇವನ ಮಗ ಭರತ ಬೇರೆಬೇರೆ. ದುಷ್ಯಂತನ ಮಗ ಭರತನಿಂದಾಗಿ ಈ ದೇಶವನ್ನಾಳಿದ ರಾಜವಂಶಕ್ಕೆ ಭಾರತವಂಶ ಎನ್ನುವ ಹೆಸರು ಬಂತು) ಈ ಹಿಂದೆ ಹೇಳಿದಂತೆ ಈ ದೇಶದ ಹೆಸರು ಅಂಜನಾಭ ಎಂದಿದ್ದು, ಭರತ ಚಕ್ರವರ್ತಿಯ ಆಡಳಿತ ಕಾಲದ ನಂತರ ಅದು ಭಾರತ ಎನ್ನುವ ಹೆಸರಿನಿಂದ ಕರೆಯಲ್ಪಟ್ಟಿತು.
ವೃಷಭದೇವನಾಗಿ ಭಗವಂತನ ಅವತಾರ ಸ್ವಾಯಂಭುವ ಮನ್ವಂತರದ  ಒಂದು ವಿಶೇಷ. ಜೈನಧರ್ಮದ ಇಪ್ಪತ್ತನಾಲ್ಕು ತೀರ್ಥಂಕರರಲ್ಲಿ  ವೃಷಭದೇವನೂ ಒಬ್ಬ ಮತ್ತು ಆತನನ್ನು  ಆದಿ ತೀರ್ಥಂಕರ ಎಂದು ಕರೆಯುತ್ತಾರೆ. ವೃಷಭದೇವನ ಕಾಲದ ನಂತರ ವೈದಿಕ ಮತಕ್ಕಿಂತ ಭಿನ್ನವಾದ ಒಂದು ಕವಲು ಪ್ರಾರಂಭವಾಯಿತು. ಕೆಲವರು ವೃಷಭನನ್ನು ನೋಡಿ ತಮ್ಮದೇ ಆದ ಒಂದು ಪಂಥ ಕಟ್ಟಿದರು. ಹೀಗೆ ಮಾಡಿದವರಲ್ಲಿ ಮೊದಲಿಗೆ ‘ಜಿನ’. ಹೀಗಾಗಿ ಆ ಪಂಥಕ್ಕೆ ‘ಜೈನ’ ಎನ್ನುವ ಹೆಸರು ಬಂತು.  ವೃಷಭದೇವನಿಂದಾಗಿ ಈ ದೇಶದ ಆಧ್ಯಾತ್ಮಿಕ ವಿಚಾರಧಾರೆ ಎರಡು ಕವಲಾಯಿತು. ಆತ ಚಕ್ರವರ್ತಿಯಾಗಿ ಮೆರೆದ, ಆದರೂ ಕೂಡಾ ಸಂನ್ಯಾಸಿಯಂತೆ ಬದುಕಿ ತೋರಿಸಿದ. ಜನರಿಗೆ ಸರಿಯಾದ ಆಡಳಿತ ಕೊಟ್ಟು ಅವರನ್ನು ಸರಿಯಾದ ರೀತಿಯಲ್ಲಿ ಇರಗೊಳಿಸಿದ ವೃಷಭದೇವ, ಅರಮನೆಯ ಭೋಗದಲ್ಲಿ ಆಸಕ್ತಿ ತೋರದೇ  ಸಂನ್ಯಾಸಿಯಂತೆ ಬದುಕಿ ತೋರಿದ. ವೃಷಭದೇವನ ಬದುಕು ಸಂನ್ಯಾಸಿಗಳಲ್ಲಿ ಅತ್ಯಂತ ಎತ್ತರದ ಸ್ಥಾನದಲ್ಲಿರುವ ಪರಮಹಂಸರಿಗೆ ಉದಾಸ್ಯವಾಯಿತು. [ಸಂನ್ಯಾಸದಲ್ಲಿ ನಾಲ್ಕು ಬಗೆ. ಕುಟೀಚಕ, ಬಹೂದಕ, ಹಂಸ, ಪರಮಹಂಸ. ಮನೆಯಲ್ಲಿ ಇದ್ದು ಸಂನ್ಯಾಸ ಮಾಡುವವ ಕುಟೀಚಕ. ಮನೆಯನ್ನು ತೊರೆಯದೆ ಹತ್ತೂರು ತಿರುಗುವವನು ಬಹೂದಕ. ಯಜ್ಞೋಪವೀತ ತೊರೆಯದ ದಂಡಿ ಹಂಸ. ಅಗ್ನಿಮುಖದಲ್ಲಿ ಕ್ರಿಯೆ ಇರದ, ಯಜ್ಞೋಪವೀತ ತೊರೆದ ಏಕದಂಡಿ ಪರಮಹಂಸ]
ಸಂನ್ಯಾಸ ಪದ್ಧತಿಗೆ ಮೂಲ ವೃಷಭದೇವ. ಸಂನ್ಯಾಸಿಯಾಗುವವನು ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡು, ಸರ್ವಭೂತೇಭ್ಯೋ ಭಯಂ ದತ್ತಂ ಮಯಾ, ಭೂಃ ಅನಿರುದ್ಧಾಯ ಸ್ವಾಹಾ-ಸಂನ್ಯಸ್ತಮ್ ಮಯಾ; ಭುವಃ ಪ್ರದ್ಯುಮ್ನಾಯ ಸ್ವಾಹಾ- ಸಂನ್ಯಸ್ತಮ್ ಮಯಾ; ಸುವಃ ಸಂಕರ್ಷಣಾಯ ಸ್ವಾಹಾ-ಸಂನ್ಯಸ್ತಮ್ ಮಯಾ; ಭೂರ್ಭುವಃ ಸುವಃ ವಾಸುದೇವಾಯ ಸಂನ್ಯಸ್ತಮ್ ಮಯಾ. ಈ ರೀತಿ ತೋಳೆತ್ತಿ ಘೋಷಣೆ ಮಾಡಬೇಕು. “ಅನಿರುದ್ಧ ನಾಮಕ ಭಗವಂತನನ್ನು ನೆನೆದು ಭೌತಿಕ ಪ್ರಪಂಚದ ಎಲ್ಲಾ ಸಂಪರ್ಕಗಳನ್ನು ತೊರೆವ ಪ್ರತಿಜ್ಞೆ; ಪ್ರದ್ಯುಮ್ನ ನಾಮಕ ಭಗವಂತನನ್ನು ನೆನೆದು ಅಂತರಿಕ್ಷದ ಸಂಪತ್ತನ್ನು ತೊರೆವ ಪ್ರತಿಜ್ಞೆ; ಸಂಕರ್ಷಣ ನಾಮಕ ಭಗವಂತನನ್ನು ನೆನೆದು ಮನಸ್ಸು-ಬುದ್ಧಿ-ಚಿತ್ತವನ್ನು ಭಗವಂತನಿಗೆ ಅರ್ಪಿಸಿ ; ಕೊನೆಗೆ ಎಲ್ಲವನ್ನೂ ನಾರಾಯಣನಿಗೆ ಅರ್ಪಿಸಿ “ಇನ್ನು ಮೇಲೆ ‘ನನಗೆ ಬೇಕು’ ಎಂದು ನಾನು ಬಯಸುವುದಿಲ್ಲ” ಎಂದು ಪ್ರತಿಜ್ಞೆ ಮಾಡಿ,  ಯಾವ ಪ್ರಾಣಿಗೂ ಭಯ ಬರುವಂತೆ ನಾನು ವರ್ತಿಸುವುದಿಲ್ಲ ಎಂದು ಎಲ್ಲರಿಗೂ ಅಭಯವನ್ನು ಕೊಟ್ಟು, ಕೇಶ ಮಂಡನ ಮಾಡಿ, ಉಟ್ಟ ಬಟ್ಟೆ, ಯಜ್ಞೋಪವೀತ, ಎಲ್ಲವನ್ನೂ ನೀರಿನಲ್ಲಿ ಬಿಟ್ಟು,  ಬತ್ತಲಾಗಿ ಬಂದು ಗುರುಗಳಿಗೆ ದಂಡ ಪ್ರಣಾಮ ಮಾಡಬೇಕು. ಗುರುಗಳು ಆತನಿಗೆ ಬಟ್ಟೆ ತೊಡಿಸಿ ಪ್ರಣವ ಧೀಕ್ಷೆ ಕೊಡಬೇಕು. ಇದು ಪ್ರಾಚೀನ ಸಂನ್ಯಾಸ ಪದ್ಧತಿ. ಇದಕ್ಕೆ ಮೂಲ ವೃಷಭದೇವ. ಎಲ್ಲವನ್ನೂ, ಉಟ್ಟ ಬಟ್ಟೆಯನ್ನೂ ತೊರೆದು ಸಾಗುವವ ಪರಮಹಂಸ. ಈ ರೀತಿ ಎಲ್ಲವನ್ನೂ ತೊರೆದು ಹೋಗುವ ಸಂಪ್ರದಾಯವನ್ನು ಪ್ರಾರಂಭ ಮಾಡಿದವ ವೃಷಭದೇವ. ಈ ಕಾರಣದಿಂದಲೇ ಭಗವಂತನ ಈ ರೂಪ ಪರಮಹಂಸರಿಗೆ ಉಪಾಸ್ಯವಾದ ಮತ್ತು ಗಮ್ಯವಾದ ರೂಪ.
ವೃಷಭದೇವ ಏಕೆ ಸಂನ್ಯಾಸಿಗಳಿಗೆ ಸ್ಫೂರ್ತಿ ಎನ್ನುವುದಕ್ಕೆ ಒಂದು ಕಥೆ ಇದೆ. ತನ್ನ ಮಗ ಭರತ ಪ್ರಾಯಕ್ಕೆ ಬಂದ ತಕ್ಷಣ ವೃಷಭದೇವ ಆತನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ, ಸಮಸ್ತವನ್ನೂ ತೊರೆದು, “ತನ್ನದು ಎನ್ನುವುದು ಯಾವುದೂ ಇಲ್ಲಾ” ಎಂದು ಹೇಳಿ, ಉಟ್ಟ ಬಟ್ಟೆಯನ್ನೂ ತೊರೆದು ಬತ್ತಲಾಗಿ ಕಾಡಿಗೆ ಹೊರಟುಹೋದ. ಇದೇ ಸಂನ್ಯಾಸ ವಿಧಿಯಾಗಿ ಆನಂತರ ಧರ್ಮಶಾಸ್ತ್ರದಲ್ಲಿ ದಾಖಲೆಯಾಯಿತು. ಸಂಪೂರ್ಣ ಬಟ್ಟೆ ತೊರೆದು ತಿರುಗುವ ಜೈನ ಧರ್ಮದ ದಿಗಂಬರ ಸಂನ್ಯಾಸಿಗಳಿಗೂ ಕೂಡಾ ಈ ವೃಷಭದೇವನೇ ಸ್ಫೂರ್ತಿ. ಇದು ನಿರ್ಲಿಪ್ತತೆಯ ಆಳವನ್ನು ಜಗತ್ತಿಗೆ ತೋರಿದ ಭಗವಂತನ ರೂಪ.  ಆದರೆ ಈ ಸತ್ಯವನ್ನು ಅರಿಯದ ಅಂದಿನ ಜನ “ಈತನಿಗೆ ಬುದ್ಧಿ ಕೆಟ್ಟಿದೆ” ಎಂದು ಮಾತನಾಡಿಕೊಂಡರು. ಆದರೆ ನಿರ್ಲಿಪ್ತತೆಯ ಪರಾಕಾಷ್ಠೆಯಾದ ವೃಷಭದೇವ ಅಂತರಂಗದ ಆನಂದದಲ್ಲಿ ಹೇಗೆ ನಿರ್ಲಿಪ್ತತೆ ಸಾಧ್ಯ ಎನ್ನುವುದನ್ನು ಲೋಕಕ್ಕೆ ತೋರಿದ. ಈ ರೀತಿ  ಎಲ್ಲವನ್ನೂ ತೊರೆದ ವೃಷಭದೇವ ಕುಟಕಾಚಲಕ್ಕೆ  (ಇಂದಿನ ಕೊಲ್ಲೂರಿನ ಕೊಡಚಾದ್ರಿ) ಬಂದು ಅಲ್ಲಿ ಅಜಗರ ವೃತ್ತಿಯಲ್ಲಿ ಬದುಕಿದ. ಜನ ಏನಾದರೂ ಕೊಟ್ಟರೆ ಅದನ್ನು ತಿನ್ನುವುದು, ಇಲ್ಲದಿದ್ದರೆ ಇಲ್ಲ. ತಿನ್ನುವಾಗ ಸದಾ ಕರಪಾತ್ರೆಯಲ್ಲೇ ತಿನ್ನುತ್ತಿದ್ದ. (ಹೀಗಾಗಿ ಸಂನ್ಯಾಸಿಗಳು ತಿನ್ನುವಾಗ ಯಾವುದೇ ಪಾತ್ರೆ ಉಪಯೋಗಿಸದೇ ಕರಪಾತ್ರೆಯಲ್ಲಿ ತಿನ್ನುತ್ತಾರೆ).   ಕೂದಲನ್ನು ಕೈಯಿಂದ ಕಿತ್ತುಕೊಂಡ(ಜೈನ ಸಂನ್ಯಾಸಿಗಳು ಇಂದಿಗೂ ತಮ್ಮ ಕೂದಲನ್ನು ಕೈಯಿಂದ ಕಿತ್ತುಕೊಳ್ಳುತ್ತಾರೆ).  

ಒಂದು ದಿನ ಕುಟಕಾಚಲದ ಕಾಡಿಗೆ ಭಯಂಕರವಾದ ಕಾಳ್ಗಿಚ್ಚು ಹರಡಿತು. ವೇದವ್ಯಾಸರು ಹೇಳುವಂತೆ: ಭಗವಂತ ಯೋಗಾಗ್ನಿಯನ್ನು ಸೃಷ್ಟಿಮಾಡಿ, ಅದರಲ್ಲಿ ಅದೃಷ್ಯನಾಗಿ, ವಿಚಿತ್ರವಾಗಿ ತನ್ನ ಅವತಾರ ಸಮಾಪ್ತಿ ಮಾಡಿದ. 

Sunday, May 17, 2015

Shrimad BhAgavata in Kannada -Skandha-02-Ch-07(09)


ಪೃಥುವಿನಲ್ಲಿ ಪೃಥುವಾದ ಭಗವಂತ
                                                                                                                                                                                  
ಯದ್ ವೇನಮುತ್ಪಥಗತಂ ದ್ವಿಜವಾಕ್ಯವಜ್ರ ನಿಷ್ಪಿಷ್ಟಪೌರುಷಭಗಂ ನಿರಯೇ ಪತಂತಮ್
ಜ್ಞಾತ್ವಾSರ್ಥಿತೋ ಜಗತಿ ಪುತ್ರಪದಂ ಚ ಲೇಭೇ ದುಗ್ಧಾ ವಸೂನಿ ವಸುಧಾ ಸಕಲಾನಿ ಯೇನ ೦೯

ಧ್ರುವನ ವಂಶದಲ್ಲೇ ಸುಮಾರು ೮-೧೦ ತಲೆಮಾರಿನ ನಂತರ ಭಗವಂತ ಆವೇಶಾವತಾರ ರೂಪಿಯಾಗಿ ಬಂದಿರುವುದನ್ನು ನಾವು ಕಾಣುತ್ತೇವೆ. ಧ್ರುವನ ವಂಶಸ್ಥನಾದ ಅಂಗರಾಜ ಒಬ್ಬ ಒಳ್ಳೆಯ ಅರಸನಾಗಿದ್ದ. ಆದರೆ ಆತನಿಗೆ ‘ವೇನ’ ಎನ್ನುವ ಅತ್ಯಂತ ಕೆಟ್ಟ ಸ್ವಭಾವದ ಮಗ ಹುಟ್ಟಿದ. ವೇನ ಅದೆಷ್ಟು ಕ್ರೂರಿಯಾಗಿದ್ದ ಎಂದರೆ, ಆಟವಾಡುವಾಗ ಚಿಕ್ಕ-ಚಿಕ್ಕ ಮಕ್ಕಳನ್ನು ಬಾವಿಗೆ ತಳ್ಳಿ ಅಲ್ಲಿ ಅವರು ಒದ್ದಾಡಿ ಸಾಯುವುದನ್ನು ಕಂಡು ಆತ ಕುಶಿ ಪಡುತ್ತಿದ್ದ. ಇಂಥಹ ಮಗನನ್ನು ಸರಿಪಡಿಸಲು ಅಂಗರಾಜನಿಂದ ಸಾಧ್ಯವಾಗಲಿಲ್ಲ. ಮಕ್ಕಳಾಗಲಿಲ್ಲ ಎಂದು ಕೊರಗುವವರಿದ್ದಾರೆ, ಆದರೆ ಅಂಗರಾಜ ಮಕ್ಕಳಾಯಿತಲ್ಲಾ ಎಂದು ಕೊರಗಿದೆ! “ಇಂಥಹ ನೀಚ ಮಗ ಹುಟ್ಟುವುದಕ್ಕಿಂತ ನಾನು ಅಪ್ಪನಾಗದೇ ಇದ್ದಿದ್ದರೆ ಚನ್ನಾಗಿರುತ್ತಿತ್ತು” ಎಂದು ಆತ ಮರುಗಿದ.

ಮಗನ ದೂರ್ತತನವನ್ನು ನೋಡಲಾಗದೇ ಒಂದು ದಿನ ಅಂಗರಾಜ ಯಾರಿಗೂ ಹೇಳದೇ ಅರಮನೆ ಬಿಟ್ಟು ಹೊರಟು ಹೋದ. ಆತ ಎಲ್ಲಿಗೆ ಹೋದ ಮತ್ತು ಎನಾದ ಎನ್ನುವುದನ್ನು ಪುರಾಣ ದಾಖಲಿಸುವುದಿಲ್ಲ. ಅಂಗರಾಜ ಹೊರಟು ಹೋದಮೇಲೆ ವೇನ ತಾನೇ ರಾಜ್ಯಭಾರವನ್ನು ಕೈಗೆತ್ತಿಕೊಂಡ. ಸಿಂಹಾಸನವೇರಿದ ಆತ ಮೊದಲು ಮಾಡಿದ ಆಜ್ಞೆ ಏನೆಂದರೆ: “ಯಾರೂ ದೇವರನ್ನು ಪೂಜಿಸಕೂಡದು. ಎಲ್ಲರಿಗೂ ದೇವರು ನಾನೇ” ಎಂದು. ದೇಶದಲ್ಲಿ ಬರಗಾಲ ಬಂದು ಹಸಿವಿಂದ ಜನ ಸಾಯುವ ಪರಿಸ್ಥಿತಿ ಬಂದು ಜನ ತತ್ತರಿಸಿದರು. ಆದರೆ ಕ್ರೂರಿಯಾಗಿದ್ದ ವೇನ ಮಾತ್ರ ಬದಲಾಗಲಿಲ್ಲ.  ಈ ಸಂದರ್ಭದಲ್ಲಿ ಋಷಿಗಳು ವೇನನಿಗೆ ಬುದ್ಧಿ ಕಲಿಸುವ ಸಂಕಲ್ಪ ಮಾಡಿದರು. ಹಿಂದೆ ರಾಜಸತ್ತೆ ಇದ್ದರೂ ಅದಕ್ಕೊಂದು ಗಣತಂತ್ರದ ಮುಖವಿತ್ತು. ರಾಜ ದಾರಿತಪ್ಪಿದಾಗ ಆತನನ್ನು ಅಧಿಕಾರದಿಂದ ಇಳಿಸುವ ಹಕ್ಕು ಪ್ರಜೆಗಳಿಗಿತ್ತು. ಹೀಗೆ ಋಷಿಗಳೆಲ್ಲರೂ ಸೇರಿ, ಭಗವಂತನನ್ನು ಪ್ರಾರ್ಥಿಸಿಕೊಂಡರು. ಅವರು ತಮ್ಮ ತಪಃಶಕ್ತಿಯನ್ನು ಬಳಸಿ, ಹೂಂಕಾರದಿಂದ ವೇನನನ್ನು ನಿಗ್ರಹಿಸಿ, ಅವನ ತೊಡೆಯ ಮಥನ ಮಾಡಿ, ಅಲ್ಲಿಂದ ಒಂದು ತೇಜಸ್ಸನ್ನು ತೆಗದು ಆತನನ್ನು ತಮ್ಮ ರಾಜನನ್ನಾಗಿ ಮಾಡಿದರು. ಆತನೇ ಪೃಥು.  ಇದು ಭಗವಂತನ ಆವೇಶಾವತಾರ.  ಋಷಿಗಳ ಪ್ರಾರ್ಥನೆಯನ್ನು ಮನ್ನಿಸಿ, ಪೃಥು ಚಕ್ರವರ್ತಿಯೊಳಗೆ ಪೃಥುವಾಗಿ ನಿಂತು, ನಾಗರಿಕತೆಯನ್ನು ಬೆಳೆಸಿ, ದೇಶವನ್ನು ಸಮೃದ್ಧ ಮಾಡಿದ ಭಗವಂತ. ಈ ಕಾರಣದಿಂದಾಗಿಯೇ ಭೂಮಿಗೆ ಪೃಥ್ವಿ (ಪೃಥು ರಾಜನ ಮಗಳು) ಎನ್ನುವ ಹೆಸರು ಬಂತು. 

Saturday, May 16, 2015

Shrimad BhAgavata in Kannada -Skandha-02-Ch-07(08)

ಬಾಲಕನಿಗೊಲಿದ ಧ್ರುವ ವರದ ವಾಸುದೇವ ರೂಪ

     ವಿದ್ಧಃ ಸಪತ್ನ್ಯುದಿತಪತ್ರಿಭಿರಂತಿ ರಾಜ್ಞೋ ಬಾಲೋSಪಿ ಸನ್ನಪಗತಸ್ತಪಸೇ ವನಾಯ
     ತಸ್ಮಾ ಅದಾದ್ ಧ್ರುವಗತಿಂ ಗೃಣತೇ ಪ್ರಸನ್ನೋ ದಿವ್ಯಾಃ ಸ್ತುವಂತಿ ಮುನಯೋ ಯದುಪರ್ಯಧಸ್ತಾತ್

ಸ್ವಾಯಂಭುವ ಮನುವಿನ ಮಗನಾದ ಉತ್ತಾನಪಾದನಿಗೆ ಇಬ್ಬರು ಹೆಂಡದಿರು. ಹಿರಿಯ ರಾಣಿ ಸುನೀತಿ ಹಾಗೂ ಕಿರಿಯವಳು ಸುರುಚಿ. ಸುನೀತಿಯ ಮಗ ಧ್ರುವ. ಈ ಧ್ರುವನ ತಪಸ್ಸಿಗೆ ಮೆಚ್ಚಿ ಒಲಿದು ಬಂದ ಭಗವಂತನ ರೂಪವೇ ಧ್ರುವವರದ ವಾಸುದೇವ ರೂಪ.  ಸಾಮಾನ್ಯವಾಗಿ ತಪಸ್ಸು ಮಾಡಿದವರಿಗೆ ಭಗವಂತ ಕೊಡುವ ದರ್ಶನರೂಪವನ್ನು ಒಂದು ಅವತಾರ ರೂಪ ಎಂದು ಪರಿಗಣಿಸುವುದಿಲ್ಲ. ಆದರೆ ಧ್ರುವನಿಗೊಲಿದ ವಾಸುದೇವ ರೂಪವನ್ನು ಒಂದು ಅವತಾರ ರೂಪವಾಗಿ ಪರಿಗಣಿಸುತ್ತಾರೆ. ಈ ವಾಸುದೇವ ರೂಪ ಭಗವಂತನ ಮೂಲ ವಾಸುದೇವ ರೂಪವಲ್ಲ. ಕೇಶವಾದಿ ಚತುರ್ವಿಂಶತಿ ರೂಪದಲ್ಲಿ ಸೇರಿದ ವಾಸುದೇವ ರೂಪ ಇದಲ್ಲ. ವಿಷ್ಣು ಸಹಸ್ರನಾಮದಲ್ಲಿ ಬರುವ ವಾಸುದೇವ ರೂಪವೂ ಇದಲ್ಲ. ಇದು ಧ್ರುವನಿಗಾಗಿ ಭಗವಂತ  ತಳೆದ ಅವತಾರ ರೂಪ. ಇದು ಧ್ರುವನ ಮೇಲೆ ಭಗವಂತ ತೋರಿದ ವಿಶಿಷ್ಠ ಕರುಣೆಯನ್ನು ತೋರುತ್ತದೆ. ಪ್ರಕಾಶಸಂಹಿತದಲ್ಲಿ ಹೇಳುವಂತೆ:  ಅವತಾರೋ ಮಹಾವಿಷ್ಣೋರ್ವಾಸುದೇವ ಇತೀರಿತಃ, ಯೋ  ಧ್ರುವಾಯ  ನಿಜಂ ಪ್ರಾದಾತ್ ಸ್ಥಾನಮನ್ಯಾನಧಿಷ್ಠಿತಮ್. ತನ್ನ ಒಂದು ಲೋಕವನ್ನು ಧ್ರುವನಿಗೆ ಕೊಟ್ಟ ವಿಷ್ಣುವಿನ ಅವತಾರ ಈ ವಾಸುದೇವ ಅವತಾರ.
ಧ್ರುವನ ಕುರಿತಾದ ಕಥೆ ಮುಂದೆ ವಿಸ್ತಾರವಾಗಿ ಬರುತ್ತದೆ. ಸಂಕ್ಷಿಪ್ತವಾಗಿ ಧ್ರುವನ ಕಥೆಯನ್ನು  ಹೇಳಬೇಕೆಂದರೆ: ಧ್ರುವ ಉತ್ತಾನಪಾದನ ಹಿರಿಯ ಹೆಂಡತಿ ಸುನೀತಿಯ ಮಗ.  ಉತ್ತಾನಪಾದನಿಗೆ ಇಬ್ಬರು ಹೆಂಡತಿಯರು. ಹಿರಿಯವಳು ಸುನೀತಿ ಹಾಗೂ ಕಿರಿಯವಳು ಸುರುಚಿ. ಈ ಹೆಸರುಗಳೇ ಸೂಚಿಸುವಂತೆ ಇವರು ಈ ಕಥೆಯಲ್ಲಿ  ಹೆಣ್ಣಿನ ಗುಣದ ಎರಡು ಮುಖಗಳನ್ನು ಪ್ರತಿನಿಧಿಸುತ್ತಾರೆ. ಸುನೀತಿ ತುಂಬಾ ನೀತಿವಂತೆ.  ಇದು ಹೆಣ್ಣಿನಲ್ಲಿರಬಹುದಾದ ವಿಶೇಷ ಗುಣ. ಗಂಡು ನೀತಿ ತಪ್ಪಬಹುದು ಆದರೆ ನೀತಿವಂತ ಹೆಣ್ಣು ಎಂದೂ, ಯಾವ ಸಂದರ್ಭದಲ್ಲೂ ನೀತಿ ತಪ್ಪಲಾರಳು. ಇನ್ನು ಸುರುಚಿ ಹೆಣ್ಣಿನ ವೇಷಭೂಷಣ, ಅಭಿರುಚಿ, ಆಸೆ-ಆಕಾಕ್ಷೆ, ಸ್ವಾಮ್ಯತೆ(Possessiveness), ಇತ್ಯಾದಿ ಗುಣಗಳನ್ನು  ಪ್ರತಿನಿಧಿಸುವ ಗುಣದಾಕೆ. ಎಲ್ಲವೂ ತಾನು ಅಂದುಕೊಂಡಂತೆ ಆಗಬೇಕು ಎನ್ನುವ ಮನೋಭಾವ ಸುರುಚಿಯದು. ಹಾಗೆ ಆಗದಿದ್ದಾಗ ಆಕೆ ಚಂಡಿಯಾಗುತ್ತಿದ್ದಳು!  ಇಲ್ಲಿ ಗಂಡಿನ ದೌರ್ಬಲ್ಯವನ್ನು ಪ್ರತಿನಿಧಿಸುವ ಪಾತ್ರ ಉತ್ತಾನಪಾದನದು. ಆತ ತಲೆ ಕೆಳಗೆ ಕಾಲು ಮೇಲೆ ಎಂಬಂತೆ ರೂಪಕ್ಕೆ ಮರುಳಾಗಿ ಸುನೀತಿಗಿಂತ ಹೆಚ್ಚಾಗಿ ಸುರುಚಿಯನ್ನು ಬಯಸಿದ. ಇದರ ಪರಿಣಾಮ ಸುರುಚಿಗೆ ಅಹಂಕಾರ ಬೆಳೆಯಿತು.  

  ಒಮ್ಮೆ ಧ್ರುವ ತನ್ನ ತಂದೆಯ ತೊಡೆಯಮೇಲೆ ಕುಳಿತುಕೊಳ್ಳಬೇಕು ಎಂದು ಆಸೆಪಟ್ಟ . ಇದನ್ನು ಕಂಡ ಸುರುಚಿ ಆತನಿಗೆ ಗದರಿ, ಆತನನ್ನು ಉತ್ತಾನಪಾದನ ತೊಡೆಯಿಂದ ಕೆಳಗಿಳಿಸಿ, “ನೀನು ಆ ತೊಡೆಯೇರಬೇಕಾದರೆ ನನ್ನ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು” ಎಂದು ತೀಕ್ಷ್ಣವಾಗಿ ಹೇಳಿ, “ಹೋಗು ದೇವರಲ್ಲಿ  ಆ ರೀತಿ  ಪ್ರಾರ್ಥಿಸು” ಎಂದು ಕಳುಹಿಸಿಬಿಟ್ಟಳು. ಈ ಸಂದರ್ಭದಲ್ಲಿ ಹೆಂಡತಿಯ ದಾಸನಾಗಿದ್ದ ಉತ್ತಾನಪಾದ ಏನನ್ನೂ ಹೇಳಲಿಲ್ಲ!  ಇದರಿಂದ ದುಃಖಿತಾನಾದ ಧ್ರುವ ತಾಯಿ ಸುನೀತಿಯ ಬಳಿ ಬಂದು ನಡೆದ ಘಟನೆಯನ್ನು ವಿವರಿಸಿದ. ಆತನನ್ನು ಸಾಂತ್ವಾನಗೊಳಿಸಿದ ಸುನೀತಿ “ದೇವರನ್ನು ಅನನ್ಯವಾಗಿ ಪ್ರಾರ್ಥಿಸಿದರೆ ಆತ ನಮ್ಮ ಕಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನು ಪೂರೈಸುತ್ತಾನೆ” ಎಂದು ಸಹಜವಾಗಿ ಹೇಳಿದಳು. ಇದನ್ನು ಗಾಢವಾಗಿ ಮನಸ್ಸಿನಲ್ಲಿಟ್ಟುಕೊಂಡ ಐದು ವರ್ಷದ ಬಾಲಕ ಧ್ರುವ, ಭಗವಂತನನ್ನು ಕಾಣಬೇಕು ಎಂದು ಮನೆ ಬಿಟ್ಟು ಕಾಡಿಗೆ ನಡೆದೇಬಿಟ್ಟ. ಈ ರೀತಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವ ಧೃಡಮನಸ್ಸಿನಿಂದ ಕಾಡಿನಲ್ಲಿ ನಡೆಯುತ್ತಿದ್ದ ಧ್ರುವನನ್ನು ಋಷಿಗಳು ಹರಸಿದರು. ನಾರದರು ಬಂದು ಆತನಿಗೆ “ಓಂ ನಮೋ ಭಗವತೇ ವಾಸುದೇವಾಯ” ಎನ್ನುವ ವಾಸುದೇವ ದ್ವಾದಶಾಕ್ಷರ ಮಂತ್ರ ಉಪದೇಶ ಮಾಡಿ ಹರಸಿದರು. ಹೀಗೆ ಮುನ್ನೆಡೆದ ಧ್ರುವ ಅನ್ನ-ನೀರನ್ನು ತೊರೆದು, ಭಗವಂತನ ಕುರಿತು ಐದು ತಿಂಗಳು ತಪಸ್ಸು ಮಾಡಿ, ಆತನನ್ನು ಒಲಿಸಿಕೊಂಡ. ಧ್ರುವನ ಭಕ್ತಿಗೆ ಮೆಚ್ಚಿದ ಭಗವಂತ ಪ್ರತ್ಯಕ್ಷನಾಗಿ ಮಗುವನ್ನು ಸಂತೈಸುತ್ತಾ ಹೇಳುತ್ತಾನೆ:  ನೀನು ತಂದೆಯ ತೊಡೆಯಲ್ಲಿ ಮಾತ್ರವಲ್ಲ, ಸಿಂಹಾಸನದಲ್ಲೇ ಕೂಡುತ್ತಿ; ಮುಂದೆ ಇಡಿಯ ಜ್ಯೋತಿಶ್ಚಕ್ರದ ಒಡೆತನ ನಿನ್ನದಾಗುತ್ತದೆ. ಎಲ್ಲಕ್ಕಿಂತ ಎತ್ತರದಲ್ಲಿ ನೀನಿರುವೆ” ಎಂದು.  ಹೀಗೆ ಕೇವಲ ತಂದೆಯ ತೊಡೆ, ಸಿಂಹಾಸನವನ್ನಷ್ಟೇ ಅಲ್ಲದೇ, ಮೇಲೆ ಮತ್ತು ಕೆಳಗೆ ದೇವತೆಗಳು, ಮುನಿಗಳು ಸ್ತುತಿಸುವ ಶಿಂಶುಮಾರರೂಪಿಯಾದ ಭಗವಂತನ ಸ್ಥಾನವಾದ ಧ್ರುವಲೋಕವನ್ನು ಆತ ಪಡೆಯುತ್ತಾನೆ.

Sunday, May 10, 2015

Shrimad BhAgavata in Kannada -Skandha-02-Ch-07(07)

ಪಾಲನೆ ಹಾಗೂ ಜ್ಞಾನ ಪ್ರವರ್ತಕ ರೂಪ-ಭಗವಂತನ ವಿಷ್ಣು ನಾಮಕ ರೂಪ

ತಪ್ತಂ ತಪೋ ವಿವಿಧಲೋಕಸಿಸೃಕ್ಷಯಾ ಮ ಆದೌ ಸನಾತ್ ಸುತಪಸಸ್ತಪತಃ ಸ ನೋSಭೂತ್
ಪ್ರಾಕ್ಕಲ್ಪಸಂಪ್ಲವವಿನಷ್ಟಮಿಹಾತ್ಮತತ್ತ್ವಂ ಸಮ್ಯಗ್ ಜಗಾದ ಮುನಯೋ ಯದಚಕ್ಷತಾತ್ಮನ್ ೦೫

ಚತುರ್ಮುಖ ಬ್ರಹ್ಮ ಸೃಷ್ಟಿ ವಿಸ್ತಾರಕ್ಕೆ ಬೇಕಾದ ಶಕ್ತಿಯನ್ನು ಪಡೆಯುವುದಕ್ಕೋಸ್ಕರ ಭಗವಂತನನ್ನು ಕುರಿತು ತಪಸ್ಸು ಮಾಡಿದಾಗ, ಭಗವಂತ ವಿಷ್ಣು ನಾಮಕನಾಗಿ ಚತುರ್ಮುಖನಿಂದ ಆವಿರ್ಭಾವನಾಗಿ ಬಂದ. ಈ ಅವತಾರ ಸನಕಾದಿಗಳು ಸೃಷ್ಟಿಯಾಗುವ ಮೊದಲೇ ನಡೆದ ಅವತಾರ. “ಇದು ಕೇವಲ ಪಾಲನೆ ಮಾಡುವ ಅವತಾರವಷ್ಟೇ ಅಲ್ಲ, ಈ ಅವತಾರದಲ್ಲಿ ಭಗವಂತ ನಷ್ಟವಾಗಿದ್ದ ಹಿಂದಿನ ಕಲ್ಪದಲ್ಲಿದ್ದ ಜ್ಞಾನ ಪರಂಪರೆಯನ್ನು ನನಗೆ ಉಪದೇಶ ಮಾಡಿದ. ಇದನ್ನು ಎಲ್ಲಾ ಋಷಿಗಳು ತಮ್ಮ ಅಂತರಾತ್ಮದಲ್ಲಿ ಕಂಡು ಉಪಾಸನೆ ಮಾಡಿದರು” ಎಂದಿದ್ದಾನೆ ಚತುರ್ಮುಖ.

ತಪಸ್ಸು ಅಂದರೇನು ಎಂದು ತೋರಿದ ಭಗವಂತನ ನರ-ನಾರಾಯಣ ರೂಪ

ಧರ್ಮಸ್ಯ ದಕ್ಷದುಹಿತರ್ಯಜನಿ ಸ್ವಮೂರ್ತ್ಯಾ ನಾರಾಯಣೋ ನರ ಇತಿ ಸ್ವತಪಃಪ್ರಭಾವಃ
ದೃಷ್ಟಾತ್ಮನೋ ಭಗವತೋ ನಿಯಮಾವಲೋಪಂ ದೇವ್ಯಸ್ತ್ವನಂಗಪೃತನಾ ಘಟಿತುಂ ನ ಶೇಕುಃ ೦೬

ಕಾಮಂ ದಹಂತಿ ಕೃತಿನೋ ನನು ರೋಷದೃಷ್ಟ್ಯಾ ರೋಷಂ ದಹಂತಮುತ ತೇ ನ ದಹಂತ್ಯಸಹ್ಯಮ್
ಸೋSಯಂ ಯದಂತರಮಲಂ ನಿವಿಶನ್ ಬಿಭೇತಿ ಕಾಮಃ ಕಥಂ ನು ಪುನರಸ್ಯ ಮನಃ ಶ್ರಯೇತ ೦೭


ಸ್ವಾಯಂಭುವ ಮನುವಿನ ಕೊನೇ ಮಗಳು ‘ಪ್ರಸೂತಿ’ ದಕ್ಷಪ್ರಜಾಪತಿಯ ಹೆಂಡತಿ. ಇವರ ದಾಂಪತ್ಯದಲ್ಲಿ ಹುಟ್ಟಿದ ಹದಿಮೂರು ಮಂದಿ ಹೆಣ್ಣು ಮಕ್ಕಳನ್ನು ‘ಧರ್ಮ’ ಮದುವೆಯಾದ.  ಈ ಹದಿಮೂರು ಮಂದಿಯಲ್ಲಿ ಕೊನೆಯವಳಾದ ‘ಮೂರ್ತಿ’ ಎನ್ನುವವಳಲ್ಲಿ ಭಗವಂತ ನರ-ನಾರಾಯಣನಾಗಿ  ಅವತರಿಸಿದ. ಒಂದು ಆವೇಶ ರೂಪ(ನರ) ಹಾಗೂ ಇನ್ನೊಂದು ಸ್ವರೂಪರೂಪ(ನಾರಾಯಣ). ನರ ಶೇಷನ ಸ್ವರೂಪ ರೂಪ.  ಆತನಲ್ಲಿ ಭಗವಂತನ ಆವೇಶವಿತ್ತು. ನಾರಾಯಣ ಎನ್ನುವುದು ಭಗವಂತನ ಸ್ವರೂಪರೂಪ. [ಇದೇ ದಂಪತಿಗಳಲ್ಲಿ ಹರಿ ಮತ್ತು ಕೃಷ್ಣ ಎನ್ನುವ ಎರಡು ಭಗವಂತನ ಅವತಾರವಾಗಿದ್ದು, ಅದನ್ನು ಇಲ್ಲಿ ವಿವರಿಸಿಲ್ಲ]. ನರ-ನಾರಾಯಣ ರೂಪ ತಪಸ್ಸು ಅಂದರೆ ಏನು ಎಂದು ಜಗತ್ತಿಗೆ ತೋರಿದ ಲೋಕೋದ್ಧಾರಕ ರೂಪ. ಲೋಕ ಸಂಗ್ರಹಃ ಮೇವಾಪಿ ಸಂಪಷ್ಯನ್ ಕರ್ತು ಮರ್ಹಸಿ. ಲೋಕಶಿಕ್ಷಣಕ್ಕಾಗಿ ತಪಸ್ಸು ಮಾಡಿ ಆತ್ಮಸಾಕ್ಷಾತ್ಕಾರ ಪಡೆಯುವುದು ಹೇಗೆ ಎಂದು  ತೋರಿದ ಭಗವಂತನ ರೂಪವಿದು. ಆತ ತಪಸ್ಸು ಮಾಡಿ ಆತ್ಮಸಾಕ್ಷಾತ್ಕಾರ ಪಡೆದವನಂತೆ ಕುಳಿತಿರುವಾಗ ಆತನ ತಪಸ್ಸನ್ನು ಭಂಗಗೊಳಿಸಲು ಕಾಮದೇವನ ಸೈನ್ಯ ಆತನ ಮೇಲೆ ಲಗ್ಗೆ ಇಟ್ಟಿತಂತೆ. ಆದರೆ ನರ-ನಾರಾಯಣರ ನಿಯಮ ಲೋಪ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅವರು ಕಾಮಕ್ಕೂ ಬಲಿಯಾಗಲಿಲ್ಲ, ಕೋಪಕ್ಕೂ ಬಲಿಯಾಗಲಿಲ್ಲ. ಹೀಗೆ ನಿಜವಾದ ತಪಸ್ಸು ಎಂದರೆ ಏನು ಎನ್ನುವುದನ್ನು ಭಗವಂತ ತನ್ನ ನರ-ನಾರಾಯಣ ರೂಪದಲ್ಲಿ ಜಗತ್ತಿಗೆ ತೋರಿಸಿಕೊಟ್ಟ. 

Saturday, May 9, 2015

Shrimad BhAgavata in Kannada -Skandha-02-Ch-07(06)

 ಅತ್ರೇರಪತ್ಯಮಭಿಕಾಂಕ್ಷತ ಆಹ ತುಷ್ಟೋ ದತ್ತೋ ಮಯಾSಹಮಿತಿ ಯದ್ ಭಗವಾನ್ ಸ ದತ್ತಃ
ಯತ್ಪಾದಪಂಕಜಪರಾಗಪವಿತ್ರದೇಹಾ ಯೋಗರ್ದ್ಧಿಮಾಪುರಮಯೀಂ ಯದುಹೈಹಯಾದ್ಯಾಃ ೦೪

ಸ್ವಾಯಂಭುವ ಮನುವಿನ  ಮಗಳಾದ ದೇವಹೂತಿಯ ಒಂಬತ್ತು ಮಂದಿ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ಅನುಸೂಯೆಯ ಮದುವೆ ಅತ್ತ್ರಿಯೊಂದಿಗೆ ನಡೆಯುತ್ತದೆ. ಅತ್ತ್ರಿ-ಅನುಸೂಯೆಯರು ಸೃಷ್ಟಿ-ಸ್ಥಿತಿ-ಸಂಹಾರ ಮಾಡಿ ಜಗತ್ತನ್ನು ನಿಯಂತ್ರಣ ಮಾಡುವ ಭಗವದ್ ಶಕ್ತಿಯೇ ತಮ್ಮಲ್ಲಿ ಮಗುವಾಗಿ ಹುಟ್ಟಿ ಬರಬೇಕೆಂದು ಬಯಸಿ ತಪಸ್ಸು ಮಾಡಿದಾಗ, ಅದಕ್ಕೆ ಮೆಚ್ಚಿದ ಭಗವಂತ ಪ್ರಸನ್ನನಾಗಿ ಹೇಳುತ್ತಾನೆ: “ನಿಮ್ಮ ತಪಸ್ಸಿಗೆ ನಾನು ಮೆಚ್ಚಿಕೊಂಡಿದ್ದೇನೆ ಮತ್ತು ನಾನು ನಿಮಗೆ ನನ್ನನ್ನು ಕೊಟ್ಟುಕೊಂಡಿದ್ದೇನೆ(ದತ್ತನಾಗಿದ್ದೇನೆ)” ಎಂದು.  ಇದರಿಂದಾಗಿ ಅತ್ತ್ರಿ-ಅನುಸೂಯೆಯರ ದಾಂಪತ್ಯದ ಫಲದಲ್ಲಿ ಹುಟ್ಟಿದ ಶಿಶುವಿಗೆ ದತ್ತ ಎನ್ನುವ ಹೆಸರು ಬರುತ್ತದೆ. ದತ್ತ ಅತ್ತ್ರಿಯ ಮಗನಾಗಿ ಹುಟ್ಟಿ ಬಂದುದರಿಂದ ಆತ ದತ್ತಾತ್ತ್ರೇಯನೆಂದು ಹೆಸರಾಗುತ್ತಾನೆ.
ಅತ್ತ್ರಿ-ಅನುಸೂಯೆಯರು ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಸಮಸ್ತ ಶಕ್ತಿಗಳೂ ಮೈದಾಳಿ ತಮ್ಮ ಸಂತಾನವಾಗಿ ಬರಬೇಕೆಂದು ಕೇಳಿಕೊಂಡಿರುವುದರಿಂದ, ಭಗವಂತ ಚತುರ್ಮುಖ ಬ್ರಹ್ಮ ಮತ್ತು ಶಿವನನ್ನೂ ಕೂಡಾ ಅವರ ಮಕ್ಕಳಾಗಿ ಹುಟ್ಟಿ ಬರುವಂತೆ ತಿಳಿಸುತ್ತಾನೆ[ಭಗವಂತ ಬ್ರಹ್ಮನೊಳಗೆ ನಿಂತು ಸೃಷ್ಟಿಯನ್ನೂ ಹಾಗೂ  ಶಿವನೊಳಗೆ ನಿಂತು ಸಂಹಾರವನ್ನೂ ಮಾಡುವ ವಿಷಯವನ್ನು ನಾವು ಈ ಹಿಂದೆ ನೋಡಿದ್ದೇವೆ]. ಇಲ್ಲಿ ಚತುರ್ಮುಖ ಬ್ರಹ್ಮ ಅವತಾರ ರೂಪಿಯಾಗಿ ಹುಟ್ಟಿ ಬರುವಂತಿಲ್ಲವಾದ್ದರಿಂದ,  ಜಗತ್ತಿನ ಸೃಷ್ಟಿ ವಿಸ್ತಾರಕ್ಕೆ ಮೂಲ ಕಾರಣಶಕ್ತಿಯಾದ  ಚಂದ್ರ ಅತ್ತ್ರಿಯ ಮಗನಾಗಿ ಹುಟ್ಟುತ್ತಾನೆ ಮತ್ತು ಚತುರ್ಮುಖ ಆತನಲ್ಲಿ ಆವಿಷ್ಟನಾಗಿರುತ್ತಾನೆ. ಶಿವ ದುರ್ವಾಸನಾಗಿ ಅವತರಿಸಿ ಬರುತ್ತಾನೆ.  
ಇಲ್ಲಿ ಚಂದ್ರನೊಂದಿಗೆ ಚತುರ್ಮುಖ ಆವಿಷ್ಟನಾಗಿ ಅವತರಿಸಿದ ವಿಷಯವನ್ನು ನೋಡಿದೆವು. ಸೋಮಶಕ್ತಿ ಸೃಷ್ಟಿವಿಸ್ತಾರದಲ್ಲಿನ ಒಂದು ಮಹತ್ತಾದ ಕಾರಣಶಕ್ತಿ. ಅಗ್ನಿ-ಸೋಮಾತ್ಮಕಂ ಜಗತ್. ಈ ಜಗತ್ತಿನಲ್ಲಿರುವ ಸಮಸ್ತ ವನಸ್ಪತಿಗಳು, ಸಮಸ್ತ ಆಹಾರಗಳು ಸೋಮನಿಗೆ ಸಂಬಂಧಿಸಿರುವಂತಹದ್ದು. ಅದನ್ನು ಬೇಯಿಸಿ ತಿನ್ನುವುದಕ್ಕೆ ಬೇಕಾದ ಶಕ್ತಿ  ಅಗ್ನಿಶಕ್ತಿ. [ಹೀಗಾಗಿ ಹೋಮಮಾಡುವಾಗ ಮೊದಲು ಚಕ್ಷುರ್ ಹೋಮ  ಮಾಡುತ್ತಾರೆ. ಅಲ್ಲಿ ಪುರೋಹಿತರು ಅಗ್ನಿ-ಸೋಮಾಭ್ಯಂ ಸ್ವಾಹಾ ಎಂದು ಹೇಳಿ ಅಗ್ನಿಯ ಕಣ್ಣಿಗೆ ಆಹುತಿ ಕೊಡುತ್ತಾರೆ. ಹೋಮ ಕುಂಡದಲ್ಲಿ ಅಗ್ನಿಯ ಮುಖವನ್ನು ಮನಸ್ಸಿನಲ್ಲಿ ರೂಪಿಸಿಕೊಂಡು ಕಣ್ಣಿನ ಭಾಗಕ್ಕೆ ತುಪ್ಪವನ್ನು ಹಾಕುತ್ತಾರೆ. ಇದಾದ ನಂತರವೇ ವ್ಯಾಹೃತಿ ಮಂತ್ರಗಳಿಂದ ಅಗ್ನಿಯ ಬಾಯಿಗೆ ಆಹುತಿ ಕೊಡುತ್ತಾರೆ. ಇದು ಯಜ್ಞದಲ್ಲಿ ಆಹುತಿ ಕೊಡುವ ಕ್ರಮ.  ಊಟ ಮಾಡುವುದೂ ಕೂಡಾ ಒಂದು ಬಗೆಯ ಹೋಮ. ಇದು ನಮ್ಮೊಳಗಿರುವ ಪ್ರಾಣನಲ್ಲಿ ಸನ್ನಿಹಿತನಾಗಿರುವ, ಪಂಚರೂಪಿಯಾದ ನಾರಾಯಣನಿಗೆ ಮಾಡುವ ಹೋಮ. ಇಲ್ಲಿಯೂ ಕೂಡಾ ಆಹುತಿ ಕೊಡುವ ಮೊದಲು ಚಕ್ಷುರ್ ಹೋಮ ನಡೆಯಬೇಕಲ್ಲವೇ ? ಇದಕ್ಕಾಗಿಯೇ ತುಪ್ಪ ಬಡಿಸುವುದು. ಹೀಗೆ ಬಡಿಸುವಾಗ ಒಂದು ಬಾರಿ ಬಡಿಸದೇ ಅಗ್ನಿ-ಸೋಮರ ಪ್ರೀತಿಗಾಗಿ ಎರಡು ಬಾರಿ ಬಡಿಸಬೇಕು. ಇದನ್ನು ‘ಅಭಿಘಾರ’ ಎನ್ನುತ್ತಾರೆ].
ಅತ್ತ್ರಿ-ಅನುಸೂಯೆಯಾರ ತಪಸ್ಸಿನ ಫಲವಾಗಿ ವಿಷ್ಣು-ದತ್ತನಾಗಿ, ಬ್ರಹ್ಮ-ಸೋಮನಾಗಿ ಮತ್ತು  ಶಿವ-ದುರ್ವಾಸನಾಗಿ ಭೂಮಿಯಲ್ಲಿ ಅವತರಿಸಿ ಬರುತ್ತಾರೆ [ಈ ಹಿಂದೆ, ಮೊದಲ ಸ್ಕಂಧದಲ್ಲಿ ಹೇಳಿರುವಂತೆ: ಸಾಮಾನ್ಯವಾಗಿ ದತ್ತಾತ್ರೇಯ ಎಂದಾಗ ಮೂರು ತಲೆ ಏಕ ಶರೀರ ಮತ್ತು ತಲೆಯಲ್ಲಿ ಚಂದ್ರನಿರುವ ಚಿತ್ರವನ್ನು ಚಿತ್ರಕಾರರು ಚಿತ್ರಿಸುತ್ತಾರೆ. ಆದರೆ ಶಾಸ್ತ್ರದಲ್ಲಿ ಎಲ್ಲೂ ಈ ರೀತಿ ರೂಪದ ವಿವರಣೆ ಇಲ್ಲ. ದತ್ತ, ದುರ್ವಾಸ ಮತ್ತು ಚಂದ್ರ ಈ ಮೂವರು ಮೂರು ಶರೀರದಲ್ಲಿ ಅವತರಿಸಿ ಬಂದ ರೂಪಗಳು. ಇಲ್ಲಿ ಚಂದ್ರ ಎಂದರೆ ಚಂದ್ರ ಗ್ರಹವಲ್ಲ, ದೇವತೆ] .
‘ದತ್ತ’ ಯೋಗ ಮಾರ್ಗದ ಮಹಾ ಪ್ರವರ್ತಕ. ಆತ ಕರ್ಮವನ್ನು ಕರ್ಮಯೋಗವನ್ನಾಗಿಯೂ, ಜ್ಞಾನವನ್ನು ಜ್ಞಾನಯೋಗವಾಗಿಯೂ ಮಾಡಿದ. ಬದುಕಿನಲ್ಲಿ ಯೋಗ ಸಾಧನೆಯಿಂದ ಎತ್ತರಕ್ಕೇರುವ ವಿಧಾನವನ್ನು ಉಪದೇಶ ಮಾಡಿದ ಭಗವಂತನ ರೂಪ ಈ ದತ್ತರೂಪ. ಯೋಗ ಸಾಧನೆಯ ಅತ್ತ್ಯುನ್ನತ ಸ್ಥಿತಿಯನ್ನು ತಾನು ಮಾಡಿ ತೋರಿ, ಪ್ರಪಂಚಕ್ಕೆ ಉಪದೇಶಿಸಿದ ದತ್ತಾತ್ರೇಯ. ದತ್ತಾತ್ರೇಯ ನಡೆದಾಡಿದ ಸ್ಥಳದಲ್ಲಿ ಹೊರಳಾಡಿದರೂ ಸಾಕು, ಯೋಗ ಸಿದ್ಧಿಯಾಗುತ್ತದೆ ಎನ್ನುವ ಮಾತಿದೆ. ಅಂಥಹ ಮಹಾ ಯೋಗಪ್ರವರ್ತಕ ದತ್ತಾತ್ರೇಯ.

ಇಲ್ಲಿ ನಾರದರಿಗೆ ಭಗವಂತನ ಅವತಾರದ ಕಥೆಯನ್ನು ವಿವರಿಸುತ್ತಿರುವ ಚತುರ್ಮುಖ ಹೇಳುತ್ತಾನೆ: “ಅಮಯೀ ಯೋಗರ್ದ್ಧಿ” ಎಂದು. ದತ್ತಾತ್ರೇಯ ಅ-ಕಾರ ವಾಚ್ಯನಾದ ನಾರಾಯಣನನ್ನು ಪ್ರತಿಪಾದಿಸುವ ಯೋಗವನ್ನು ಲೋಕಕ್ಕೆ ಬಿತ್ತರಿಸಿದ. ಇದು ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರ, ಆದರೆ ವೈವಸ್ವತ ಮನ್ವಂತರಲ್ಲೂ ಕೂಡಾ ದತ್ತಾತ್ರೇಯನ ಶಿಷ್ಯರನ್ನು ನಾವು ಕಾಣುತ್ತೇವೆ. ಯಾದವ ಕುಲದ ಮೂಲ ಪುರುಷನಾದ ಯದು, ಕಾರ್ತವೀರ್ಯಾರ್ಜುನ, ಹೀಗೆ ಅನೇಕ ಮಂದಿಗೆ ಜ್ಞಾನಮಾರ್ಗವನ್ನು ಉಪದೇಶ ಮಾಡುವ ಯೋಗಮೂರ್ತಿಯಾಗಿ ದತ್ತಾತ್ರೇಯ ನಿಲ್ಲುತ್ತಾನೆ.

Sunday, May 3, 2015

Shrimad BhAgavata in Kannada -Skandha-02-Ch-07(05)

ಕಪಿಲ ವಾಸುದೇವನಾಗಿ ಸಾಂಖ್ಯವನ್ನು ಜಗತ್ತಿಗೆ ನೀಡಿದ ಭಗವಂತ

ಜಜ್ಞೇ ಚ ಕರ್ದಮಗೃಹೇ ದ್ವಿಜ ದೇವಹೂತ್ಯಾಂ ಸ್ತ್ರೀಭಿಃ ಸಮಂ ನವಭಿರಾತ್ಮಗತಿಂ ಸ್ವಮಾತ್ರೇ
ಊಚೇ ಯ ಆತ್ಮಶಮಲಂ ಗುಣಸಂಗಪಂಕಮಸ್ಮಿನ್ ವಿಧೂಯ ಕಪಿಲಃ ಸ್ವಗತಿಂ ಪ್ರಪೇದೇ ೦೩

ಸ್ವಾಯಂಭುವ ಮನುವಿನ ಮಗಳಾದ ದೇವಹೂತಿಯ ಮದುವೆ ಕರ್ದಮ ಪ್ರಜಾಪತಿಯೊಂದಿಗೆ ನಡೆಯುತ್ತದೆ. ಈ ದಂಪತಿಗಳ ದಾಂಪತ್ಯ ಫಲವಾಗಿ, ಒಂಬತ್ತು ಮಂದಿ ಹೆಣ್ಣು ಮಕ್ಕಳ ನಂತರ ಹುಟ್ಟಿದ ಗಂಡು ಮಗುವೇ ಭಗವಂತನ ಕಪಿಲ ಅವತಾರ.  ಈತನೇ ‘ಸೇಶ್ವರ ಸಾಂಖ್ಯ’ ವನ್ನು ತನ್ನ ತಾಯಿಗೆ ಉಪದೇಶಿಸಿ ಲೋಕಕ್ಕೆ ಸಾಂಖ್ಯವನ್ನು ಕೊಟ್ಟ  ಕಪಿಲವಾಸುದೇವ.
ಕರ್ದಮರ ಮನೆಯಲ್ಲಿ ಕಪಿಲ ಅವತರಿಸಿ ಬಂದ ಎನ್ನುವ ಮಾತನ್ನು ನೋಡಿದೆವು. ಇಲ್ಲಿ ಕರ್ದಮ ಎನ್ನುವ ಹೆಸರಿನ ಅರ್ಥ ನಮಗೆ ಪರಿಚಿತವಾದುದಲ್ಲ. ಈ ಪದದ ಅರ್ಥವನ್ನು ಕೋಶದಲ್ಲಿ ಹುಡುಕಿದರೆ ಅಲ್ಲಿ  ‘ಕೆಸರು’ ಎನ್ನುವ ಅರ್ಥವನ್ನು ಕಾಣುತ್ತೇವೆ. ಆದರೆ ಈ ನಾಮಕ್ಕೆ ವಿಶೇಷವಾದ ನಿರ್ವಚನವಿದೆ. ಕರ್+ದಮ=ಕರ್ದಮ. ಅಂದರೆ ಇಂದ್ರಿಯ ನಿಗ್ರಹದ ಜೊತೆಗೆ(ದಮ) ಕರ್ತವ್ಯ ಕರ್ಮದಲ್ಲಿ(ಕರ್, ಕರೋತಿ) ನಿರತನಾದವನು ಕರ್ದಮ.  ಈ ನಾಮವನ್ನು ಭಗವಂತನಿಗೆ ಅನ್ವಹಿಸಿ ನೋಡಿದರೆ: ದುಷ್ಟಶಕ್ತಿಯನ್ನು ದಮನ ಮಾಡಿ ವಿಶ್ವವನ್ನು ರಕ್ಷಣೆ ಮಾಡುವ ಭಗವಂತ ಕರ್ದಮ.
ಈ ಹಿಂದೆ ಹೇಳಿದಂತೆ ಕರ್ದಮ-ದೇವಹೂತಿಯರಿಗೆ ಮೊದಲು ಹುಟ್ಟಿದ್ದು ಒಂಬತ್ತು ಮಂದಿ ಹೆಣ್ಣು ಮಕ್ಕಳು.  ಹೀಗೆ ಒಂಬತ್ತು ಮಂದಿ ಹೆಣ್ಣು ಮಕ್ಕಳೇ ಹುಟ್ಟಿದಾಗ ದೇವಹೂತಿಗೆ ಪಶ್ಚಾತ್ತಾಪವಾಯಿತಂತೆ. ತಪಸ್ವಿಯಾದ ತನ್ನ ಗಂಡನಿಗೆ ಜ್ಞಾನಿಯಾದ ಒಬ್ಬ ಮಗ ಹುಟ್ಟಲಿಲ್ಲವಲ್ಲಾ ಎಂದು ಆಕೆ ಚಿಂತಿಸಿದಾಗ, ಕರ್ದಮರು ಹೇಳುತ್ತಾರೆ: “ನೀನು ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ. ಸೃಷ್ಟಿಯಲ್ಲಿ ಯಾವುದೂ ಆಗಬಾರದ್ದು ಆಗುವುದಿಲ್ಲ. ಹೆಣ್ಣು ಹುಟ್ಟುವುದು ಕೀಳಲ್ಲ, ಗಂಡು ಹುಟ್ಟುವುದೇ ಮೇಲಲ್ಲ. ಪ್ರತಿಯೊಂದಕ್ಕೂ ಒಂದು ಉದ್ದೇಶ ಇರುತ್ತದೆ. ಈ ಒಂಬತ್ತು ಮಂದಿ ಹೆಣ್ಣು ಮಕ್ಕಳು ಭಗವಂತನ ಸೃಷ್ಟಿ ವಿಸ್ತಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇದಲ್ಲದೆ ನೀನು ಜಗತ್ತಿಗೆ ಕೊಡಬೇಕಾದ ಗಂಡು ಮಗುವೊಂದನ್ನು  ಕೂಡಾ ಕೊಡಲಿದ್ದೀಯ” ಎಂದು.  ಕರ್ದಮರ ಮಾತು ಸುಳ್ಳಾಗಲಿಲ್ಲ. ಒಂಬತ್ತು ಮಂದಿ ಹೆಣ್ಣು ಮಕ್ಕಳ ನಂತರ ಸ್ವಯಂ ಭಗವಂತನೇ ದೇವಹೂತಿಯಲ್ಲಿ ಕಪಿಲ ನಾಮಕನಾಗಿ ಅವತರಿಸಿ ಬಂದ.
ಕರ್ದಮ ತನ್ನ ಒಂಬತ್ತು ಮಂದಿ ಹೆಣ್ಣು ಮಕ್ಕಳನ್ನು ಒಂಬತ್ತು ಮಂದಿ ಪ್ರಜಾಪತಿಗಳಿಗೆ ಮದುವೆ ಮಾಡಿ ಕೊಟ್ಟ. ಅವರೆಂದರೆ: ಸಪ್ತರ್ಷಿಗಳು(ಮರೀಚಿ, ಅತ್ರಿ, ಆಂಗೀರಸ, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ), ಭೃಗು ಮತ್ತು ಅಥರ್ವ. ಈ  ನವಪ್ರಜಾಪತಿಗಳಿಂದ ಪ್ರಜಾ ವಿಸ್ತಾರವಾಯಿತು. ಈ ಘಟನೆಯಿಂದ ನಮಗೆ ತಿಳಿಯುವುದೇನೆಂದರೆ: ಸೃಷ್ಟಿಯ ವಿಸ್ತಾರಕ್ಕೆ ಗಂಡು ಮಾತ್ರ ಸಾಲದು. ಎಂದೂ ಯಾವುದೂ ಅನುಪಯುಕ್ತವಲ್ಲ. ಯಾವಾಗ ಎಲ್ಲಿ ಏನು ಬೇಕೋ ಅದಕ್ಕನುಗುಣವಾಗಿ ಭಗವಂತ ಸೃಷ್ಟಿ ಮಾಡುತ್ತಾನೆ. ಹೀಗಾಗಿ ಎಂದೂ ಹೆಣ್ಣು ಮಗು ಎಂದು ಯಾರೂ ಪಶ್ಚಾತ್ತಾಪ ಪಡುವ ಅಗತ್ಯವಿಲ್ಲ.
ಕಪಿಲ ಎನ್ನುವುದು ಭಗವಂತನ ವಿಶೇಷ ನಾಮ.  ಕಪಿ+ಲ=ಕಪಿಲ. ಬಾಹ್ಯಾನಂದದ ಸ್ಪರ್ಶವೇ ಇಲ್ಲದೆ, ಅಂತರಂಗದ ಆನಂದವನ್ನು ಸದಾ ಪಾನ ಮಾಡುತ್ತಿರುವವನು ‘ಕಪಿ’ (ಕಂ-ಪಿಬತಿ=>ಕಪಿ).  ಈ ರೀತಿ ಅಂತರಂಗದ ಆನಂದವನ್ನು ಹಂಬಲಿಸುವವರಿಗೆ ಅದನ್ನು ನೀಡಿ, ಅವರನ್ನು ಸ್ವೀಕಾರ(ಲಾತಿ) ಮಾಡುವ, ಸ್ವರೂಪಾನಂದದಲ್ಲೇ ಮುಳುಗಿರುವ ಮೋಕ್ಷಪ್ರದ ಭಗವಂತ ಕಪಿಲ. ಇಂಥಹ ಕಪಿಲ  ಶುದ್ಧ ಆತ್ಮತತ್ತ್ವ ವಿಜ್ಞಾನ(ಸಾಂಖ್ಯ)ವನ್ನು ಮೊಟ್ಟಮೊದಲು ತನ್ನ ತಾಯಿ ದೇವಹೂತಿಗೆ ಉಪದೇಶಿಸಿದ. ಇದೇ ಮುಂದೆ ‘ಸಾಂಖ್ಯ’ ಎಂದು ಹೆಸರಾಯಿತು.
ಇಲ್ಲಿ ನಾವು ಇನ್ನೊಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಭಗವಂತ ಕಪಿಲನಾಗಿ ಬಂದು ಸಾಂಖ್ಯವನ್ನು ಪ್ರಪಂಚಕ್ಕೆ ನೀಡಿರುವುದು ಸ್ವಾಯಂಭುವ ಮನ್ವಂತರದಲ್ಲಿ. ಆದರೆ ವೈವಸ್ವತ ಮನ್ವಂತರದಲ್ಲಿ ಕಪಿಲ ಎನ್ನುವ ಹೆಸರಿನ ಒಬ್ಬ ಋಷಿ ಕೂಡಾ ಒಂದು ಸಾಂಖ್ಯವನ್ನು ನೀಡಿದ್ದಾನೆ. ಆದರೆ ಆ ಸಾಂಖ್ಯ ನಿರೀಶ್ವರ ಸಾಂಖ್ಯ. ಅಲ್ಲಿ ಆತ ಭಗವಂತನನ್ನೇ ನಂಬುವುದಿಲ್ಲ! ಭಾಗವತ ಹೇಳುವುದು ಆ ಕಪಿಲನನ್ನಲ್ಲ, ಬದಲಿಗೆ ಸ್ವಾಯಂಭುವ ಮನ್ವಂತರದಲ್ಲಿ ಅವತರಿಸಿ ಸೇಶ್ವರ ಸಾಂಖ್ಯವನ್ನು ನೀಡಿದ ಕಪಿಲ ವಾಸುದೇವನನ್ನು.   
ಕಪಿಲ  ಮೊತ್ತಮೊದಲು ಸಾಂಖ್ಯವನ್ನು ಉಪದೇಶ ಮಾಡಿದ್ದು ತನ್ನ ತಾಯಿಗೆ. ಇದಕ್ಕೆ ಕಾರಣ ತಾಯಿ ದೇವಹೂತಿಯ ಕೋರಿಕೆ. “ನನಗೆ ಮತ್ತೆ ಈ ಸಂಸಾರ ಬೇಡ,  ಇದರಿಂದ ಪಾರಾಗುವ ದಾರಿ ತೋರಿಸು” ಎಂದು ಕಪಿಲನನ್ನು ಕೇಳಿದ ತಾಯಿಗೆ ಕಪಿಲ ಅಧ್ಯಾತ್ಮ ತತ್ತ್ವವನ್ನು ಉಪದೇಶಿಸಿದ.  ಮೇಲಿನ ಶ್ಲೋಕದಲ್ಲಿ ‘ಸ್ವಮಾತ್ರೇ’ ಎನ್ನುವ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ ‘ಮಾತೃ’ ಶಬ್ದ ಸ್ತ್ರೀಲಿಂಗವಾದಾಗ ‘ತಾಯಿ’ ಎನ್ನುವ ಅರ್ಥವನ್ನು ಕೊಡುತ್ತದೆ. ಅದನ್ನೇ ಪುಲ್ಲಿಂಗದಲ್ಲಿ ನೋಡಿದರೆ ‘ಭಗವಂತನನ್ನು ತಿಳಿದವನು ಅಥವಾ ಜ್ಞಾನದ ಮಾರ್ಗದಲ್ಲಿ ಸಾಗುವವನು’ ಎನ್ನುವ ಅರ್ಥವನ್ನು ಮಾತೃ ಪದ ಕೊಡುತ್ತದೆ. ಇದು ಸಂಸ್ಕೃತ ಭಾಷೆಯ ಸೊಬಗು. ಒಟ್ಟಿನಲ್ಲಿ ಹೇಳಬೇಕೆಂದರೆ: ಅತ್ಯದ್ಭುತವಾದ ಅಧ್ಯಾತ್ಮ ತತ್ತ್ವವನ್ನು ತನ್ನ ತಾಯಿಯ ಮುಖೇನ ಜ್ಞಾನವನ್ನು ಬಯಸುವ ಪ್ರತಿಯೊಬ್ಬರಿಗೂ ಭಗವಂತ ಕಪಿಲ ರೂಪದಿಂದ ಅವತರಿಸಿ ನೀಡಿದ. .

‘ಸಾಂಖ್ಯ’ ಎಂದರೆ ಸರಿಯಾದ ತಿಳುವಳಿಕೆ. ಪ್ರಾಚೀನರು ಸಂಖ್ಯಾಶಾಸ್ತ್ರ(Numerology) ಮತ್ತು ಅಧ್ಯಾತ್ಮ ವಿದ್ಯೆ(Spiritual wisdom) ಎರಡನ್ನೂ ಜೊತೆಯಾಗಿ ಬಳಸುತ್ತಿದ್ದರು. ಹೀಗಾಗಿ ಎರಡಕ್ಕೂ ಸಾಂಖ್ಯಾ ಎನ್ನುವ  ಹೆಸರು ಬಂತು. ಭಾಷೆ ಸ್ಪಷ್ಟತೆಯನ್ನು ಕೊಡುತ್ತದಾದರೂ ಸಹ ಅಲ್ಲಿ ಖಚಿತತೆ ಇರುವುದಿಲ್ಲ. ಒಬ್ಬ ವ್ಯಕ್ತಿ ಯಾವ ಅರ್ಥವನ್ನು ಅನುಸಂಧಾನ ಮಾಡಿ ಯಾವ ಶಾಸ್ತ್ರದ ಹಿನ್ನೆಲೆಯಲ್ಲಿ ಮಾತನಾಡಿದ ಎನ್ನುವುದು ತಕ್ಷಣ ಇನ್ನೊಬ್ಬರಿಗೆ ತಿಳಿಯದೇ ಹೋಗಬಹುದು. ಇದರಿಂದ ಒಬ್ಬ ವ್ಯಕ್ತಿ ಆಡಿದ ಮಾತನ್ನು ಒಬ್ಬೊಬ್ಬರು ಅವರವರ ಅನುಭವದ ಹಿನ್ನೆಲೆಯಲ್ಲಿ ಒಂದೊಂದು ರೀತಿ ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಭಾಷೆಗೆ ಒಂದು ಖಚಿತತೆಯನ್ನು ಕೊಡಬೇಕಾದರೆ ಅಲ್ಲಿ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಇಂಥಹ ಒಂದು ಹೊಸ ವಿಧಾನವನ್ನು ಪ್ರಾಚೀನರು ಆರಂಭಿಸಿ ಬೆಳೆಸಿದರು. ಇಂಥಹ ವಿಧಾನವನ್ನು ಲೋಕಕ್ಕೆ ಕೊಟ್ಟವನು ಕಪಿಲವಾಸುದೇವ. ಆತ ತನ್ನ ತಾಯಿಗೆ ವಿವರಿಸಿದ ಸಾಂಖ್ಯದ ಒಂದು ಉದಾಹರಣೆ ಹೀಗಿದೆ: ಪಂಚಭಿಃ ಪಂಚಭಿರ್ಬ್ರಹ್ಮ ಚತುರ್ಭಿರ್ದಶಭಿಸ್ತಥಾ ಏತಚ್ಚತುರ್ವಿಂಶತಿಕಂ ಗಣಂ ಪ್ರಾಧಾನಿಕಂ ವಿದುಃ (ಭಾಗವತ: ೩-೨೭-೧೨). ಇದರ ಸಂಕ್ಷಿಪ್ತ ಅರ್ಥ ಹೀಗಿದೆ: ಮೊದಲು ಐದು ತತ್ವಗಳಿದ್ದವು(ಪಂಚಭೂತಗಳು), ಆ ಐದರಲ್ಲಿ ಐದು ಗುಣಗಳಿವೆ(ಪಂಚತನ್ಮಾತ್ರೆಗಳು). ಈ ಐದು ಗುಣಗಳನ್ನು ಗ್ರಹಣ ಮಾಡಿ ಕಾರ್ಯಗತಗೊಳಿಸಲು ಹತ್ತು ಇಂದ್ರಿಯಗಳಿವೆ(ಪಂಚಜ್ಞಾನೇಂದ್ರಿಯಗಳು ಮತ್ತು ಪಂಚಕರ್ಮೇಂದ್ರಿಯಗಳು). ಈ ಇಂದ್ರಿಯಗಳ  ನಿರ್ವಹಣೆಯಾಗುವುದು  ನಾಲ್ಕು ಅಂತಃಕರಣದಿಂದ(ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತ). ಪ್ರಪಂಚ ಎಂದರೆ ಈ ಇಪ್ಪತ್ತನಾಲ್ಕು. ಈ ೨೪ ಜಡಗಳನ್ನು ಅನುಭವಿಸುವ ಚೇತನ ಇಪ್ಪತೈದು ಮತ್ತು ಚೇತನಾಚೇತನ ಪ್ರಪಂಚವನ್ನು ನಿಯಂತ್ರಿಸುವವನು ಇಪ್ಪತ್ತಾರನೇ ಭಗವಂತ. ಇದು ಸಂಖ್ಯಯ ಮುಖೇನ ಭಗವಂತ ನೀಡಿದ ಬ್ರಹ್ಮಾಂಡದ ವಿವರಣೆ. (ಈ ಕುರಿತು ಹೆಚ್ಚಿನ ವಿವರಣೆ ಮುಂದಿನ ಸ್ಕಂಧದಲ್ಲಿ ಬರುತ್ತದೆ).  ತ್ರಿಗುಣಗಳಿಂದ ಕೊಳೆಯಾಗಿರುವ ನಮ್ಮ ಆತ್ಮತತ್ತ್ವವನ್ನು ತೊಳೆದು ಸ್ವಚ್ಛಗೊಳಿಸುವುದಕ್ಕಾಗಿ ಭಗವಂತ ಕಪಿಲ ರೂಪದಲ್ಲಿ  ಬಂದು ಸಾಂಖ್ಯವನ್ನು ಜಗತ್ತಿಗೆ ನೀಡಿದ. 

Shrimad BhAgavata in Kannada -Skandha-02-Ch-07(04)

ಜ್ಞಾನಕ್ಕಾಗಿ ಕರ್ಮ. ಶ್ರದ್ಧೆ-ಜ್ಞಾನವಿಲ್ಲದ ಕರ್ಮ ಕೇವಲ ಪ್ರಾರಬ್ಧಕರ್ಮ  

ವರಾಹ ರೂಪಿಯಾಗಿ ಬಂದು ಕರ್ಮಕ್ಕೆ ಬೇಕಾದ ಸಮಗ್ರ ಸಾಮಗ್ರಿಯನ್ನು ಸೃಷ್ಟಿ ಮಾಡಿದ  ಭಗವಂತ, ಯಜ್ಞ ರೂಪಿಯಾಗಿ ಬಂದು ಕರ್ಮಾಚರಣೆ ಸ್ವೀಕಾರ ಮಾಡಿದ. ಇದರಿಂದ ಕರ್ಮ ಸಾಂಗವಾಗಿ ನಡೆಯಿತು. ಆದರೆ ಕೇವಲ ಕರ್ಮವಾದರೆ ಅದರಿಂದ ಉಪಯೋಗ ಬಹಳ ಕಡಿಮೆ. ಕರ್ಮ ಶಕ್ತಿಶಾಲಿಯಾಗಬೇಕಾದರೆ ಅದು ಜ್ಞಾನಪೂರ್ವಕವಾಗಿರಬೇಕು. ನಮ್ಮಲ್ಲಿ ಎಷ್ಟೋ ಜನ ವ್ರತ, ನಿಯಮ, ಪೂಜೆ, ಪುನಸ್ಕಾರ, ಇತ್ಯಾದಿ  ಕರ್ಮ ಮಾಡುತ್ತಾರೆ. ಆದರೆ ಅವರು ಅದನ್ನು ಏಕೆ ಮಾಡುತ್ತಿದ್ದಾರೆ ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ಛಾ೦ಧೋಕ್ಯ  ಉಪನಿಷತ್ತಿನಲ್ಲಿ  ಹೇಳುವಂತೆ: "ಯದೇವ ವಿದ್ಯಯಾ ಕರೋತಿ ಶ್ರದ್ಧೆಯ ಉಪನಿಷದಾ, ತದೇವ ವೀರ್ಯವತ್ತರ೦ ಭವತಿ , ವಿಜ್ಞಾನ೦ ಯಜ್ಞಾ೦ ತನುತೇ". ಅಂದರೆ: ನೀನು ಏನನ್ನು ಮಾಡಿದರೂ ತಿಳಿದು ಮಾಡು. ಜ್ಞಾನ ಪೂರ್ವಕವಾಗಿ ಮಾಡಿದ ಕರ್ಮ ಸಫಲ. ಇಲ್ಲದಿದ್ದರೆ ಅದು ವ್ಯರ್ಥ”. ಮಾಡುವ ಕರ್ಮವನ್ನು ಏತಕ್ಕಾಗಿ ಮಾಡುತ್ತಿದ್ದೇವೆ, ಮಾಡುವುದರ ಫಲವೇನು, ಮಾಡುವುದು ಹೇಗೆ ಎನ್ನುವುದು ನಮಗೆ ಗೊತ್ತಿರಬೇಕು. ಅಜ್ಞಾನದಿಂದ ಮಾಡುವ ಕರ್ಮ ವ್ಯರ್ಥ.  ಹಾಗಾಗಿ ಏನೇ ಮಾಡುವುದಿದ್ದರೂ ತಿಳಿದು-ನಂಬಿ  ಮಾಡಬೇಕು. ತಿಳಿಯದೇ ಮಾಡಿದರೆ ಅದು ಮೂಢನಂಬಿಕೆಯಾಗುತ್ತದೆ, ನಂಬದೇ ಮಾಡಿದರೆ ಡಂಭಾಚಾರವಾಗುತ್ತದೆ. ಕ್ರಿಯೆಯ ಹಿಂದೆ ತಿಳುವಳಿಕೆ ಮತ್ತು ನಂಬಿಕೆ ಅತ್ಯಗತ್ಯ.
 ಇಂದು ನಮ್ಮೆಲ್ಲಾ ಸಮಸ್ಯೆಗಳಿಗೂ ಕಾರಣ ತಿಳುವಳಿಕೆ ಇಲ್ಲದಿರುವುದು. ಕೆಲವರಿಗೆ ತುಂಬಾ ಶ್ರದ್ಧೆ ಇರುತ್ತದೆ. ಆದರೆ ತಿಳುವಳಿಕೆ ಇರುವುದಿಲ್ಲ. ಇದರಿಂದ ಆಗುವ ಅನಾಹುತ ಏನೆಂದರೆ: ನಾವು ನಂಬಿರುವ ಸತ್ಯವನ್ನು ನಮ್ಮ ಮಕ್ಕಳಿಗೆ ನಂಬಿಸಲು ನಮಗೆ ಸಾಧ್ಯವಾಗುವುದಿಲ್ಲ. ಮಕ್ಕಳು “ಏಕೆ ಹೀಗೆ ಮಾಡಬೇಕು” ಎಂದು ಕೇಳಿದರೆ ನಮ್ಮಲ್ಲಿ ಉತ್ತರ ಇರುವುದಿಲ್ಲ.  ಇನ್ನು ಕೆಲವರಿಗೆ ಶ್ರದ್ಧೆಯೇ ಇರುವುದಿಲ್ಲ. ಕೇವಲ ಡಂಭಾಚಾರಕ್ಕಾಗಿ ಎಲ್ಲವನ್ನೂ ಮಾಡುತ್ತಾರೆ. ಈ ಎಲ್ಲಾ ಕಾರಣದಿಂದ ನಮ್ಮ ದೇಶದ ಅಪೂರ್ವ ವೀರ್ಯವತ್ತರವಾದ ಪರಂಪರೆ ಮಲಿನವಾಗಿ ನಾಶವಾಗುತ್ತಿದೆ. ಇದಕ್ಕೆ ಬೇರೆ ಯಾರೂ ಕಾರಣರಲ್ಲ. ನಾವು ನಮ್ಮ ಪರಂಪರೆಯನ್ನು ಅರ್ಥ ಮಾಡಿಕೊಂಡು  ನಮ್ಮ ಮುಂದಿನ ಜನಾಂಗಕ್ಕೆ ಹೇಳಿಕೊಡದೇ ಇದ್ದುದರಿಂದ ಅದು ಶಿಥಿಲಗೊಳ್ಳುತ್ತಿದೆ.  ಯಜುರ್ವೇದದ ಶಾಂತಿ ಮಂತ್ರ ಹೀಗೆ ಹೇಳಿದೆ: ಓಂ ಸಹ ನಾವವತು । ಸಹ ನೌ ಭುನಕ್ತು । ಸಹವೀರ್ಯಂ ಕರವಾವಹೈ । ತೇಜಸ್ವಿ ನಾವಧೀತಮಸ್ತು । ಮಾ ವಿಧ್ವಿಷಾವಹೈ ।  ನಾವು ಮಾಡುವ ಕರ್ಮ ಶಕ್ತಿಶಾಲಿಯಾಗಲು ನಾವದನ್ನು ತಿಳಿದು ಮಾಡೋಣ. ಮೊದಲು ತಿಳಿಯೋಣ, ತಿಳಿದು ಮಾಡೋಣ, ಮಾಡಿ ಇನ್ನೊಬ್ಬರಿಗೆ ತಿಳಿಸೋಣ.
ಜ್ಞಾನವಿಲ್ಲದೇ ಮಾಡುವ ಕರ್ಮ ನಿಷ್ಫಲವೆಂದೇನೂ ಅಲ್ಲ. ಆದರೆ ಅದರಿಂದ ಫಲ ಬಹಳ ಕಡಿಮೆ. ಲಕ್ಷ ಸಿಗುವಲ್ಲಿ ಹತ್ತು ಸಿಕ್ಕಂತೆ. ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ: ಜ್ಞಾನಾಗ್ನಿಃ ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ. ಜ್ಞಾನ ಎನ್ನುವುದು ಸದಾ ಪ್ರಜ್ವಲಿಸುವ ಬೆಂಕಿ. ಅದಕ್ಕಿಂತ ಹೆಚ್ಚು ಶಕ್ತಿ ಶಾಲಿಯಾದ ಬೆಂಕಿ ಇನ್ನೊಂದಿಲ್ಲ.  ಹೇಗೆ ಉರಿಯುವ ಬೆಂಕಿ ಕಟ್ಟಿಗೆಯನ್ನು ಸುಟ್ಟುಬಿಡುತ್ತದೋ, ಹಾಗೆ ಜ್ಞಾನದ ಬೆಂಕಿ ಎಲ್ಲಾ ಪಾಪ ಕರ್ಮಗಳನ್ನೂ ಸುಟ್ಟುಬಿಡುತ್ತದೆ. ಕರ್ಮಣಾ ಜ್ಞಾನ ಮಾತನೋತಿ, ಜ್ಞಾನೇನಾಮೃತಿ ಭವತಿ. ಕರ್ಮ ಕೇವಲ ಕರ್ಮಕ್ಕೋಸ್ಕರ ಅಲ್ಲ.  ಅದು ಜ್ಞಾನಕ್ಕೋಸ್ಕರ. ಯಾವ ಕರ್ಮದಿಂದ ನಮ್ಮ ಜ್ಞಾನ ಬೆಳೆಯುವುದಿಲ್ಲವೋ, ಅದು ನಮ್ಮ ಪ್ರರಾಬ್ಧಕರ್ಮ ಎನಿಸುತ್ತದೆ. ಹೀಗಾಗಿ ಯಜ್ಞಮೂರ್ತಿಯಾಗಿ ಭಗವಂತನ ಯಜ್ಞಾವತಾರವಾದ ಮೇಲೆ, ಜ್ಞಾನವನ್ನು ಕೊಡುವುದಕ್ಕಾಗಿ ಭಗವಂತ ಜ್ಞಾನಮೂರ್ತಿ ಕಪಿಲವಾಸುದೇವನಾಗಿ  ಅವತರಿಸಿ ಬರುತ್ತಾನೆ. ಬನ್ನಿ, ಭಗವಂತನ ಕಪಿಲಾವತಾರದ ವಿಶ್ಲೇಷಣೆಯನ್ನು ಚತುರ್ಮುಖನಿಂದ ಕೇಳಿ ತಿಳಿಯೋಣ

Saturday, May 2, 2015

Shrimad BhAgavata in Kannada -Skandha-02-Ch-07(03)

ಯಜ್ಞಾವತಾರದಲ್ಲಿ ದೇವೇಂದ್ರನಾಗಿ ಲೋಕ ರಕ್ಷಣೆ ಮಾಡಿದ ಭಗವಂತ

ಜಾತೋ ರುಚೇರಜನಯತ್ ಸುಯಶಾಃಸುಯಜ್ಞ ಆಕೂತಿಸೂನುರಮರಾನಥ ದಕ್ಷಿಣಾಯಾಮ್
ಲೋಕತ್ರಯಸ್ಯ ಮಹತೀಮಹರದ್ ಯ ಆರ್ತಿಂ ಸ್ವಾಯಂಭುವೇನ ಮನುನಾ ಹರಿರಿತ್ಯನೂಕ್ತಃ ೦೨

ಸ್ವಾಯಂಭುವ ಮನ್ವಂತರದಲ್ಲೇ ನಡೆದ ಭಗವಂತನ ಇನ್ನೊಂದು ಅವತಾರ ಯಜ್ಞಾವತಾರ. ಸ್ವಾಯಂಭುವ ಮನುವಿಗೆ ಮೂರು ಮಂದಿ ಹೆಣ್ಣು ಮಕ್ಕಳು(ಆಕೂತಿ, ದೇವಹೂತಿ ಮತ್ತು ಪ್ರಸೂತಿ) ಮತ್ತು ಇಬ್ಬರು ಗಂಡು ಮಕ್ಕಳು (ಉತ್ತಾನಪಾದ ಮತ್ತು ಪ್ರಿಯವ್ರತ). ಸ್ವಾಯಂಭುವ ಮನುವಿನ ಮಗಳು ಆಕೂತಿಯನ್ನು ರುಚಿಪ್ರಜಾಪತಿ ವಿವಾಹವಾಗುತ್ತಾನೆ ಮತ್ತು ಅವರ ದಾಂಪತ್ಯ ಫಲವಾಗಿ ಅವರಿಗೆ ಯಜ್ಞ ನಾಮಕ ಗಂಡು ಮಗುವಾಗುತ್ತದೆ.  ಆತನೇ ಯಜ್ಞ ನಾರಾಯಣ. ಈ ಯಜ್ಞ ನಾಮಕ ಮಗುವನ್ನು ಸ್ವಾಯಂಭುವ ಮನು ದತ್ತಕ್ಕೆ ಪಡೆಯುತ್ತಾನೆ. ಇದೇ ಸಮಯದಲ್ಲಿ ಶ್ರೀಲಕ್ಷ್ಮಿ ಸಹ   ದಕ್ಷಿಣಾ ಎನ್ನುವ ಹೆಸರಿನಲ್ಲಿ ಲೋಕದಲ್ಲಿ ಅವತರಿಸಿ ಬರುತ್ತಾಳೆ. ಮುಂದೆ  ಯಜ್ಞ ಮತ್ತು ದಕ್ಷಿಣೆಯ ಮದುವೆಯಾಗುತ್ತದೆ ಹಾಗೂ ಅವರಲ್ಲಿ ಆ ಮನ್ವಂತರದ ದೇವತಾಗಣವಾದ ತುಷಿತರ ಸೃಷ್ಟಿಯಾಗುತ್ತದೆ. ಯಜ್ಞ ಆ ಮನ್ವಂತರದ ದೇವೇಂದ್ರನಾಗಿ ದುಷ್ಟ ರಾಕ್ಷಸರನ್ನು ನಿಗ್ರಹಮಾಡಿ  ಲೋಕಕಲ್ಯಾಣ ಮಾಡುತ್ತಾನೆ.
ಇಲ್ಲಿ “ಶ್ರೀಲಕ್ಷ್ಮಿ ದಕ್ಷಿಣಾ ಎನ್ನುವ ಹೆಸರಿನಲ್ಲಿ ಅವತರಿಸಿದಳು” ಎನ್ನುವ ಮಾತನ್ನು ನೋಡಿದೆವು. ಶ್ರೀಲಕ್ಷ್ಮಿಯ ದಕ್ಷಿಣಾ ಎನ್ನುವ ನಾಮಕ್ಕೆ ವಿಶೇಷವಾದ ಅರ್ಥವಿದೆ. ದಕ್ಷ-ಇನಾ=ದಕ್ಷಿಣಾ; ‘ದಕ್ಷ ಭಾಗ ಸ್ಥಿತೇನತ್ವಾತ್ ದಕ್ಷಿಣಾ’. ಅಂದರೆ  ಬಲಬದಿ(ದಕ್ಷ)ಯಲ್ಲಿ ಗಂಡ(ಇನಾ) ಇರುವವಳು ಎಂದರ್ಥ. ವಾ ಭಾರ್ಯಾ ಭಾಗೋ ವಾ ಮೇತಿ ಪ್ರಸಿದ್ಧಃ. ಗಂಡಿನ ಎಡಬದಿಯಲ್ಲಿ ಕುಳಿತವಳನ್ನು ಹೆಂಡತಿ ಎಂದು ಗುರುತಿಸುವುದು ಈ ದೇಶದ  ಸಾಂಸ್ಕೃತಿಕ ಪರಂಪರೆ. ಹೀಗಾಗಿ ನಾರಾಯಣನ ಅರ್ಧಾಂಗಿಯಾಗಿ ಆತನ ಎಡತೊಡೆಯ ಮೇಲೆ ಕುಳಿತಿರುವ  ಶ್ರೀಲಕ್ಷ್ಮಿ ಗೆ ದಕ್ಷಿಣಾ ಎಂದು ಹೆಸರು.
ಸ್ವಾಯಂಭುವ ಮನ್ವಂತರದಲ್ಲಿ  ಒಂದು ವ್ಯವಸ್ಥಿತವಾಗಿರುವಂತಹ ಸಾತ್ವಿಕರ ಜೀವನದ ನಡೆ ರೂಪುಗೊಳ್ಳುವ ಮೊದಲೇ ಆಸುರೀ ಶಕ್ತಿಗಳು ಲೋಕನಾಶ ಮಾಡಬೇಕೆಂದು ಸಂಕಲ್ಪ ಮಾಡಿ, ಅದಕ್ಕೆ ಮುನ್ನುಡಿಯಾಗಿ ಆ ಸಂವತ್ಸರದ ಅಧಿಪತಿಯಾದ ಸ್ವಾಯಂಭುವ ಮನುವನ್ನೇ ಮುಗಿಸಿಬಿಡಬೇಕು ಎನ್ನುವ ಹುನ್ನಾರ ನಡೆಸುತ್ತಿರುತ್ತವೆ. ಆಗ  ಅಸಹಾಯಕನಾದ ಮನು ಲೋಕ ರಕ್ಷಣೆಗಾಗಿ ತಪಸ್ಸನ್ನು ಮಾಡುತ್ತಾನೆ. ತನ್ನ ಮೊಮ್ಮಗನಾಗಿ, ಯಜ್ಞ ನಾಮಕನಾಗಿ  ಅವತರಿಸಿದ ಹರಿಯನ್ನು ಧ್ಯಾನಿಸುತ್ತಾ  ಸ್ವಾಯಂಭುವ ಮನು ಧ್ಯಾನದಲ್ಲಿ ಕಂಡ ಹದಿನೆಂಟು ಮಂತ್ರಗಳೇ ಇಂದು ಈಶಾವಾಸ್ಯೋಪನಿಷತ್ತು ಎಂದು ಕರೆಯಲ್ಪಟ್ಟಿದೆ.  “ಈಶಾವಾಸ್ಯಂ ಇದಂ ಸರ್ವಂ ಯತ್ ಕಿಞ್ಚ ಜಗತ್ಯಾಂ ಜಗತ್,  ತೇನ ತ್ಯಕ್ತೇನ ಭುಞ್ಜಿಥಾಃ ಮಾ ಗೃಧಃ ಕಸ್ಯ ಸ್ವಿತ್ ಧನಮ್ .....” ಎಂದು ಪ್ರಾರಂಭವಾಗುವ ಈ ಉಪನಿಷತ್ತಿನ ನಿಜವಾದ ಹೆಸರು ಯಾಜ್ಞಿಕಮಂತ್ರೋಪನಿಷತ್ತು. “ನೀನು ಏನು ಕರ್ಮವನ್ನು ಮಾಡಿದರೂ ಅದನ್ನೆಲ್ಲವನ್ನೂ ಭಗವಂತನಲ್ಲಿ ಅರ್ಪಿಸಿ ಮಾಡು, ಭಗವದರ್ಪಣ ಬುದ್ಧಿಯಿಂದ ಮಾಡು” ಎನ್ನುವ ಸಂದೇಶದೊಂದಿಗೆ ಯಾಜ್ಞಿಕಮಂತ್ರೋಪನಿಷತ್ತು ಆರಂಭವಾಗುತ್ತದೆ. ಸ್ವಾಯಂಭುವ ಮನು ಏಕೆ ಈ ರೀತಿ ಧ್ಯಾನಿಸಿದ್ದಾನೆ ಎಂದರೆ: ಆತನಿಗೆ ಅಸುರರು ಎಲ್ಲವನ್ನು ನಾಶ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟ ವಿಷಯ ತಿಳಿದಿತ್ತು. ಆ ಮನ್ವಂತರದ ಅಧಿಪತಿಯಾಗಿ ಭಗವಂತನಿಂದ ನಿಯಮಿಸಲ್ಪಟ್ಟಿದ್ದ ಆತ ಎಲ್ಲವನ್ನೂ ಆ ಭಗವಂತನಿಗೆ ಅರ್ಪಿಸಿ,  “ಎಲ್ಲವೂ ನಿನ್ನಿಚ್ಛೆಯಂತೆಯೇ ಆಗಲಿ” ಎಂದು  ಪ್ರಾರ್ಥಿಸಿದ್ದಾನೆ. ಮುಂದೆ ಭಾಗವತದಲ್ಲೇ ಹೇಳುವಂತೆ: ಅಸುರರು ಮೊತ್ತಮೊದಲು ಸ್ವಾಯಂಭುವ ಮನುವನ್ನೇ  ಕೊಲ್ಲಬೇಕೆಂದು ಹೊಂಚು ಹಾಕಿ ಬಂದರೆ ಆತ “ಪೂಷನ್ನೇಕಋಷೇ ಯಮ ಸೂರ್ಯ ಪ್ರಾಜಾಪತ್ಯ ವ್ಯೂಹ ರಶ್ಮೀನ್ ಸಮೂಹ, ತೇಜೋ ಯತ್ ತೇ ರೂಪಂ ಕಲ್ಯಾಣತಮಂ ತತ್ ತೇ ಪಶ್ಯಾಮಿ, ಯೋsಸಾವಸೌ ಪುರುಷಃ ಸೋsಹಮಸ್ಮಿ ......” ಎಂದು ತನ್ನೊಳಗಿನ ಬಿಂಬರೂಪಿ ಭಗವಂತನನ್ನು ಕಾಣುತ್ತಾ ಆನಂದದಿಂದಿದ್ದಾನೆ! ಈ ರೀತಿ ಬಾಹ್ಯ ಪ್ರಪಂಚದ ಎಚ್ಚರ ಮರೆತು ಕುಳಿತಿರುವ ಮನುವನ್ನು ಯಾರು ಬೇಕಾದರೂ ಸುಲಭವಾಗಿ ಕೊಲ್ಲಬಹುದಿತ್ತು. ಆದರೆ ಹಾಗಾಗುವುದಿಲ್ಲ.  ಅಲ್ಲಿ ಯಜ್ಞನಾಮಕ ಭಗವಂತ ಪ್ರತ್ಯಕ್ಷನಾಗಿ, ಅಸುರರನ್ನು ನಿಗ್ರಹಿಸಿ, ಮೂರು ಲೋಕಗಳನ್ನು ಉದ್ಧರಿಸುತ್ತಾನೆ.
ಇಲ್ಲಿ ಸ್ವಾಯಂಭುವ ಮನು ವೇದ ಮಂತ್ರಗಳಿಂದ ಭಗವಂತನ ಧ್ಯಾನ ಮಾಡುವಾಗ “ಯಜ್ಞ ಕೇವಲ ತನ್ನ ಮೊಮ್ಮಗನಲ್ಲ, ಅವನು ಹರಿ” ಎನ್ನುವ ಅರಿವಿನಿಂದ ಧ್ಯಾನ ಮಾಡಿದ್ದಾನೆ. ಭಾಗವತದ ಈ ಮೇಲಿನ ಶ್ಲೋಕದ ಹಿನ್ನೆಲೆಯೊಂದಿಗೆ ನಾವು ಈಶಾವಾಸ್ಯ ಉಪನಿಷತ್ತಿನ ಮಂತ್ರಗಳನ್ನು ಅರ್ಥ ಮಾಡಿಕೊಂಡರೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಈ ವಿಷಯವನ್ನು ಸ್ಪಷ್ಟಪಡಿಸುವುದಕ್ಕೊಸ್ಕರ ಆಚಾರ್ಯ ಮಧ್ವರು ತಮ್ಮ ಉಪನಿಷತ್ ಭಾಷ್ಯದ ಮಂಗಲಾಚರಣೆಯಲ್ಲಿ “ಹರಯೇ ಸರ್ವಯಜ್ಞ ಭುಜೇ ನಮಃ” ಎನ್ನುತ್ತಾರೆ. ಅಲ್ಲಿ ವಿಶೇಷವಾಗಿ ಹರಿ ಎನ್ನುವ ಶಬ್ದದ ಬಳಕೆ  ಏಕೆಂದರೆ: ‘ಸ್ವಾಯಂಭುವೇನ ಮನುನಾ ಹರಿರಿತ್ಯನೂಕ್ತಃ’ “ಸ್ವಾಯಂಭುವ ಮನು ಯಾರನ್ನು ಹರಿ ಎಂದು ಸಾಕ್ಷಾತ್ಕರಿಸಿದನೋ ಅಂತಹ ಹರಿಗೆ ನಮಸ್ಕಾರ” ಎಂದು ಹೇಳುವುದಕ್ಕಾಗಿ. ಹಾಗೆ  ಹೇಳಿ ಆನಂತರ    ಯಸ್ಮಾದ್ಬ್ರಹ್ಮೇನ್ದ್ರರುದ್ರಾದಿದೇವತಾನಾಂ ಶ್ರೀಯೋSಪಿ ಚ, ಜ್ಞಾನಃಸ್ಪೂರ್ತಿಃ ಸದಾ ತಸ್ಮೈಹರಯೇ ಗುರುವೇ ನಮಃ. ಎಂದು “ನನಗೆ ಗುರುವಾದ ಆ ಹರಿಗೆ ನಮಸ್ಕಾರ” ಎಂದಿದ್ದಾರೆ ಆಚಾರ್ಯರು. ಭಾಗವತವನ್ನು ಓದಿ, ಉಪನಿಷತ್ತನ್ನು ನೋಡಿ ಸಮನ್ವಯ ಮಾಡಿದವರಿಗೆ ಈ ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ.
ಯಜ್ಞ ನಾಮಕ ಭಗವಂತನನ್ನು ಸ್ತೋತ್ರ ಮಾಡುವುದಕ್ಕೋಸ್ಕರ ಸ್ವಾಯಂಭುವ ಮನು ಕಂಡ ಉಪನಿಷತ್ತೇ ಯಾಜ್ಞೇಯಮಂತ್ರೋಪನಿಷತ್ತು ಎನ್ನುವ ವಿಷಯವನ್ನು ನೋಡಿದೆವು. ಇಲ್ಲಿ ನಿಮೊಗೊಂದು ಪ್ರಶ್ನೆ ಬರಬಹುದು. ಅದೇನೆಂದರೆ: ಇತರ  ಉಪನಿಷತ್ತುಗಳೂ ಕೂಡಾ ಮಂತ್ರರೂಪದಲ್ಲಿದ್ದರೂ, ವಿಶೇಷವಾಗಿ ಈ ಉಪನಿಷತ್ತನ್ನು ಮಾತ್ರ ಏಕೆ ಮಂತ್ರೋಪನಿಷತ್ತು ಎಂದು ಕರೆದಿದ್ದಾರೆ ಎಂದು. ಇದಕ್ಕೆ ಒಂದು ವಿಶೇಷ ಕಾರಣವಿದೆ. ವೇದದಲ್ಲಿ ಸಂಹಿತ, ಬ್ರಾಹ್ಮಣ ಮತ್ತು ಆರಣ್ಯಕ ಎನ್ನುವ ಮೂರು ವಿಭಾಗಗಳಿವೆ. ವೇದದ  ಸಂಹಿತಾ ಭಾಗವನ್ನು ಮಂತ್ರ ಭಾಗವಾದರೆ,  ಬ್ರಾಹ್ಮಣ, ಆರಣ್ಯಕ ಪರಿಶಿಷ್ಠ.  ಈಗ ಲಭ್ಯವಿರುವ ಪ್ರಮುಖವಾದ ಒಂಬತ್ತು ಉಪನಿಷತ್ತುಗಳೂ ವೇದದ ಪರಿಶಿಷ್ಠ ಭಾಗದಲ್ಲಿದ್ದರೆ, ಸ್ವಾಯಂಭುವ ಮನು ಕಂಡ, ಯಜ್ಞನಾಮಕ ಭಗವಂತನನ್ನು ಸ್ತುತಿಸುವ ಈ ಉಪನಿಷತ್ತು ಮಾತ್ರ ಕಣ್ವಶಾಖೆಗೆ ಸೇರಿದ ಶುಕ್ಲ ಯಜುರ್ವೇದದ ಸಂಹಿತಾ ಭಾಗದಲ್ಲಿದೆ. ಹೀಗಾಗಿ ವಿಶೇಷವಾಗಿ ಈ ಉಪನಿಷತ್ತಿಗೆ ಮಂತ್ರೋಪನಿಷತ್ತು ಎನ್ನುವ ಹೆಸರು ಬಂದಿದೆ.   ಹೀಗೆ ಸ್ವಾಯಂಭುವ ಮನುವಿನ ಮಗಳ ಮಗನಾಗಿ, ಲೋಕದ ವ್ಯವಸ್ಥೆಯನ್ನು ರಕ್ಷಿಸಲು ಬಂದ ರೂಪ ಭಗವಂತನ ಯಜ್ಞ ನಾಮಕ ರೂಪ. ಇದು ಸ್ವಾಯಂಭುವ ಮನ್ವಂತರದಲ್ಲಿ ನಡೆದ ಭಗವಂತನ  ಎರಡನೇ ಅವತಾರ.  
ಯಜ್ಞ ಎನ್ನುವುದು ಭಗವಂತನ ಎಲ್ಲಾ ರೂಪಗಳಿಗೂ ಅನ್ವಯವಾದ ನಾಮ.  “ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ” ಎಂದು ಶ್ರೀಕೃಷ್ಣ ಹೇಳಿದಂತೆ,  ಯಜ್ಞ ಶಬ್ದ ವಾಚ್ಯತ್ವ ಭಗವಂತನ ಎಲ್ಲಾ ರೂಪಗಳಿಗೂ ಇದೆ. ಇದನ್ನು ಸರಳೀಕರಿಸಿ ವೇದಗಳು ಹೇಳುತ್ತವೆ: “ಯಜ್ಞೋ ವೈ ವಿಷ್ಣುಃ” ಎಂದು. [ಈ ಶ್ರುತಿಯನ್ನು ನೆನಪಿಸುವುದಕ್ಕೋಸ್ಕರ ಆಚಾರ್ಯ ಮಧ್ವರು ತಮ್ಮ ಈಶಾವಾಸ್ಯ ಉಪನಿಷತ್ ಭಾಷ್ಯದಲ್ಲಿ ಆಕೂತಿಸೂನುಂ ಯಜ್ಞನಾಮಾನಂ ವಿಷ್ಣುಂ ತುಷ್ಟವ ಎಂದಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು] .ಯಜ್ಞ ಶಬ್ದ ವಾಚ್ಯನಾದವನು ವಿಷ್ಣು. ಏಕೆಂದರೆ ವಿಷ್ಣುವಿನ ಎಲ್ಲಾ ರೂಪಗಳೂ ಯಜ್ಞ ಭೋಕ್ತಾರಗಳೇ. ಆದರೆ ವಿಶೇಷವಾಗಿ ಯಜ್ಞವನ್ನು ಸ್ವೀಕಾರ ಮಾಡುವುದಕ್ಕೋಸ್ಕರವೇ ಆದ ಭಗವಂತನ ಅವತಾರ ಸ್ವಾಯಂಭುವ ಮನ್ವಂತರದಲ್ಲಿ ನಡೆದ ಯಜ್ಞ ನಾಮಕ ಅವತಾರ.