Saturday, January 3, 2015

Shrimad BhAgavata in Kannada -Skandha-02-Ch-06(06)

ನಾರಾಯಣೇ ಭಗವತಿ ತದಿದಂ ವಿಶ್ವಮಾಹಿತಮ್
ಗೃಹೀತಮಾಯೋರುಗುಣೇ ಸರ್ಗಾದಾವಗುಣೇ ಸ್ವತಃ  ೩೦

ಸೃಷ್ಟಿಕರ್ತ ಯಾರು ಮತ್ತು ಈ ಸೃಷ್ಟಿ ಹೇಗೆ ನಿರ್ಮಾಣವಾಯಿತು ಎಂದು ನಾರದನಿಗೆ ವಿವರಿಸುತ್ತಿರುವ ಚತುರ್ಮುಖ ಮುಂದುವರಿದು ಹೇಳುತ್ತಾನೆ: “ಇಡೀ ವಿಶ್ವ, ಸಮಸ್ತ ಜೀವಜಾತ, ಜಡಪ್ರಪಂಚ ಎಲ್ಲವೂ ಭಗವಂತನಲ್ಲೇ ಇವೆ” ಎಂದು. ಚತುರ್ಮುಖ ಬ್ರಹ್ಮ, ಸಮಸ್ತ ದೇವತೆಗಳು ಋಷಿಗಳು ಎಲ್ಲರೂ ಭಗವಂತನಲ್ಲಿ ವಿಶ್ವವನ್ನು ಕಂಡು ಆರಾಧನೆ ಮಾಡಿದರು. ಈ ರೀತಿ ಭಗವಂತನಲ್ಲಿ ಎಲ್ಲವನ್ನೂ ಕಾಣುವುದು ಕೇವಲ ಸೃಷ್ಟಿಯ ಆದಿಗಷ್ಟೇ  ಮೀಸಲಲ್ಲಾ. ಇದು ಇಂದಿಗೂ ಎಂದೆಂದಿಗೂ ಸತ್ಯ.
ಭಗವಂತ ಸ್ವಂತ ಇಚ್ಛೆಯಿಂದ ಪ್ರಕೃತಿಯ ಸತ್ವ-ರಜಸ್ಸು-ತಮಸ್ಸನ್ನು ಬಳಸಿ ಮೂರು ವಿಧವಾದ ಕ್ರಿಯೆ ಮಾಡಿಸುತ್ತಿದ್ದಾನೆ. ಆದರೆ ಆತನಿಗೆ ಈ ತ್ರಿಗುಣದ ಸ್ಪರ್ಶವೇ ಇಲ್ಲ. “ಸೃಷ್ಟಿಯ ಆದಿಯಲ್ಲೇ ಭಗವಂತ ಇಂಥ ಲೀಲೆ ಮಾಡಿ ತೋರಿದ” ಎನ್ನುತ್ತಾನೆ ಚತುರ್ಮುಖ.

ಸೃಜಾಮಿ ತನ್ನಿಯುಕ್ತೋSಹಂ ಹರೋ ಹರತಿ ತದ್ವಶಃ
ವಿಶ್ವಂ ಪುರುಷರೂಪೇಣ ಪರಿಪಾತಿ ತ್ರಿಶಕ್ತಿಧೃಕ್  ೩೧

ಚತುರ್ಮುಖನಿಂದಲೇ ಸೃಷ್ಟಿ ನಡೆಯುತ್ತದೆ ಎನ್ನುವಂತೆ ಪ್ರಶ್ನಿಸಿದ್ದ ನಾರದರಿಗೆ ಚತುರ್ಮುಖ ಉತ್ತರಿಸುತ್ತಾ ಹೇಳುತ್ತಾನೆ:  “ನಾನು ಭಗವಂತನ ಕೈಯಲ್ಲಿನ ಒಂದು ಸಾಧನ(Instrument). ನನ್ನೊಳಗೆ ಕುಳಿತು ಭಗವಂತ ನನ್ನನ್ನು ಪ್ರೇರೇಪಿಸಿ ಸೃಷ್ಟಿ ಮಾಡುತ್ತಾನೆ. ಹೀಗಾಗಿ ನನ್ನ ಮುಖೇನ ಸೃಷ್ಟಿಯಾದಂತೆ ಕಾಣುತ್ತದೆ. ಇಲ್ಲಿ ನಾನು ಭಗವಂತನ ಆಜ್ಞಾಪಾಲಕ. ನಾನು ಸ್ವತಂತ್ರ ಸೃಷ್ಟಾರ ಅಲ್ಲ. ಇದೇ ರೀತಿ ಭಗವಂತ ಶಿವನೊಳಗೆ ಕುಳಿತು ಸಂಹಾರ ಮಾಡುತ್ತಾನೆ” ಎಂದು. ಸೃಷ್ಟಿ-ಸಂಹಾರವನ್ನು ಬ್ರಹ್ಮ-ಶಿವನೊಳಗೆ ನಿಂತು ಮಾಡಿಸುವ  ಭಗವಂತ ಹುಟ್ಟು-ಸಾವಿನ ನಡುವಿನ ಪಾಲನೆಯನ್ನು ಮಾತ್ರ ತಾನೇ ನೇರವಾಗಿ ಮಾಡುತ್ತಾನೆ. ರಜಸ್ಸನ್ನು ಚತುರ್ಮುಖನಲ್ಲಿ ತುಂಬಿ ಆತನಲ್ಲಿ ಸೃಷ್ಟಿ, ತಮಸ್ಸನ್ನು ಶಿವನಲ್ಲಿ ತುಂಬಿ ಆತನಿಂದ ಸಂಹಾರ ಕಾರ್ಯ ಮಾಡಿಸುವ ಭಗವಂತ ಸತ್ತ್ವವನ್ನು ಬಳಸಿ, ಅದರಿಂದ ಪ್ರಭಾವಿತನಾಗದೇ ಪಾಲನೆ ಮಾಡುತ್ತಾನೆ.     

ಇತಿ ತೇSಭಿಹಿತಂ ತಾತ ಯಥೇದಮನುಪೃಚ್ಛಸಿ
ನಾನ್ಯದ್ ಭಗವತಃ ಕಿಂಚಿದ್ ಭಾವ್ಯಂ ಸದಸದಾತ್ಮಕಮ್ ೩೨

“ನೀನು ಕೇಳಿದ್ದನ್ನೆಲ್ಲವನ್ನೂ ಹೇಳಿದೆ. ‘ಚತುರ್ಮುಖನೇ ಸೃಷ್ಟಿ ಮಾಡುತ್ತಾನೆ ಎಂದು ನಾನು ತಿಳಿದಿದ್ದೇನೆ’ ಎಂದು ನೀನು ಹೇಳಿದೆಯಲ್ಲಾ. ನಾನು ಏನನ್ನೂ ಸ್ವತಂತ್ರವಾಗಿ ಮಾಡುವುದಿಲ್ಲ. ಆ ಭಗವಂತ ನನ್ನನ್ನು ಸಾಧನವಾಗಿ ಬಳಸಿ ಏನನ್ನು ಮಾಡಿಸುತ್ತಾನೋ ಅದನ್ನಷ್ಟೇ ನಾನು ಮಾಡುತ್ತೇನೆ. ಅದೇ ರೀತಿ ಶಿವ ಕೂಡಾ. ಇದು ಸೃಷ್ಟಿ ರಹಸ್ಯ. ಹೀಗಾಗಿ ಸದಸದಾತ್ಮಕವಾದ ಈ ಪ್ರಪಂಚದಲ್ಲಿ ನಾವು ಚಿಂತಿಸಬೇಕಾದುದು ಎಲ್ಲವನ್ನೂ ನಿಯಂತ್ರಿಸುವ ಆ ಭಗವಂತನನ್ನೇ ಹೊರತು ಬೇರೇನನ್ನೂ ಅಲ್ಲ. ಭಗವಂತನನ್ನು ಬಿಟ್ಟು ಸ್ವತಂತ್ರವಾಗಿ ಯಾವ ದೇವತೆಗಳಾಗಲೀ, ಜೀವಜಾತಗಳಾಗಲೀ ಇಲ್ಲಾ.  ಈ ಪ್ರಪಂಚದಲ್ಲಿನ ಎಲ್ಲವೂ ಭಗವಂತನಿಂದಲೇ ಬಂದವುಗಳು. ಅದನ್ನು ಅವನಿಗೇ ಅರ್ಪಿಸಿ ಅವನನ್ನು ನಾವು ಪೂಜಿಸಬೇಕು” ಎಂದು ಚತುರ್ಮುಖ ನಾರದರಿಗೆ ವಿವರಿಸುತ್ತಾನೆ.

ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಇನ್ನ್ಯಾರೋ ಹೊಣೆಗಾರರಲ್ಲ. ಎಲ್ಲವುದರ ಹಿಂದೆ ಆ ಭಗವಂತನಿದ್ದಾನೆ. ಪ್ರಪಂಚದಲ್ಲಿರುವ ಎಲ್ಲವೂ ಅವನಲ್ಲೇ ಇರುವಂತಹದ್ದು. ಆದ್ದರಿಂದ ನಾವು ಹೊರಗಿಂದ ಆತನಿಗೆ ಕೊಡುವಂತಹದ್ದು ಏನೂ ಇಲ್ಲಾ. “ನೀನು ನೀಡಿರುವುದನ್ನು ನಿನಗೆ ಅರ್ಪಿಸಿದ್ದೇನೆ. ನೀನು ನನ್ನನ್ನು ಉದ್ಧರಿಸು” ಎಂದು ಭಗವಂತನಿಗೆ ನಮ್ಮ ಇಡೀ ಬದುಕನ್ನು ಅರ್ಪಿಸಿಕೊಳ್ಳುವುದೇ ಒಂದು ಮಹಾಯಜ್ಞ. ಇದೇ ಸೃಷ್ಟಿಯ ಆದಿಯಿಂದ ಅಂತ್ಯದ ತನಕ ನಿರಂತರ ನಡೆಯಬೇಕಾದ ಮಹಾಪೂಜೆ. ಇದು ದ್ರವ್ಯಗಳಿಂದಲೇ ಮಾಡಬೇಕಾಗಿರುವ ಯಜ್ಞವಲ್ಲ. ಇದೊಂದು ಮಾನಸಪೂಜೆ. ಹಸುವಿಗೆ ತಿನ್ನಲು ಚಿಗುರನ್ನು ನೀಡುವ ವಸಂತಕಾಲವೇ ನಿನಗೆ ತುಪ್ಪ; ಬೇಸಿಗೆಯಲ್ಲಿ ಒಣಗುವ ಮರಗಳೇ  ನಿನ್ನ ಯಜ್ಞದ ಕಟ್ಟಿಗೆ; ಶರತ್ಕಾಲದಲ್ಲಿ ಸಂಗ್ರಹಿಸುವ ಹೊಸ ದಾನ್ಯಗಳೇ ನಿನಗೆ ಹವಿಸ್ಸು; ಎಲ್ಲಾ ಕಾಲದ ಸಂಪತ್ತೂ ನಿನ್ನದೇ ಮತ್ತು ಅದು ನಿನಗೆ ಅರ್ಪಿತ ಎಂದು ಸಮಸ್ತ ವೇದಸಾರವಾದ ಪುರುಷಸೂಕ್ತದ ಅನುಸಂಧಾನದೊಂದಿಗೆ ನಾವು ಅಂದಿಗೂ ಇಂದಿಗೂ ಎಂದೆಂದಿಗೂ ಮಾಡಬೇಕಾದ ನಿತ್ಯಯಜ್ಞವಿದು.

Friday, January 2, 2015

Shrimad BhAgavata in Kannada -Skandha-02-Ch-06(05)

ಪುರುಷಸೂಕ್ತದಲ್ಲಿ ಮುಂದೆ ಯಜ್ಞದ ಬಗ್ಗೆ ವಿವರಣೆ ಬರುತ್ತದೆ: ಯತ್ಪುರುಷೇಣ ಹವಿಷಾ ದೇವಾ ಯಜ್ಞಮತನ್ವತ ವಸಂತೋ ಅಸ್ಯಾಸೀದಾಜ್ಯಂ ಗ್ರೀಷ್ಮ ಇಧ್ಮಃ ಶರದ್ಧವಿ: ।।೬।। ತಂ ಯಜ್ಞ೦ ಬರ್ಹಿಷಿ ಪ್ರೌಕ್ಷನ್ ಪುರುಷಂ ಜಾತಮಗ್ರತಃ ತೇನ ದೇವಾ ಆಯಜಂತ ಸಾಧ್ಯಾ ಋಷಯಶ್ಚ ಯೇ ।।೭।। ಇಲ್ಲಿ ವಸಂತವೇ ತುಪ್ಪ, ಗ್ರೀಷ್ಮವೇ ಕಟ್ಟಿಗೆ, ಶರತ್ತೇ ಹವಿಸ್ಸು ಇತ್ಯಾದಿಯಾಗಿ  ವಿವರಿಸಲಾಗಿದೆ.  ಇಲ್ಲಿ ಬರುವ ಪ್ರತಿ ಶಬ್ದದ ಅರ್ಥವನ್ನು ಕೊಡತಕ್ಕ ವಿವರಣೆಯನ್ನು ಭಾಗವತ ನೀಡಿಲ್ಲವಾದರೂ ಕೂಡಾ ಯಜ್ಞದ ಪರಿಕಲ್ಪನೆಯನ್ನು ಮುಂದೆ ವಿವರಿಸುವುದನ್ನು ನಾವು ಕಾಣಬಹುದು.

 ಯದಾSಸ್ಯ ನಾಭ್ಯಾನ್ನಳಿನಾದಹಮಾಸಂ ಮಹಾತ್ಮನಃ
ನಾವಿಂದಂ ಯಜ್ಞಸಂಭಾರಾನ್ ಪುರುಷಾವಯವಾನೃತೇ ೨೨

ತೇಷು ಯಜ್ಞಾಶ್ಚ ಪಶವಃ ಸವನಸ್ಪತಯಃ ಕುಶಾಃ
ಇದಂ ಚ ದೇವಯಜನಂ ಕಾಲಶ್ಚೋರುಗುಣಾನ್ವಿತಃ  ೨೩

ವಸೂನ್ಯೋಷಧಯಃ ಸ್ನೇಹಾ ರಸಲೋಹಮೃದೋ ಜಲಮ್
ಋಚೋ ಯಜೂಂಷಿ ಸಾಮಾನಿ ಚಾತುರ್ಹೋತ್ರಂ ಚ ಸತ್ತಮ ೨೪

ಚತುರ್ಮುಖ ಹುಟ್ಟಿದ ತಕ್ಷಣ, ಏನೂ ಇಲ್ಲದ ಆ ಸಮಯದಲ್ಲಿ  ಆತನಿಗೆ ತನ್ನನ್ನು ಹುಟ್ಟಿಸಿದ ತಂದೆಯನ್ನು ಯಾಜ್ಞಿಕವಾಗಿ ಪೂಜಿಸಬೇಕು ಎನ್ನುವ ಅನುಸಂಧಾನವಾಯಿತು. ಇಂಥಹ ಸಮಯದಲ್ಲಿ ಸೃಷ್ಟಿ ಪ್ರಕ್ರಿಯೆಯನ್ನೇ  ಯಾಜ್ಞಿಕ ಪ್ರಕ್ರಿಯೆಯಾಗಿ ಚತುರ್ಮುಖ ನೋಡಿರುವುದನ್ನು ಇಲ್ಲಿ ಕಾಣುತ್ತೇವೆ.
ಮೊದಲು ಚತುರ್ಮುಖ ಮೊಟ್ಟೆಯೊಳಗಿನಿಂದ ಹುಟ್ಟಿದ ಎನ್ನುವುದನ್ನು ಈ ಹಿಂದೆ ನೋಡಿದ್ದೇವೆ. ಹೀಗೆ ಮೊಟ್ಟೆಯೊಳಗಿದ್ದ  ಚತುರ್ಮುಖ ಮೊಟ್ಟೆಯೊಡೆದು ಮತ್ತೊಮ್ಮೆ ಹುಟ್ಟಿದ. ಮೊಟ್ಟೆ ಒಡೆಯುವುದು ಅಂದರೆ ಕಮಲ ಅರಳುವುದು. “ಅರಳಿದ ಕಮಲದಲ್ಲಿ ನಾನು ಮತ್ತೆ ಹುಟ್ಟಿದೆ”  ಎಂದಿದ್ದಾನೆ ಚತುರ್ಮುಖ. ಮೊಟ್ಟೆಯೊಡೆದು ಬಂದ ಚತುರ್ಮುಖನಿಗೆ ಸೃಷ್ಟಿಯ ಆದಿಯಲ್ಲಿ ಭಗವಂತನ ಪಾದಪೂಜೆಗೆ ಬೇಕಾದ ಸಾಮಗ್ರಿಗಳಿರಲಿಲ್ಲ. ಹೀಗಿರುವಾಗ ಆತನಿಗೆ ತನ್ನೆದುರು ಸಹಸ್ರಾರು ಕರಚರಣಗಳಿಂದ  ತುಂಬಿ ನಿಂತಿರುವ ಭಗವಂತನ ಅವಯವಗಳಲ್ಲಿ ಪ್ರಪಂಚದ ಅನಂತ ವಸ್ತುಗಳೂ ಮೂಲರೂಪದಲ್ಲಿ ಸೃಷ್ಟಿಯಾಗುತ್ತಿರುವುದು  ಕಾಣುತ್ತದೆ. ಇಂಥಹ ಭಗವಂತನಿಗೆ ಹೊರಗಿನಿಂದ ಕೊಡುವುದಕ್ಕೇನಿದೆ? ಮುಂದೆ ಹುಟ್ಟಿ ಬರುವ ಸಮಸ್ತ ವಸ್ತುವೂ ಕೂಡಾ ಸೂಕ್ಷ್ಮರೂಪದಲ್ಲಿ ಆತನಲ್ಲೇ ತುಂಬಿರುವುದನ್ನು ಚತುರ್ಮುಖ ಕಂಡ.
ಯಜ್ಞ ಅಂದ ಮೇಲೆ ಅಲ್ಲಿ ಬಲಿ ಎನ್ನುವುದೊಂದಿದೆ. ನಮ್ಮಲ್ಲಿರುವ ಪಶುತ್ವವನ್ನು ಬಲಿಕೊಡುವುದು ಈ ಬಲಿಯ ಹಿಂದಿನ ತಾತ್ಪರ್ಯ. ಇಲ್ಲಿ ಅದನ್ನೇ ಪುರುಷಮೇಧ ಎಂದಿದ್ದಾರೆ. ಪುರುಷಮೇಧ ಎಂದರೆ ನರಮೇಧ ಅಥವಾ ನರಬಲಿಯಲ್ಲ. ನಮ್ಮಲ್ಲಿರುವ ದೋಷವನ್ನು ಪರಿಹಾರ ಮಾಡು ಎಂದು ನಮ್ಮನ್ನು ನಾವು ಸಂಪೂರ್ಣವಾಗಿ ಭಗವಂತನಿಗೆ ಅರ್ಪಿಸಿಕೊಳ್ಳುವುದೇ ಪುರುಷಮೇಧ.

ನಾಮಧೇಯಾನಿ ಮಂತ್ರಾಶ್ಚ ದಕ್ಷಿಣಾಶ್ಚ ವ್ರತಾನಿ ಚ
ದೇವತಾನುಕ್ರಮಃ ಕಲ್ಪಃ ಸಂಕಲ್ಪ ಸೂತ್ರಮೇವ ಚ ೨೫

ಯಜ್ಞ ಮಾಡಲು ಅಲ್ಲಿ ನಾಮಧೇಯಗಳು ಬೇಕು, ದಕ್ಷಿಣೆ ಬೇಕು, ಮಂತ್ರಗಳು ಬೇಕು. ಸೃಷ್ಟಿಯ ಆದಿಯಲ್ಲಿ ನಡೆದ ಈ ಯಜ್ಞದಲ್ಲಿ ಭಗವಂತನ  ಮುಖದಿಂದ ಹೊಮ್ಮಿದ ವೇದವಾಣಿಯೇ  ನಾಮಧೇಯವಾಯಿತು. ಆ ಒಂದೊಂದು ಸೂಕ್ತವೇ ಮಂತ್ರವಾಯಿತು. ಪ್ರಪಂಚದಲ್ಲಿ ಭಗವಂತ ಸೃಷ್ಟಿಮಾಡಿದ ಅನಂತ ಸಂಪತ್ತೇ ಆ ಯಜ್ಞದ ದಕ್ಷಿಣೆಯಾಯಿತು. ಈ ರೀತಿ “ನೀನು ಕೊಟ್ಟ ಸಂಪತ್ತು ನಿನಗೆ ಅರ್ಪಿತ;  ನಿನ್ನ ಬಾಯಿಯಿಂದ ಬಂದ ನಾಮಧೇಯಗಳೇ ನಿನ್ನ ನಾಮಧೇಯಗಳು; ಆ ಮಂತ್ರಗಳೇ ನಿನ್ನ ಸ್ತೋತ್ರಗಳು ಎನ್ನುವ ಅನುಸಂಧಾನದೊಂದಿಗೆ ಭಗವಂತನ ಅವಯವಗಳಿಂದ ಬಂದದ್ದನ್ನೇ ಅವನಿಗೆ ಅರ್ಪಿಸಿ ನಾನು ಯಜ್ಞಮಾಡಿದೆ” ಎನ್ನುತ್ತಾನೆ ಚತುರ್ಮುಖ.
ವ್ರತಗಳು ಸೃಷ್ಟಿಯಾದವು, ಯಜ್ಞದ ಹೆಸರುಗಳು ಸೃಷ್ಟಿಯಾದವು, ಯಜ್ಞದಿಂದ ಆರಾಧಿಸಲ್ಪಡುವ ದೇವ-ದೇವತೆಯರ ಹೆಸರು ಎಲ್ಲವೂ ಭಗವಂತನಿಂದ ಆವಿಷ್ಕಾರವಾದ ವೇದವಾಣಿಯಲ್ಲಿ ಸಿಕ್ಕಿತು. ಯಾರನ್ನು ಕುರಿತು ಯಜ್ಞಮಾಡಬೇಕೋ ಆತನೇ ಸಹಸ್ರಶೀರ್ಷಾ ಪುರುಷನಾಗಿ ಎದುರಿಗೇ ನಿಂತಿದ್ದಾನೆ. ಇನ್ನು ಪರಿವಾರ ದೇವತೆಗಳು, ಆವಾಂತರ ದೇವತೆಗಳು ಎಲ್ಲರೂ ಭಗವಂತನ ಅವಯವಗಳಿಂದ ದೇವತಾ ತಾರತಮ್ಯಕ್ಕನುಗುಣವಾಗಿ ಸೃಷ್ಟಿಯಾಗುತ್ತಿದ್ದಾರೆ. ದೇವ-ದೇವತೆಯರನ್ನು ಹೇಗೆ ಉಪಾಸನೆ ಮಾಡಬೇಕು, ಹೇಗೆ ಆಹುತಿಕೊಡಬೇಕು ಎನ್ನುವುದನ್ನು ಭಗವಂತ ಸೃಷ್ಟಿಯ ಆದಿಯಲ್ಲೇ ಒಂದು ಕ್ರಮದಲ್ಲಿ ಸೃಷ್ಟಿಸಿದ. [ಇದನ್ನೇ ಮುಂದೆ ದೇವಮೀಮಾಂಸೆ ಎನ್ನುವ ಗ್ರಂಥರೂಪದಲ್ಲಿ ಋಷಿಗಳು ನಮಗೆ ನೀಡಿದರು]. ಯಾವ ಕ್ರಮದಲ್ಲಿ ಹೋಮ ಮಾಡಬೇಕು, ಯಾವ ಮಂತ್ರವನ್ನು ಎಲ್ಲಿ ಬಳಸಬೇಕು, ಇತ್ಯಾದಿ ಭಗವದ್ ಸಂಕಲ್ಪದಿಂದ ವೇದೋಚ್ಛಾರ ಕಾಲದಲ್ಲೇ ವ್ಯವಸ್ಥೆಯಾಗಿ ಬಿಟ್ಟಿತು. ಯಾವುದನ್ನೂ ಹೊರಗಿನಿಂದ ತರಬೇಕಾಗಿರಲಿಲ್ಲ- ಎಲ್ಲವೂ ಭಗವಂತನಲ್ಲೇ ತುಂಬಿತ್ತು.
ಕಲ್ಪ ಸೂತ್ರಗಳ ಸಂಕಲ್ಪ ಭಗವಂತನಿಂದಾಯಿತು [ಇದನ್ನೇ ಮುಂದೆ ಗ್ರಹ್ಯಸೂತ್ರ,  ಶ್ರುತಸೂತ್ರ ಇತ್ಯಾದಿ ಸೂತ್ರ(Rituals)  ರೂಪದಲ್ಲಿ ರಚಿಸಿ ಋಷಿಗಳು ನಮ್ಮ ಮುಂದಿಟ್ಟರು]. ಹೀಗೆ ಮುಂದೆ ರಚನೆಯಾಗುವ ಗ್ರಂಥಗಳ, ವ್ಯಾಖ್ಯಾನಗಳ, ಭಾಷ್ಯಗಳ ಸಂಕಲ್ಪ ಭಗವಂತನಿಂದಾಯಿತು. ಬ್ರಹ್ಮಸೂತ್ರ ಕೂಡಾ ಇದೇ ಕಾಲದಲ್ಲಿ ನಿರ್ಮಾಣವಾಯಿತು.[ಇದನ್ನೇ ವೇದವ್ಯಾಸರು ದ್ವಾಪರದ ಅಂತ್ಯದಲ್ಲಿ ಮತ್ತೆ ರಚಿಸಿ ನಮಗೆ ಕೊಟ್ಟಿರುವುದು]. ಇವೆಲ್ಲವನ್ನೂ ಬಳಸಿ ಚತುರ್ಮುಖ ಆದಿ ಯಜ್ಞ ನೆರವೇರಿಸಿದ.
ನಮಗೆ ತಿಳಿದಂತೆ ಯಜ್ಞ ಎಂದ ಮೇಲೆ ಅಲ್ಲಿ  ‘ಸಂಕಲ್ಪ’ ಮಾಡಬೇಕು. “ಸಂಕಲ್ಪಃ ಕರ್ಮ ಮಾನಸಂ” ಎನ್ನುವ ಮಾತಿದೆ. ‘ಮಾಡಬೇಕು’ ಎಂದು ಮನಸ್ಸಿನಲ್ಲಿ ನಿರ್ಧರಿಸುವುದೇ ಸಂಕಲ್ಪ. ಮೊದಲು ಮಾನಸಿಕವಾಗಿ ನಿರ್ಧರಿಸುವುದು, ಆಮೇಲೆ ದೈಹಿಕವಾಗಿ ಮಂತ್ರರೂಪದಲ್ಲಿ ಧೀಕ್ಷಾಬದ್ಧನಾಗುವುದೇ ನಿಜವಾದ ಸಂಕಲ್ಪ. ಇಲ್ಲಿ ಯಜ್ಞಕ್ಕೆ ಬೇಕಾದ ಸಂಕಲ್ಪ ಚತುರ್ಮುಖನಿಗೆ ಭಗವಂತನಿಂದ ದೊರೆಯಿತು. ಹೀಗೆ ಏನೂ ಇಲ್ಲದೇ ಇರುವಲ್ಲಿ ಎಲ್ಲವೂ ಇದ್ದು  ಆದಿ ಯಜ್ಞ ನೆರವೇರಿತು. ಚತುರ್ಮುಖ ತನ್ನನ್ನೇ ತಾನು ಪಶುವಾಗಿ ಭಗವಂತನಿಗೆ ಅರ್ಪಿಸಿ ಯಜ್ಞ ನೆರವೇರಿಸಿದ.
ಈ ರೀತಿಯ ವ್ಯವಸ್ಥೆ ಕೇವಲ ಆದಿ ಯಜ್ಞಕ್ಕೆ ಮಾತ್ರ ಮೀಸಲಲ್ಲ. ಇಂದೂ ಕೂಡಾ ಇದು ಸಾಧ್ಯ.  ಒಂದು ಒಳ್ಳೆಯ ಕಾರ್ಯ ಮಾಡಬೇಕು ಎನ್ನುವ ಅಚಲ ಸಂಕಲ್ಪ ಜೀವಕ್ಕೆ ಬಂದರೆ ಆ ಕಾರ್ಯಕ್ಕೆ ಬೇಕಾದ ಎಲ್ಲವನ್ನೂ ಭಗವಂತ   ಒದಗಿಸಿ ಕೊಡುತ್ತಾನೆ. ಇದೇ ಈ ಆದಿ ಯಜ್ಞ ನಮಗೆ ಕೊಡುವ ಸಂದೇಶ.