Saturday, April 26, 2014

Shrimad BhAgavata in Kannada -Skandha-02-Ch-05(04)

ನಮಸ್ತಸ್ಮೈ ಭಗವತೇ ವಾಸುದೇವಾಯ ಧೀಮಹಿ
ಯನ್ಮಾಯಯಾ ದುರ್ಜಯಯಾ ಮಾಂ ವದಂತಿ ಜಗದ್ಗುರುಮ್ ೧೨

‘ಓಂ ನಮೋ ಭಗವತೇ ವಾಸುದೇವಾಯ’ ಎನ್ನುವ ದ್ವಾದಶಾಕ್ಷರ ಮಂತ್ರ ಮತ್ತು  ‘ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ   ತನ್ನೋ ವಿಷ್ಣುಃ ಪ್ರಚೋದಯಾತ್ ’  ಎನ್ನುವ  ಚತುರ್ವಿಂಶಾSಕ್ಷರದ ವಿಷ್ಣು ಗಾಯತ್ತ್ರಿ ಮಂತ್ರದ ಸಮ್ಮಿಲನ ಇಲ್ಲಿದೆ. ತನ್ನ ಉಪದೇಶಕ್ಕೂ ಮೊದಲು ಚತುರ್ಮುಖ ಈ ರೀತಿ ಪ್ರಾರ್ಥನೆ ಮಾಡುತ್ತಿದ್ದಾನೆ ಎಂದರೆ ಇದು ಆತನ ನಿತ್ಯ ಉಪಾಸನೆಯ ಭಾಗ ಎನ್ನಬಹುದು. “ಯಾರಿಂದ ನಾನು ಜಗತ್ತಿನ ಆದಿಜೀವನಾಗಿ ಸೃಷ್ಟಿಯಾದೆನೋ, ಯಾರ ಮುಂದೆ ನನ್ನ ಸಾಮರ್ಥ್ಯ ಅತ್ಯಲ್ಪವೋ, ಅಂಥಹ ವಾಸುದೇವನಿಗೆ ನಮಸ್ಕಾರ” ಎಂದಿದ್ದಾನೆ ಚತುರ್ಮುಖ.  ಇಲ್ಲಿ “ವಾಸುದೇವ” ಎನ್ನುವ ವಿಶೇಷ ನಾಮದಿಂದ ಭಗವಂತನನ್ನು ಸಂಬೋಧಿಸಲಾಗಿದೆ. ಲೋಕದಲ್ಲಿ ವಾಸುದೇವ ಎನ್ನುವ ಭಗವಂತನ ನಾಮವನ್ನು ‘ವಸುದೇವನ ಮಗ ಶ್ರೀಕೃಷ್ಣ’ ಎನ್ನುವ ಅರ್ಥದಲ್ಲಿ ಕಾಣುತ್ತಾರೆ. ಆದರೆ ಈ ನಾಮ ಭಗವಂತನ ಶ್ರೀಕೃಷ್ಣ ಅವತಾರಕ್ಕೂ ಮೊದಲು ಇದ್ದ ಅಪ್ರಾಕೃತ ನಾಮ. ಇದು ಪ್ರಪಂಚದಲ್ಲಿ ಒಂದು ಕಾಲಘಟ್ಟದಲ್ಲಿ ನಡೆದ ಘಟನೆಯಿಂದ ಬಂದ ಹೆಸರಲ್ಲ. ಈ ಹಿಂದೆ ಹೇಳಿದಂತೆ ವಾಸುದೇವ ಎನ್ನುವ ನಾಮದ ಅರ್ಥವನ್ನು ನಾವು ಮುಂದೆ ಭಾಗವತದಲ್ಲೇ ಕಾಣುತ್ತೇವೆ. ಸತ್ತ್ವಂ ವಿಶುದ್ಧಂ ವಸುದೇವಶಬ್ದಿತಂ(೪-೩೦-೨೩). ಶುದ್ಧ ಮನಸ್ಸಿಗೆ ಗೋಚರನಾಗುವ ಸರ್ವವ್ಯಾಪ್ಯ ಭಗವಂತ ವಾಸುದೇವ. ನಮ್ಮ ಹೃದಯ ಕಮಲದಲ್ಲಿ ಸದಾ ವಾಸವಾಗಿರುವ ಆದರೆ  ತನ್ನನ್ನು ಸದಾ ಮುಚ್ಚಿಕೊಂಡಿರುವ ಮತ್ತು ಪರಿಶುದ್ಧ ಮನಸ್ಸಿಗೆ ಧ್ಯಾನದಲ್ಲಿ ಬೆಳಕಾಗಿ ಗೋಚರನಾಗುವ ಭಗವಂತ ವಾಸುದೇವ. ಸೃಷ್ಟಿಯ ಪೂರ್ವದಲ್ಲಿ, ಚತುರ್ಮುಖ ಹುಟ್ಟುವ ಮೊದಲು ಆವಿರ್ಭಾವಗೊಂಡ ಭಗವಂತನ ಮೊಕ್ಷಪ್ರದ ರೂಪ ವಾಸುದೇವ ರೂಪ.
ವಿಷ್ಣು ಗಾಯತ್ತ್ರಿಯಲ್ಲಿ ‘ನಾರಾಯಣಾಯ’ ಎಂದರೆ ನಾರಾಯಣನಿಗೋಸ್ಕರ ಎಂದರ್ಥವಲ್ಲ. ನಾರಾಯಣನನ್ನು ನಾವು ಬಲ್ಲೆವು; ನಮ್ಮಿಂದ ಕ್ರಿಯೆ ಮಾಡಿಸುವ ಪರಶಕ್ತಿ ಆತ ಎನ್ನುವುದು ನಮಗೆ ತಿಳಿದಿದೆ; ನಮ್ಮ ಎಲ್ಲಾ ಅರಿವು ಇರುವುದು ಅಂಥಹ ನಾರಾಯಣನನ್ನು ತಿಳಿಯುವುದಕ್ಕೋಸ್ಕರ ಮತ್ತು ಆತನ ಅನುಗ್ರಹ ಪ್ರೀತಿ ಪಡೆಯುವುದಕ್ಕೋಸ್ಕರ ಎನ್ನುತ್ತದೆ ವಿಷ್ಣು ಗಾಯತ್ತ್ರಿ. ಇಲ್ಲಿ ವಿದ್ಮಹೇ ಎನ್ನುವ ಪದದ ಹಿಂದೆ ನಮಸ್ಕಾರದ ಧ್ವನಿ ಇದೆ. ನಾರಾಯಣಾಯ ವಿದ್ಮಹೇ ಎಂದರೆ ನಾರಾಯಣಾಯ ನಮಃ. “ಯಾರು ತನ್ನ ಅರಿವನ್ನು ನನಗೆ ಕೊಟ್ಟನೋ ಅಂಥಹ ಭಗವಂತನಿಗೆ ನನ್ನ ನಮಸ್ಕಾರ” ಎನ್ನುತ್ತದೆ ಈ ಮಂತ್ರ.
ವಿಷ್ಣು ಗಾಯತ್ತ್ರಿಯಲ್ಲಿ ನಾರಾಯಣ, ವಾಸುದೇವ ಮತ್ತು ವಿಷ್ಣು ಎನ್ನುವ ಭಗವಂತನ ಮೂರು ನಾಮಗಳನ್ನು ಕಾಣುತ್ತೇವೆ. ನಾರಾಯಣ ಎನ್ನುವುದು ಭಗವಂತನ ಮೂಲರೂಪದ ಹೆಸರು. ಮೂಲರೂಪದಿಂದಾದ ಮೊದಲ ಆವಿಷ್ಕಾರವೇ ವಾಸುದೇವ ರೂಪ. ಹೀಗಾಗಿ ಮೊದಲು ನಾರಾಯಣನಿದ್ದ,  ಇದ್ದವನು ತನ್ನಿಂದ  ತಾನೇ   ಇನ್ನೊಂದು ರೂಪವಾಗಿ(ವಾಸುದೇವನಾಗಿ) ಆವಿರ್ಭಾವಗೊಂಡ. ನಂತರ ಸಂಕರ್ಷಣ, ಅನಿರುದ್ಧ ಮತ್ತು ಪ್ರದ್ಯುಮ್ನ ರೂಪಗಳಾದವು. ಈ ರೀತಿ ಚತುರ್ಮೂರ್ತಿಯಾಗಿ ಆವಿರ್ಭಾವಗೊಂಡ ಭಗವಂತನಿಂದ ಚತುರ್ಮುಖ ಬ್ರಹ್ಮನ ಸೃಷ್ಟಿಯಾಯಿತು. [...ನಾರಾಯಣಾತ್ ಬ್ರಹ್ಮ ಜಾಯತೇ,... ನಾರಾಯಣ ಉಪನಿಷತ್ತು] ಆನಂತರ ಚತುರ್ಮುಖನ ಮುಖೇನ ಸೃಷ್ಟಿಯಾದ ಪ್ರಪಂಚದ ಪಾಲನೆಗಾಗಿ ಭಗವಂತ ವಿಷ್ಣು ರೂಪದಲ್ಲಿ ಆವಿರ್ಭಾವಗೊಂಡ.[ಈ ಕುರಿತು ಭಾಗವತದಲ್ಲೇ ಮುಂದೆ ವಿವರಗಳನ್ನು ಕಾಣಬಹುದು].
ಭಗವಂತನ ‘ನಾರಾಯಣ’ ಎನ್ನುವ ನಾಮಕ್ಕೆ ವಿಶೇಷ ಅರ್ಥವಿದೆ. ನಾಸದಾಸೀನ್ನೋ ಸದಾಸೀತ್ ತದಾನೀಮಿತಿ |  ಯಾರು ಯಾವುದೂ ಇಲ್ಲದಾಗ ಇದ್ದನೋ-ಆತನೇ ನಾರಾಯಣ. ಯಾವುದೂ ಇಲ್ಲದೇ ಇದ್ದಾಗ ನಾರಾಯಣ ಎಲ್ಲಿದ್ದ ಎಂದರೆ ಆತ ಪ್ರಳಯ ಸಮುದ್ರದಲ್ಲಿ ಮಲಗಿದ್ದ ಎನ್ನುತ್ತದೆ ಶಾಸ್ತ್ರ. ಇಲ್ಲಿ ಒಂದು ಪ್ರಶ್ನೆ ಬರುತ್ತದೆ. ಯಾವುದೂ ಇಲ್ಲದೇ ಇದ್ದಾಗ ಸಮುದ್ರ ಎಲ್ಲಿಂದ ಬಂತು ಎಂದು. ಇದನ್ನು ವ್ಯಾಸರು ಮಹಾಭಾರತದಲ್ಲಿ ವಿವರಿಸಿರುವುದನ್ನು ಕಾಣುತ್ತೇವೆ. “ಆಪೋ ನಾರಾಃ ಇತಿ ಪ್ರೋಕ್ತಃ ಆಪೋ ವೈ ನಾರ-ಸೂನವಃ |  ಅಯನಂ ತಸ್ಯ ತಃ ಪೂರ್ವಂ ತೇನ ನಾರಾಯಣ ಇತಿ ಸ್ಮೃತಃ”. ಭಗವಂತ ಪ್ರಳಯೋದಕದಲ್ಲಿ ಮಲಗಿದ್ದ. ನಮಗೆ ತಿಳಿದಂತೆ ಪ್ರಳಯಕಾಲದಲ್ಲಿ ಯಾವ ವಸ್ತುವೂ ಇಲ್ಲವಾಗುವುದಿಲ್ಲ, ಬದಲಿಗೆ ಅದು ತನ್ನ ರೂಪವನ್ನು ಕಳೆದುಕೊಂಡು ಸೂಕ್ಷರೂಪದ ಪರಮಾಣು ಸಮುದ್ರವಾಗಿ ಮಾರ್ಪಾಟಾಗುತ್ತದೆ. ಇಂಥಹ ಪರಮಾಣು ಸಮುದ್ರದಲ್ಲಿ ಆ ನಾರಾಯಣ ಪವಡಿಸಿದ್ದ. ಪ್ರಳಯ ಕಾಲದಲ್ಲಿ ಏನೂ ಇರಲಿಲ್ಲಾ ಎಂದರೆ ಯಾವುದೇ ಆಕಾರವಿರಲಿಲ್ಲ, ಎಲ್ಲವೂ ಪರಮಾಣು ರೂಪದಲ್ಲಿತ್ತು ಎಂದರ್ಥ. ಇಂಥಹ ಪರಮಾಣುಗಳಿಂದ ಕಾಣುವ ವಿವಿಧ ರೂಪದ ನಿರ್ಮಾಣವೇ ‘ಸೃಷ್ಟಿ’. ಒಟ್ಟಿನಲ್ಲಿ ಹೇಳಬೇಕೆಂದರೆ ಸೃಷ್ಟಿ ಪೂರ್ವದಲ್ಲಿ ಜಗತ್ತಿನ ಮೂಲದ್ರವ್ಯವಾದ ಸೂಕ್ಷ್ಮ ಪ್ರಕೃತಿಯೆಂಬ ಪ್ರಳಯ ಸಮುದ್ರದಲ್ಲಿ ಪವಡಿಸಿರುವ ಭಗವಂತನೇ ನಾರಾಯಣ. “ಅಂಥಹ ನಿರ್ದೋಷ, ಸಕಲಗುಣಪೂರ್ಣ, ಆನಂದಮಯ  ನಾರಾಯಣನನ್ನು ನಾನು ಬಲ್ಲೆ” ಎನ್ನುತ್ತಾನೆ ಚತುರ್ಮುಖ.
ಭಗವಂತ ಈ ಸೃಷ್ಟಿ ನಿರ್ಮಾಣ ಮಾಡಿರುವುದು ತನ್ನ ಯಾವುದೋ ಒಂದು ಕೊರತೆ ನೀಗಿಸಿಕೊಳ್ಳುವುದಕ್ಕಾಗಿ ಅಲ್ಲ. ಏಕೆಂದರೆ ಸೃಷ್ಟಿಯ ಮೊದಲು ಆತನಿಗೆ ಯಾವುದೇ ಕೊರತೆ ಇರಲಿಲ್ಲ. ಆತ ಸದಾ ಆನಂದಮಯ. ಸೃಷ್ಟಿ ನಿರ್ಮಾಣವಾದ ನಂತರ ಭಗವಂತ ತಾನು ಸೃಷ್ಟಿಸಿದ ಪ್ರಪಂಚಕ್ಕೆ ಆಶ್ರಯ/ಆಧಾರನಾಗಿ ನಿಂತ. ಹೀಗೆ ನರರ ಸಮುದಾಯದಿಂದ ಗಮ್ಯನಾಗಿ, ಜ್ಞೇಯನಾಗಿ, ಅರಿವಿಗೆ ಗೋಚರನಾಗಿ, ಕೊನೆಗೆ ಮೋಕ್ಷದಲ್ಲಿ ಆಶ್ರಯನಾಗಿ ನಿಲ್ಲುವವ ನಾರಾಯಣ. “ಅಂಥಹ ವಾಸುದೇವನಿಗೆ ನಮಸ್ಕಾರ” ಎನ್ನುತ್ತಾನೆ ಚತುರ್ಮುಖ.
ಈ ಹಿಂದೆ ಹೇಳಿದಂತೆ ಭಗವಂತನ ವಾಸುದೇವ ರೂಪದಿಂದ ಚತುರ್ಮುಖನ ಸೃಷ್ಟಿಯಾಯಿತು. ಚತುರ್ಮುಖನ ಮುಖೇನ  ಈ ಪ್ರಪಂಚ ನಿರ್ಮಾಣವಾಯಿತು.  ಹೀಗೆ ಸೃಷ್ಟಿಯಾದ ಪ್ರಪಂಚ ಅಳಿವಿನ ದಾರಿಯನ್ನು ಕಾಣದೇ ಉಳಿವಿನತ್ತ ಸಾಗಲು ಒಂದು ಶಕ್ತಿ ಬೇಕಾಗಿತ್ತು. ಅದಕ್ಕೋಸ್ಕರ ಚತುರ್ಮುಖನ ಪ್ರಾರ್ಥನೆಯಂತೆ  ಭಗವಂತ ಜಗತ್ಪಾಲನಾ ಶಕ್ತಿ ವಿಷ್ಣುವಾಗಿ  ಆವಿರ್ಭಾವ ಹೊಂದಿದ. “ಅಂಥಹ ವಿಷ್ಣು ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ನಡೆಸಲಿ, ನಮ್ಮಿಂದ ಒಳ್ಳೆಯ ಮಾತನ್ನು ನುಡಿಸಲಿ” ಎಂದು ಚತುರ್ಮುಖ ಇಲ್ಲಿ ಪ್ರಾರ್ಥಿಸಿದ್ದಾನೆ.
ಪಾಲನೆ ಮಾಡಲು ಭಗವಂತ ತಳೆದ ರೂಪ ವಿಷ್ಣುರೂಪ. ಇಲ್ಲಿ ಪಾಲನೆ ಎಂದರೆ ಬದುಕಗೊಡುವುದು. ಅಂದರೆ ಉಸಿರೊಳಗೆ ಸೇರಿ, ಉಸಿರಿನ ಉಸಿರಾಗಿ ನಿಂತು ಪಾಲನೆ ಮಾಡುವ ಭಗವಂತ ವಿಷ್ಣುಃ(ವಿಷತೀತಿ ವಿಷ್ಣುಃ). ಉಪನಿಷತ್ತಿನಲ್ಲಿ ಹೇಳುವಂತೆ:  “ತತ್ ಸೃಸ್ಟ್ವಾ ತದೇವಾನು ಪ್ರಾವಿಷತ್”.  ಪ್ರತಿಯೊಂದು ಜೀವದ ಒಳಗೆ ಪಾಲಕನಾಗಿ ಭಗವಂತ ನೆಲೆಸಿರುತ್ತಾನೆ. ಒಳಗೆ ಪ್ರೇರಕನಾಗಿ, ಹೊರಗೆ ಧಾರಕನಾಗಿ ಭಗವಂತ ವಿಷ್ಣುರೂಪದಲ್ಲಿ ಜೀವಜಾತದ ಪಾಲನೆ ಮಾಡುತ್ತಾನೆ.  ಭಗವಂತನ ವಿಷ್ಣುಃ ನಾಮಕ್ಕೆ ವೇದದಲ್ಲಿ ಒಂದು ಸುಂದರ ವಿವರಣೆಯನ್ನು ಕಾಣಬಹುದು. ಐತರೇಯದಲ್ಲಿ ಹೇಳುವಂತೆ: ಣ-ಕಾರೋ ಬಲಂ ಷ-ಕಾರಃ ಪ್ರಾಣೋ ಆತ್ಮಾ.  ಆದ್ದರಿಂದ ವಿಷ್ಣುಃ ಎನ್ನುವಲ್ಲಿ ಣ’-ಕಾರ ಬಲವನ್ನು ಹೇಳಿದರೆ ‘ಉ-ಕಾರ’ ಸ್ವರೂಪವೆನ್ನುವ ಅರ್ಥವನ್ನು ನೀಡುತ್ತದೆ. ಆದ್ದರಿಂದ ‘ಣುಃ’ ಎಂದರೆ  ಅದು ಇಡೀ ಜಗತ್ತನ್ನು ಧಾರಣೆ ಮಾಡುವ ಬಲ. ಅದೇ ಆತ್ಮಬಲ, ದೇಹಬಲ, ಮನೋಬಲ, ಇತ್ಯಾದಿ ಎಲ್ಲಾ ಬಲಗಳ ಸಮಷ್ಟಿ. ಎಲ್ಲವನ್ನೂ ಮಣಿಸುವ ಶಕ್ತಿಸ್ವರೂಪ(ಣವಯತೀತಿ-ಣಃ) ಭಗವಂತ ‘ಣುಃ’. ಇನ್ನು ವಿಷ್ಣುಃ ಎನ್ನುವ ಭಗವಂತನ ನಾಮದಲ್ಲಿ ಷ-ಕಾರ ಪ್ರೇರಣೆ ಎನ್ನುವ ಅರ್ಥವನ್ನು ಕೊಡುತ್ತದೆ. ಅಂತರ್ಯಾಮಿಯಾಗಿ ಒಳಗೆ ನಿಂತು ನಮ್ಮ ಸಮಸ್ತ ವ್ಯಾಪಾರವನ್ನು ನಿಯಂತ್ರಿಸುವ ಭಗವಂತ ‘ಷ’. ಇಂಥಹ ವಿಶಿಷ್ಟ(ವಿ)ವಾದ ಶಕ್ತಿಯಾದ ಭಗವಂತ ವಿಷ್ಣುಃ. ಒಟ್ಟಿನಲ್ಲಿ ಹೇಳಬೇಕೆಂದರೆ ಸರ್ವ ಜಗತ್ ಧಾರಣೆ ಮತ್ತು ಪ್ರೇರಣೆ ಯಾರಿಗೆ ಸಹಜ ಕ್ರಿಯೆಯೋ ಅವನು ವಿ-ಷ-ಣು. ಹೀಗೆ ವಿಷ್ಣು/ವಿಷಣು ಎನ್ನುವ ನಾಮ ಪಾಲನೆಗಾಗಿ ಭಗವಂತ ಧರಿಸಿದ ಅವತಾರದ ಕ್ರಿಯೆ ಏನೋ  ಅದಕ್ಕೆ ಸಂಬಂಧಿಸಿದ ಎಲ್ಲಾ ಅರ್ಥವನ್ನೂ ಹೇಳುತ್ತದೆ.  “ಇಂಥಹ ಭಗವಂತ ನನ್ನೊಳಗೆ ನಿಂತು ನನ್ನ ನಾಲಿಗೆಯಿಂದ ನುಡಿಸಲಿ” ಎಂದು ಚತುರ್ಮುಖ ಪ್ರಾರ್ಥಿಸುತ್ತಾನೆ.
“ಏನು ಮಾಯೆ ಆ ಭಗವಂತನದು ? ಆತನ ಮುಂದೆ ನಾನೆಲ್ಲಿಯ ಗುರು” ಎನ್ನುತ್ತಾನೆ ಚತುರ್ಮುಖ. ಇಲ್ಲಿ ಮಾಯಾ ಎನ್ನುವ ಪದ ಬಳಕೆ ಮಾಡಿದ್ದಾನೆ ಚತುರ್ಮುಖ. ಸಂಸ್ಕೃತದಲ್ಲಿ ಮಾಯಾ ಶಬ್ದಕ್ಕೆ ಅನೇಕ ಅರ್ಥಗಳಿವೆ. ಭಗವಂತನ ಇಚ್ಛೆ, ಜ್ಞಾನ ಮತ್ತು ಮಹಿಮೆ ಆತನ ಸ್ವರೂಪಭೂತವಾದ ಮಾಯೆ. ಇನ್ನು ಭಗವಂತನ ಅಧೀನವಾಗಿರುವ ಪ್ರಕೃತಿ ಮಾಯೆ. ಜಡ ಪ್ರಕೃತಿ ಕೂಡಾ ಮಾಯೆ. ಇದಲ್ಲದೇ ನಮಗೆ ಬಂಧಕ ಶಕ್ತಿಯಾಗಿ ತುಂಬಿಕೊಂಡಿರುವ ಶೈವರೀ ಮಾಯೆ ಕೂಡಾ ಒಂದು ವಿಧದ ಮಾಯೆ. ಆದರೆ ಶೈವರೀ ಮಾಯೆ ಮಯನೆಂಬ ಇಂದ್ರಜಾಲದ ಮೂಲಪುರುಷನಿಂದ ಸೃಷ್ಟಿಯಾಗಿರುವುದರಿಂದ  ಇದು ಭಗವಂತನಿಗೆ ಅನ್ವಯವಾಗುವುದಿಲ್ಲ.

“ಭಗವಂತನ ಇಚ್ಛೆಯಂತೆ, ಜಗನ್ಮಾತೆ ಶ್ರೀಲಕ್ಷ್ಮಿಯ ಮತ್ತು  ಜಡಪ್ರಕೃತಿಯ ಮೋಹಕ್ಕೆ ಒಳಗಾಗಿ ಈ ಜಗತ್ತು ನನ್ನನ್ನೇ ಜಗದ್ಗುರು ಎಂದು ಕರೆಯುತ್ತಿದೆ. ಆದರೆ ಆ ಭಗವಂತನ ಮುಂದೆ ನಾನೆಲ್ಲಿಯ ಜಗದ್ಗುರು?” ಎನ್ನುತ್ತಾನೆ ಚತುರ್ಮುಖ. ಆಚಾರ್ಯ ಮಧ್ವರು ಉಪನಿಷತ್ ಭಾಷ್ಯದಲ್ಲಿ ಹೇಳುವಂತೆ:  ಯಸ್ಮಾತ್ ಬ್ರಹ್ಮೇಂದ್ರ ಸುದ್ರಾದಿ ದೇವತಾನಾಮ್ ಶ್ರೀಯೋಪಿ ಚ ಜ್ಞಾನ ಸ್ಫೂರ್ತಿ ಸದಾ ತಸ್ಮೈ ಹರಯೇ ಗುರವೇ ನಮಃ   ಸಮಸ್ತ ದೇವತೆಗಳೊಂದಿಗೆ ಶ್ರಿಲಕ್ಷ್ಮಿಗೂ ಗುರುವಾಗಿರುವ ನಾರಾಯಣನೇ  ಜಗದ್ಗುರು [ಕೃಷ್ಣಂ ವಂದೇ ಜಗದ್ಗುರುಮ್]. ಹೀಗಾಗಿ ಆ ನಾರಾಯಣನಿಂದ ಮೇಲೆ ಇನ್ನೊಬ್ಬ ಜಗದ್ಗುರುವಿಲ್ಲಾ.

Thursday, April 17, 2014

Shrimad BhAgavata in Kannada -Skandha-02-Ch-05(03)

ಬ್ರಹ್ಮೋವಾಚ--
ಸಮ್ಯಕ್ ಕಾರುಣಿಕಸ್ಯೇದಂ ವತ್ಸ ತೇ ವಿಚಿಕಿತ್ಸಿತಮ್
ಯದಹಂ ಚೋದಿತಃ ಸೌಮ್ಯ ಭಗವದ್ವೀರ್ಯದರ್ಶನೇ ೦೯

ನಾರದರ ಪ್ರಶ್ನೆಯನ್ನು ಆಲಿಸಿದ ಚತುರ್ಮುಖ ಹೇಳುತ್ತಾನೆ: “ನಿನ್ನ ಕರುಣೆ ಬಹಳ ದೊಡ್ಡದು ಮಗನೇ” ಎಂದು. ಈ ಹಿಂದೆ ಹೇಳಿದಂತೆ ನಮ್ಮ ಮೇಲಿನ ಕಾರುಣ್ಯದಿಂದ, ನಮ್ಮ-ನಿಮ್ಮೆಲ್ಲರ ಪರವಾಗಿ ನಾರದರು ಪ್ರಶ್ನೆ ಹಾಕಿರುವುದು. ಹೀಗೆ ಲೋಕದ ಪರವಾಗಿ, ಲೋಕದ ಸಂಶಯವನ್ನು ನೇರ ಚತುರ್ಮುಖನ ಉತ್ತರದಿಂದ ಪರಿಹರಿಸುವ ಉದ್ದೇಶದಿಂದ ನಾರದರು ಈ ರೀತಿ ಪ್ರಶ್ನೆ ಮಾಡಿರುವುದರಿಂದ ಚತುರ್ಮುಖ ಅವರನ್ನು ಪ್ರಶಂಸಿಸುತ್ತಿದ್ದಾನೆ. ಇಲ್ಲಿ ಚತುರ್ಮುಖ ನಾರದರನ್ನು “ಸೌಮ್ಯ” ಎಂದು ಸಂಬೋಧಿಸುವುದನ್ನು ಕಾಣುತ್ತೇವೆ. ತಮ್ಮ ಒಡನಾಟ ಮಾಡಿದವರಿಗೆ ಚಂದ್ರನ ಬೆಳಕಂತೆ ಅಹ್ಲಾದ ನೀಡುವ ಸ್ವಭಾವ ಉಳ್ಳವರ ಸೌಮ್ಯರು;  ಭಗವಂತನ ವಿಷಯೀಕವಾದ ಉತ್ಕೃಷ್ಟ ಜ್ಞಾನ(ಉಮ) ಉಳ್ಳವರ (ಸೋಮರ) ಗುಣ-ಸ್ವಭಾವ ಸೌಮ್ಯ. “ನೀನು ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡವನು, ನಿನಗೆ ಭಗವಂತನೇ ಎಲ್ಲವನ್ನೂ ಸೃಷ್ಟಿ ಮಾಡಿರುವುದು ಎಂಬುದು ತಿಳಿದಿದೆ. ಆದರೂ ಲೋಕದ ಜನರ ಮೇಲಿನ ಕಾರುಣ್ಯದಿಂದ, ಅವರ ಸಂಶಯ ನಿವಾರಣೆಗಾಗಿ ಈ ರೀತಿ ಪ್ರಶ್ನೆ ಮಾಡಿದೆ” ಎನ್ನುವುದು ಇಲ್ಲಿ ಬಳಸಿರುವ  ‘ಸೌಮ್ಯ’ ಎನ್ನುವ ವಿಶೇಷಣದ ಹಿಂದಿನ  ತಾತ್ಪರ್ಯ.  ಮುಂದುವರಿದು ಚತುರ್ಮುಖ ಹೇಳುತ್ತಾನೆ: “ನನಗೆ ನಿನ್ನ ಪ್ರಶ್ನೆಯಿಂದ ಬಹಳ ಸಂತೋಷವಾಗಿದೆ. ನಿನ್ನ ಪ್ರಶ್ನೆಯ ನೆಪದಲ್ಲಾದರೂ, ನಾನು ಸದಾ ಮನದಲ್ಲಿ ಚಿಂತಿಸುವ ಭಗವಂತನ ಬಗೆಗೆ ಮಾತನಾಡುವ ಅವಕಾಶ ನನಗೆ ದೊರಕಿತಲ್ಲಾ” ಎಂದು.   

ನಾನೃತಂ ಬತ ತಚ್ಚಾಪಿ ಯಥಾ ಮಾಂ ಪ್ರಬ್ರವೀಷಿ ಭೋಃ
ಅವಿಜ್ಞಾಯ ಪರಂ ಮತ್ತ ಏತಾವತ್ತ್ವಂ ಯತೋ ಹಿ ಮೇ ೧೦

“ನಾನೇ ಸೃಷ್ಟಿ ಮಾಡುವವನು, ನನ್ನಿಂದ ಮೇಲೆ ಇನ್ನ್ಯಾವ ಶಕ್ತಿಯೂ ಇಲ್ಲಾ ಎಂದಿಯಲ್ಲಾ, ಸುಳ್ಳಲ್ಲವೇ ಇದು? ನನ್ನನ್ನು ಆದಿಜೀವನಾಗಿ ಸೃಷ್ಟಿಸಿದ ಆ  ಭಗವಂತನನ್ನು ಮರೆತು  ಮಾತನಾಡುವುದು ಎಲ್ಲಾದರೂ ಉಂಟೇ? ಅಂಥಹ ಮಾತನ್ನು ಪರಿಹಾಸ್ಯಕ್ಕಾಗಿ ಆಡಿದರೂ ಕೂಡಾ ಆ ಮಾತಿನಲ್ಲಿ ಭಗವಂತನ ವಿಸ್ಮೃತಿ ಬಂತಲ್ಲವೇ? ನನ್ನನ್ನು ಜೀವಜಾತದಲ್ಲೇ ಹಿರಿಯ ಜೀವವನ್ನಾಗಿ ಸೃಷ್ಟಿಸಿದ ಆ ಭಗವಂತನನ್ನೇ ಮರೆತರೆ ಹೇಗೆ?” ಎಂದು ಕೇಳುತ್ತಾನೆ ಚತುರ್ಮುಖ. ಇಲ್ಲಿ  “ಏತಾವತ್ತ್ವಂ ಯತೋ ಹಿ ಮೇ” ಎನ್ನುವ ಮಾತಿನ ಹಿಂದಿನ ಧ್ವನಿಯನ್ನು ನಾವು ಗಮನಿಸಬೇಕು.  “ಭಗವಂತ ನನಗೆಷ್ಟು ಸಾಮರ್ಥ್ಯ ಕೊಟ್ಟಿದ್ದಾನೋ ಆ ಪರಿಮಿತಿಯಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ. ಅದಕ್ಕಿಂತ ಹೆಚ್ಚು ಇನ್ನೇನೂ ಇಲ್ಲಾ. ಹೀಗಿರುವಾಗ ಇಂಥಹ ಪ್ರಶ್ನೆಯೇ ನಿನಗೆ ಬರಬಾರದಿತ್ತು” ಎನ್ನುತ್ತಾನೆ ಚತುರ್ಮುಖ.
“ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ, ಆದರೆ ಭಗವಂತನ ವಿಸ್ಮೃತಿಯಿಂದ ಕೂಡಿದ ಪ್ರಶ್ನೆ ಮಾಡಿದ ದೋಷ ಪರಿಹಾರಕ್ಕಾಗಿ ಮತ್ತು ಭಗವಂತ ‘ನನ್ನಲ್ಲಿ ನಿಂತು ನುಡಿಸಲಿ’ ಎನ್ನುವ ಪ್ರಾರ್ಥನೆಯೊಂದಿಗೆ ಮೊದಲು ಆತನ ಧ್ಯಾನ ಮಾಡೋಣ” ಎನ್ನುತ್ತಾನೆ ಬ್ರಹ್ಮ. 

Saturday, April 12, 2014

Shrimad BhAgavata in Kannada -Skandha-02-Ch-05(02)

ಯದ್ರೂಪಂ ಯದಧಿಷ್ಠಾನಂ ಯತಃ ಸೃಷ್ಟಮಿದಂ ಪ್ರಭೋ
ಯತ್ಸಂಸ್ಥಂ ಯತ್ಪರಂ ಯಚ್ಚ ತತ್ ತತ್ತ್ವಂ ವದ ತತ್ತ್ವತಃ ೦೨
ತಾನು ತಿಳಿಯಬೇಕಾದ ಸಂಗತಿ ಯಾವುದು ಎನ್ನುವುದನ್ನು ವಿವರಿಸುತ್ತಾ ನಾರದರು ಹೇಳುತ್ತಾರೆ: “ಈ ಜಗತ್ತಿಗೂ ಮತ್ತು ಭಗವಂತನಿಗೂ ಇರುವ ಸಂಬಂಧ ಏನು ಎನ್ನುವುದನ್ನು ತಾವು ತಿಳಿಸಿ ಹೇಳಬೇಕು” ಎಂದು. ಈ ಜಗತ್ತು ಯಾವ ಭಗವಂತನ ರೂಪವೋ ಅಂಥಹ ಭಗವಂತನ ಬಗೆಗೆ ಹೇಳಿ ಎಂದು ನಾರದರು ಚತುರ್ಮುಖನಲ್ಲಿ ಕೇಳಿಕೊಳ್ಳುತ್ತಾರೆ. ನಾರದರ ಈ ಪ್ರಶ್ನೆಯನ್ನು ಕೇಳಿದಾಗ ನಮಗೆ ಸ್ವಲ್ಪ ಗೊಂದಲವಾಗುತ್ತದೆ. ಈ ಜಗತ್ತು ಭಗವಂತನ ರೂಪವಾಗುವುದು ಹೇಗೆ ಎನ್ನುವ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಈ ಗೊಂದಲ ಪರಿಹಾರವಾಗಬೇಕಾದರೆ ನಾವು ಇಲ್ಲಿ ಬಳಕೆಯಾಗಿರುವ ‘ರೂಪ’ ಎನ್ನುವ ಪದದ ಮೂಲಾರ್ಥವನ್ನು ತಿಳಿಯಬೇಕು. ‘ರೂಪ-ರೂಪಕ್ರಿಯಾಂ’ ಎನ್ನುವುದು ಧಾತು.  ಆದ್ದರಿಂದ ಇಲ್ಲಿ ನಾರದರು “ಈ ಜಗತ್ತಿಗೆ ರೂಪ ಕೊಡುವವನ ಕುರಿತು ಹೇಳು” ಎಂದು ಚತುರ್ಮುಖನಲ್ಲಿ ಕೇಳಿದ್ದೇ ವಿನಃ, “ಭಗವಂತನೇ ಜಗತ್ತಿನ ರೂಪದಲ್ಲಿ ಪರಿಣಾಮಗೊಂಡ ಬಗೆಯನ್ನು ಹೇಳು” ಎಂದು ಕೇಳಿರುವುದಲ್ಲ. ಬಹುಚಿತ್ರಜಗದ್ ಬಹುಧಾಕರಣಾತ್ ಪರಶಕ್ತಿರನನ್ತಗುಣಃ ಪರಮಃ   ಈ ಅನಂತವಾದ ವಿಶ್ವದಲ್ಲಿ ಒಂದು ಇನ್ನೊಂದರಂತಿಲ್ಲ. ಇಲ್ಲಿ ಅನಂತ ವೈವಿದ್ಯಗಳಿವೆ. ಒಂದೇ ಮರದಲ್ಲಿ ಒಂದು ಎಲೆ ಇನ್ನೊಂದು ಎಲೆಗಿಂತ ಭಿನ್ನ! ಇಂಥಹ ಜಗತ್ತಿಗೆ ರೂಪ ಕೊಟ್ಟವನ ಬಗೆಗೆ ಹೇಳಿ ಎಂದು ನಾರದರು ಪ್ರಾರ್ಥಿಸಿದ್ದಾರೆ.
ಮುಂದುವರಿದು ನಾರದರು ಹೇಳುತ್ತಾರೆ: “ಈ ಜಗತ್ತಿನ ಅಧಿಷ್ಠಾನ ಯಾರೋ ಅವನ ಕುರಿತು ಹೇಳಿ” ಎಂದು. ಅಧಿಷ್ಠಾನ ಅಂದರೆ ‘ಅಧಿಕಮ್ ಸ್ಥಾನಮ್’.  ಉದಾಹರಣೆಗೆ ನಾವು ಕುರ್ಚಿಯಲ್ಲಿ ಕುಳಿತಿದ್ದರೆ ಕುರ್ಚಿ ನಮಗೆ ಅಧಿಷ್ಠಾನವಲ್ಲ. ಏಕೆಂದರೆ ಕುರ್ಚಿಯನ್ನು ಹೊತ್ತಿರುವುದು ಭೂಮಿ; ಭೂಮಿಯನ್ನು ಹೊತ್ತಿರುವುದು ಸಂಕರ್ಷಣ[ಆಕರ್ಷಣ ಅಥವಾ ಗುರುತ್ವಾಕರ್ಷಣ ಶಕ್ತಿ]; ಸಂಕರ್ಷಣನನ್ನು ಹೊತ್ತಿರುವುದು ವಾಯು [ವಾತಾವರಣ/ಪ್ರಾಣಶಕ್ತಿ]; ಪ್ರಾಣನನ್ನು ಹೊತ್ತಿರುವುದು ಆ ನಾರಾಯಣ. ಆದ್ದರಿಂದ ಎಲ್ಲಕ್ಕೂ ಅಧಿಷ್ಠಾನ ಆ ಭಗವಂತ. ಅಂಥಹ ಭಗವಂತನ ಕುರಿತು ಹೇಳಿ ಎಂದು ನಾರದರು ಚತುರ್ಮುಖನಲ್ಲಿ ಕೇಳಿಕೊಳ್ಳುತ್ತಾರೆ. ಯಾರು ಎಲ್ಲವನ್ನೂ ಸೃಷ್ಟಿಸಿದನೋ, ಯಾರು ಎಲ್ಲವುದಕ್ಕೂ ರೂಪಕೊಟ್ಟನೋ, ಯಾರು ಎಲ್ಲವುದಕ್ಕೂ ಆಧಾರವಾಗಿ ನಿಂತಿದ್ದಾನೋ, ಅಂಥಹ ಭಗವಂತನ ಕುರಿತು ಕೇಳಬೇಕು ಎನ್ನುವ ಅಭಿಲಾಷೆಯನ್ನು ಇಲ್ಲಿ ನಾರದರು ವ್ಯಕ್ತಪಡಿಸಿದ್ದಾರೆ.  ಈ ಶ್ಲೋಕದಲ್ಲಿ  ನಾರದರು ಚತುರ್ಮುಖನನ್ನು ‘ಪ್ರಭೋ’ ಎಂದು ಸಂಬೋಧಿಸಿರುವುದನ್ನು ಕಾಣುತ್ತೇವೆ. ಪ್ರಕೃಷ್ಟನಾದ, ಎಲ್ಲಕ್ಕಿಂತ ಹಿರಿದಾದ ಭಗವಂತನಿಂದ ಸೃಷ್ಟನಾದ ಹಾಗೂ ಅಂಥಹ ಭಗವಂತನನ್ನು ಬಲ್ಲ ನೀನು   ನನಗೆ ಇವೆಲ್ಲವನ್ನೂ ತಿಳಿಸಿ ಹೇಳು ಎನ್ನುವುದು ಈ ವಿಶೇಷಣದ ಹಿಂದಿನ ತಾತ್ಪರ್ಯ.
ಈ ಶ್ಲೋಕದಲ್ಲಿ ಮೊದಲು ಜಗತ್ತಿನ ಅಧಿಷ್ಠಾನವಾಗಿರುವ ಭಗವಂತನ ಕುರಿತು ಹೇಳು ಎಂದು ಕೇಳಿದ ನಾರದರು, ಮತ್ತೆ ‘ಸಂಸ್ಥಾನ’ನಾದ ಭಗವಂತನ ಕುರಿತು ಹೇಳು ಎಂದಿದ್ದಾರೆ. ಸಂಸ್ಥಾನ ಎಂದರೆ ನೇರ ಆಧಾರ.  ಒಟ್ಟಿನಲ್ಲಿ ಹೇಳಬೇಕೆಂದರೆ: ಜಗತ್ತಿನ ನೇರ ಆಧಾರನೂ ಮತ್ತು ಕೊನೇಯ ಆಧಾರನೂ ಆಗಿರುವ ಭಗವಂತನ ಕುರಿತು ತಿಳಿಸಿ ಹೇಳಬೇಕು ಎನ್ನುವುದು ನಾರದರ ಪ್ರಾರ್ಥನೆ. ಇಲ್ಲಿ ಇನ್ನೊಂದು ವಿಶೇಷವಾದ ಮಾತನ್ನು ನಾರದರು ಹೇಳಿರುವುದನ್ನು ಕಾಣುತ್ತೇವೆ. ನಾರದರು ಹೇಳುತ್ತಾರೆ: “ಯಾರು ಎಲ್ಲವೂ ಆಗಿದ್ದಾನೋ  ಅಂಥಹ ಪರಮತತ್ತ್ವದ  ಬಗ್ಗೆ ಯಥಾವತ್ತಾದ ಅರಿವನ್ನು ಕೊಡು” ಎಂದು. ಇಲ್ಲಿ ‘ಎಲ್ಲವೂ ಆಗಿರುವವನು’ ಎಂದರೆ  ಎಲ್ಲವನ್ನೂ ಬಲ್ಲವನು, ಎಲ್ಲವನ್ನೂ ಮಾಡಬಲ್ಲ ಸರ್ವಸಮರ್ಥ  ಎಂದರ್ಥ.

ಸರ್ವಂ ಹ್ಯೇತದ್ ಭವಾನ್ ವೇದ ಭೂತಭವ್ಯಭವತ್ಪ್ರಭುಃ
ಕರಾಮಲಕವದ್ ವಿಶ್ವಂ ವಿಜ್ಞಾನಾವಸಿತಂ ತವ ೦೩  
ತಾನು ಈ ಪ್ರಶ್ನೆಯನ್ನು ಚತುರ್ಮುಖನಲ್ಲೇ ಏಕೆ ಕೇಳುತ್ತಿದ್ದೇನೆ ಎನ್ನುವುದನ್ನು ಈ ಶ್ಲೋಕದಲ್ಲಿ ನಾರದರು ಸ್ಪಷ್ಟಪಡಿಸಿದ್ದಾರೆ.  ನಾರದರು ಚತುರ್ಮುಖನಲ್ಲಿ ಹೇಳುತ್ತಾರೆ: “ ಎಲ್ಲವನ್ನೂ ತಿಳಿದಿರುವ ನೀವು ಭೂತಭವ್ಯಭವತ್ಪ್ರಭುಃ” ಎಂದು.  ನಾರದರು ಬಳಸಿರುವ ‘ಭೂತಭವ್ಯಭವತ್ಪ್ರಭುಃ’ ಎನ್ನುವ ನಾಮ ಭಗವಂತನ ನಾಮವಾಗಿ ವಿಷ್ಣುಸಹಸ್ರನಾಮದಲ್ಲಿ ಬಂದಿರುವುದನ್ನು ಕಾಣುತ್ತೇವೆ. ಅದೇ ನಾಮವನ್ನು ಚತುರ್ಮುಖನ ಪರವಾಗಿ ನಾರದರು ಇಲ್ಲಿ ಬಳಸಿದ್ದಾರೆ. ಇದರ ಅರ್ಥ: “ಭಗವಂತನನ್ನು ಬಿಟ್ಟರೆ,  ಹಿಂದಿನ, ಇಂದಿನ ಮತ್ತು ಮುಂದಿನ ಎಲ್ಲವುದರ ಒಡೆಯ ನೀನು” ಎಂದು. ಏಕೆಂದರೆ ಚತುರ್ಮುಖನಿಗೆ ಒಂದೊಂದು ಕಲ್ಪವೂ ಒಂದೊಂದು ದಿನದಂತೆ. ಆತ ಹಿಂದಿನ ಅನೇಕ ಕಲ್ಪಗಳಲ್ಲಿ ಅನೇಕ ಸೃಷ್ಟಿ ಮಾಡಿರುವ ಹಾಗೂ ಭವಿಷ್ಯತ್ತಿನಲ್ಲಿ ಇನ್ನೂ ಅನೇಕ ಸೃಷ್ಟಿ ಮಾಡಲಿರುವ ಮಹಾಶಕ್ತಿ. ಹೀಗಾಗಿ ಇಡೀ ಪ್ರಪಂಚ ಚತುರ್ಮುಖನಿಗೆ ನಿಚ್ಛಳ.  ಭಗವಂತನ ಬಗೆಗಿನ ವಿಜ್ಞಾನ(ವಿಶಿಷ್ಠಜ್ಞಾನ/ ವಿವರವಾದ ಜ್ಞಾನ)  ಬ್ರಹ್ಮ-ವಾಯುವಿಗೆ ತಿಳಿದಷ್ಟು ಇನ್ನ್ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಹೀಗಾಗಿ ನಾರದರು ತಮ್ಮ ಪ್ರಶ್ನೆಯನ್ನು ನೇರವಾಗಿ ಚತುರ್ಮುಖನ ಮುಂದಿಟ್ಟಿದ್ದಾರೆ.

ಯದ್ವಿಜ್ಞಾನೋ ಯದಾಧಾರೋ ಯತ್ಪರಸ್ತ್ವಂ ಯದಾತ್ಮಕಃ
ಏಕಃ ಸೃಜಸಿ ಭೂತಾನಿ ಭೂತೈರೇವಾತ್ಮಮಾಯಯಾ ೦೪

“ನಿಮ್ಮನ್ನು ಸೃಷ್ಟಿ ಮಾಡಿದ, ನಿಮ್ಮೊಳಗಿದ್ದು ನಿಮ್ಮನ್ನು ನಿಯಂತ್ರಿಸುವ, ನಿಮ್ಮ ಅಂತರ್ಯಾಮಿ ಬಗ್ಗೆ ನಿಮಗೆ ತಿಳಿದಿರುವಷ್ಟು  ಬೇರೆ ಯಾರಿಗೆ ತಿಳಿದಿರಲು ಸಾಧ್ಯ?” ಎಂದು ಪ್ರಶ್ನಿಸಿದ ನಾರದರು, ನಮ್ಮಂತಹ ಸಾಮಾನ್ಯ ಜನರ ಪರವಾಗಿ ಒಂದು ಪೂರ್ವಪಕ್ಷ ಮಾಡುವುದನ್ನು ಈ ಶ್ಲೋಕದಲ್ಲಿ ಕಾಣುತ್ತೇವೆ. ಅಸಂಗತವಾದುದನ್ನು ಕೇಳಿ ಸಂಗತವನ್ನು ಪಡೆಯುವ ಸಲುವಾಗಿ ನಾರದರು ಹೇಳುತ್ತಾರೆ: “ನನಗನಿಸಿದಂತೆ  ಈ ಜಗತ್ತನ್ನು ಸೃಷ್ಟಿ ಮಾಡುವ ಇನ್ನೊಂದು ಶಕ್ತಿ ಇಲ್ಲ; ಎಲ್ಲವೂ ನೀನೇ; ನಿನ್ನಿಂದಾಚೆಗೇನಿದೆ?” ಎಂದು. ಒಬ್ಬ ಸಾಮಾನ್ಯನಿಗೆ ಈ ರೀತಿ ಯೋಚನೆ ಬಂದರೆ ಅದಕ್ಕೆ ಚತುರ್ಮುಖನ ಉತ್ತರವೇನು ಎಂದು ಚತುರ್ಮುಖನ ಬಾಯಿಯಿಂದಲೇ ಕೇಳುವುದಕ್ಕಾಗಿ ನಾರದರು ಇಲ್ಲಿ ಈ ರೀತಿ ಹೇಳಿದ್ದಾರೆ. “ಪಂಚಭೂತದ ಸೃಷ್ಟಿ, ಗಂಡು-ಹೆಣ್ಣಿನ ಸೃಷ್ಟಿ,  ಜೀವದಿಂದ ಜೀವದ ಸೃಷ್ಟಿ, ಇವೆಲ್ಲವೂ ನಿನ್ನ ಸ್ವರೂಪಭೂತ ಸಾಮರ್ಥ್ಯದಿಂದಲೇ ನಡೆಯುತ್ತಿರುವುದು”  ಎನ್ನುತ್ತಾರೆ ನಾರದರು.

ಆತ್ಮನ್ ಭಾವಯಸೇ ತಾನಿ ನ ಪರಾಗ್ ಭಾವಯೇಃ ಸ್ವಯಮ್ 
ಆತ್ಮಶಕ್ತಿಮವಷ್ಟಭ್ಯ ಸೂತ್ರನಾಭಿರಿವಾಕ್ಲಮಃ ೦೫

“ಎಲ್ಲವನ್ನೂ ಸೃಷ್ಟಿ ಮಾಡುವವನೂ ನೀನೇ; ಕೊನೆಗೊಂದುದಿನ ಎಲ್ಲವನ್ನೂ ಸಂಹಾರ ಮಾಡುವವನೂ ನೀನೇ. ನೀನು ಇನ್ನೊಂದು ಬಾಹ್ಯ ಶಕ್ತಿಯ ನೆರವಿನಿಂದ ಇದೆಲ್ಲವನ್ನೂ ಮಾಡುತ್ತಿಲ್ಲ, ಬದಲಿಗೆ ಸ್ವಸಾಮರ್ಥ್ಯದಿಂದ ಮಾಡುತ್ತಿರುವೆ. ಹೇಗೆ ಜೇಡ ತನ್ನ ಹೊಟ್ಟೆಯಿಂದ ನೂಲನ್ನು ತೆಗೆದು ಬಲೆಯನ್ನು ನಿರ್ಮಿಸುತ್ತದೋ ಹಾಗೇ, ನೀನು ಪ್ರಪಂಚವೆಂಬ ಬಲೆಯನ್ನು ನಿರ್ಮಿಸಿ ಅದರೊಳಗೆ ನಮ್ಮನ್ನಿಟ್ಟಿರುವೆ” ಎನ್ನುತ್ತಾರೆ ನಾರದರು.


ನಾಹಂ ವೇದ ಪರಂ ತ್ವಸ್ಮಾನ್ನಾವರಂ ನ ಸಮಂ ವಿಭೋ
ನಾಮರೂಪಗುಣೈರ್ಭಾವ್ಯಂ ಸದಸತ್ ಕಿಂಚಿದನ್ಯತಃ ೦೬

“ನೀನು ನಿರ್ಮಿಸಿರುವ ಈ ಪ್ರಪಂಚವನ್ನು ನೋಡಿದರೆ ನಿನ್ನಿನ್ದಾಚೆಗೆ ನಿನಗೆ ಸಮನಾಗಿರುವ ಅಥವಾ ನಿನಗಿಂತ ಉನ್ನತವಾಗಿರುವ ಶಕ್ತಿ ಇನ್ನೊಂದಿಲ್ಲ ಎಂದು ನನಗನಿಸುತ್ತದೆ. ನಾಮ-ರೂಪ-ಕ್ರಿಯಾತ್ಮಕವಾಗಿರುವ ಈ ಪ್ರಪಂಚದಲ್ಲಿ ಮೂಲತಃ ಇರುವುದು ಎರಡೇ ಬಗೆ. ಒಂದು ಕಣ್ಣಿಗೆ ಕಾಣುವಂಥಹದ್ದು(ಸತ್)  ಮತ್ತು ಇನ್ನೊಂದು ಕಣ್ಣಿಗೆ ಕಾಣದೇ ಇರುವಂತಹದ್ದು(ಅಸತ್). ಇಂಥಹ ಕಾರ್ಯಕಾರಣಾತ್ಮಕ ಪ್ರಪಂಚ ಕೇವಲ ನಿನ್ನಿಂದ ನಿರ್ಮಾಣವಾಗಿದೆ ಎಂದು ನಾನು ತಿಳಿದುಕೊಂಡಿದ್ದೇನೆ” ಎಂದು ತಮ್ಮ ಪೂರ್ವಪಕ್ಷ ಹೇಳಿಕೆಯನ್ನು ಮುಂದಿಟ್ಟ ನಾರದರು, ಈ ತಿಳುವಳಿಕೆ ಹಿಂದಿನ ಒಂದು ಸಮಸ್ಯೆಯನ್ನು ಚತುರ್ಮುಖನ ಮುಂದಿಡುತ್ತಾರೆ.  

ಸ ಭವಾನಚರದ್ ಘೋರಂ ಯತ್ ತಪಃ ಸುಸಮಾಹಿತಃ
ತೇನ ಖೇದಯಸೇ ನಸ್ತ್ವಂ ಪರಾಂ ಶಂಕಾಂ ಚ ಯಚ್ಛಸಿ ೦೭

“ಎಲ್ಲವೂ ನೀನೇ ಎಂದು ನನಗನಿಸಿದರೂ ಕೂಡಾ, ಅಂತಹ ನೀನು ಸೃಷ್ಟಿಯ ಆರಂಭದಲ್ಲಿ ಸಾವಿರಾರು ವರ್ಷಗಳ ತನಕ, ನಿರ್ವಿಕಾರನಾಗಿ, ಏಕಾಗ್ರತೆಯಿಂದ ತಪಸ್ಸು ಮಾಡಿರುವುದು ಯಾರನ್ನು ಕುರಿತು?  ಈ ಸಮಸ್ಯೆಗೆ ಉತ್ತರ ಕಾಣದೇ ಗೊಂದಲಕ್ಕೊಳಗಾಗಿದ್ದೇನೆ” ಎಂದು ತಮ್ಮ ಸಮಸ್ಯೆಯನ್ನು ಚತುರ್ಮುಖನ ಮುಂದೆ ತೋಡಿಕೊಳ್ಳುತ್ತಾರೆ ನಾರದರು.

ಏತನ್ಮೇ ಪೃಚ್ಛತಃ ಸರ್ವಂ ಸರ್ವಜ್ಞ ಸಕಲೇಶ್ವರ
ವಿಜಾನೀಹಿ ಯಥೈವೇದಮಹಂ ಬುಧ್ಯೇSನುಶಾಸಿತಃ ೦೮

ಚತುರ್ಮುಖನೇ ಪ್ರಪಂಚದ ಕೊನೆ, ಆತನಿಂದಲೇ ಎಲ್ಲವೂ ಸೃಷ್ಟಿಯಾಗಿರುವುದು, ಅವನೇ ಈ ಪ್ರಪಂಚದ ಮೂಲಾಧಾರ  ಎಂದು ತಿಳಿದುಕೊಂಡರೆ, ಅಂಥಹ ಚತುರ್ಮುಖ ಆರಾಧನೆ ಮಾಡುತ್ತಿರುವ ಶಕ್ತಿ ಯಾವುದು? ಆ ಮಹಾಶಕ್ತಿಯ ಬಗೆಗೆ ಸಮಗ್ರವಾಗಿ ವಿವರಿಸಬೇಕೆಂದು ನಾರದರು ತಮ್ಮ ತಂದೆಯಾದ ಚತುರ್ಮುಖನಲ್ಲಿ ಕೇಳಿಕೊಳ್ಳುತ್ತಾರೆ. ತಾವು ಈ ಪ್ರಶ್ನೆಯನ್ನು ಚತುರ್ಮುಖನಲ್ಲೇ ಏಕೆ ಕೇಳುತ್ತಿರುವುದು ಎನ್ನುವುದನ್ನು ವಿವರಿಸುತ್ತಾ ನಾರದರು ಹೇಳುತ್ತಾರೆ: “ ಹೇಗೆ ಹೇಳಿದರೆ ನನಗೆ ತಿಳಿದೀತು ಎನ್ನುವುದನ್ನು  ಎಲ್ಲವನ್ನೂ ತಿಳಿದಿರುವ ನೀವು ಬಲ್ಲಿರಿ. ಹಾಗಾಗಿ ನನಗೆ ಮನವರಿಕೆಯಾಗುವಂತೆ ತಾವು ಅನುಶಾಸನ ಮಾಡಬೇಕು” ಎಂದು ವಿನಂತಿಸುತ್ತಾರೆ ನಾರದರು

Friday, April 4, 2014

Shrimad BhAgavata in Kannada -Skandha-02-Ch-05(01)

ಪಂಚಮೋSಧ್ಯಾಯಃ

ಸೃಷ್ಟಿಯ ಸಂಕ್ಷಿಪ್ತ ಚಿತ್ರಣ-ನಾರದ ಚತುರ್ಮುಖ ಸಂವಾದ

ಈ ಅಧ್ಯಾಯದಲ್ಲಿ ಸೃಷ್ಟಿ-ಸ್ಥಿತಿ-ಸಂಹಾರದ ಕುರಿತು ಪ್ರಶ್ನಿಸಿದ ಪರೀಕ್ಷಿತನಿಗೆ ಶುಕಾಚಾರ್ಯರು  ಸೃಷ್ಟಿಯ ಒಂದು ಚಿತ್ರಣವನ್ನು ಸಂಕ್ಷಿಪ್ತವಾಗಿ ನಾರದ-ಚತುರ್ಮುಖ ಸಂವಾದ ರೂಪದಲ್ಲಿ ನೀಡಿದ್ದಾರೆ. ಮುಂದೆ ಸೃಷ್ಟಿಯ ವರ್ಣನೆ ಮೂರನೇ ಸ್ಕಂಧದಲ್ಲಿ ವಿಸ್ತಾರವಾಗಿ ಬರುತ್ತದೆ. ಆದರೆ ಇಲ್ಲಿ ಅದರ ಸಂಕ್ಷಿಪ್ತ ಚಿತ್ರಣವಿದೆ. ಬನ್ನಿ, ನಮ್ಮ-ನಿಮ್ಮೆಲ್ಲರ ಪರವಾಗಿ ನಾರದರು ಚತುರ್ಮುಖನಲ್ಲಿ ಹಾಕಿದ ಪ್ರಶ್ನೆ ಮತ್ತು ಅದಕ್ಕೆ ಚತುರ್ಮುಖನ ಉತ್ತರವನ್ನು ಅವರ ಬಾಯಿಂದಲೇ ಕೇಳೋಣ.

ನಾರದ ಉವಾಚ--
ದೇವದೇವ ನಮಸ್ತೇSಸ್ತು ಭೂತಭಾವನ ಪೂರ್ವಜ
ತದ್ ವಿಜಾನೀಹಿ ಯಜ್ಜ್ಞಾನಮಾತ್ಮತತ್ತ್ವನಿದರ್ಶನಮ್ ೦೧

ಚತುರ್ಮುಖ ನಾರದನ ತಂದೆ. ಸೃಷ್ಟಿಯ ಆದಿಯಲ್ಲಿ ನವ ಪ್ರಜಾಪತಿಗಳು ಮತ್ತು ಯಾವ ಪ್ರಜಾಪತಿಯೂ ಅಲ್ಲದ ನಿತ್ಯ ಬ್ರಹ್ಮಚಾರಿ ನಾರದರೂ ಸೇರಿ ಹತ್ತು ಮಂದಿ ಮಹಾಜ್ಞಾನಿಗಳನ್ನು ಚತುರ್ಮುಖ ಸೃಷ್ಟಿಸಿದ. ಈ ಹತ್ತು ಮಂದಿಗಳಲ್ಲಿ  ದಕ್ಷನನ್ನು ಬಿಟ್ಟರೆ ನಾರದರೇ  ಅತ್ಯಂತ ಎತ್ತರದ ಜ್ಞಾನವುಳ್ಳವರು. ಅಂಥಹ ನಾರದರು ಚತುರ್ಮುಖನಲ್ಲಿ ಹೇಳುತ್ತಾರೆ: “ನೀನು ದೇವತೆಗಳಿಗೂ ದೇವತೆ” ಎಂದು. ದೇವತೆ ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಮುಖ್ಯಾರ್ಥದಲ್ಲಿ ದೇವಾ ಎಂದರೆ ಸಾಕ್ಷಾತ್ ಭಗವಂತನೇ. [ಉದಾಹರಣೆಗೆ ಗಾಯತ್ತ್ರಿಯ ‘ಭರ್ಗೋ ದೇವಸ್ಯ ಧೀಮಹಿ’  ಎನ್ನುವಲ್ಲಿ ದೇವಾ ಎಂದರೆ ಸಾಕ್ಷಾತ್ ಭಗವಂತ].  ಭಗವಂತನ ನಂತರ ದೇವತೆಗಳು ಅನೇಕ ಹಾಗೂ ಅವರಲ್ಲಿ ವಿವಿಧ ಹಂತ/ಮಟ್ಟ/ತಾರತಮ್ಯವಿದೆ.  ಈ ಎಲ್ಲಾ ದೇವತೆಗಳಲ್ಲಿ ಎಲ್ಲರಿಗಿಂತ ಎತ್ತರದಲ್ಲಿರುವ ದೇವತೆ ಚತುರ್ಮುಖ ಬ್ರಹ್ಮ. ಹೀಗಾಗಿ ಚತುರ್ಮುಖ ದೇವದೇವ. ದಿವು-ವ್ಯವಹಾರೇ ಧಾತು. ದೇವತೆಗಳು ಎಂದರೆ ಪ್ರಪಂಚದ ವ್ಯವಹಾರ ನಡೆಸುವವರು ಎನ್ನುವ ಅರ್ಥವೂ ಇದೆ. ಏಕೆಂದರೆ: ತತ್ತ್ವಾಭಿಮಾನಿಗಳಾಗಿ ಪ್ರತಿಯೊಂದು ಕ್ರಿಯೆಯನ್ನು ನಡೆಸುವವರು ದೇವತೆಗಳಾಗಿರುವುದರಿಂದ ಅವರನ್ನು ದೇವ/ದೇವತೆ ಎಂದು ಕರೆಯುತ್ತಾರೆ. ಹಾಗಾಗಿ ಜಗತ್ತಿನ ಎಲ್ಲಾ ವ್ಯವಹಾರಗಳನ್ನು ನಡೆಸುವ ತತ್ತ್ವಾಭಿಮಾನಿಗಳಲ್ಲೇ ಸರ್ವಶ್ರೇಷ್ಠನಾದ ಚತುರ್ಮುಖ ದೇವದೇವ.

ನಮಸ್ಕರಿಸುತ್ತಾ ನಾರದರು ಚತುರ್ಮುಖನನ್ನು ಇಲ್ಲಿ ‘ಭೂತಭಾವನ ಪೂರ್ವಜ’ ಎಂದು ಸಂಬೋಧಿಸುವುದನ್ನು ಕಾಣುತ್ತೇವೆ.  ಈ ಹಿಂದೆ ಹೇಳಿದಂತೆ ಚತುರ್ಮುಖ ಬ್ರಹ್ಮ  ನಮ್ಮೆಲ್ಲಾ ವ್ಯವಹಾರಗಳ ಕೇಂದ್ರಸ್ಥಾನವಾದ  ಚಿತ್ತ ಅಥವಾ ವಿಜ್ಞಾನಮಯಕೋಶದ  ನಿಯಾಮಕ ದೇವತೆ. ಇಂತಹ ಅತ್ಯಂತ ಮಹತ್ತಾದ ಇಂದ್ರಿಯದ ನಿಯಾಮಕ ಶಕ್ತಿಯಾದ ಚತುರ್ಮುಖ ‘ಭೂತಭಾವನಃ’. ಇನ್ನು ‘ಭೂತ’ ಅಂದರೆ ಜೀವಜಾತ; ಭಾವನ ಅಂದರೆ ನಿರ್ಮಾಣ(Creation).  ಹೀಗಾಗಿ ಭೂತಭಾವನಃ ಅಂದರೆ ಎಲ್ಲಾ ಜೀವಗಳನ್ನು ಸೃಷ್ಟಿ ಮಾಡಿದ ತಂದೆ ಎಂದರ್ಥ. ಇತರ ದೇವತೆಗಳಿಗೂ ಸೃಷ್ಟತ್ವವಿದೆ. ಆದರೆ ಚತುರ್ಮುಖ ಬ್ರಹ್ಮ  ಎಲ್ಲರಿಗೂ ತಂದೆ. ಎಲ್ಲಾ ಜೀವರ ಸೃಷ್ಟಾರ ಎನ್ನುವ ವಿಶೇಷಣ ಯಾರಿಗಾದರೂ ಅನ್ವಯವಾಗುವುದಿದ್ದರೆ ಅದು ಬ್ರಹ್ಮ-ವಾಯುವಿಗಳಿಗೆ ಮಾತ್ರ. ಹೀಗಾಗಿ  ನಾರದರು ಚತುರ್ಮುಖನನ್ನು “ಸಮಸ್ತ ಜೀವಜಾತದ ತಂದೆಯೇ” ಎಂದು ಸಂಬೋಧಿಸಿದ್ದಾರೆ. ಇನ್ನು ‘ಪೂರ್ವಜಃ’.  ಅಂದರೆ ಎಲ್ಲಾ ಜೀವರು ಹುಟ್ಟುವ ಮೊದಲು ಭಗವಂತನ ನಾಭಿಕಮಲದಿಂದ ಹುಟ್ಟಿದ ಆದಿಜೀವ ಎಂದರ್ಥ. ಇದಲ್ಲದೇ ಈ ಎರಡು ವಿಶೇಷಣಗಳನ್ನು ಒಂದೇ ಪದವಾಗಿ ನೋಡಿದರೆ-‘ಭೂತಭಾವನಪೂರ್ವಜಃ’ ಎಂದಾಗುತ್ತದೆ. ನಮಗೆ ತಿಳಿದಂತೆ ‘ಭೂತಭಾವನಃ’ ಆ ನಾರಾಯಣ(ವಿಷ್ಣುಸಹಸ್ರನಾಮದಲ್ಲಿ ಈ ನಾಮ ಬಂದಿದೆ). ಆತ ಜಗತ್ತಿನ ಸಮಸ್ತ ಜೀವಜಾತದ(ಚತುರ್ಮುಖನನ್ನೂ ಸೇರಿಸಿ) ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣಕರ್ತ. ಇಂಥಹ ಭಗವಂತನ ಮೊದಲ ಮಗ(ಪೂರ್ವಜ)ನಾಗಿ ಹುಟ್ಟಿದ ಚತುರ್ಮುಖ ‘ಭೂತಭಾವನಪೂರ್ವಜಃ’. ಬ್ರಹ್ಮಣಃ ಪಿತರಂವೊಂದೇ, ಶಂಕರಸ್ಯ ಪಿತಾಮಹಂ, ಶ್ರೀಯಂ ಪತಿಂ, ಅಜಮ್ ನಿತ್ಯಂ,  ಇಂದ್ರಾದಿ ಪ್ರಪಿತಾಮಹಂ.  ಹುಟ್ಟು-ಸಾವಿಲ್ಲದ, ರಮಾರಮಣ ಭಗವಂತ ಬ್ರಹ್ಮ-ವಾಯುಗಳಿಗೆ ಅಪ್ಪ, ಗರುಡ-ಶೇಷ-ರುದ್ರರಿಗೆ ಅಜ್ಜ, ಇಂದ್ರಾದಿ-ದೇವತೆಗಳಿಗೆ ಮುತ್ತಜ್ಜ. ಇಂಥಹ ಭಗವಂತನಿಂದ ಮೊದಲು ಹುಟ್ಟಿದ ಚತುರ್ಮುಖ  ‘ಭೂತಭಾವನಪೂರ್ವಜಃ’.
ಚತುರ್ಮುಖನನ್ನು ಆತನ ಅಸಾಧಾರಣ ಗುಣಗಳಿಂದ ಸಂಬೋಧನೆ ಮಾಡಿದ ನಾರದರು ಹೇಳುತ್ತಾರೆ: “ಅರಿವನ್ನು ಕೊಡತಕ್ಕ ಮಾತಿನಿಂದ ನನಗೆ ತಿಳುವಳಿಕೆಯನ್ನು ತಿಳಿಸಿ ಕೊಡು” ಎಂದು. ಈ ಶ್ಲೋಕದಲ್ಲಿ ‘ವಿಜಾನೀಹಿ’ ಎನ್ನುವ ಪದ ಬಳಕೆಯಾಗಿದೆ. ಸಂಸ್ಕೃತದಲ್ಲಿ ‘ವಿಜಾನೀಹಿ’ ಅಂದರೆ ‘ತಿಳಿಸು’ ಎಂದರ್ಥವಲ್ಲ, ಬದಲಿಗೆ ‘ತಿಳಿದುಕೋ’ ಎಂದರ್ಥ. ಆದರೆ ಆ ಅರ್ಥದಲ್ಲಿ ಈ ಪದ ಇಲ್ಲಿ ಬಳಕೆಯಾಗಲು ಸಾಧ್ಯವಿಲ್ಲ. ಆದರೂ ಏಕೆ ಬಳಸಿದ್ದಾರೆ? ಈ ಪ್ರಶ್ನೆಗೆ ಆಚಾರ್ಯ ಮಧ್ವರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಉತ್ತರಿಸುತ್ತಾ ಹೇಳುತ್ತಾರೆ: “ವಿಜಾನೀಹಿ ವಿಜ್ಞಾಪಯ  ‘ವ್ಯತ್ಯಯೋ ಭೇದಸ್ವಾತಂತ್ರ್ಯ ಕರಣೇಷು’ ಇತಿ ವಚನಾತ್ ಇನ್ನೊಬ್ಬರ ಹತ್ತಿರ ‘ತಿಳಿಸು’ ಅನ್ನುವ ಬದಲು ‘ತಿಳಿ’ ಎಂದು ಹೇಳುವುದು ಸ್ವತಂತ್ರ್ಯವನ್ನು ತೋರಿಸುವುದಕ್ಕೆ. ಉದಾಹರಣೆಗೆ ನಾವು ಕಷ್ಟಪಟ್ಟು ಮನೆಯೊಂದನ್ನು ಕಟ್ಟಿಸಿರುತ್ತೇವೆ. ಆದರೆ ಮಾತನಾಡುವಾಗ “ಕಷ್ಟಪಟ್ಟು ಕಟ್ಟಿದ ಮನೆ” ಎನ್ನುತ್ತೇವೆ.  ಇಲ್ಲಿ ‘ಕಟ್ಟಿಸಿದ’ ಎನ್ನುವ ಪದದ ಬದಲು ‘ಕಟ್ಟಿದ’ ಎನ್ನುವ ಪದ ಬಳಕೆ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಕಟ್ಟಿದ ವ್ಯಕ್ತಿಗಳು ಬೇರೆಯವರಾದರೂ ಕೂಡಾ ಅಲ್ಲಿ ಸ್ವಾತಂತ್ರ್ಯಅವರಲ್ಲಿಲ್ಲದೇ ನಮ್ಮಲ್ಲಿರುವುದರಿಂದ ಹೀಗೆ ಪದ ಪ್ರಯೋಗ ಮಾಡುತ್ತೇವೆ. ಇದೇ ರೀತಿ ಇಲ್ಲಿ ನಾರದರು ‘ವಿಜಾನೀಹಿ’ ಎಂದು ಪದ ಬಳಸಿರುವುದು ‘ತಿಳಿದುಕೋ’ ಎಂದು ಆಜ್ಞೆ ಮಾಡುವುದಕ್ಕಲ್ಲ,  ಬದಲಿಗೆ ಜೀವಜಾತದಲ್ಲೇ ಅತಿದೊಡ್ಡ ಶಕ್ತಿಯಾದ ಚತುರ್ಮುಖನ ಸ್ವಾತಂತ್ರ ನಿರ್ಧಾರ ಮಾಡುವ ಶಕ್ತಿಯ ಗುರುತಿನಿಂದಾಗಿ.
ನಾರದರು ಹೇಳುತ್ತಾರೆ: “ಯಾವ ವಿದ್ಯೆ  ಆತ್ಮಸ್ವರೂಪದ ಸರಿಯಾದ ವಿವರಣೆಯನ್ನು ಕೊಡುತ್ತದೋ ಆ ವಿದ್ಯೆಯನ್ನು ನನಗೆ ತಿಳಿಹೇಳು” ಎಂದು. ಈ ಹಿಂದೆ ಹೇಳಿದಂತೆ ‘ಆತ್ಮ’ ಎಂದರೆ ಪರಮಾತ್ಮ. ಭಗವಂತನನ್ನು ಸದಾ ಕಾಣುವ, ಆತನ ಜೊತೆಗೆ ಮಾತನಾಡುವ, ಭಗವಂತನ ಅಪರೋಕ್ಷ ಜ್ಞಾನವುಳ್ಳ ನಾರದರು ತನಗಿಂತ ಹೆಚ್ಚು ಭಗವಂತನನ್ನು ಅರಿತ ಚತುರ್ಮುಖನಲ್ಲಿ “ಭಗವಂತನ ಕುರಿತು ಹೇಳು” ಎಂದು ಕೇಳುವುದು ಅವರಲ್ಲಿ ಭಗವಂತನ ಬಗೆಗಿರುವ ಕಳಕಳಿಯನ್ನು ತೋರಿಸುತ್ತದೆ. ಜ್ಞಾನಕ್ಕೆ ಮಿತಿ ಎನ್ನುವುದಿಲ್ಲ. ಅದನ್ನು ಎಷ್ಟು ತಿಳಿದರೂ ತಿಳಿಯದೇ ಇರುವುದು  ಅನಂತವಾಗಿಯೇ  ಉಳಿಯುತ್ತದೆ. ಹೀಗಾಗಿ ನಾರದರು “ಭಗವಂತನ ಅರಿವನ್ನು ಕೊಡತಕ್ಕಂತಹ ವಿಷಯವನ್ನು ನನಗೆ ಹೇಳು” ಎಂದು ಚತುರ್ಮುಖನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.