Tuesday, April 30, 2013

Shrimad BhAgavata in Kannada -Skandha-01-Ch-12(7)


ನಾರದ ಉವಾಚ--
ಮಾ ಕಂಚನ ಶುಚೋ ರಾಜನ್ ಯುದೀಶ್ವರವಶಂ ಜಗತ್
ಸ ಸಂಯುನಕ್ತಿ ಭೂತಾನಿ ಸ ಏವ ವಿಯುನಕ್ತಿ ಚ ೪೧

 “ಯಾರ ಬಗ್ಗೆಯೂ ದುಃಖಪಟ್ಟು ಉಪಯೋಗವಿಲ್ಲ. ದುಃಖಿಸುವುದರಿಂದ ಅವರು ಮರಳಿ ಬರುವುದಿಲ್ಲ. ಯಾವ ಜೀವಗಳನ್ನು ಭಗವಂತ ಎಂದು ಒಂದುಗೂಡಿಸುತ್ತಾನೆ, ಎಂದು ಬೇರ್ಪಡಿಸುತ್ತಾನೆ ಎನ್ನುವುದು ನಮಗೆ ತಿಳಿದಿಲ್ಲ” ಎಂದು ಧರ್ಮರಾಯನನ್ನು ಸಂತೈಸುತ್ತಾರೆ ನಾರದರು.  
ಹುಟ್ಟು-ಸಾವು ನಮ್ಮ ವಶದಲ್ಲಿಲ್ಲ. ಎಂತಹ  ಪುಣ್ಯಾತ್ಮರಾದರೂ ಕೂಡಾ ಅವರಿಗೆ ಸಾವು ತಪ್ಪಿದ್ದಲ್ಲ. ದುರಂತದ ಸಾವು ಕೇವಲ ಪಾಪಾತ್ಮರ ಲಕ್ಷಣವೇನೂ ಅಲ್ಲ. ಪುಣ್ಯಾತ್ಮರೂ ಕೂಡಾ ದುರಂತದಲ್ಲಿ ಸಾಯಬಹುದು. ಅದು ಅವರ ಪ್ರರಾಬ್ಧ ಕರ್ಮಕ್ಕನುಗುಣವಾಗಿ ನಡೆಯುತ್ತದೆ ಅಷ್ಟೇ. ಸಾವು ಸಹಜ ಕ್ರಿಯೆ ಹಾಗೂ ಎಂದು ಏನು ಆಗಬೇಕೋ ಅದು ಆಗಿಯೇ ತೀರುತ್ತದೆ. ಹಾಗಾಗಿ ಯಾರ ಸಾವೇ ಇರಲಿ, ಎಂತಹ ಸಾವೇ ಇರಲಿ, ಅದಕ್ಕಾಗಿ ದುಃಖಿಸಿ ಫಲವಿಲ್ಲ.

ಯನ್ಮನ್ಯಸೇ ಧ್ರುವಂ ಲೋಕಮಧ್ರುವಂ ವಾSಥವೋಭಯಮ್
ಸರ್ವಥಾ  ಹಿ ನ ಶೋಚ್ಯಾಸ್ತೇ ಸ್ನೇಹಾದನ್ಯತ್ರ ಮೋಹಜಾತ್ ೪೪

 “ಯಾವ ಕಾರಣಕ್ಕಾಗಿ ದುಃಖ? ನಾಶವಿಲ್ಲದ ಜೀವ ದೇಹಬಿಟ್ಟು ಹೊರಟು ಹೋಯಿತೆಂದೋ? ಅಥವಾ ಶರೀರ ನಾಶವಾಯಿತೆಂದೋ?  ಅಥವಾ ಈ ಶರೀರದಲ್ಲಿ ಆ ಜೀವ ಇಲ್ಲಾ ಎಂತಲೋ?  ಯಾವುದಕ್ಕೂ ನೀನು ಶೋಕಿಸುವ ಅಗತ್ಯವಿಲ್ಲ” ಎನ್ನುತ್ತಾರೆ ನಾರದರು.
ಆಚಾರ್ಯರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಹೇಳುವಂತೆ: ಅಪರಿಹಾರ್ಯತ್ವಾದಶೋಚ್ಯಾಃ ಈ ಪ್ರಪಂಚದಲ್ಲಿ ಯಾವುದು ಅನಿವಾರ್ಯವೋ ಅದಕ್ಕೆ ನಾವು ಹೊಂದಿಕೊಂಡು ಬದುಕಬೇಕೇ ಹೊರತು, ಅದಕ್ಕಾಗಿ ಅಳುತ್ತಾ ಕೂರುವುದರಲ್ಲಿ ಅರ್ಥವಿಲ್ಲ. “ದುಃಖಕ್ಕೆ ಮೂಲ ಕಾರಣ ಮೋಹ ಮತ್ತು ಮೋಹದಿಂದ ಬೆಳೆದ ಸ್ನೇಹ”. ನಾವು ಈ ಮೋಹಪಾಶನ್ನು ಗೆಲ್ಲಬೇಕು.

ಸೋSಯಮದ್ಯ ಮಹಾರಾಜ ಭಗವಾನ್ ಭೂತಭಾವನಃ
ಕಾಲರೂಪೋSವತೀರ್ಣೋSಸ್ಯಾಮಭಾವಾಯ ಸುರದ್ವಿಷಾಮ್ ೪೯

 “ಶ್ರೀಕೃಷ್ಣ ಕಾಲ ರೂಪನಾಗಿ, ದೇವತೆಗಳಿಗೆ ದ್ರೋಹಬಗೆದ ಅಸುರಶಕ್ತಿಗಳ ಸಂಹಾರಕನಾಗಿ ನಮ್ಮ ಕಣ್ಮುಂದೆ ಅವತರಿಸಿ ನಿಂತಿದ್ದಾನೆ.  ಇಲ್ಲಿ ಎಲ್ಲವೂ ಅವನ ಸಂಕಲ್ಪದಂತೆ ನಡೆಯುತ್ತದೆಯೇ ಹೊರತು, ನಮ್ಮ ಸಂಕಲ್ಪದಂತಲ್ಲ” ಎನ್ನುತ್ತಾರೆ ನಾರದರು.
ಇಲ್ಲಿ ಭಗವಂತನನ್ನು ‘ಭೂತಭಾವನಃ’ ಎಂದು ಸಂಬೋಧಿಸಿದ್ದಾರೆ. ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳಿಗೆ ಕಾರಣನಾದವ, ಜೀವಿಗಳಿಗೆ ಅವರ ಕರ್ಮಕ್ಕನುಗುಣವಾಗಿ ಸುಖ-ದುಃಖ ಕೊಡುವ ಭಗವಂತ-ಭೂತಭಾವನಃ. ಇಂತಹ ಭಗವಂತ ಇಲ್ಲಿ ಸಂಹಾರರೂಪಿಯಾಗಿ ನಿಂತಿದ್ದಾನೆ. “ ಭಗವಂತನ ಕಾರ್ಯದಲ್ಲಿ ಅಂಗಭೂತರಾಗಿ ಬಂದ ನೀನೂ ಕೂಡಾ ಒಂದು ದಿನ ಹೊರಡಬೇಕು. ದುಃಖಿಸುವುದನ್ನು ಬಿಟ್ಟು ಅದಕ್ಕೆ ಸಿದ್ಧನಾಗು” ಎನ್ನುವ ಧ್ವನಿ ನಾರದರ ಈ ಮಾತಿನಲ್ಲಡಗಿದೆ.

ನಿಷ್ಪಾದಿತಂ ದೇವಕಾರ್ಯಮವಶೇಷಂ ಪ್ರತೀಕ್ಷತೇ
ತಾವದ್ ಯೂಯಮವೇಕ್ಷಧ್ವಂ ಭವೇದ್ ಯಾವದಿಹೇಶ್ವರಃ ೫೦

“ಕೃಷ್ಣಾವತಾರಕ್ಕೆ ಕಾರಣವಾದ ‘ದೇವಕಾರ್ಯ’ ಮುಗಿಯುತ್ತಿದೆ. ಕೃಷ್ಣ ಅವತಾರ ಸಮಾಪ್ತಿ ಮಾಡುವ ತನಕ ನೀನು ಇಲ್ಲಿರುತ್ತೀಯ. ಆನಂತರ ನೀನೂ ಹೊರಡಬೇಕು. ಹಾಗಾಗಿ ಹೊರಟು ಹೋದವರ ಬಗ್ಗೆ ದುಃಖಿಸದೇ ನಿನ್ನ ಪಯಣದ ಸಿದ್ಧತೆ ನೀನು ಮಾಡು” ಎನ್ನುತ್ತಾರೆ ನಾರದರು.
ಇಷ್ಟು ಹೇಳಿದ ನಾರದರು ಮುಂದೆ ಧೃತರಾಷ್ಟ್ರ ತನ್ನ ಕೊನೆಯ ದಿನಗಳನ್ನು ಹೇಗೆ ಕಳೆದ ಎನ್ನುವುದನ್ನು ಧರ್ಮರಾಯನಿಗೆ  ವಿವರಿಸುತ್ತಾರೆ.

ಧೃತರಾಷ್ಟ್ರಃ ಸಹ ಭ್ರಾತ್ರಾ ಗಾಂಧಾರ್ಯಾ ಚ ಸ್ವಭಾರ್ಯಯಾ
ದಕ್ಷಿಣೇನ ಹಿಮವತ ಋಷೀಣಾಮಾಶ್ರಮಂ ಗತಃ ೫೧

ತನ್ನ ತಮ್ಮ ಹಾಗೂ ಪತ್ನಿಯೊಂದಿಗೆ ಕಾಡಿಗೆ ಹೋದ ಧೃತರಾಷ್ಟ್ರ, ಹಸ್ತಿನಾಪುರದಿಂದ ಉತ್ತರ ಹಾಗೂ ಹಿಮಾಲಯ ಪರ್ವತದ ದಕ್ಷಣದಲ್ಲಿರುವ ತಪ್ಪಲುಪ್ರದೇಶದಲ್ಲಿನ ಋಷಿಗಳ ಆಶ್ರಮದಲ್ಲಿ  ನೆಲೆಸಿ ತನ್ನ ಸಾಧನೆ ಆರಂಭಿಸಿದ.

ಸ್ನಾತ್ವಾತ್ರಿಷವಣಂ ತಸ್ಮಿನ್ ಹುತ್ವಾ ಚಾಗ್ನೀನ್ ಯಥಾವಿಧಿ
ಅಬ್ಭಕ್ಷ ಉಪಶಾಂತಾತ್ಮಾ ಸ ಆಸ್ತೇS ವಿಗತೇಕ್ಷಣಃ ೫೩
ಧೃತರಾಷ್ಟ್ರ ಕಾಡಿನಲ್ಲಿ  ಮೂರು ಹೊತ್ತು ಸ್ನಾನ ಮಾಡಿ, ಶಾಸ್ತ್ರಬದ್ಧವಾಗಿ ಅಗ್ನಿಹೋತ್ರ ಮಾಡುತ್ತಿದ್ದ. ಏಳು ಕವಲಾಗಿ ಗಂಗೆ ಹರಿದ ಜಾಗದಲ್ಲಿ ಆತ ತಪಸ್ಸನ್ನಾಚರಿಸಿದ. ಕೊನೆ-ಕೊನೆಗೆ ಆತ ಆಹಾರ ಸೇವನೆಯನ್ನೂ ತ್ಯಜಿಸಿ, ಕೇವಲ ನೀರನ್ನು ಸೇವಿಸುತ್ತಾ, ಉನ್ನತವಾದ ಸ್ಥಿತಿಯಲ್ಲಿ, ಮನಸ್ಸನ್ನು ಭಗವಂತನಲ್ಲಿ ನೆಲೆಸಿ, ಅಖಂಡ ಸಾಧನೆ ಮಾಡಿದ. ಕಣ್ಣಿಲ್ಲದ ಕುರುಡನಾದರೂ ಸಹ, ತನ್ನ ಅಂತರಂಗದ ಕಣ್ಣಿನಿಂದ ನಿರಂತರ ಭಗವಂತನನ್ನು ಕಾಣುತ್ತಾ,  ಸಾಧನೆಯ ಉತ್ತುಂಗವನ್ನು ತಲುಪಿದ(ವಿಗತೇಕ್ಷಣಃ ಎನ್ನುವ ಪಾಠದಂತೆ). ಮಕ್ಕಳಮೋಹ, ಹಣದಮೋಹ ಮತ್ತು ಲೋಕದ ಮೋಹವನ್ನು ತೊರೆದು, ಭಗವಂತನನ್ನು ಸದಾ ಹೃದಯದಲ್ಲಿ ತುಂಬಿಕೊಂಡು ಸಾಧನೆ ಮಾಡಿದ ಧೃತರಾಷ್ಟ್ರ(ವಿಗತೇಶಣಃ ಎನ್ನುವ ಪಾಠದಂತೆ).
ಇಲ್ಲಿ ‘ಆಸ್ತೇ’ ಎನ್ನುವ ಪದ ವರ್ತಮಾನ ಕಾಲದಲ್ಲಿದೆ. ಇದರಿಂದ  ‘ಧೃತರಾಷ್ಟ್ರ ಈಗಲೂ ತಪಸ್ಸು ಮಾಡುತ್ತಿದ್ದಾನೆ’ ಎಂದು ಹೇಳಿದಂತಾಗುತ್ತದೆ. ಆದರೆ ನಮಗೆ ತಿಳಿದಂತೆ ಧೃತರಾಷ್ಟ್ರ ಈಗಾಗಲೇ ದೇಹತ್ಯಾಗ ಮಾಡಿದ್ದಾನೆ. ಈ ರೀತಿ ಕಾಲವನ್ನು ವ್ಯತ್ಯಾಸಮಾಡಿ ಹೇಳುವುದು ಪುರಾಣದ, ಪ್ರಾಚೀನ ಸಂಸ್ಕೃತದ ಒಂದು ವಿಶಿಷ್ಠ ವೈಖರಿ. ಇಂತಹ ಅನೇಕ ಉದಾಹರಣೆಗಳನ್ನು ಪುರಾಣಗಳಲ್ಲಿ ಕಾಣಬಹುದು. ಏಕೆ ಹೀಗೆ ಕಾಲವನ್ನು ಬದಲಿಸಿ ಹೇಳುತ್ತಾರೆ ಎಂದರೆ: ತ್ರಿಕಾಲದರ್ಶಿಗಳಿಗೆ ಎಲ್ಲವೂ ವರ್ತಮಾನವೇ. ಅಷ್ಟೇ ಅಲ್ಲ ಇದು ಗುಹ್ಯ ಭಾಷೆಯ ನಿರೂಪಣಾ ವೈಖರಿ.

ಜಿತಾಸನೋ ಜಿತಶ್ವಾಸಃ ಪ್ರತ್ಯಾಹೃತಷಡಿಂದ್ರಿಯಃ
ಹರಿಭಾವನಯಾ ಧ್ವಸ್ತರಜಃಸತ್ತ್ವತಮೋಮಲಃ ೫೪

ಸಾಧನೆ ಮಾಡುತ್ತಾ- ಆಸನ, ಶ್ವಾಸ ಮತ್ತು ಇಂದ್ರಿಯಗಳನ್ನು ಗೆಲ್ಲುತ್ತಾನೆ ಧೃತರಾಷ್ಟ್ರ. [ಇಲ್ಲಿ ಜಿತಾಸನ ಎಂದರೆ: ಒಂದು ಆಸನದಲ್ಲಿ ಕದಲದೇ ಕುಳಿತುಕೊಳ್ಳುವ ಸಾಧನೆ]. ಪ್ರಾಣಾಯಾಮದ ಮೂಲಕ ಶ್ವಾಸವನ್ನು ನಿಯಂತ್ರಿಸಿ, ಬಾಹ್ಯೇಂದ್ರಿಯನಿಗ್ರಹ ಮಾಡಿ, ತನ್ನೊಳಗೆ ಕೇವಲ ಹರಿ ಭಾವನೆ ತುಂಬಿಕೊಂಡು, ತ್ರೈಗುಣ್ಯದ ಪ್ರಭಾವದಿಂದ  ಸಂಪೂರ್ಣ ಆಚೆ ಬಂದು, ಸ್ವರೂಪದಲ್ಲಿ ಭಗವಂತನನ್ನು ಕಾಣುತ್ತಾನೆ ಆತ.
ಇಲ್ಲಿ “ಭಗವಂತನ ಪ್ರಜ್ಞೆಯನ್ನು ಮನಸ್ಸಿನಲ್ಲಿ ತುಂಬಿಸಿಕೊಂಡ ಧೃತರಾಷ್ಟ್ರ, ಸತ್ತ್ವ-ರಜಸ್ಸು-ತಮಸ್ಸು ಎನ್ನುವ ಕೊಳೆಯನ್ನು ತೊಳೆದುಕೊಂಡ” ಎಂದಿದ್ದಾರೆ. ಇದರಿಂದಾಗಿ ನಮಗೊಂದು ಪ್ರಶ್ನೆ ಬರುತ್ತದೆ. “ಸತ್ತ್ವಾತ್ ಸಂಜಾಯತೇ ಜ್ಞಾನಮ್” ಎಂದು ಶ್ರೀಕೃಷ್ಣ ಗೀತೆಯಲ್ಲೇ ಹೇಳಿದ್ದಾನೆ. ಹಾಗಿರುವಾಗ ಇಲ್ಲಿ -ಸತ್ತ್ವವನ್ನು ಕೊಳೆ ಎಂದು ಏಕೆ ಹೇಳಿದ್ದಾರೆ ಎಂದು. ಇದಕ್ಕೆ ಕಾರಣವೆಂದರೆ: ಎಂದೂ ನಮಗೆ ಶುದ್ಧ ಸತ್ತ್ವ ಸಿಗುವುದಿಲ್ಲ. ಹೇಗೆ ಕಟ್ಟಿಗೆ(ತಮಸ್ಸು) ಮತ್ತು ಹೊಗೆ(ರಜಸ್ಸು) ಜೊತೆಗೆ ಬೆಂಕಿ(ಸತ್ತ್ವ) ಇರುತ್ತದೋ ಹಾಗೇ, ಸತ್ತ್ವಗುಣ ರಜಸ್ಸು ತಮಸ್ಸಿನೊಂದಿಗಿರುತ್ತದೆ. ಇದಲ್ಲದೆ ಸತ್ತ್ವಮಯವಾದ ಕರ್ಮ ಮಾಡುವುದರಿಂದ ಸ್ವರ್ಗಪ್ರಾಪ್ತಿಯಾಗುತ್ತದೆ ಎನ್ನುತ್ತಾರೆ. ಆದರೆ ನಿಜವಾದ ಸಾಧಕನಿಗೆ ಬೇಕಾಗಿರುವುದು ಸ್ವರ್ಗವಲ್ಲ, ಮೋಕ್ಷ. ಅದಕ್ಕಾಗಿ ಸಾಧನೆಯಲ್ಲಿ ನಾವು ತ್ರಿಗುಣವನ್ನು ಮೀರಿ ನಿಂತು ಸಾಧನೆ ಮಾಡಬೇಕಾಗುತ್ತದೆ. “ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈಗುಣ್ಯೋ ಭವಾರ್ಜುನ”  ಎಂದು ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ. ಹೀಗೆ ತ್ರಿಗುಣಾತೀತ ಭಗವಂತನನ್ನು ಹೃದಯದಲ್ಲಿ ತುಂಬಿಕೊಂಡು, ಶುದ್ಧ ಅಂತರಂಗ ಭಾವದಿಂದ ಸಮಾಧಿಸ್ಥಿತಿಯಲ್ಲಿ ಧೃತರಾಷ್ಟ್ರ ತಪಸ್ಸನ್ನಾಚರಿಸಿದ. 

Shrimad BhAgavata in Kannada -Skandha-01-Ch-12(6)


ಸಂಜಯ ಉವಾಚ--
ಅಹಂ ಚ ವ್ಯಂಸಿತೋ ರಾಜನ್ ಪಿತ್ರೋರ್ವಃ ಕುಲನಂದನ
ನ ವೇದ ಸಾಧ್ವಾ ಗಾಂಧಾರ್ಯಾ ಮುಷಿತೋSಸ್ಮಿ ಮಹಾತ್ಮಭಿಃ ೩೭

ಈ ಶ್ಲೋಕವನ್ನು ಮೇಲ್ನೋಟದಲ್ಲಿ ನೋಡಿದರೆ:  “ಅವರು ಎಲ್ಲಿಗೆ ಹೋದರು ಎನ್ನುವುದು ನನಗೂ ತಿಳಿದಿಲ್ಲ” ಎಂದು ಸಂಜಯ ಉತ್ತರಿಸಿದಂತೆ ಕಾಣುತ್ತದೆ. ಆದರೆ ಮಹಾಭಾರತದಲ್ಲಿ ಹೇಳುವಂತೆ: ಸಂಜಯ ಧೃತರಾಷ್ಟ್ರಾದಿಗಳು ಗಾಳ್ಗಿಚ್ಚಿನಲ್ಲಿ ದೇಹತ್ಯಾಗ ಮಾಡಿರುವುದನ್ನು ಕಂಡಿದ್ದಾನೆ. ಆದ್ದರಿಂದ ಆತ ಇಲ್ಲಿ ಹೇಳುತ್ತಿರುವುದು: ಸತ್ತ ನಂತರ ಅವರು ಯಾವ ಗತಿಯನ್ನು ಪಡೆದರು ಎನ್ನುವುದು ನನಗೆ ತಿಳಿದಿಲ್ಲ ಎಂದೇ ಹೊರತು, ಅವರು ಎಲ್ಲಿದ್ದಾರೆಂದು ನನಗೆ ಗೊತ್ತಿಲ್ಲ ಎಂದಲ್ಲ.  ಆತ ಹೇಳುತ್ತಾನೆ: “ ಕುಂತಿ-ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ಕಳೆದುಕೊಂಡು ನಾನು ಒಂದು ಕೈ ಮುರಿದವನಂತಾಗಿದ್ದೇನೆ. ಅವರು ನನ್ನನ್ನು ಬಿಟ್ಟು ಹೊರಟು ಹೋದರು” ಎಂದು.

ಸೂತ ಉವಾಚ—
ಏತಸ್ಮಿನ್ನಂತರೇ ವಿಪ್ರಾ ನಾರದಃ ಪ್ರತ್ಯದೃಶ್ಯತ
ವೀಣಾಂ ತ್ರಿತಂತ್ರೀಂ ಧನ್ವಯನ್ ಭಗವಾನ್ ಸಹತುಂಬುರುಃ ೩೮

ಈ ರೀತಿ ಸಂಜಯ ಮತ್ತು ಧರ್ಮರಾಯ ಮಾತನಾಡುತ್ತಿರುವಾಗ ಅಲ್ಲಿಗೆ ತುಂಬುರನೊಂದಿಗೆ, ತನ್ನ ವೀಣೆಯಲ್ಲಿ ವೇದಮಂತ್ರಗಳನ್ನು ಮೂರು ಸ್ವರದಲ್ಲಿ ನುಡಿಸುತ್ತಾ, ನಾರದರು ಆಗಮಿಸುತ್ತಾರೆ. [ಇಲ್ಲಿ ಓದುಗರು ಒಂದು ವಿಷಯವನ್ನು ಗಮನಿಸಬೇಕು. ನಾರದರ ವೀಣೆ ಏಳು ತಂತಿಯ ವೀಣೆ. ಅದನ್ನು ‘ವಿಪಂಚಿ’ ಎಂದು ಕರೆಯುತ್ತಾರೆ. ಆದರೆ ಇಲ್ಲಿ ‘ತ್ರಿತಂತಿ’ ಎನ್ನುವ ಶಬ್ದ ಬಳಸಲಾಗಿದೆ. ನಾರದರು ಮೂರು ಸ್ವರಗಳಲ್ಲಿ ವೇದ ಮಂತ್ರಗಳನ್ನು  ಗಾನ ಮಾಡುತ್ತಾ ಬಂದರು ಎನ್ನುವುದು ‘ತ್ರಿತಂತಿ’ ಎನ್ನುವ ಶಬ್ದದ ಹಿಂದಿರುವ ಒಂದು ಅರ್ಥ. ಇದಕ್ಕೆ ಇನ್ನೂ ಅನೇಕ ಒಳಾರ್ಥಗಳಿರಬಹುದು. ಇನ್ನು ಇಲ್ಲಿ ನಾರದರನ್ನು ಭಗವಾನ್ ಎನ್ನುವ ವಿಶೇಷಣದಿಂದ ಸಂಬೋಧಿಸಲಾಗಿದೆ. ಇದರ ಅರ್ಥ ಭಗವಂತನನ್ನು ತಿಳಿದವರು, ಸದಾ ಭಗವಂತನ ಭಜನೆ  ಮಾಡುವವರು, ಇತ್ಯಾದಿ]

ಯುಧಿಷ್ಠಿರ ಉವಾಚ--
ನಾಹಂ ವೇದ ಗತಿಂ ಪಿತ್ರೋರ್ಭಗವನ್ ಕ್ವ  ಗತಾವಿತಃ
ಕರ್ಣಧಾರ ಇವಾಪಾರೇ ಸೀದತಾಂಪಾರದರ್ಶನಃ ೪೦

ನಾರದರು  ಆಗಮಿಸಿದ ತಕ್ಷಣ ಧರ್ಮರಾಯ ನಾರದರಲ್ಲಿ ಕೇಳುತ್ತಾನೆ: “ನಮ್ಮ ತಂದೆ ತಾಯಿಯರ ಗತಿ ಏನಾಯ್ತು? ಅವರಿಗೆ ಸದ್ಗತಿ ದೊರೆಯಿತೇ? ದಿಕ್ಕೆಟ್ಟು ನಿಂತ ನಮ್ಮಲ್ಲಿಗೆ ದಡಹಾಯಿಸುವ ಅಂಬಿಗನಂತೆ ನೀವು ಬಂದಿದ್ದೀರಿ. ನೀವೇ ನಮಗೆ ದಾರಿ ತೋರಿಸಬೇಕು” ಎಂದು   

Monday, April 29, 2013

Shrimad BhAgavata in Kannada -Skandha-01-Ch-12(5)


ಕಾಡಿಗೆ ಹೋದ ಸುಮಾರು ಆರು ತಿಂಗಳಲ್ಲಿ  ವಿದುರ ದೇಹತ್ಯಾಗ ಮಾಡಿ ಧರ್ಮರಾಯನಲ್ಲಿ ಐಕ್ಯನಾಗುತ್ತಾನೆ. ಇತರರು ತಮ್ಮ ತಪಸ್ಸನ್ನು ಮುಂದುವರಿಸುತ್ತಾರೆ. ಹೀಗೆ ಸುಮಾರು ಮೂರು ವರ್ಷ ಕಳೆಯುತ್ತದೆ. ಧೃತರಾಷ್ಟ್ರನಿಗೆ ಸುಮಾರು ೧೨೦ವರ್ಷ, ಧರ್ಮರಾಯನಿಗೆ ಸುಮಾರು ೯೦  ಮತ್ತು ಪರೀಕ್ಷಿತನಿಗೆ ಸುಮಾರು ಹದಿನೆಂಟರ ಪ್ರಾಯ. ಈ  ಸಂದರ್ಭದಲ್ಲಿನ ಒಂದು ಘಟನೆ ಘಟಿಸುತ್ತದೆ.

ಅಜಾತಶತ್ರುಃ ಕೃತಮೈತ್ರೋ ಹುತಾಗ್ನಿರ್ವಿಪ್ರಾನ್ ನತ್ವಾ ತಿಲಗೋವಸ್ತ್ರರುಗ್ಮೈಃ
ಗೃಹಾನ್ ಪ್ರವಿಷ್ಟೋ ಗುರುವಂದನಾಯ ನ ಚಾಪಶ್ಯತ್ ಪಿತರೌ ಸೌಬಲೀಂ ಚ ೩೧

ಎಂದೂ ಯಾರನ್ನೂ ಹಗೆಯೆಂದು ಕಾಣದ ಅಜಾತಶತ್ರು ಧರ್ಮರಾಯ ಒಂದು ದಿನ ಎಂದಿನಂತೆ  ಸೂರ್ಯನಲ್ಲಿರುವ ಸೂರ್ಯನಾರಾಯಣನನ್ನು ಗಾಯತ್ತ್ರಿ ಮಂತ್ರದಿಂದ ಉಪಾಸನೆ ಮಾಡಿ, ಅಗ್ನಿಮುಖೇನ ಭಗವಂತನನ್ನು ಆರಾಧಿಸಿ, ವಿಪ್ರರಿಗೆ(ವಿಷ್ಣುವಿನ ಪರಮಪದವನ್ನು ತಿಳಿದವರು) ನಮಸ್ಕರಿಸಿ, ಅಲ್ಲಿ ಸೇರಿದ್ದ ವಿದ್ವಾಂಸರಿಗೆ ತಿಲ/ವಸು(ಸಂಪತ್ತು), ಗೋವು, ಭೂಮಿ/ವಸ್ತ್ರ, ರುಗ್ಮೈ(ಚಿನ್ನ) ದಾನ ಮಾಡಿ, ತನ್ನ ಹಿರಿಯರನ್ನು ಅವರ ಆಸನ ಪ್ರತೀಕದಲ್ಲಿ ನಮಸ್ಕರಿಸಲು ಧೃತರಾಷ್ಟ್ರನಿದ್ದ ಕೋಣೆಗೆ ಹೋಗುತ್ತಾನೆ. ಆಗ ಎಂದಿನಂತೆ ಆತನ ಅಂತರಂಗಕ್ಕೆ ಕುಂತಿ-ಧೃತರಾಷ್ಟ್ರ(ಪಿತರೌ) ಮತ್ತು  ಗಾಂಧಾರಿಯ ದರ್ಶನವಾಗುವುದಿಲ್ಲ. ಇದರಿಂದಾಗಿ ಆತ ಗಾಭರಿಯಿಂದ ಹೊರಬರುತ್ತಾನೆ. ಹೊರಬಂದು ನೋಡಿದರೆ ಅಲ್ಲಿ ಕುರುಡ ಧೃತರಾಷ್ಟ್ರನಿಗೆ ಕಾಡಿನಲ್ಲಿ ಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದ ಗಾವದ್ಗಣನ ಪುತ್ರ ಸಂಜಯ ಕಾಣಿಸುತ್ತಾನೆ.   

ತತ್ರ ಸಂಜಯಮಾಸೀನಂ ಪಪ್ರಚ್ಛೋದ್ವಿಗ್ನಮಾನಸಃ
ಗಾವದ್ಗಣೇ ಕ್ವ ನಸ್ತಾತೋ ವೃದ್ಧೋ ಹೀನಶ್ಚ ನೇತ್ರಯೋಃ
ಅಂಬಾ ವಾ ಹತಪುತ್ರಾರ್ತಾ ಪಿತೃವ್ಯಃ ಕ್ವ ಗತಃ ಸುಹೃತ್ ೩೨

ಯಾವುದೋ ಕೆಟ್ಟ ವಿಷಯದ ಮುನ್ಸೂಚನೆಯಿಂದ ಹೊರಬಂದ ಧರ್ಮರಾಯನಿಗೆ ಸಂಜಯನನ್ನು ನೋಡಿ ಮತ್ತಷ್ಟು ಗಾಭರಿಯಾಗುತ್ತದೆ. ಆತ ಉದ್ವಿಗ್ನತೆಯಿಂದ ಕೇಳುತ್ತಾನೆ: ಎಲ್ಲಿ ನಮ್ಮ ಅಪ್ಪ? ನೀನು ಅಪ್ಪನ ಜೊತೆಗಿದ್ದವನು ಒಬ್ಬನೇ ಏಕೆ ಬಂದೆ? ಕಣ್ಣಿಲ್ಲದ ನಮ್ಮ ಅಪ್ಪ, ಮಕ್ಕಳನ್ನು ಕಳೆದುಕೊಂಡ ದುರ್ದೈವಿ ದೊಡ್ಡಮ್ಮ ಎಲ್ಲಿ? ಸಾಮ್ರಾಜ್ಯಕಟ್ಟಿಯೂ ತಾಯಿಯನ್ನು ಸುಖವಾಗಿಡದ ನಮ್ಮಂತಹ ದುರ್ದೈವಿ ಮಕ್ಕಳನ್ನು ಪಡೆದ ನಮ್ಮ ತಾಯಿ ಎಲ್ಲಿ?” ಎಂದು. [ಇಲ್ಲಿ ಪಿತೃವ್ಯಃ  ಎಂದರೆ ಗಾಂಧಾರಿ ಮತ್ತು ಧೃತರಾಷ್ಟ್ರ, ದೊಡ್ಡಪ್ಪನನ್ನು ಧರ್ಮರಾಯ ಅಪ್ಪ ಎಂದು ಸಂಬೋಧಿಸಿದ್ದಾನೆ]

ಪಿತರ್ಯುಪರತೇ ಪಾಂಡೌ ಸರ್ವಾನ್ ನಃ ಸುಹೃದಃ ಶಿಶೂನ್
ಅರಕ್ಷತಾಂ ವ್ಯಸನತಃ ಪಿತೃವ್ಯೌ ಕ್ವ ಗತಾವಿತಃ ೩೪

ನಮ್ಮನ್ನು ತಂದೆ-ತಾಯಿರಂತೆ ಸಾಕಿ, ಎಲ್ಲಾ ಕಷ್ಟ ಕಾಲದಲ್ಲಿ ನಮ್ಮ ರಕ್ಷಣೆಗೆ ನಿಂತ ಹಿರಿಯರಾದ ನಮ್ಮ ದೊಡ್ಡಪ್ಪ ದೊಡ್ಡಮ್ಮ ಎಲ್ಲಿದ್ದಾರೆ? ಹೇಗಿದ್ದಾರೆ ಹೇಳು  ಎಂದು ಧರ್ಮರಾಯ ಉದ್ವಿಗ್ನತೆಯಿಂದ ಸಂಜಯನಲ್ಲಿ ಕೇಳುತ್ತಾನೆ.

Saturday, April 27, 2013

Shrimad BhAgavata in Kannada -Skandha-01-Ch-12(4)


ಸುಮಾರು ೧೧೭ ವಯಸ್ಸಿನ ವೃದ್ಧ ಧೃತರಾಷ್ಟ್ರ ವಾನಪ್ರಸ್ಥ ಸ್ವೀಕರಿಸಿ ಅಧ್ಯಾತ್ಮ ಚಿಂತನೆಯಲ್ಲಿ ತೊಡಗುವುದನ್ನು ಬಿಟ್ಟು, ಅರಮನೆಯ ಭೋಗದಲ್ಲಿ ಜೀವನ ಸಾಗಿಸುತ್ತಿರುವುದು ಅಂದಿನ ಕಾಲದಲ್ಲಿ ವಿಚಿತ್ರ ಸಂಗತಿ. ಆತನಿಗೆ ಇನ್ನೂ ವೈರಾಗ್ಯ ಬಂದಿಲ್ಲದ್ದನ್ನು ನೋಡಿ, ಒಮ್ಮೆ ಭೀಮ ಆತನಿಗೆ ಕೇಳಿಸುವಂತೆ ಹೇಳುತ್ತಾನೆ: “ಈತನ ಮಕ್ಕಳೆಲ್ಲಾ ಈ ನನ್ನ ತೋಳಿನ ನಡುವೆ ಸಿಕ್ಕಿಯೇ ಸತ್ತಿರುವುದು” ಎಂದು. ಇಂತಹ ಮಾತನ್ನೂ ಕೇಳಿಸಿಕೊಂಡೂ ಧೃತರಾಷ್ಟ್ರ ಅರಮನೆಯಲ್ಲಿಯೇ ವಾಸವಿರುತ್ತಾನೆ! ಇನ್ನೊಮ್ಮೆ ಧೃತರಾಷ್ಟ್ರ ದುರ್ಯೋಧನನ ಶ್ರಾದ್ಧ ಮಾಡಿಸಲು ಅಗತ್ಯ ಸಾಮಾನು ಕಳುಹಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆಗ  ರಾಜಕೋಶದ ಜವಾಬ್ಧಾರಿ ಹೊತ್ತ ಭೀಮ ಹೇಳುತ್ತಾನೆ: “ಅಯೋಗ್ಯನಾದ ಆ ದುರ್ಯೋಧನನ ಶ್ರಾದ್ಧಕ್ಕಾಗಿ ಸಮಾಜದ ದುಡ್ದನ್ನೇಕೆ ವ್ಯರ್ಥ ಮಾಡಬೇಕು? ಸಮಾಜದ ಧರ್ಮ ರಕ್ಷಣೆಗಿರುವ ಸಂಪತ್ತನ್ನು ಒಬ್ಬ ನೀಚನ ಶ್ರಾದ್ಧಕ್ಕೋಸ್ಕರ ಬಳಸುವುದು ಸಾಧ್ಯವಿಲ್ಲ. ಒಬ್ಬ ಸಮಾಜಕಂಟಕನಾಗಿ ಬದುಕಿದ ದುರ್ಯೋಧನನ ಶ್ರಾದ್ಧ ಮಾಡಿ ಏನು ಉಪಯೋಗ” ಎಂದು. ಈ ಎಲ್ಲಾ ಘಟನೆಗಳಿಂದ ಧೃತರಾಷ್ಟ್ರನಿಗೆ ಅವಮಾನವಾಗುತ್ತದೆ ಮತ್ತು ಆತ ಈ ವಿಚಾರವನ್ನು ವಿದುರನಲ್ಲಿ ಹೇಳಿಕೊಳ್ಳುತ್ತಾನೆ.
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರ ಹೇಳುತ್ತಾನೆ: ಭೀಮಸೇನ ಮಾಡಿರುವುದು ತಪ್ಪಲ್ಲ. ಏಕೆಂದರೆ ಭೀಮಸೇನನ ನ್ಯಾಯ ದಾಕ್ಷಿಣ್ಯದ ನ್ಯಾಯವಲ್ಲ. ಆತ ದಾಕ್ಷಿಣ್ಯಕ್ಕೋಸ್ಕರ ಅನ್ಯಾಯದ ಜೊತೆಗೆ ಎಂದೂ ರಾಜಿ ಮಾಡಿಕೊಂಡವನಲ್ಲ. ಭೀಮ ಎಂತಹ ಸಂದರ್ಭದಲ್ಲೂ ನಿಷ್ಠುರವಾಗಿ ಮಾತನಾಡುವವನಾದ್ದರಿಂದ ನಿರ್ದಾಕ್ಷಿಣ್ಯವಾಗಿ ಮಾತನಾಡಿದ ಮತ್ತು ಅದೇ ನಿಜವಾದ ಭಾಗವತ ಧರ್ಮ. ಇಷ್ಟು ವಯಸ್ಸಾದರೂ ನಿನಗೆ ವೈರಾಗ್ಯ ಬರುತ್ತಿಲ್ಲ. ಅದಕ್ಕಾಗಿ  ಚುಚ್ಚು ಮಾತಿನಿಂದಾಗಿಯಾದರೂ ನೀನು ವೈರಾಗ್ಯ ತಾಳಿ ಉದ್ಧಾರವಾಗಲಿ ಎಂದು ಆತ ಆಡಿದ ಮಾತುಗಳವು. ಆತನ ಮಾತಿನ ಹಿಂದಿರುವುದು ನಿನ್ನ ಒಳಿತಿನ ಒಳ ದೃಷ್ಟಿಯೇ ಹೊರತು, ದ್ವೇಷ-ಅಸೂಯೆ ಅಲ್ಲ. ನಿನಗೆ ಇನ್ನಾದರೂ ವೈರಾಗ್ಯ ಬರಬೇಕು. ಇಷ್ಟೆಲ್ಲಾ ಘಟನೆ ನಡೆದರೂ, ನೀನಿನ್ನೂ ಅರಮನೆಯಲ್ಲಿರಲು ಬಯಸುತ್ತಿದ್ದೀಯಲ್ಲ-ಎಂದು ಕೇಳುತ್ತಾನೆ.

ಪ್ರತಿಕ್ರಿಯಾ ನ ಯಸ್ಯೇಹ ಕುತಶ್ಚಿತ್ ಕರ್ಹಿಚಿತ್ ಪ್ರಭೋ
ಸ ಏಷ ಭಗವಾನ್ ಕಾಲಃ ಸರ್ವೇಷಾಂ ನಃ ಸಮಾಗತಃ ೨೦

ಯಾವುದನ್ನು ನಾವು ಮುಂದೂಡಲಾರೆವೋ, ಯಾವುದನ್ನು ತಡೆಹಿಡಿಯುವ ಶಕ್ತಿ ಈ ಪ್ರಪಂಚದಲ್ಲಿ ಯಾವ ಕಾಲದಲ್ಲೂ ಇಲ್ಲವೋ, ಅಂತಹ ಕಾಲಪುರುಷನಾದ ಭಗವಂತ “ನಮ್ಮ ಅವಸಾನಕಾಲ ಸಮೀಪಿಸಿತು” ಎಂದು ಸೂಚಿಸುತ್ತಿದ್ದಾನೆ. ನಾವು ಅದಕ್ಕೆ ಪ್ರತಿಸ್ಪಂದಿಸಬೇಡವೇ? “ನೀನಿನ್ನೂ ಅರಮನೆಯ ಭೋಗದಲ್ಲೇ ಮುಳುಗಿದ್ದೀಯ. ಕೊನೆಗಾಲದಲ್ಲಿ ಭಗವಂತನ ಚಿಂತನೆಯತ್ತ ನಿನ್ನ ಮನಸ್ಸೇಕೆ ಹೊರಳಲಿಲ್ಲ” ಎಂದು ಧೃತರಾಷ್ಟ್ರನನ್ನು ಪ್ರಶ್ನಿಸುತ್ತಾನೆ ವಿದುರ.

ಪಿತೃಭ್ರಾತೃಸುಹೃತ್ಪುತ್ರಾ ಹತಾಸ್ತೇ ವಿಗತಂ ವಯಃ
ಆತ್ಮಾ ಚ ಜರಯಾ ಗ್ರಸ್ತಃ ಪರಗೇಹಮುಪಾಸಸೇ ೨೨

ವಿದುರ ಸದ್ಯದ ಧೃತರಾಷ್ಟ್ರನ ಪರಿಸ್ಥಿತಿ ಏನೆಂಬುದನ್ನು ಅವನಿಗೆ ಮನವರಿಕೆ ಮಾಡಿಸುತ್ತಾನೆ. ತಂದೆ ಸ್ಥಾನದಲ್ಲಿದ್ದ ಭೀಷ್ಮಾದಿಗಳು ಹೊರಟುಹೋದರು; ಪಾಂಡು ಇತ್ಯಾದಿ ಸಹೋದರರೂ ಇಲ್ಲ; ಪ್ರೀತಿಸುವ ಆತ್ಮೀಯರು, ಪುತ್ರರು ಎಲ್ಲರನ್ನೂ ಆತ ಕಳೆದುಕೊಂಡಿದ್ದಾನೆ. “ಆದರೂ ಈ ಸಂಸಾರ ನಶ್ವರ ಎನ್ನುವ ಸತ್ಯ ನಿನಗೆ ಹೊಳೆಯಲಿಲ್ಲವಲ್ಲಾ” ಎಂದು ಪ್ರಶ್ನಿಸುತ್ತಾನೆ ವಿದುರ. ಎಲ್ಲವನ್ನೂ ಕಳೆದುಕೊಂಡು ಪಾಂಡವರ ಮನೆಯಲ್ಲಿ ವಾಸಿಸುತ್ತಿರುವ ಧೃತರಾಷ್ಟ್ರನಿಗೆ ಎಂದೂ ತಪಸ್ಸನ್ನಾಚರಿಸಬೇಕು ಎಂದು ಹೊಳೆಯಲೇ ಇಲ್ಲವಲ್ಲಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ ಆತ.

ಅಹೋ ಮಹೀಯಸೀ ಜಂತೋರ್ಜೀವಿತಾಶಾ ಯಯಾ ಭವಾನ್
ಭೀಮಾಪವರ್ಜಿತಂ ಪಿಂಡಮಾದತ್ತೇ ಗೃಹಪಾಲವತ್ ೨೩

ಆಶ್ಚರ್ಯದ ಉದ್ಗಾರದೊಂದಿಗೆ ವಿದುರ ಹೇಳುತ್ತಾನೆ: ಒಂದು ಪ್ರಾಣಿಗೆ ‘ಬದುಕಬೇಕು’ ಎನ್ನುವ ಆಸೆ ಅದೆಷ್ಟು ಭಯಾನಕ? ಭೀಮ ಕಳುಹಿಸುವ ಪಿಂಡಕ್ಕಾಗಿ ಕಾದುಕುಳಿತಿರುವ ಮನೆ ನಾಯಿಯಂತೆ ಬದುಕುತ್ತಿದ್ದೀಯಲ್ಲಾ? ಇದಕ್ಕಿಂತ ಹೆಚ್ಚಿನ ನಾಚಿಕೆಗೇಡು ಇನ್ನೇನಿದೆ? ಏಕೆ ಬೇಕು ನಿನಗೆ ಇಂತಹ ಬದುಕು? ಎಂದು ಧೃತರಾಷ್ಟ್ರನತ್ತ ಮಾತಿನ ಚಾಟಿ ಬೀಸುತ್ತಾನೆ ವಿದುರ.
ವಿದುರನ ತೀಕ್ಷ್ಣವಾದ ಮಾತಿನ ಚಾಟಿಯಿಂದ, “ಬಾ, ನಾನೂ ನಿನ್ನೊಂದಿಗೆ ಬರುತ್ತೇನೆ, ಕಾಡಿಗೆ ಹೋಗೋಣ” ಎನ್ನುವ ಹುರಿದುಂಬಿಸುವ ಹಿತನುಡಿಯಿಂದಾಗಿ, ಧೃತರಾಷ್ಟ್ರನಿಗೆ ಜ್ಞಾನೋದಯವಾಗುತ್ತದೆ. ನಾಚಿಕೆಯಿಂದ ಆತ ಹೇಳುತ್ತಾನೆ: “ಹೌದು, ನಾನೆಂದೂ ಈ ಬಗ್ಗೆ ಯೋಚಿಸಿರಲಿಲ್ಲ. ಸಾಯುವ ಕಾಲದಲ್ಲಿ ಭಗವಂತನ ಸ್ಮರಣೆಯಲ್ಲಿ ಕಾಲ ಕಳೆಯಬೇಕು ಎನ್ನುವ ವಿಚಾರವೇ ನನಗೆ ಹೊಳೆಯಲಿಲ್ಲ. ಬಹಳ ಒಳ್ಳೆಯ ಮಾತನ್ನಾಡಿ ನನ್ನ ಕಣ್ಣು ತೆರೆಸಿದೆ ನೀನು” ಎಂದು. ಇಷ್ಟು ಹೇಳಿ ಧೃತರಾಷ್ಟ್ರ “ಖಂಡಿತವಾಗಿ ಕಾಡಿಗೆ ಹೋಗೋಣ” ಎಂದು ಎದ್ದು ನಿಲ್ಲುತ್ತಾನೆ.
ಧೃತರಾಷ್ಟ್ರ ವಿದುರನೊಂದಿಗೆ ಕಾಡಿಗೆ ಹೊರಟು ನಿಂತಾಗ ಅವರ ಜೊತೆಗೆ ಗಾಂಧಾರಿ, ಸಂಜಯ ಮತ್ತು ಕುಂತಿ ತಾವೂ ಬರುತ್ತೇವೆಂದು ಹೊರಟು ನಿಲ್ಲುತ್ತಾರೆ. ಈ ಹಿಂದೆ ಹೇಳಿದಂತೆ-ಕುಂತಿ ಒಬ್ಬ ಮಹಾಮಹಿಳೆ. ಆಕೆ ತನ್ನ ಜೀವಮಾನದುದ್ದಕ್ಕೂ ಕಷ್ಟವನ್ನು ಎದುರಿಸಿದವಳು. ಇದೀಗ ತನ್ನ ಮಗ ರಾಜ್ಯಭಾರ ಮಾಡುತ್ತಿದ್ದರೂ, ಆ ರಾಜಭೋಗದ ಆಸೆ ಅವಳನ್ನು ಕಾಡಲಿಲ್ಲ. “ನನ್ನ ಮಗ ಸಿಂಹಾಸನವೇರಿರುವುದನ್ನು, ಆತ ನಿಜವಾದ ವೀರಪುರುಷ ಎನ್ನುವುದನ್ನು ಕಂಡೆ. ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಇನ್ನೇನಾಗಬೇಕು ನನಗೆ”  ಎಂದು ಕುಂತಿ ಎಲ್ಲರೊಂದಿಗೆ ಕಾಡಿಗೆ ಹೊರಡಲು ಸಿದ್ಧಳಾಗುತ್ತಾಳೆ.
ಎಲ್ಲರೂ ಕಾಡಿಗೆ ಹೊರಡಲು ಸಿದ್ಧರಾಗಿ ಧರ್ಮರಾಯನಲ್ಲಿ ಅನುಮತಿ ಬೇಡುತ್ತಾರೆ. ಆದರೆ ಧರ್ಮರಾಯ ಒಪ್ಪಿಗೆ ಕೊಡುವುದಿಲ್ಲ. “ನೀವೆಲ್ಲರೂ ಹಿರಿಯರು. ನಿಮ್ಮನ್ನು ಕಾಡಿಗೆ ಕಳುಹಿಸಿ ನಾನು ರಾಜ್ಯಭಾರ ಮಾಡಲಾರೆ. ನೀವು ನನ್ನ ಕಣ್ಮುಂದೆ ಇರಬೇಕು, ನಾನು ನಿಮ್ಮ ಶುಶ್ರೂಷೆ ಮಾಡಿಕೊಂಡು ಆಡಳಿತ ಮಾಡಬೇಕು. ಇದನ್ನು ಬಿಟ್ಟು ನಿಮ್ಮನ್ನೆಲ್ಲಾ ಕಾಡಿಗೆ ಕಳುಹಿಸಿ ನಾನು ರಾಜ್ಯಭಾರ ಮಾಡಲಾಗದು. ನಾನೂ ನಿಮ್ಮೊಂದಿಗೆ ಕಾಡಿಗೆ ಬರುತ್ತೇನೆ” ಎಂದು ಹಠತೊಡುತ್ತಾನೆ ಆತ. ಯಾರು ಏನೇ ಹೇಳಿದರೂ ಧರ್ಮರಾಯ ಒಪ್ಪುವುದಿಲ್ಲ. ಆಗ ಧೃತರಾಷ್ಟ್ರ: “ಕಾಡಿಗೆ ಹೋಗಲು ಅನುಮತಿ ಕೊಡದೇ ಇದ್ದರೆ ನಾನು ಊಟ ಮಾಡುವುದಿಲ್ಲ” ಎಂದು ಸತ್ಯಾಗ್ರಹ ಮಾಡುತ್ತಾನೆ. ಆಗ ಧರ್ಮರಾಯ  ಅನುಮತಿ ನೀಡುತ್ತಾನೆ.

ಅಥೋದೀಚೀಂ ದಿಶಂ ಯಾತು ಸ್ವೈರಜ್ಞಾತಗತಿರ್ಭವಾನ್
ಇತೋSರ್ವಾಕ್ ಪ್ರಾಯಶಃ ಕಾಲಃ ಪುಂಸಾಂ ಗುಣವಿಕರ್ಷಣಃ ೨೮

ಕಾಡಿನಲ್ಲಿ ಎಲ್ಲಿ ತಪಸ್ಸನ್ನಾಚರಿಸಬಹುದು ಎನ್ನುವುದನ್ನು ವಿವರಿಸುತ್ತಾ ವಿದುರ ಹೇಳುತ್ತಾನೆ: “ಉತ್ತರ ದಿಕ್ಕಿನಲ್ಲಿ ತಪಸ್ಸಿಗೆ ಯೋಗ್ಯವೆಂದು ಕಾಣುವ ಒಂದು ಸ್ಥಳದಲ್ಲಿ ಕುಳಿತು ತಪಸ್ಸು ಮಾಡೋಣ” ಎಂದು. [ಹಸ್ತಿನಾಪುರದಿಂದ ಉತ್ತರ ದಿಕ್ಕಿರುವುದು ಹಿಮಾಲಯ. ಹಸ್ತಿನಾಪುರದಿಂದ ಹರಿದ್ವಾರಕ್ಕಿರುವುದು ಸುಮಾರು ೬೦ ಕಿ.ಮೀ ದೂರ ಎನ್ನುವುದನ್ನು ಓದುಗರು ಗಮನಿಸಬೇಕು].
ಈ ಶ್ಲೋಕದಲ್ಲಿ  “ಸ್ವೈರಜ್ಞಾತಗತಿ” ಎನ್ನುವ ಪದ ಬಳಕೆಯಾಗಿದೆ. ಇದನ್ನು ಸ್ವೈಃ-ಅಜ್ಞಾತಗತಿಃ ಎಂದು ಪದಚ್ಛೇದ ಮಾಡಿ ಕೆಲವರು ಬಳಸುತ್ತಾರೆ. ಹಾಗೆ ಮಾಡಿದರೆ ‘ಕಾಡಿನಲ್ಲಿ ಯಾರಿಗೂ ತಿಳಿಯದ ಅಜ್ಞಾತ ಸ್ಥಳ’ ಎಂದಾಗುತ್ತದೆ. ಆದರೆ ಇದು ಮಹಾಭಾರತಕ್ಕೆ ವಿರೋಧ. ನಮಗೆ ತಿಳಿದಂತೆ ಮಹಾಭಾರತದಲ್ಲಿ ‘ಪಾಂಡವರು ಧೃತರಾಷ್ಟ್ರ ಮತ್ತು ಇತರರನ್ನು ತಪಸ್ಸು ಮಾಡುವ ಸ್ಥಳಕ್ಕೆ ಬಿಟ್ಟು ಬಂದರು ಮತ್ತು ಧರ್ಮರಾಯ ಆಗಾಗ ಆ ಸ್ಥಳಕ್ಕೆ ಭೇಟಿ ಕೊಡುತ್ತಿದ್ದ’ ಎಂದಿದೆ. ಆದ್ದರಿಂದ ಅದು ಯಾರಿಗೂ ತಿಳಿಯದ ಅಜ್ಞಾತ ಸ್ಥಳವಲ್ಲ. ಆಚಾರ್ಯರು ತಮ್ಮ ತಾತ್ಪರ್ಯ ನಿರ್ಣಯದಲ್ಲಿ ಈ ಶಬ್ದದ ಪದಚ್ಛೇದವನ್ನು “ಸ್ವೈರಜ್ಞಾತಗತಿಃ ವಿವಿಕ್ತಗತಿಃ” ಎಂದು ವಿವರಿಸಿದ್ದಾರೆ. ಅಂದರೆ ಸ್ವೈರ--ಜ್ಞಾತಗತಿಃ “ಯಾವ ಸ್ಥಳದಲ್ಲಿ ತಪಸ್ಸುಮಾಡೋಣ ಅನಿಸುತ್ತದೋ ಅಲ್ಲಿ ತಪಸ್ಸುಮಾಡೋಣ” ಎಂದರ್ಥ. 

Friday, April 26, 2013

Shrimad BhAgavata in Kannada -Skandha-01-Ch-12(3)


ಸ ರಾಜಪುತ್ರೋ ವವೃಧ ಆಶು ಶುಕ್ಲ ಇವೋಡುಪಃ
ಆಪೂರ್ಯಮಾಣಃ ಪಿತೃಭಿಃ ಕಾಷ್ಠಾಭಿರಿವ ಸೋSನ್ವಹಮ್ ೧೧-೩೧

ಹದಿನೈದು ವರ್ಷ ತುಂಬಿ ಹದಿನಾರಕ್ಕೆ ಕಾಲಿಡುತ್ತಿರುವ ಪರೀಕ್ಷಿತ ಹೇಗೆ ಕಾಣುತ್ತಿದ್ದ ಎನ್ನುವುದನ್ನು ಈ ಶ್ಲೋಕದಲ್ಲಿ  ಒಂದು ಸುಂದರವಾದ ದೃಷ್ಟಾಂತದೊಂದಿಗೆ  ವರ್ಣಿಸಲಾಗಿದೆ. ಇಲ್ಲಿ ಹೇಳುತ್ತಾರೆ:. “ಹೇಗೆ ದಿಗ್ದೇವತೆಗಳಿಂದ ಶುಕ್ಲಪಕ್ಷದ ಚಂದ್ರ ಶಕ್ತಿ ಪಡೆಯುತ್ತಾನೋ ಹಾಗೆ, ಪಂಚಪಾಂಡವರಿಂದ ಶಕ್ತಿ  ಪಡೆದು, ಪೂರ್ಣಚಂದ್ರನಂತೆ ಪರೀಕ್ಷಿತ ಬೆಳೆದ”  ಎಂದು.
ಇಲ್ಲಿ ಬಳಸಿರುವ ‘ಚಂದ್ರನ’ ಉಪಮಾನದ ಹಿಂದೆ ಒಂದು ವಿಶಿಷ್ಠ ವಿಚಾರವಿದೆ. ಚಂದ್ರ ವನಸ್ಪತಿಗಳ ದೇವತೆ. ವನಸ್ಪತಿಗಳಿಗೆ ವಿಶೇಷ ಶಕ್ತಿ ಬರುವುದು ಚಂದ್ರನಿಂದ. ಚಂದ್ರನಿಂದ ಬರುವ ಬೆಳಕು ಬರೀ ಬೆಳದಿಂಗಳಲ್ಲ. ಅದು ಧನ್ವಂತರೀ ಶಕ್ತಿ; ಅಮೃತಕಲಶದಿಂದ ಸುರಿಯುವ ಅಮೃತಪಾನವದು. ಚಂದ್ರ ನಮ್ಮ ಮನಸ್ಸಿನ ದೇವತೆ ಕೂಡಾ ಹೌದು. ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಚಂದ್ರನಿಂದಾಗುವ ಶಕ್ತಿ ಪಾತದಲ್ಲಿ ಪ್ರತೀದಿನ ವ್ಯತ್ಯಾಸವಾಗುತ್ತದೆ. ಪೂರ್ಣಚಂದ್ರನಿಂದಾಗುವ ಶಕ್ತಿಪಾತ ಅಪಾರ. ಅದು ಇತರ ದಿನಗಳಲ್ಲಿರುವುದಿಲ್ಲ. ಈ ಶಕ್ತಿ ಚಂದ್ರನಿಗೆ ದಿಗ್ದೇವತೆಗಳಾದ ಯಮ, ಮಿತ್ರ, ವರುಣ,ಮತ್ತು ಕುಬೇರ-ಇವರಿಂದ ಬರುತ್ತದೆ.  ಇದೇ ರೀತಿ ಇಲ್ಲಿ ಹದಿನೈದು ವರ್ಷ ತುಂಬಿ ಹದಿನಾರಕ್ಕೆ ಕಾಲಿಟ್ಟಿರುವ ಪರೀಕ್ಷಿತ, ಪಂಚ ಪಾಂಡವರಿಂದ ಶಕ್ತಿ ಪಡೆದು, ಪೂರ್ಣಚಂದ್ರನಂತೆ ಕಂಗೊಳಿಸುತ್ತಿದ್ದಾನೆ. “ಅಜ್ಜಂದಿರರಾದ ಪಂಚಪಾಂಡವರು ತಂದೆಯಂತೆ ಆತನನ್ನು ಬೆಳೆಸಿದರು” ಎನ್ನುತ್ತಾರೆ ವ್ಯಾಸರು.  ಇಂತಹ ಸಂದರ್ಭದಲ್ಲಿ ವಿದುರ ಹಸ್ತಿನಾಪುರದಲ್ಲಿದ್ದಾನೆ. ದೃತರಾಷ್ಟ್ರ   ನಿಶ್ಚಿಂತನಾಗಿ ಅರಮನೆಯಲ್ಲಿ ಕಾಲಹರಣ ಮಾಡುತ್ತಿದ್ದಾನೆ. 

Tuesday, April 23, 2013

Shrimad BhAgavata in Kannada -Skandha-01-Ch-12(2)


ಪ್ರತ್ಯುಜ್ಜಗ್ಮುಃ ಪ್ರಹರ್ಷೇಣ ಪ್ರಾಣಾಂಸ್ತನ್ವ ಇವಾಗತಾನ್
ಅಭಿಸಂಗಮ್ಯ ವಿಧಿವತ್ ಪರಿಷ್ವಂಗಾಭಿವಾದನೈಃ

ಹಸ್ತಿನಾಪುರಕ್ಕೆ ಆಗಮಿಸಿದ ವಿದುರನನ್ನು ಎಲ್ಲರೂ ಅತ್ಯಂತ ಸಂಭ್ರಮದಿಂದ ಸ್ವಾಗತಿಸುತ್ತಾರೆ. ಪ್ರಾಣಶಕ್ತಿ ಇಲ್ಲದೇ ನಿಸ್ತೇಜವಾಗಿರುವ ಶರೀರದೊಳಗೆ ಪ್ರಾಣಶಕ್ತಿ ಪ್ರವೇಶಿಸಿದರೆ ಹೇಗೆ ಆ ಶರೀರ ಎದ್ದು ನಿಲ್ಲಬಹುದೋ, ಆ ರೀತಿ ಪಾಂಡವರಿಗೆ  ವಿದುರನ ಆಗಮನದಿಂದ  ಸಂತೋಷವಾಗುತ್ತದೆ. ಕಿರಿಯರು ನಮಸ್ಕರಿಸುವ ಮೂಲಕ, ಹಿರಿಯರು ಒಬ್ಬರನ್ನೊಬ್ಬರು ತಬ್ಬಿಕೊಳ್ಳುವ ಮುಖೇನ ಬಹಳ ಸಂಭ್ರಮದಿಂದ ವಿದುರನನ್ನು ಸ್ವಾಗತಿಸಲಾಗುತ್ತದೆ.
ಇಲ್ಲಿ ಕೊಟ್ಟಿರುವ ದೃಷ್ಟಾಂತ  “ಪ್ರಾಣಾಂಸ್ತನ್ವ ಇವಾಗತಾನ್” ಉಪನಿಷತ್ತಿನಲ್ಲಿ ಉಕ್ತವಾಗಿದೆ. ಪ್ರಶ್ನೋಪನಿಷತ್ತಿನಲ್ಲಿ ಪ್ರಾಣದೇವರ ಮಹಿಮೆಯನ್ನು ವಿವರಿಸುವ ಒಂದು ಕಥೆಯಿದೆ. ಅಲ್ಲಿ ಹೇಳುವಂತೆ: ಎಲ್ಲಾ ತತ್ತ್ವಾಭಿಮಾನಿ ದೇವತೆಗಳು ದೇಹವನ್ನು ಪ್ರವೇಶಿಸದರೂ ಕೂಡಾ ದೇಹ ಎದ್ದು ನಿಲ್ಲುವುದಿಲ್ಲ. ಆದರೆ ಪ್ರಾಣ ದೇವರು ಪ್ರವೇಶಿಸಿದಾಗ- “ತತ್ ಪ್ರಾಣೇ ಪ್ರಪನ್ನ ಉದತಿಷ್ಠತ್” -ಶರೀರ ಎದ್ದು ನಿಲ್ಲುತ್ತದೆ(ಪ್ರಶ್ನೋಪನಿಷತ್-ಅಧ್ಯಾಯ-೨). ಇಲ್ಲಿ ಆ ಕಥೆಯನ್ನೇ ದೃಷ್ಟಾಂತವಾಗಿ ಹೇಳಲಾಗಿದೆ. ಇಂದ್ರಿಯ ದೇವತೆಗಳು  ಪ್ರಾಣದೇವರನ್ನು  ಇದಿರುಗೊಂಡಂತೆ, ಪ್ರಾಣದೇವರು ಬ್ರಹ್ಮ ಶರೀರ ಪ್ರವೇಶಿಸಿದಾಗ ಆ ಶರೀರ ಹೇಗೆ ಎದ್ದು ನಿಲ್ಲುತ್ತದೋ ಹಾಗೆ ಪಾಂಡವರು ವಿದುರನನ್ನು ಸ್ವಾಗತಿಸಿದರು ಎಂದಿದ್ದಾರೆ.
ವಿದುರನನ್ನು ಸ್ವಾಗತಿಸಿ ಕರೆತಂದ ಧರ್ಮರಾಯ ಆತನಲ್ಲಿ ತೀರ್ಥಯಾತ್ರೆಯ ವಿವರವನ್ನೂ, ಯಾದವರ ಕ್ಷೇಮ ಸಮಾಚಾರದ ವಿವರವನ್ನೂ ಕೇಳುತ್ತಾನೆ.

ಇತ್ಯುಕ್ತೋ ಧರ್ಮರಾಜೇನ ಸರ್ವಂ ತತ್ ಸಮವರ್ಣಯತ್
ಯಥಾನುಭೂತಂ ಭ್ರಮತಾ ವಿನಾ ಯದುಕುಲಕ್ಷಯಮ್೧೨

ಧರ್ಮರಾಯನಿಗೆ ವಿದುರ ತಾನು ತನ್ನ ತೀರ್ಥಯಾತ್ರೆಯಲ್ಲಿ ಕಂಡ ಘಟನೆಗಳನ್ನೂ, ಅನುಭವಗಳನ್ನೂ ಸುವಿವರವಾಗಿ ಹೇಳುತ್ತಾನೆ. ಆದರೆ ಆತ ಮುಂದೆ ಆಗಲಿರುವ ಯದುವಂಶ ನಾಶದ ವಿಚಾರವನ್ನು ಮಾತ್ರ ಹೇಳುವುದಿಲ್ಲ! ಏಕೆಂದರೆ ಧರ್ಮರಾಯನಿಗೆ  ‘ಶ್ರೀಕೃಷ್ಣ ಅವತಾರ ಸಮಾಪ್ತಿ ಮಾಡಲಿದ್ದಾನೆ’ ಎನ್ನುವ ವಿಚಾರವನ್ನು ಕೇಳಿ ಸಹಿಸಿಕೊಳ್ಳುವ ಶಕ್ತಿ ಇಲ್ಲ  ಎನ್ನುವ  ಸತ್ಯ ವಿದುರನಿಗೆ ಗೊತ್ತಿತ್ತು.
ಕೆಲವು ಭಾಷ್ಯಕಾರರು “ಯದುಕುಲ ಕ್ಷಯವಾದ ವಿಚಾರವನ್ನು ವಿದುರ ಧರ್ಮರಾಯನಿಗೆ ಹೇಳಲಿಲ್ಲ” ಎಂದು ಬರೆಯುತ್ತಾರೆ. ಈ ರೀತಿ ಹೇಳಿದರೆ ‘ವಿದುರ ಧರ್ಮರಾಯನನ್ನು ಭೇಟಿಯಾಗುವ ಮೊದಲೇ ಯದುಕುಲ ನಾಶವಾಗಿತ್ತು’ ಎಂದರ್ಥವಾಗುತ್ತದೆ. ಆದರೆ ಆ ವಿಚಾರ ಸರಿಯಲ್ಲ. ಏಕೆಂದರೆ ವಿದುರ ದೇಹತ್ಯಾಗ ಮಾಡಿ ಹಲವು ವರ್ಷಗಳ ನಂತರ ಯದುಕುಲ ಕ್ಷಯವಾಗುತ್ತದೆ. ಈ ವಿಷಯ ಮುಂದೆ ಭಾಗವತದಲ್ಲೇ ನಮಗೆ ತಿಳಿಯುತ್ತದೆ.

ಅಬಿಭ್ರದರ್ಯಮಾ ದಂಡಂ ಯಥಾಘಮಘಕಾರಿಷು
ಯಾವದ್ ಬಭಾರ ಶೂದ್ರತ್ವಂ ಶಾಪಾದ್ ವರ್ಷಶತಂ ಯಮಃ ೧೫

ಪಾಂಡವರಿಗೆ ಮಾರ್ಗದರ್ಶಕನಾಗಿದ್ದು, ಹಲವು ಬಾರಿ ಅವರನ್ನು ಆಪತ್ತಿನಿಂದ ರಕ್ಷಿದ ವಿದುರ ಏಕೆ ಒಬ್ಬ ಶೂದ್ರ ಯೋನಿಯಲ್ಲಿ ಹುಟ್ಟಿ, ಶೂದ್ರನಂತೆ ಬದುಕಿದ ಎನ್ನುವ ಪ್ರಶ್ನೆಗೆ  ಇಲ್ಲಿ ಉತ್ತರವಿದೆ. ಒಮ್ಮೆ ಮಾಂಡವ್ಯ ಮಹರ್ಷಿಗಳ ಮೇಲೆ ಕಳ್ಳತನದ ಆರೋಪ ಬರುತ್ತದೆ. ಹಾಗಾಗಿ ಅಲ್ಲಿಯ ಅರಸ ಅವರನ್ನು ಶೂಲಕ್ಕೇರಿಸಲು ಆಜ್ಞೆ ಮಾಡುತ್ತಾನೆ. ಆದರೆ ಶೂಲಕ್ಕೇರಿಸಿದ ಸಮಯದಲ್ಲಿ ಅರಸನಿಗೆ ಮುನಿವರ್ಯರು ನಿರಪರಾಧಿ ಎನ್ನುವ ಸತ್ಯ ತಿಳಿಯುತ್ತದೆ. ತಕ್ಷಣ ಅರಸ ತನ್ನ ತಪ್ಪನ್ನು ತಿದ್ದಿಕೊಂಡು ಋಷಿಗಳಲ್ಲಿ ಕ್ಷೆಮೆ ಯಾಚಿಸುತ್ತಾನೆ. ಆದರೆ ಮಾಂಡವ್ಯರಿಗೆ ಅರಸನ ಕ್ಷಮೆಯಾಚನೆಯಿಂದ ಸಮಾಧಾನವಾಗುವುದಿಲ್ಲ. ಅವರು ನೇರವಾಗಿ ಯಮಧರ್ಮರಾಯನಲ್ಲಿಗೆ ಹೋಗಿ “ನನಗೇಕೆ ಈ ಶಿಕ್ಷೆ” ಎಂದು ಕೇಳುತ್ತಾರೆ. ಅದಕ್ಕೆ ಯಮ ವಿನೋದವಾಗಿ “ನೀವು ನಿಮ್ಮ ಬಾಲ್ಯದಲ್ಲಿ ಒಂದು ಪತಂಗದ ರೆಕ್ಕೆಯನ್ನು ದರ್ಭೆಯಿಂದ ಚುಚ್ಚಿ ಹಿಂಸಿದ್ದೀರಿ ಅದಕ್ಕೆ ಈ ಶಿಕ್ಷೆ” ಎನ್ನುತ್ತಾನೆ. ಈ ಉತ್ತರದಿಂದ ಮಾಂಡವ್ಯ ಮುನಿಗೆ ಕೊಪ ಬರುತ್ತದೆ. ಯಾವಾಗಲೂ, ಹದಿನಾಲ್ಕು ವಯಸ್ಸಿನ ಮೊದಲು ತಿಳಿಯದೇ ಮಾಡುವ ಬಾಲಾಪರಾಧಗಳಿಗೆ ಕರ್ಮಫಲವಿಲ್ಲ. ಹಾಗಿರುವಾಗ ಬಾಲ್ಯದಲ್ಲಿ ತಿಳಿಯದೇ ಮಾಡಿದ ತಪ್ಪಿಗೆ ಇದೆಂತಹ ಶಿಕ್ಷೆ ಎಂದು ಪ್ರಶ್ನಿಸಿದ ಅವರು “ನೀನು ಭೂಲೋಕದಲ್ಲಿ ಶೂದ್ರಯೋನಿಯಲ್ಲಿ ಜನಿಸಿ ಶತವರ್ಷ ಬದುಕಿರು” ಎಂದು ಯಮನಿಗೆ ಶಾಪವನ್ನೀಯುತ್ತಾರೆ.  ಈ ಕಾರಣದಿಂದ ಯಮ ವಿದುರನಾಗಿ ಹುಟ್ಟಿ ಶೂದ್ರನಂತೆ ಬದುಕುತ್ತಾನೆ. ಇದೊಂದು ದೈವ ಲೀಲೆ. ವೇದವ್ಯಾಸರ ಮಗನಾಗಿ ಹುಟ್ಟಿದ ವಿದುರ ಶೂದ್ರನಂತೆ ನೂರು ವರ್ಷ ಭೂಲೋಕದಲ್ಲಿ ಬದುಕಿದ.
ಈ ಶ್ಲೋಕದಲ್ಲಿ “ಯಮ-ಶಾಪದಿಂದಾಗಿ ಶೂದ್ರನಾಗಿ ಭೂಮಿಯಲ್ಲಿ ೧೦೦ ವರ್ಷಗಳ ಕಾಲ  ಇದ್ದ ಸಮಯದಲ್ಲಿ, ಆತನ ಸ್ಥಾನದಲ್ಲಿ ಅರ್ಯಮ ಎನ್ನುವ ಆದಿತ್ಯ ಆತನ ಪ್ರಭಾರನಾಗಿ(Incharge) ಕೆಲಸ ಮಾಡಿದ; ಪಾಪ ಮಾಡಿದವರಿಗೆ ಅವರ ಪಾಪಕ್ಕೆ ತಕ್ಕನಾದ ದಂಡನೆ ಕೊಡುವ ಹೊಣೆಗಾರಿಕೆಯನ್ನು ಅರ್ಯಮ ವಹಿಸಿದ” ಎಂದು ಹೇಳಿದಂತೆ ಕಾಣುತ್ತದೆ. ಆದರೆ ಈ ರೀತಿ ಅರ್ಥ ಚಿಂತನೆ ಸರಿಯಲ್ಲ. ಏಕೆಂದರೆ ದೇವತೆಗಳು ಎಂದೂ  ಪೂರ್ಣರೂಪದಲ್ಲಿ ಭೂಮಿಗಿಳಿದು ಬರುವುದಿಲ್ಲ. ಅವರು ಒಂದು ಅಂಶದಲ್ಲಿ ದೇವಲೋಕದಲ್ಲಿದ್ದರೆ ಇನ್ನೊಂದು ರೂಪದಲ್ಲಿ ಭೂಲೋಕದಲ್ಲಿರಬಲ್ಲರು. ಇದಕ್ಕಾಗಿ ಅವರಿಗೆ ‘ಸಾಂಶ ಜೀವರು’ ಎಂದು ಕರೆಯುತ್ತಾರೆ. ಹೀಗಾಗಿ ದೇವತೆಗಳು ಭೂಲೋಕದಲ್ಲಿ ಅವತಾರವೆತ್ತಿದಾಗ ಅವರ ಪದವಿಗೆ ಇನ್ನೊಬ್ಬ ಪ್ರಭಾರ ಇರುವುದಿಲ್ಲ. ಅವರು ತಮ್ಮ ಪದವಿಯನ್ನು ಸ್ವಯಂ ನಿರ್ವಹಿಸುತ್ತಿರುತ್ತಾರೆ. ಅವರು ಏಕಕಾಲದಲ್ಲಿ ಅನೇಕ ರೂಪಧಾರಣೆ ಮಾಡಬಲ್ಲರು.
ಮೇಲಿನ ಶ್ಲೋಕದಲ್ಲಿ “ಅರ್ಯಮ ದಂಡವನ್ನು ಧಾರಣೆ ಮಾಡಿದ” ಎಂದಿದ್ದಾರೆ. ಇಲ್ಲಿ ಅರ್ಯಮ ಎಂದರೆ ದ್ವಾದಶಾದಿತ್ಯರಲ್ಲಿ ಒಬ್ಬನಲ್ಲ, ಬದಲಿಗೆ ಸೂರ್ಯಪುತ್ರನಾದ ಯಮನನ್ನೇ ಇಲ್ಲಿ ಅರ್ಯಮ ಎಂದು ಕರೆದಿರುವುದು. ‘ಅರ್ಯಮ’ ಎಂದರೆ ಸಂಹಾರ ಶಕ್ತಿ ಎಂದರ್ಥ. ಸಂಹಾರಶಕ್ತಿಯಾದ ಭಗವಂತನ ಸಂಕರ್ಷಣ ರೂಪಕ್ಕೂ ಕೂಡಾ ‘ಅರ್ಯಮ’ ಎನ್ನುತ್ತಾರೆ. ನಾವು ಮಾಡಿದ ಪಾಪ-ಪುಣ್ಯಗಳಿಗೆ ಫಲವನ್ನು ಕೊಡುವ ಯಮನೂ ಅರ್ಯಮ.   ಯಾರು ಪಾಪಿಗಳಿಗೆ ದಂಡನೆ ಕೊಡುವ ಯಮನೋ, ಅವನೇ ಮಾಂಡವ್ಯ ಮುನಿಯ ಶಾಪದಿಂದಾಗಿ ಭೂಲೋಕದಲ್ಲಿ ವಿದುರನಾಗಿ ಶೂದ್ರಯೋನಿಯಲ್ಲಿ ಜನಿಸಿ, ನೂರು ವರ್ಷಗಳ ಕಾಲ ಬದುಕಿದ.  ಧರ್ಮರಾಯ ಕೂಡಾ ಯಮನ ಇನ್ನೊಂದು ಅವತಾರ ರೂಪ.
ಇಲ್ಲಿ ಇನ್ನೊಂದು ಪ್ರಶ್ನೆ ಏನೆಂದರೆ: ವಿದುರ ದೃತರಾಷ್ಟ್ರನೊಂದಿಗೆ ಕಾಡಿಗೆ  ಹೊರಟಾಗ ಧರ್ಮರಾಯನಿಗೆ ಸುಮಾರು ೮೭ ವರ್ಷ.  ಕಾಡಿಗೆ ಹೋದ ಸುಮಾರು ಆರು ತಿಂಗಳಲ್ಲಿ ವಿದುರ ದೇಹತ್ಯಾಗ ಮಾಡುತ್ತಾನೆ. ವಿದುರ ಭೂಮಿಯಲ್ಲಿ ಇದ್ದದ್ದು ಒಂದು ಶತಮಾನ ಕಾಲ. ಹಾಗಿದ್ದರೆ ಧರ್ಮರಾಯನ ಚಿಕ್ಕಪ್ಪನಾದ ವಿದುರನಿಗೆ ಧರ್ಮರಾಯ ಹುಟ್ಟುವಾಗ ಕೇವಲ ೧೨ ವರ್ಷ ವಯಸ್ಸಾಗಿತ್ತೆ? ವಿದುರನಿಗಿಂತ ಒಂದು ವರ್ಷ ಹಿರಿಯನಾದ ವಿದುರನ ಅಣ್ಣ ಪಾಂಡು ರಾಜ ಹದಿಮೂರು ವರ್ಷ ವಯಸ್ಸಿನವನಿದ್ದಾಗ ಧರ್ಮರಾಯನ ಜನನವಾಯಿತೆ? ಇತ್ಯಾದಿ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಇದು ಸರಿಯಾಗಿ ಅರ್ಥವಾಗಬೇಕಾದರೆ ನಾವು ಇಲ್ಲಿ ಹೇಳಿರುವ ‘ಶತಮಾನ’ ಪದದ ಅರ್ಥ ತಿಳಿಯಬೇಕು. ವೇದದಲ್ಲಿ ಮನುಷ್ಯನ ಬದುಕೆಂದರೆ ಅದು ‘ಶತಮಾನಂ ಭವತಿ’ ಎನ್ನುತ್ತಾರೆ. ಅದೇ ವೇದದಲ್ಲಿ ಇನ್ನೊಂದು ಕಡೆ ಮನುಷ್ಯನ ಬದುಕಿನಲ್ಲಿ ೨೪ ವರ್ಷ ಪ್ರಾತಃಸವನ, ೪೪ ವರ್ಷ ಮಾದ್ಯಂದಿನ ಸವನ, ೪೮ ವರ್ಷ ಸಾಯಂಸವನ  ಎನ್ನಲಾಗಿದೆ. ಅಂದರೆ ಒಟ್ಟು ೧೧೬ ವರ್ಷಗಳು. ಆದ್ದರಿಂದ ಇಲ್ಲಿ ಶತಮಾನಂ ಎಂದರೆ ಶಾಸ್ತ್ರೀಯ ಪರಿಭಾಷೆಯಲ್ಲಿ ನೂರಕ್ಕಿಂತ ಸ್ವಲ್ಪ ಹೆಚ್ಚು ವರ್ಷಗಳಾಗುತ್ತದೆ. ಗ್ರಹಚಕ್ರದ ಒಂದು ಪರಿಭ್ರಮಣೆಗೆ ೧೨೦ ವರ್ಷಗಳು. ಅದನ್ನೂ ಕೂಡಾ ಒಂದು ಶತಮಾನ ಎಂದು ಕರೆಯಲಾಗುತ್ತದೆ. ಈ ರೀತಿ ಸಮನ್ವಯ ಮಾಡಿಕೊಂಡು ನೋಡಿದಾಗ ಧರ್ಮರಾಯನಿಗೆ ೮೭ ವರ್ಷವಿದ್ದಾಗ ವಿದುರನಿಗೆ ಸುಮಾರು ೧೧೬ ವರ್ಷ ಮತ್ತು ದೃತರಾಷ್ಟ್ರನಿಗೆ ೧೧೮ ವರ್ಷ.

Saturday, April 20, 2013

Shrimad BhAgavata in Kannada -Skandha-01-Ch-12(1)


ದ್ವಾದಶೋSಧ್ಯಾಯಃ


ಹಸ್ತಿನಾಪುರಕ್ಕೆ ವಿದುರನ ಆಗಮನ

ಪರೀಕ್ಷಿತನ ಜನನಾನಂತರ ಧರ್ಮರಾಯ ಮೂರು ಅಶ್ವಮೇಧಯಾಗ ಮಾಡುತ್ತಾನೆ. ಅಷ್ಟೇ ಅಲ್ಲ, ಹಸ್ತಿನಾಪುರದಲ್ಲಿ ನಿರಂತರ ಯಜ್ಞ-ಯಾಗಾದಿಗಳು ನಡೆಯುತ್ತಿರುತ್ತವೆ. ಪ್ರತಿಯೊಂದು ಯಜ್ಞ-ಯಾಗದಿಗಳಲ್ಲಿ ಶ್ರೀಕೃಷ್ಣ ಪಾಂಡವರ ಜೊತೆಗಿರುತ್ತಿದ್ದ.
ಪರೀಕ್ಷಿತನಿಗೆ ಸುಮಾರು ಹತ್ತು ವರ್ಷ ಹಾಗೂ ಧರ್ಮರಾಯನಿಗೆ ಸುಮಾರು ಎಂಬತ್ತೆರಡು ವರ್ಷವಾಗಿರುವಾಗ  ಯಾದವ ವಂಶದಲ್ಲಿ ಒಂದು ಘಟನೆ ನಡೆಯುತ್ತದೆ. ಜಾಂಬವಂತಿ ಪುತ್ರ ‘ಸಾಂಬ’ ಋಷಿಗಳಿಂದ ಶಾಪಗ್ರಸ್ಥನಾಗುತ್ತಾನೆ. “ಇವನ ಹೊಟ್ಟೆಯಲ್ಲಿ ಹುಟ್ಟುವ ಸಂತಾನದಿಂದಲೇ ಯದುವಂಶ ನಾಶವಾಗಲಿ” ಎಂದು ಋಷಿಗಳು ಶಾಪವೀಯುತ್ತಾರೆ.  ಈ ಶಾಪದ ವಿಚಾರ ಉದ್ಧವನಿಗೆ ತಿಳಿಯುತ್ತದೆ. ಇದು ಭಗವಂತನ ಲೀಲೆ, ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುತ್ತಿದ್ದಾನೆ ಎನ್ನುವ ಸತ್ಯವನ್ನು ಆತ ಅರಿಯುತ್ತಾನೆ.
ಉದ್ಧವವನ ಪ್ರಾರ್ಥನೆಯಂತೆ ಶ್ರೀಕೃಷ್ಣ ಆತನಿಗೆ ಜ್ಞಾನೋಪದೇಶ ಮಾಡುತ್ತಾನೆ ಮತ್ತು ಅದನ್ನು ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ಉಪದೇಶಿಸಬೇಕೆಂದು ಹೇಳುತ್ತಾನೆ.[ಈ ಕುರಿತ ಅದ್ಭುತ ವಿವರಣೆ, ಉದ್ಧವಗೀತೆ, ಭಾಗವತದ ಹನ್ನೊಂದನೇ ಸ್ಕಂಧದಲ್ಲಿದೆ]. ಉದ್ಧವ ಶ್ರೀಕೃಷ್ಣನ ಆದೇಶದಂತೆ ಬದರಿಗೆ ಹೋಗಿ ಅಲ್ಲಿರುವ ಋಷಿಗಳಿಗೆ ಭಗವಂತನ ಜ್ಞಾನಸಂದೇಶವನ್ನು ಬಿತ್ತರಿಸಿ, ಮರಳಿ ಬಂದು ಶ್ರೀಕೃಷ್ಣನ ಜೊತೆಗೇ ಇರುತ್ತಾನೆ.

ಸೂತ ಉವಾಚ--
ವಿದುರಸ್ತೀರ್ಥಯಾತ್ರಾಯಾಂ ಮೈತ್ರೇಯಾದಾತ್ಮನೋ ಗತಿಮ್
ಜ್ಞಾತ್ವಾSSಗಾದ್ಧಾಸ್ತಿನಪುರಂ ತಯಾSವಾಪ್ತವಿವಿತ್ಸಿತಃ

ಉದ್ಧವನಿಗೆ ಉಪದೇಶ ಮಾಡಿದ ಕಾಲದಲ್ಲೇ ಶ್ರೀಕೃಷ್ಣ ವೇದವ್ಯಾಸ ಶಿಷ್ಯ ಮೈತ್ರೇಯನಿಗೂ ಜ್ಞಾನೋಪದೇಶ ಮಾಡಿರುತ್ತಾನೆ ಮತ್ತು ಆ ಅಧ್ಯಾತ್ಮ ಸಂದೇಶವನ್ನು ವಿದುರನಿಗೆ ತಲುಪಿಸುವಂತೆ  ಹೇಳಿರುತ್ತಾನೆ. ಭಗವಂತನ ಆದೇಶದಂತೆ  ಮೈತ್ರೇಯ ಶ್ರೀಕೃಷ್ಣನ ಜ್ಞಾನಸಂದೇಶವನ್ನು ವಿದುರನಿಗೆ ಉಪದೇಶಿಸುತ್ತಾನೆ. [ಈ ಕುರಿತ ಅದ್ಭುತ ವಿವರಣೆ ಭಾಗವತದ ಮೂರು ಮತ್ತು ನಾಲ್ಕನೇ ಸ್ಕಂಧದಲ್ಲಿದೆ]
ಕುರುಕ್ಷೇತ್ರ ಯುದ್ಧ ಪ್ರಾರಂಭವಾದಂದಿನಿಂದ ವಿದುರ ತನ್ನ ಹೆಚ್ಚಿನ ಸಮಯವನ್ನು ತೀರ್ಥಯಾತ್ರೆಯಲ್ಲಿ ಕಳೆಯುತ್ತಿದ್ದ ಮತ್ತು ಆಗಾಗ ಹಸ್ತಿನಾಪುರಕ್ಕೂ ಬಂದು ಹೋಗುತ್ತಿದ್ದ. ಹೀಗೆ ತೀರ್ಥಯಾತ್ರೆಯಲ್ಲಿರುವಾಗ ಒಮ್ಮೆ  ಆತ ಉದ್ಧವನನ್ನು ಭೇಟಿಯಾಗುತ್ತಾನೆ. ಶ್ರೀಕೃಷ್ಣ ತನ್ನ ಅವತಾರ ಸಮಾಪ್ತಿ ಮಾಡುವ ವಿಚಾರವನ್ನು ಉದ್ಧವ ಮತ್ತು ಇನ್ನು ಕೆಲವು ಅಂತರಂಗ ಭಕ್ತರಿಗಷ್ಟೇ ಹೇಳಿರುತ್ತಾನೆ. ಇಂತಹ ದುಃಖದ ವಿಷಯವನ್ನು ಉದ್ಧವ ತಡೆಯಲಾಗದೇ, ಪರಮ ಆತ್ಮೀಯನಾದ ವಿದುರನಿಗೆ ತಿಳಿಸುತ್ತಾನೆ. ಈ ವಿಚಾರವನ್ನು ತಿಳಿದ ವಿದುರ ಹಸ್ತಿನಾಪುರಕ್ಕೆ ಬಂದಿದ್ದಾನೆ.