Wednesday, February 27, 2013

Shrimad BhAgavata in Kannada -Skandha-01-Ch-08(02)


ಅಥ ತೇ ಸಂಪರೇತಾನಾಂ ಸ್ವಾನಾಮುದಕಮಿಚ್ಛತಾಂ
ದಾತುಂ ಸಕೃಷ್ಣಾ ಗಂಗಾಯಾಂ ಪುರಸ್ಕೃತ್ಯ ಯಯುಃ ಸ್ತ್ರಿಯಃ

ಸಾಮಾನ್ಯವಾಗಿ ಸತ್ತ ಜೀವಗಳು ಹತ್ತನೇ ದಿನ ತಮ್ಮ ಬಂಧುಗಳು ಕೊಡುವ ದಶಾಂಜಲಿಗಾಗಿ ಕಾದು ಕುಳಿತಿರುತ್ತವಂತೆ. ಇದರ ಅರ್ಥ ಆ ಜೀವಗಳು ಹಸಿವೆ-ಬಾಯಾರಿಕೆಯಿಂದ ಕಾಯುತ್ತವೆ ಎಂದಲ್ಲ. ಸಾಮಾನ್ಯವಾಗಿ ನಿಜವಾದ ಬಂಧುಗಳು ಎಂದರೆ ನಾವು ಆಪತ್ತಿನಲ್ಲಿರುವಾಗ ಬಂದು ನೋಡುವವರು. ಸತ್ತ ಜೀವಗಳಿಗೂ ಸಹ ತಮ್ಮ ಆತ್ಮೀಯರನ್ನು ನೋಡುವ ಆಸೆ ಇರುತ್ತದೆ. ಅದಕ್ಕಾಗಿ ಹತ್ತನೇ ದಿನ ಯಾರ್ಯಾರು ಧರ್ಮೊದಕ ಕೊಡುತ್ತಾರೆ ಎಂದು ನೋಡಲು ಬಯಸಿ ಕುಳಿತಿರುತ್ತವಂತೆ ಜೀವಗಳು! ಹೀಗೆ “ತಮ್ಮವರು ಧರ್ಮೊದಕ ಕೊಡಬೇಕು” ಎಂದು ಬಯಸುವ ಬಂಧುಗಳಿಗೆ, ಧರ್ಮೊದಕ ಕೊಡುವುದಕ್ಕೋಸ್ಕರ, ಪಾಂಡವರೆಲ್ಲರೂ ದ್ರೌಪದಿ ಮತ್ತು ಇತರ ಸ್ತ್ರೀಯರೊಂದಿಗೆ ಗಂಗಾನದಿ ತೀರಕ್ಕೆ ಹೋಗುತ್ತಾರೆ.

ತೇ ನಿನೀಯೋದಕಂ ಸರ್ವೇ ವಿಲಪ್ಯ ಚ ಭೃಶಂ ಪುನಃ
ಆಪ್ಲುತಾ ಹರಿಪಾದಾಬ್ಜರಜಃಪೂತಸರಿಜ್ಜಲೇ

ಗಂಗಾ ನದಿಯಲ್ಲಿ ಎಲ್ಲರೂ ಸತ್ತವರ ಹೆಸರು ಹೇಳಿ ಧರ್ಮೋದಕ ಕೊಟ್ಟು, ಸತ್ತ ವ್ಯಕ್ತಿಯನ್ನು ನೆನಪಿಸಿಕೊಂಡು ಕಣ್ಣೀರು ಸುರಿಸುತ್ತಾರೆ. ನಂತರ ಭಗವಂತನ ಪಾದದ ದೂಳಿಯಿಂದ ಪವಿತ್ರವಾದ ನೀರಿನಲ್ಲಿ ಮಿಂದು, ಸೂತಕ ಮುಕ್ತರಾಗಿ, ಹೊರಟುಬಂದು ನಗರ ಪ್ರವೇಶಿಸುತ್ತಾರೆ. ಇಲ್ಲಿ ಭಗವಂತನ ಪಾದದ ದೂಳಿ ಎಂದಿದ್ದಾರೆ. ಭಗವಂತನ ಪಾದದ ಕಿರುಬೆರಳಿನ ಎಡೆಯಲ್ಲಿ ಸಿಕ್ಕಿಹಾಕಿಕೊಂಡಿರುವ ಸಣ್ಣ ಕಣ ಈ ಬ್ರಹ್ಮಾಂಡ. ನಮ್ಮ ದೃಷ್ಟಿಯಲ್ಲಿ ಅನಂತವಾದ ಈ ಬ್ರಹ್ಮಾಂಡ, ಭಗವಂತನ ಅನಂತತೆಯ ಮುಂದೆ ಒಂದು ಪುಟ್ಟ ದೂಳಿನ ಕಣವಿದ್ದಂತೆ. ಈ ರೀತಿ ದೂಳಿನ ಕಣದಂತಿರುವ ಲೋಕಗಳನ್ನು ಪಾವನಗೊಳಿಸುವವಳು ಗಂಗೆ.

ತತ್ರಾಸೀನಂ ಕುರುಪತಿಂ ಧೃತರಾಷ್ಟ್ರಂ ಸಹಾನುಜಮ್
ಗಾಂಧಾರೀಂ ಪುತ್ರಶೋಕಾರ್ತಾಂ ಪೃಥಾಂ ಕೃಷ್ಣಾಂ ಚ ಕೇಶವಃ

ಸಾಂತ್ವಯಾಮಾಸ ಮುನಿಭಿರ್ಹತಪುತ್ರಾಂಛುಚಾರ್ಪಿತಾನ್
ಭೂತೇಷು ಕಾಲಸ್ಯ ಗತಿಂ ದರ್ಶಯನ್ನ ಪ್ರತಿಕ್ರಿಯಾಮ್

ಉತ್ತರಕ್ರಿಯೆ ಕರ್ಮಾದಿಗಳು  ಮುಗಿದ ಮೇಲೂ ಕೂಡಾ ದೃತರಾಷ್ಟ್ರ, ಗಾಂಧಾರಿ, ಕುಂತಿ(ಪ್ರಥಾ), ದ್ರೌಪದಿ(ಕೃಷ್ಣಾ) ಎಲ್ಲರೂ ಪುತ್ರ-ಪೌತ್ರ ಶೋಕದಲ್ಲಿ ಮುಳುಗಿದ್ದಾರೆ. ಅವರನ್ನು ಕೃಷ್ಣ ಸಂತೈಸುತ್ತಿದ್ದಾನೆ. ಕೃಷ್ಣ ಸಂತೈಸಿದರೂ ಕೂಡಾ ಸಮಾಧಾನವಾಗುವ ಸ್ಥಿತಿಯಲ್ಲಿಲ್ಲದ ಅವರನ್ನು ಅಲ್ಲಿ ಸೇರಿರುವ ಋಷಿ-ಮುನಿಗಳು ಸಂತೈಸುತ್ತಿದ್ದಾರೆ. ಅವರು ಹೇಳುತ್ತಾರೆ: ನೀವ್ಯಾರೂ ಅಪರಾಧಿಗಳಲ್ಲ. ಇದೆಲ್ಲವೂ ವಿಧಿ ನಿಯತಿ. ಅದನ್ನು ನಾವು ಎದುರಿಸಲೇ ಬೇಕು” ಎಂದು. ಕಾಲಕ್ಕೆ ಕರುಣೆ ಇಲ್ಲ. ಎಲ್ಲರೂ ಕಾಲವಶವಾಗಿರುವುದು ಅನಿವಾರ್ಯ. ಅದಕ್ಕಾಗಿ ದುಃಖಿಸಿ ಫಲವಿಲ್ಲ ಎನ್ನುತ್ತಾರೆ ಋಷಿಗಳು. ಇಲ್ಲಿ ಕಾಲ ಎಂದರೆ ಆ ಭಗವಂತ. ಇದನ್ನು ಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಕಾಲೋSಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃಲೋಕಗಳನ್ನು ಕಬಳಿಸಲು ಬೆಳೆದು ನಿಂತಿರುವ ಕಾಲ ಪುರುಷ ನಾನೇ ಎಂದಿದ್ದಾನೆ ಕೃಷ್ಣ. ಕಾಲಪುರುಷ ಕಬಳಿಸಲು ಹೊರಟಾಗ ಅವನನ್ನು ತಡೆಯುವವರು ಯಾರೂ ಇಲ್ಲ. ಎಲ್ಲವೂ ಅವನ ಅಧೀನ. ಕಾಲದ ನಿರ್ಧಾರ ಅಚಲ. ಅದು ಮಾಡಬೇಕಾದ ಕಾಲದಲ್ಲಿ ಮಾಡಬೇಕಾದದ್ದನ್ನು ಮಾಡಿಯೇ  ತೀರುತ್ತದೆ. ಅದು ಯಾರ ಕಣ್ಣೀರಿಗೂ ಕರಗುವುದಿಲ್ಲ. ಆದ್ದರಿಂದ ಈ ಸತ್ಯವನ್ನು ತಿಳಿದು, ಹಿಂದೆ ನಡೆದದ್ದನ್ನು ಮರೆತು, ಮುಂದೆ ಚನ್ನಾಗಿ ಬದುಕುವ ಯೋಚನೆ ಮಾಡಿ ಎಂದು ಋಷಿಗಳು ಸಮಾಧಾನ ಮಾಡುತ್ತಾರೆ.

Monday, February 25, 2013

Shrimad BhAgavata in Kannada -Skandha-01-Ch-08(01)


ಅಷ್ಠಮೋಧ್ಯಾಯಃ

ಸೂತ ಉವಾಚ
ಪುತ್ರಶೋಕಾತುರಾಃ ಸರ್ವೇ ಪಾಂಡವಾಃ ಸಹ ಕೃಷ್ಣಯಾ
ಸ್ವಾನಾಂ ಮೃತಾನಾಂ ಯತ್ ಕೃತ್ಯಂ ಚಕ್ರುರ್ನಿರ್ಹರಣಾದಿಕಮ್ 

ಅಶ್ವತ್ಥಾಮ ನಿಗ್ರಹದ ನಂತರ ತಮ್ಮ ಮಕ್ಕಳು, ಬಂಧು-ಬಳಗವನ್ನು ಕಳೆದುಕೊಂಡ ಪಾಂಡವರು, ದ್ರೌಪದಿ ಸಮೇತರಾಗಿ ಬಂದು, ಎಲ್ಲರ ಉತ್ತರಕ್ರಿಯೆ, ಶ್ರಾದ್ಧ ಕರ್ಮಾದಿಗಳಲ್ಲಿ ತೊಡಗುತ್ತಾರೆ. ಈ ರೀತಿ ಜಲಾಂಜಲಿ ಕೊಡುವಾಗ ನಡೆದ ಒಂದು ಘಟನೆಯನ್ನು ಭಾಗವತದಲ್ಲಿ ವರ್ಣಿಸಿಲ್ಲವಾದರೂ, ನಾವಿಲ್ಲಿ, ಮಹಾಭಾರತದಲ್ಲಿ ಬಂದಿರುವ ಆ ವಿವರಣೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ಜಲಾಂಜಲಿ ಕೊಡುವ ಹತ್ತನೇ ದಿನವನ್ನು ದಶಾಂಜಲಿ ಎನ್ನುತ್ತಾರೆ.  ಆ ದಿನ ಜಲಾಂಜಲಿ ಕೊಡಲು ಹೋಗಿದ್ದಾಗ, ಅಲ್ಲಿಯ ತನಕ ಸುಮ್ಮನಿದ್ದ ಕುಂತಿ ಹೇಳುತ್ತಾಳೆ: “ಅಪ್ಪಾ, ಕರ್ಣನಿಗೂ ಕೂಡಾ ಜಲಾಂಜಲಿ ಕೊಟ್ಟುಬಿಡಿ” ಎಂದು! ಈ ಮಾತನ್ನು ಕೇಳಿ ಧರ್ಮರಾಯನಿಗೆ ಆಶ್ಚರ್ಯವಾಗುತ್ತದೆ. ಆತ ಕೇಳುತ್ತಾನೆ: “ನಮ್ಮ ಪರಮ ಶತ್ರು ಆತ. ದುರ್ಯೋಧನನಿಗಿಂತ ಹೆಚ್ಚಾಗಿ ಹಠತೊಟ್ಟು ಯುದ್ಧ ಮಾಡಿಸಿದವನಾತ. ದ್ರೌಪದಿಯನ್ನು ಸಭೆಗೆಳೆದು ತರಲು ಮೂಲ ಕಾರಣ ಕರ್ಣ. ಅಂತವನಿಗೆ ನಾವೇಕೆ ಜಲಾಂಜಲಿ ಕೊಡಬೇಕು” ಎಂದು. ಪಾಪ, ಕುಂತಿ ಅದೆಷ್ಟು ದಿನ ಗುಟ್ಟು ಮಾಡಿಯಾಳು ಹೇಳಿ? ಹೆತ್ತ ಕರುಳಲ್ಲವೇ ಅದು? ಆಕೆ ಹೇಳುತ್ತಾಳೆ: “ಕರ್ಣ ನಿಮ್ಮ ಶತ್ರು ಅಲ್ಲ! ಆತ ನನ್ನ ಮಗ. ನಿನ್ನ ಅಣ್ಣ” ಎಂದು. ಯಾವುದನ್ನು ಸಮಾಜದ ಅಪವಾದಕ್ಕೆ ಹೆದರಿ ಮುಚ್ಚಿಟ್ಟಿದ್ದಳೋ, ಅದನ್ನು ಇಲ್ಲಿ ‘ಕರ್ಣನಿಗೆ ಜಲಾಂಜಲಿ ಸಿಗಲಿ’ ಎನ್ನುವ ಉದ್ದೇಶದಿಂದ ಹೊರಗೆಡಹುತ್ತಾಳೆ ಕುಂತಿ. ಈ ಮಾತನ್ನು ಕೇಳಿದ ಧರ್ಮರಾಯನಿಗೆ ತಡೆಯಲಾಗುವುದಿಲ್ಲ. ಆತ ಹೇಳುತ್ತಾನೆ: “ಎಂತಹ ಕ್ರೂರ ಹೃದಯ ನಿನ್ನದು? ನಿನ್ನ ಮಕ್ಕಳ ಕೈಯಿಂದಲೇ ನಿನ್ನ ಮಗನನ್ನು ಕೊಲ್ಲಿಸಿದೆಯ? ಈ ಮಾತನ್ನು ನೀನು ಮೊದಲೇ ಏಕೆ ಹೇಳಲಿಲ್ಲ? ನಮ್ಮ ಹಿರಿಯಣ್ಣ ಆತ ಎಂದು ತಿಳಿದಿದ್ದರೆ ನಾವು ಯುದ್ಧ ಮಾಡುತ್ತಿದ್ದೆವೇ? ನೀನಿಷ್ಟು ಕ್ರೂರಳಾಗಬಾರದಿತ್ತು ತಾಯಿ” ಎಂದು. ಧರ್ಮರಾಯನ ಮಾತಿಗೆ ಉತ್ತರವಾಗಿ ಕುಂತಿ ಹೇಳುತ್ತಾಳೆ: “ನನ್ನ ನಿರ್ಧಾರಕ್ಕೆ ಅನೇಕ ಕಾರಣಗಳಿವೆ. ಈ ವಿಚಾರವನ್ನು ಹೇಳಬೇಕು ಎಂದು ಎಣಿಸಿದೆ. ಆದರೆ ಕರ್ಣ ಅದಾಗಲೇ ಅನ್ಯಾಯದ ಮಾರ್ಗ ಹಿಡಿದಿದ್ದ. ಅವನು ಮಾಡಿದ ಅನ್ಯಾಯಕ್ಕೆ ಶಿಕ್ಷೆ ಸಿಗಲೇಬೇಕು. ಅದಕ್ಕಾಗಿ ಈವರೆಗೆ ಈ ವಿಚಾರವನ್ನು ಗುಟ್ಟಾಗಿಸಿದೆ” ಎಂದು.
ಕುಂತಿಯ ಮಾತನ್ನು ಕೇಳಿ ಧರ್ಮರಾಯನಿಗೆ ದುಃಖ ತಡೆಯಲಾಗುವುದಿಲ್ಲ. ಕುಂತಿಯಷ್ಟು ಗಟ್ಟಿ ಹೃದಯ ಆತನದಲ್ಲ. ಈ ಸಂದರ್ಭದಲ್ಲೇ ಆತ ಸಮಸ್ತ ಸ್ತ್ರೀ ಸಮುದಾಯಕ್ಕೊಂದು ಶಾಪ ಕೊಡುತ್ತಾನೆ. ಆತ ಹೇಳುತ್ತಾನೆ: “ಇಷ್ಟು ಕಾಲ ಈ ವಿಷಯವನ್ನು ನೀನು ಯಾರಿಗೂ ಹೇಳಲಿಲ್ಲ. ಇದರಿಂದಾಗಿ ನಾವು ನಮ್ಮ ಅಣ್ಣನ ವಿರುದ್ಧ ಹೋರಾಡಿ ಅವನನ್ನು ಕೊಲ್ಲುವಂತಾಯಿತು. ಇದಕ್ಕೆಲ್ಲಾ ಕಾರಣ ‘ನಿನ್ನ ಗುಟ್ಟು’. ಹಾಗಾಗಿ ಇನ್ನು ಮುಂದೆ ಹೆಂಗಸರ ಬಾಯಿಯಲ್ಲಿ ಯಾವ ಗುಟ್ಟೂ ಉಳಿಯದಿರಲಿ” ಎಂದು ನೋವಿನಿಂದ ಶಾಪ ಕೊಡುತ್ತಾನೆ.
ಮೇಲೆ ವಿವರಿಸಿದ ಘಟನೆ ಅಲ್ಲದೇ, ಯುದ್ಧ ಕಳೆದ ಮೇಲೆ, ಕೃಷ್ಣ ಮತ್ತು ವ್ಯಾಸರು ಮಾಡಿದ ಒಂದು ದೊಡ್ಡ ಕಾರ್ಯವಿದೆ. ಅದೇನೆಂದರೆ: ಗಾಂಧಾರಿಯನ್ನು  ವೇದವ್ಯಾಸರು ಮತ್ತು ದ್ರೌಪದಿಯನ್ನು ಕೃಷ್ಣ  ರಣರಂಗಕ್ಕೆ ಕರೆದುಕೊಂಡು ಹೋಗಿರುವುದು. ಮಹಾಭಾರತ ಗಾಂಧಾರಿಯ ರಣರಂಗ ಭೇಟಿಯನ್ನು ವಿಸ್ತಾರವಾಗಿ ವಿವರಿಸಿದರೆ, ಭಾಗವತ ದ್ರೌಪದಿಯ ಯುದ್ಧರಂಗದ ನೋಟದ ಅಭಿವ್ಯಕ್ತಿಯನ್ನು ಚಿತ್ರಿಸುತ್ತದೆ. ಇಲ್ಲಿ ನಾವು ಮಹಾಭಾರತದಲ್ಲಿ ಬಂದಿರುವ  ಗಾಂಧಾರಿಯ ಕಥೆಯನ್ನು ಸಂಕ್ಷಿಪ್ತವಾಗಿ ನೋಡಿ ಮುಂದುವರಿಯೋಣ.
ವೇದವ್ಯಾಸರು ಗಾಂಧಾರಿಯನ್ನು ಯುದ್ಧರಂಗಕ್ಕೆ ಕರೆದುಕೊಂಡು ಹೋಗಿ, ಅವಳಿಗೆ ದೃಷ್ಟಿ ಕೊಟ್ಟು ಹೇಳುತ್ತಾರೆ: “ನೋಡು ನಿನ್ನ ಮಕ್ಕಳನ್ನು” ಎಂದು. ಎಂತಹ ವಿಚಿತ್ರ! ಮದುವೆಗೆ ಮೊದಲು ಕಣ್ಣಿಗೆ ಕಣ್ಪಟ್ಟಿ ಕಟ್ಟಿಕೊಂಡಿದ್ದ ಗಾಂಧಾರಿ, ತನ್ನನ್ನು ಕೈಹಿಡಿದ ಗಂಡನನ್ನಾಗಲೀ, ತಾನು ಹೆತ್ತ ಮಕ್ಕಳನ್ನಾಗಲೀ, ತಾನು ಮದುವೆಯಾಗಿ ಬಂದ ಊರನ್ನಾಗಲೀ ನೋಡಿಲ್ಲ. ಆದರೆ ಆಕೆ ಇಂದು ನೋಡುತ್ತಿರುವುದು ತನ್ನ ಮಕ್ಕಳ ಹೆಣವನ್ನು! ಗಾಂಧಾರಿ ಒಬ್ಬ ಮಹಾಮಹಿಳೆ. ಆಕೆಯ ಮನೋಧೈರ್ಯ, ಸಹನಾಶಕ್ತಿ, ಪ್ರತಿಯೊಂದನ್ನೂ ವಸ್ತುನಿಷ್ಠವಾಗಿ ನೋಡಿ ತಟಸ್ಥವಾಗಿ ಯೋಚಿಸುವ ನಿಲುವು ಅದ್ಭುತ. ಆಕೆ ಅಲ್ಲಿ ಬಿದ್ದಿರುವ ತನ್ನ ಮಕ್ಕಳ, ಬಂಧು-ಬಾಂಧವರ ಹೆಣವನ್ನು ನೋಡುತ್ತಾಳೆ. ಅಲ್ಲಿ ಒಂದು ದೇಹದ ಕೈ ದೇಹದಿಂದ ಬೇರೆಯಾಗಿರುತ್ತದೆ ಮತ್ತು ಅದನ್ನು ನರಿಯೊಂದು ತಿನ್ನುತ್ತಿರುತ್ತದೆ. ಈ ಭೀಕರ ದೃಶ್ಯವನ್ನು ನೋಡಿ ಆಕೆ ಹೇಳುತ್ತಾಳೆ: “ಬದುಕಿದ್ದಾಗ ಸಾವಿರಾರು ಗೋವುಗಳನ್ನು ದಾನಮಾಡಿದ ಕೈ, ಎದುರಾಳಿ ಶತ್ರುಗಳ ಸೊಕ್ಕು ಮುರಿದ ಕೈ ಇಂದು ನರಿ-ನಾಯಿ ಪಾಲಾಗಿದೆ” ಎಂದು.  ಆಕೆ ಇನ್ನೊಂದು ವಿಚಿತ್ರ ಮಾತನ್ನಾಡುತ್ತಾಳೆ. ಆಕೆ ಹೇಳುತ್ತಾಳೆ: ಬದುಕಿದ್ದಾಗ ಸ್ತ್ರೀಭೋಗವೇ ಸರ್ವಸ್ವ ಎಂದು ಅದರಲ್ಲೇ  ಮೈಮರೆತ ಕೈಯನ್ನು ಇಂದು ನರಿಗಳು ಕಿತ್ತುತಿನ್ನುತ್ತಿವೆ” ಎಂದು. ಹೀಗೆ ಮಹಾಭಾರತದ ಸ್ತ್ರೀವಿಲಾಪ ಪರ್ವದಲ್ಲಿ ಗಾಂಧಾರಿಯ ನೋಟದಲ್ಲಿ ರಣರಂಗದ ಅಭಿವ್ಯಕ್ತಿ ಚಿತ್ರಿತವಾಗಿದೆ. ಬನ್ನಿ, ಈ ಹಿನ್ನೆಲೆಯೊಂದಿಗೆ ಭಾಗವದದಲ್ಲಿ ‘ಕೃಷ್ಣ ದ್ರೌಪದಿಗೆ ರಣರಂಗವನ್ನು ತೋರಿಸಿದ ಚಿತ್ರಣವನ್ನು’ ನೋಡೋಣ.

ಅಥೋ ನಿಶಾಮಯಾಮಾಸ ಕೃಷ್ಣಾಯೈ ಭಗವಾನ್ ಪುರಾ
ಪತಿತಾಯಾಃ ಪಾದಮೂಲೇ ರುದಂತ್ಯಾ ಯತ್ ಪ್ರತಿಶ್ರುತಮ್

ಪಶ್ಯ ರಾಜ್ಞ್ಯರಿದಾರಾಂಸ್ತೇ ರುದತೋ ಮುಕ್ತಮೂರ್ಧಜಾನ್
ಆಲಿಂಗ್ಯ ಸ್ವಪತೀನ್ ಭೀಮಗದಾಭಗ್ನೋರುವಕ್ಷಸಃ 

ದ್ರೌಪದಿಯನ್ನು ಕೃಷ್ಣ ಯುದ್ಧರಂಗಕ್ಕೆ ಕರೆದುಕೊಂಡು ಹೋಗುತ್ತಾನೆ. ಮೇಲ್ನೋಟಕ್ಕೆ ಇದು ನಮಗೆ ಆಶ್ಚರ್ಯವನ್ನುಂಟುಮಾಡುವ ವಿಷಯ. ಹೆಣದ ರಾಶಿಗಳನ್ನು ನೋಡಲು ಹೆಣ್ಣೊಬ್ಬಳನ್ನು ಕೃಷ್ಣ ಏಕೆ ಯುದ್ಧರಂಗಕ್ಕೆ ಕರೆದುಕೊಂಡು ಹೋದ ಎನ್ನುವುದು ಇಲ್ಲಿ ನಮ್ಮ ಪ್ರಶ್ನೆಯಾದರೆ, ಅದಕ್ಕೊಂದು ಹಿನ್ನೆಲೆ ಇದೆ. ಈ ಹಿಂದೆ ಹೇಳಿದಂತೆ: ಕೃಷ್ಣ ಸಂಧಾನಕ್ಕೆಂದು ಹೊರಟಾಗ ದ್ರೌಪದಿ, ತನ್ನ ಬಿಚ್ಚಿದ ತಲೆಮುಡಿಯನ್ನು ಹಿಡಿದುಕೊಂಡು ಬಂದು  ಹೇಳುತ್ತಾಳೆ: ರಾಜಸೂಯದ ಪವಿತ್ರ ತೀರ್ಥದಿಂದ ಅಭಿಷೇಕವಾಗಿದ್ದ ಈ ಕೂದಲನ್ನು ನೀಚ ದುಶ್ಯಾಸನ ಮುಟ್ಟಿ ಅಪವಿತ್ರಗೊಳಿಸಿದ. ಇದರಿಂದ ನನಗಾದ ನೋವು ಎಷ್ಟೆಂಬುದು ನಿನಗೆ ತಿಳಿದಿದೆ” ಎಂದು ಹೇಳಿ ಬಗ್ಗಿ ನಮಸ್ಕರಿಸುತ್ತಾಳೆ ದ್ರೌಪದಿ. ಹೀಗೆ ನಮಸ್ಕರಿಸುವಾಗ ಆಕೆಯ ಕಣ್ಣೀರು ಕೃಷ್ಣನ ಪಾದದ ಮೇಲೆ ಬೀಳುತ್ತದೆ. ಆಗ ಕೃಷ್ಣ ಹೇಳುತ್ತಾನೆ: ಕಣ್ಣೀರು ಒರೆಸಿಕೋ. ಯಾರ ಮೇಲೆ ಕೋಪದಿಂದ ಕಣ್ಣೀರು ಸುರಿಸುತ್ತಿರುವೆಯೋ, ಅವರು ದುರಂತದ ಫಲವನ್ನನುಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು. ಈ ಮಾತಿಗನುಗುಣವಾಗಿ  ಇಲ್ಲಿ ಕೃಷ್ಣ ದ್ರೌಪದಿಯನ್ನು ರಣರಂಗಕ್ಕೆ ಕರೆದು ತಂದು ಹೇಳುತ್ತಾನೆ: “ನೋಡು ನಿನ್ನ ಕಣ್ಣೀರಿನ ಫಲ. ಇದು ಭೀಮನ ಗದೆಯ ಅಥವಾ ಅರ್ಜುನನ ಗಾಂಢೀವದ ಆಘಾತದ ಫಲವಲ್ಲ. ಇದು ನಿನ್ನ ಕಣ್ಣೀರಿನ ಫಲ” ಎಂದು.  ಒಬ್ಬ ಪತಿವೃತೆ ಹೆಣ್ಣಿನ ಕಣ್ಣೀರಿಗಿರುವ ಶಕ್ತಿ ಪ್ರಪಂಚದ ಯಾವ ಆಯುಧಕ್ಕೂ ಇಲ್ಲ. ದ್ರೌಪದಿಯ ಕಣ್ಣೀರಿನ ಫಲವನ್ನು ಇಲ್ಲಿ ಕೃಷ್ಣ ಆಕೆಗೆ ತೋರಿಸುತ್ತಿದ್ದಾನೆ.
ಕೃಷ್ಣ ಹೇಳುತ್ತಾನೆ: “ನೀನು ಯಾರ ಮೇಲೆ ಕೋಪಿಸಿಕೊಂಡು ಕಣ್ಣೀರು ಸುರಿಸಿದೆಯೋ, ನೋಡು ಅವರ ಸ್ಥಿತಿಯನ್ನು. ಸತ್ತು ಬಿದ್ದಿರುವ ತಮ್ಮ ಗಂಡಂದಿರ ದೇಹದಮೇಲೆ ಬಿದ್ದು ಹೊರಳಾಡುತ್ತಿರುವ ಅವರ ಹೆಂಡಂದಿರರನ್ನು ನೋಡು. ಇದು ನಿನ್ನ ಕಣ್ಣೀರಿನ ಮತ್ತು ನಿನ್ನ ಕಣ್ಣೀರಿನಿಂದ ಜಾಗೃತವಾದ ಭೀಮನ ಗದೆಯ ಪ್ರಹಾರದ ಫಲ. ಭೀಮನ ಗದೆಯಿಂದ ಮುರಿದ ತೊಡೆ, ಒಡೆದ ಎದೆಯನ್ನು ನೋಡು” ಎಂದು ಕೃಷ್ಣ ದ್ರೌಪದಿಗೆ ರಣರಂಗದ ಆ ಭೀಕರ ದೃಶ್ಯವನ್ನು ತೋರಿಸಿದ.  

Sunday, February 24, 2013

Shrimad BhAgavata in Kannada -Skandha-01-Ch-07(05)


ಸೂತ ಉವಾಚ-
ಪ್ರಜೋಪದ್ರವಮಾಲಕ್ಷ್ಯ ಲೋಕವ್ಯತಿಕರಂ ಚ ತಮ್
ಮತಂ ಚ ವಾಸುದೇವಸ್ಯ ಸಂಜಹಾರಾರ್ಜುನೋ ದ್ವಯಮ್೩೨

ಅರ್ಜುನ ಆತ್ಮರಕ್ಷಣೆಗಾಗಿ ಮೊದಲು ಬ್ರಹ್ಮಾಸ್ತ್ರಕ್ಕೆ ಪ್ರತಿಯಾಗಿ ತಾನೂ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾನೆ. ಆದರೆ ಈ ರೀತಿ ಮಾಡಿರುವುದರಿಂದ ಸಮಸ್ಯೆ ಇಮ್ಮಡಿಯಾಗುತ್ತದೆ. ಒಂದು ಅಸ್ತ್ರದ ಬದಲು ಎರಡು ಬ್ರಹ್ಮಾಸ್ತ್ರಗಳು ಲೋಕನಾಶಕವಾಗಿ ನಿಲ್ಲುತ್ತವೆ! ಹಾಗಾಗಿ ಕೃಷ್ಣ ಅರ್ಜುನನಲ್ಲಿ ಹೇಳುತ್ತಾನೆ: “ಈ ಅಸ್ತ್ರ ಲೋಕನಾಶ ಮಾಡುವ ಮೊದಲು ಅದನ್ನು ಉಪಸಂಹಾರ ಮಾಡು” ಎಂದು.
ಲೋಕನಾಶಕ ಮತ್ತು ಜನಾಂಗ ನಾಶಕವಾದ ಅಸ್ತ್ರವನ್ನು ಉಪಸಂಹಾರ ಮಾಡಬೇಕೆನ್ನುವುದು ವಾಸುದೇವನ ಇಚ್ಛೆಯಾಗಿರುವುದರಿಂದ, ಅದರಂತೆ ಅರ್ಜುನ, ದ್ರೋಣಪುತ್ರ ಪ್ರಯೋಗಿಸಿದ ಮತ್ತು ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡುತ್ತಾನೆ.
ಇಲ್ಲಿ ಹೇಳಿದ ಈ ಮಾತು ನಮಗೆ ಗೊಂದಲವನ್ನು ತರುತ್ತದೆ. ಭಾಗವತದಲ್ಲೇ ಮುಂದೆ ಹೇಳುವಂತೆ ಹಾಗೂ ಮಹಾಭಾರತದಲ್ಲಿ ಹೇಳುವಂತೆ: ‘ಅಶ್ವತ್ಥಾಮ ತಾನು ಪ್ರಯೋಗಿಸಿದ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಲು ಅರ್ಜುನನಿಗೆ ಅನುಮತಿ ನೀಡಲಿಲ್ಲ. ಆತ ಅದನ್ನು ಪಾಂಡವರ ಸಂತಾನ ಬೆಳೆಯುತ್ತಿದ್ದ ಉತ್ತರೆಯ ಗರ್ಭದತ್ತ ಗುರಿಮಾಡಿದ. ಇಂತಹ ಸಂದರ್ಭದಲ್ಲಿ ಉತ್ತರೆಯ ಗರ್ಭದಲ್ಲಿ ಬೆಳೆಯುತ್ತಿದ್ದ ಪರೀಕ್ಷಿತನನ್ನು ಚಕ್ರಧಾರಿ ಭಗವಂತ ರಕ್ಷಿದ ಮತ್ತು ಬ್ರಹ್ಮಾಸ್ತ್ರದಿಂದಾಗಿ ಸತ್ತು ಹುಟ್ಟಿದ ಮಗುವಿಗೆ ಕೃಷ್ಣ ಜೀವದಾನ ಮಾಡಿದ’. ಈ ಹಿನ್ನೆಲೆಯಲ್ಲಿ ನೋಡಿದರೆ: ಭಾಗವತದಲ್ಲಿ ಬಂದಿರುವ ಕಥೆ ಮಹಾಭಾರತದಲ್ಲಿನ ಕಥೆಗಿಂತ ಬಹಳ ಭಿನ್ನವಾಗಿದೆ. ಈ ಎರಡೂ ಗ್ರಂಥಗಳನ್ನು ನಿರ್ಮಿಸಿದವರು ವೇದವ್ಯಾಸರೇ ಆಗಿರುವಾಗ ಏಕೆ ಈ ರೀತಿ ಬೇರೆಬೇರೆ ರೀತಿ ವಿವರಣೆ ನೀಡಿದರು ಎನ್ನುವುದು ಇಲ್ಲಿ ನಮ್ಮನ್ನು ಕಾಡುವ ಪ್ರಶ್ನೆ. ಈ ಪ್ರಶ್ನೆಗೆ ಆಚಾರ್ಯರು ತಾತ್ಪರ್ಯ ನಿರ್ಣಯದಲ್ಲಿ ನೀಡಿರುವ ವಿವರಣೆ ಅದ್ಭುತವಾಗಿದೆ.  ಅಲ್ಲಿ ಅವರು ಹೇಳುತ್ತಾರೆ: ಸ್ವಪ್ನೋSಯಂ ಎಂದು. ಮಹಾಭಾರತದಲ್ಲಿ ಬಂದಿರುವ ಕಥೆ  ನಿಜವಾಗಿ ನಡೆದ ಘಟನೆಯಾದರೆ, ಭಾಗವತದಲ್ಲಿ ಬಂದಿರುವ ಈ ಕಥೆ ಅಶ್ವತ್ಥಾಮ ಕಂಡ ಕನಸು. ಶಿಶುಹತ್ಯೆ ಮಾಡಿದ ನಂತರ ಭಯಗ್ರಸ್ಥನಾಗಿ ವೇದವ್ಯಾಸರ ಆಶ್ರಮದ ಸಮೀಪವಿರುವ ಕಾಡಿನಲ್ಲಿ ಅಡಗಿ ಕುಳಿತಿದ್ದಾಗ, ಅಶ್ವತ್ಥಾಮ ಕಂಡ ಕನಸಿದು. ಇದಕ್ಕೆ ಪ್ರಮಾಣ ಸ್ಕಾಂದಪುರಾಣದಲ್ಲಿದೆ. ಅಲ್ಲಿ ಹೇಳುವಂತೆ:

ಪಾರ್ಥಾನುಯಾತ ಮಾತ್ಮಾನಂ ದ್ರೌಣಿಃ ಸ್ವಪ್ನೇ ದದರ್ಶ ಹ 
ಬಂಧನಂ ಚಾತ್ಮನಸ್ತತ್ರ ದ್ರೌಪದ್ಯಾ ಚೈವ ಮೊಕ್ಷಣಂ
ಇತಿ ಸ್ಕಂದೇ  ತಸ್ಮಾನ್ನೈಷೀಕ ವಿರೋಧಃ

ಅಶ್ವತ್ಥಾಮರ ಬದುಕುವ ಆಸೆ ಅದೆಷ್ಟು ಅದಮ್ಯವಾಗಿತ್ತೆಂದರೆ:  ಕನಸಿನಲ್ಲೂ ಕೂಡಾ “ತಾನು ಕ್ಷೆಮೆಗೆ ಪಾತ್ರನಾಗಿ- ಬದುಕುಳಿದೆ” ಎನ್ನುವುದನ್ನೇ  ಅವರು ಕಾಣುತ್ತಿರುತ್ತಾರೆ. ಈ ಅಧ್ಯಾಯದಲ್ಲಿ ಮುಂದೆ ಅಶ್ವತ್ಥಾಮರ ಕನಸಿನ ಕಥೆ ಮುಂದುವರಿಯುತ್ತದೆ.
 
ತತ ಆಸಾದ್ಯ ತರಸಾ ದಾರುಣಂ ಗೌತಮೀಸುತಮ್
ಬಬಂಧಾಮರ್ಷತಾಮ್ರಾಕ್ಷಃ ಪಶುಂ ರಶನಯಾ ಯಥಾ೩೩

ಅರ್ಜುನ ಬ್ರಹ್ಮಾಸ್ತ್ರವನ್ನು ಉಪಸಂಹಾರ ಮಾಡಿದಾಗ ಅಶ್ವತ್ಥಾಮ ಅಸಾಹಯಕನಾಗಿ ನಿಲ್ಲುತ್ತಾನೆ. ತಕ್ಷಣ ಅರ್ಜುನ ಆತನನ್ನು ಬಂಧಿಸಿ, ಒಂದು ಪಶುವನ್ನು ಎಳೆದು ತರುವಂತೆ ಎಳೆದು ತರುತ್ತಾನೆ. ಸಿಟ್ಟಿನಿಂದ ಅರ್ಜುನನ ಕಣ್ಣು ಕೆಂಪೇರಿರುತ್ತದೆ. ಆತ ಕೃಷ್ಣನ ಬಳಿ ಬಂದು “ಶಿಬಿರಕ್ಕೆ ಹೋಗೋಣ” ಎನ್ನುತ್ತಾನೆ.

ಮೈನಂ ಪಾರ್ಥಾರ್ಹಸಿ ತ್ರಾತುಂ ಬ್ರಹ್ಮಬಂಧುಮಿಮಂ ಜಹಿ
ಯೋSಸಾವನಾಗಸಃ ಸುಪ್ತಾನವಧೀನ್ನಿಶಿ ಬಾಲಕಾನ್೩೫

ಅರ್ಜುನನ ಮಾತನ್ನು ಕೇಳಿದ ಕೃಷ್ಣ ಹೇಳುತ್ತಾನೆ: ಏತಕ್ಕಾಗಿ ಆತನನ್ನು ಶಿಬಿರಕ್ಕೆ ಕರೆದುಕೊಂಡು ಹೋಗಬೇಕು? ಅವನನ್ನು ಇಲ್ಲೇ ಮುಗಿಸಿಬಿಡು” ಎಂದು. ಇದು ಕೃಷ್ಣ ಅರ್ಜುನನ್ನು ಪರೀಕ್ಷಿಸುವ ನಡೆ. ಆತ ಹೇಳುತ್ತಾನೆ: ಇವನ ಮೇಲೆ ಕರುಣೆ ತೋರಬೇಡ. ನಿರಾಪರಾದಿಗಳಾದ ಮಕ್ಕಳ ತಲೆ ಕಡಿದ ಆತನನ್ನು ಇಲ್ಲೇ ಮುಗಿಸಿಬಿಡು ಎನ್ನುತ್ತಾನೆ ಕೃಷ್ಣ.

ಸ್ವಪ್ರಾಣಾನ್ ಯಃ ಪರಪ್ರಾಣೈಃ ಪ್ರಪುಷ್ಣಾತ್ಯಘೃಣಃ ಖಲಃ
ತದ್ವಧಸ್ತಸ್ಯ ಹಿ ಶ್ರೇಯೋ ಯದ್ದೋಷಾದ್ ಯಾತ್ಯಧಃ ಪುಮಾನ್೩೭

ಮುಂದುವರಿದು ಕೃಷ್ಣ ಹೇಳುತ್ತಾನೆ: ಯಾರು ಇನ್ನೊಬ್ಬರನ್ನು ಕೊಂದು ತಾನು ಬದುಕಲು ಬಯಸುತ್ತಾರೋ- ಅಂತವರು ದುರ್ಬಲರು. ಅಂತವರನ್ನು ಕೊಲ್ಲುವುದರಿಂದ ಅವರಿಗೇ ಕ್ಷೇಮ. ಅದು ಅವರು ಮುಂದೆ ಮಾಡಬಹುದಾದ ಪಾಪಗಳಿಂದ ಅವರನ್ನು ಪಾರುಮಾಡುತ್ತದೆ. ಆದ್ದರಿಂದ ಬದುಕ್ಕಿದ್ದರೆ ಮತ್ತಷ್ಟು ಹತ್ಯೆಗೆ ಕಾರಣವಾಗಬಲ್ಲ ಈತನ  ತಲೆಯನ್ನು ಕಡಿದುಬಿಡು ಎನ್ನುತ್ತಾನೆ ಕೃಷ್ಣ. 

ಪ್ರತಿಶ್ರುತಂ ಚ ಭವತಾ ಪಾಂಚಾಲ್ಯೈ ಶೃಣ್ವತೋ ಮಮ
ಆಹರಿಷ್ಯೇ ಶಿರಸ್ತಸ್ಯ ಯಸ್ತೇ ಮಾನಿನಿ ಪುತ್ರಹಾ೩೮

 “ನೀನು ನಿನ್ನ ಪ್ರತಿಜ್ಞೆಯನ್ನು ಈಡೇರಿಸುವುದು ಬೇಡವೇ? ಈ ಪಾತಕಿಯ ತಲೆಯನ್ನು ಉಡುಗೊರೆಯಾಗಿ ದ್ರೌಪದಿಯ ಪಾದಕ್ಕೆ ಅರ್ಪಿಸುತ್ತೇನೆ ಎಂದು ನೀನು ಈಗಾಗಲೇ ಪ್ರತಿಜ್ಞೆ ಮಾಡಿರುವಿ. ಆದ್ದರಿಂದ ತಡಮಾಡದೇ ಕತ್ತರಿಸು ಅವನ ಶಿರವನ್ನು” ಎನ್ನುತ್ತಾನೆ ಕೃಷ್ಣ.
ಕೃಷ್ಣನ ಮಾತನ್ನು ಕೇಳಿದ ಅರ್ಜುನ ಗುರುಪುತ್ರ ಎನ್ನುವ ಗೌರವದಿಂದ ಹೇಳುತ್ತಾನೆ: “ದ್ರೌಪದಿಯ ಬಳಿ ಹೋಗಿ ಆನಂತರ ಈ ನಿರ್ಧಾರ ತೆಗೆದುಕೊಳ್ಳೋಣ. ಆಕೆ ಇಚ್ಛೆಪಟ್ಟರೆ ಆಕೆಯ ಪಾದದ ಬುಡದಲ್ಲೇ ಈತನ ಶಿರಛೇಧ ಮಾಡೋಣ” ಎಂದು.

ಉವಾಚಾಸಹಂತ್ಯಸ್ಯ ಬಂಧನಾನಯನಂ ಸತೀ
ಮುಚ್ಯತಾಂಮುಚ್ಯತಾಮೇಷ ಬ್ರಾಹ್ಮಣೋ ನಿತರಾಂ ಗುರುಃ೪೩

ದ್ರೌಪದಿ ಬಂಧಿಯಾಗಿರುವ ಅಶ್ವತ್ಥಾಮನನ್ನು ಕಂಡು ಹೇಳುತ್ತಾಳೆ: “ಮೊದಲು ಬಿಟ್ಟುಬಿಡು ಇವನನ್ನು. ಕ್ಷತ್ರಿಯರು ಹಾಸಿಗೆಯಲ್ಲಿ ಮಲಗಿ ಸಾಯುವವರಲ್ಲ. ರಣರಂಗದಲ್ಲಿ ಇನ್ನೊಬ್ಬರ ವಿರುದ್ಧ ಹೋರಾಡಿ ಸಾಯುವವರು. ಆದರೆ ಈತ ಗುರುಪುತ್ರ. ಎಲ್ಲಕ್ಕೂ ಮಿಗಿಲಾಗಿ ಆತ ಬ್ರಹ್ಮಜ್ಞಾನಿ. ಗೌರವಿಸಬೇಕಾದ ವ್ಯಕ್ತಿತ್ವ”.

ಸ ಏಷ ಭಗವಾನ್ ದ್ರೋಣಃ ಪ್ರಜಾರೂಪೇಣ ವರ್ತತೇ
ತಸ್ಯಾತ್ಮನೋSರ್ಧಂ ಪತ್ನ್ಯಾಸ್ತೇ ನಾನ್ವಗಾದ್ ವೀರಸೂಃ ಕೃಪೀ೪೫

“ಇವನನ್ನು ಕೊಲ್ಲುವುದರಿಂದ ಸತ್ತ ನನ್ನ ಮಕ್ಕಳು ಮರಳಿ ಬರುತ್ತಾರೆಯೇ? ಈತನ ದೇಹದಲ್ಲಿ ದ್ರೋಣಾಚಾರ್ಯರ ನೆತ್ತರು ಹರಿಯುತ್ತಿದೆ. ಹಾಗಾಗಿ ನಾನು ಈತನೊಳಗೆ ಭಗವಾನ್ ದ್ರೋಣರನ್ನು ಕಾಣುತ್ತಿದ್ದೇನೆ. ಹಾಗಾಗಿ ಇವನನ್ನು ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.

ಮಾ ರೋದೀದಸ್ಯ ಜನನೀ ಗೌತಮೀ ಪತಿದೇವತಾ
ಯಥಾSಹಂ ಮೃತವತ್ಸಾSSರ್ತಾ ರೋದಿಮ್ಯಶ್ರುಮುಖೀ ಮುಹುಃ೪೭

“ಒಂದುವೇಳೆ ಇವನನ್ನು ಕೊಂದರೆ ಅದರಿಂದಾಗುವ ಪರಿಣಾಮವೇನು? ಇಂದು ನಾನು ನನ್ನ ಮಕ್ಕಳನ್ನು ಕಳೆದುಕೊಂಡು ದುಃಖಿಸುತ್ತಿದ್ದೇನೆ. ಈತನ ತಾಯಿ ಗೌತಮಿ ಈಗಾಗಲೇ ತನ್ನ ಪತಿಯನ್ನು ಕಳೆದುಕೊಂಡು ದುಃಖದಲ್ಲಿದ್ದಾಳೆ. ಆ ತಾಯಿ ನನ್ನಂತೆ ದುಃಖ ಅನುಭವಿಸುವುದು ಬೇಡ. ಆದ್ದರಿಂದ ಆತನನ್ನು ಕೊಲ್ಲಬೇಡ. ಬಿಟ್ಟುಬಿಡು” ಎನ್ನುತ್ತಾಳೆ ದ್ರೌಪದಿ.
ಮಹಾಭಾರತದಲ್ಲಿ ಬರುವ ನಿಜ ಕಥೆಯ ಪ್ರಕಾರ ಅಶ್ವತ್ಥಾಮನನ್ನು ದ್ರೌಪದಿಯ ಬಳಿ ಎಳೆದು ತಂದೇ ಇಲ್ಲ. ಕೃಷ್ಣ, ವೇದವ್ಯಾಸರು, ಭೀಮ, ಅರ್ಜುನ,  ಎಲ್ಲರೂ ಹೇಳಿದರೂ ಕೂಡಾ, ಅಶ್ವತ್ಥಾಮ ಬ್ರಹ್ಮಾಸ್ತ್ರ ಉಪಸಂಹಾರಕ್ಕೆ ಒಪ್ಪಿಕೊಳ್ಳದೇ ಅದನ್ನು ಉತ್ತರೆಯ ಗರ್ಭಕ್ಕೆ ಗುರಿಯಾಗಿಸುತ್ತಾನೆ. ಇದರಿಂದಾಗಿ ಆತ ಎಲ್ಲರ ಶಾಪಕ್ಕೆ ಗುರಿಯಾಗುತ್ತಾನೆ. “ನಿನ್ನ ಮೈಯಲ್ಲೆಲ್ಲಾ ಗಾಯವಾಗಿ, ಅದರಲ್ಲಿ ಕೀವು ತುಂಬಿ, ದುರ್ವಾಸನೆಯಿಂದಾಗಿ, ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ನಿನ್ನ ಅಸಹ್ಯ ಶರೀರವನ್ನು ಹೊತ್ತುಕೊಂಡು ನೀನು ಬದುಕು” ಎನ್ನುವ ಶಾಪ ಪಡೆದ ಆತ ತನ್ನಲ್ಲಿ  ಜನ್ಮತಃ ಇದ್ದ ಮಣಿಯನ್ನು ಪಾಂಡವರಿಗೋಪ್ಪಿಸಿ ಶಾಪಗ್ರಸ್ತನಾಗಿ ಕಾಡಾಡಿಯಾಗಿ ಅಲೆಯುತ್ತಾನೆ ಎನ್ನುತ್ತದೆ ಮಹಾಭಾರತ. ಆದರೆ ಇಲ್ಲಿ ಅಶ್ವತ್ಥಾಮ ತಾನು ದ್ರೌಪದಿಯ ಕರುಣೆಯಿಂದ ಕ್ಷೆಮೆಗೆ ಪಾತ್ರನಾದೆ ಎಂದು ಕನಸು ಕಾಣುತ್ತಿದ್ದಾನೆ.    

ಸೂತ ಉವಾಚ-
ಧರ್ಮ್ಯಂ ನ್ಯಾಯ್ಯಂ ಸಕರುಣಂ ನಿರ್ವ್ಯಳೀಕಂ ಸಮಂ ಮಹತ್
ರಾಜಾ ಧರ್ಮಸುತೋ ರಾಜ್ಞ್ಯಾಃಪ್ರತ್ಯನಂದದ್ ವಚೋ ದ್ವಿಜಾಃ೪೯

ನಕುಲಃ ಸಹದೇವಶ್ಚ ಯುಯುಧಾನೋ ಧನಂಜಯಃ
ಭಗವಾನ್ ದೇವಕೀಪುತ್ರೋ ಯೇ ಚಾನ್ಯೇ ಯಾಶ್ಚ ಯೋಷಿತಃ೫೦

ಯುದಿಷ್ಠಿರ ದ್ರೌಪದಿಯ ಮಾತನ್ನು ಬೆಂಬಲಿಸುತ್ತಾನೆ ಹಾಗೂ  ಬಹಳ ಮೆಚ್ಚಿ ಅಭಿನಂದನೆ ಮಾಡಿ ಹೊಗಳುತ್ತಾನೆ. ಜೊತೆಗೆ ನಕುಲ ಸಹದೇವರೂ ಕೂಡಾ, ದ್ರೌಪದಿಯನ್ನು ಅಭಿನಂದಿಸುತ್ತಾರೆ. ಸಾತ್ಯಕಿ ಜೊತೆಗೆ ಅರ್ಜುನ ಕೂಡಾ ದ್ರೌಪದಿಯ ಮಾತನ್ನು ಮೆಚ್ಚಿಕೊಡು ಹೊಗಳುತ್ತಾರೆ.  ಶ್ರೀಕೃಷ್ಣ ಹಾಗೂ ಅಲ್ಲಿ ಸೇರಿದ ಎಲ್ಲರೂ ದ್ರೌಪದಿಯ ನಿರ್ಧಾರವನ್ನು ಬೆಂಬಲಿಸುತ್ತಾರೆ.

ತತ್ರಾಹಾಮರ್ಷಿತೋ ಭೀಮಸ್ತಸ್ಯ ಶ್ರೇಯಾನ್ ವಧಃ ಸ್ಮೃತಃ
ನ ಭರ್ತುರ್ನಾತ್ಮನಶ್ಚಾರ್ಥೇ ಯೋSಹನ್ ಸುಪ್ತಾನ್ ಶಿಶೂನ್ ವೃಥಾ೫೧

ಎಲ್ಲರೂ ಅಭಿನಂದಿಸಿದಾಗ ಭೀಮನಿಗೆ ಕೊಪ ಬರುತ್ತದೆ. ಆತ ಕೋಪದಿಂದ ಎದ್ದು ನಿಲ್ಲುತ್ತಾನೆ ಮತ್ತು ಹೇಳುತ್ತಾನೆ. “ಇಂತಹ ಪಾಪಿಯ ತಲೆ ಕಡಿಯುವುದೇ  ನ್ಯಾಯ” ಎಂದು. ಈತ ನಿದ್ರಿಸುತ್ತಿದ್ದ ಮಕ್ಕಳನ್ನು ಕೊಂದ ಪಾಪಿ. ಆತ ಮಾಡಿರುವ ಕೃತ್ಯ ಯಾರಿಗೂ ಒಳ್ಳೆಯದನ್ನು ಮಾಡಿಲ್ಲ ಮತ್ತು ಆತ್ಮಹಿತವಾದದ್ದೂ ಅಲ್ಲ. ಹಾಗಾಗಿ ಇಂತಹ ನೀಚನನ್ನು ಮುಗಿಸಿಬಿಡು ಎನ್ನುತ್ತಾನೆ ಭೀಮ. ಪ್ರಾಯಃ ಭೀಮನನ್ನು ಕಂಡರೆ ಅಶ್ವತ್ಥಾಮನಿಗೆ ಭಯ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಆತ ಕನಸಿನಲ್ಲಿ ಕಾಣುತ್ತಿದ್ದಾನೆ.

ನಿಶಮ್ಯ ಭೀಮಗದಿತಂ ದ್ರೌಪದ್ಯಾಶ್ಚ ಚತುರ್ಭುಜಃ
ಆಲೋಕ್ಯ ವದನಂ ಸಖ್ಯುರಿದಮಾಹ ಹಸನ್ನಿವ೫೨
ಶ್ರೀಭಗವಾನುವಾಚ-
ಬ್ರಹ್ಮಬಂಧುರ್ನ ಹಂತವ್ಯ ಆತತಾಯೀ ವಧಾರ್ಹಣಃ
ಮಯೈವೋಭಯಮಾಮ್ನಾತಂ ಪರಿಪಾಹ್ಯನುಶಾಸನಮ್೫೩

ಕುರು ಪ್ರತಿಶ್ರುತಂ ಸತ್ಯಂ ಯತ್ತತ್ ಸಾಂತ್ವಯತಾ ಪ್ರಿಯಾಮ್
ಮತಂ ಚ ಭೀಮಸೇನಸ್ಯ ಪಾಂಚಾಲ್ಯೈ ಮಹ್ಯಮೇವ ಚ೫೪

ಭೀಮನ ಮತ್ತು  ದ್ರೌಪದಿಯ ಮಾತನ್ನು ಕೇಳಿ ಕೃಷ್ಣ ಅರ್ಜುನನ ಮುಖವನ್ನು ನೋಡಿ ಮುಗುಳ್ನಗುತ್ತಾನೆ.  ಕೃಷ್ಣ ಹೇಳುತ್ತಾನೆ: “ಶಾಸ್ತ್ರದಲ್ಲಿ ಹೇಳುವಂತೆ- ಬ್ರಹ್ಮಜ್ಞಾನಿಯನ್ನು ಕೊಲ್ಲಬಾರದು;  ಆದರೆ ಸಮಾಜ ಕಂಟಕರನ್ನು ಜೀವಂತ ಉಳಿಸಬಾರದು. ಶಾಸ್ತ್ರದ ಮೂಲಕ ಈ ಎರಡು ವಿಧಿಯನ್ನು ಜಗತ್ತಿಗೆ ಕೊಟ್ಟವನು ನಾನೇ ಆದ್ದರಿಂದ, ಬ್ರಹ್ಮಬಂಧು ಅಶ್ವತ್ಥಾಮನನ್ನು ಕೊಲ್ಲಬಾರದು. ಆದರೆ ಆತ ಆತತಾಯಿಯಾದ್ದರಿಂದ ಅವನನ್ನು ಕೊಲ್ಲಬೇಕು. ಇದು ಶಾಸ್ತ್ರದ ಮತ್ತು ನನ್ನ ಆಜ್ಞೆ. ಅದನ್ನು ಪಾಲಿಸು! ಇಷ್ಟೇ ಅಲ್ಲದೆ, ನೀನು ಈತನ ತಲೆಯನ್ನು ದ್ರೌಪದಿಯ ಪಾದಕ್ಕೆ ಉಡುಗೊರೆಯಾಗಿ ಅರ್ಪಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದವನು. ಆ ಪ್ರತಿಜ್ಞೆಯನ್ನು ಉಳಿಸು. ಭೀಮಸೇನನ ಮತ್ತು ಪಾಂಚಾಲಿಯ ಅಭಿಪ್ರಾಯವೇ ನನ್ನ ಅಭಿಪ್ರಾಯವಾದ್ದರಿಂದ ಎಲ್ಲವನ್ನು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸು”  ಎಂದು ಒಗಟಾಗಿ ಮಾತನಾಡುತ್ತಾನೆ ಕೃಷ್ಣ.
ಸೂತ ಉವಾಚ-
ಅರ್ಜುನಃ ಸಹಸಾSSಜ್ಞಾಯ ಹರೇರ್ಹಾರ್ದಮಥಾಸಿನಾ
ಮಣಿಂ ಜಹಾರ ಮೂರ್ಧನ್ಯಂ ದ್ವಿಜಸ್ಯ ಸಹಮೂರ್ಧಜಮ್೫೫

ವಿಮುಚ್ಯ ರಶನಾಬದ್ಧಂ ಬಾಲಹತ್ಯಾಹತಪ್ರಭಮ್
ತೇಜಸಾ ಮಣಿನಾ ಹೀನಂ ಶಿಬಿರಾನ್ನಿರಯಾಪಯತ್೫೬

ನಮಗೆ ಕೃಷ್ಣನ ಮಾತು ಅರ್ಥವಾಗದಿದ್ದರೂ ಕೂಡಾ, ಅರ್ಜುನನಿಗೆ ತಕ್ಷಣ ಕೃಷ್ಣನ ಮಾತಿನ ಹಿಂದಿನ ರಹಸ್ಯ ತಿಳಿದು ಬಿಡುತ್ತದೆ. ಆತ ತಡಮಾಡದೆ ತನ್ನ ಕತ್ತಿಯನ್ನು ತೆಗೆದು, ಅಶ್ವತ್ಥಾಮನ ತಲೆಯನ್ನು ಬೋಳಿಸುತ್ತಾನೆ. ಜೊತೆಗೆ ಜನ್ಮತಃ ಬಂದಿರುವ ಅಮೂಲ್ಯವಾದ ಮಣಿರತ್ನವನ್ನು ಆತನ ತಲೆಯಿಂದ ಕಿತ್ತು ತೆಗೆಯುತ್ತಾನೆ. ಈ ರೀತಿ ತಲೆಬೋಳಿಸಿ, ಮಣಿಯನ್ನು ಕಿತ್ತಿರುವುದು ಅಶ್ವತ್ಥಾಮನಿಗೆ ಸಾವಿಗಿಂತ ಮಿಗಿಲಾದ ಅವಮಾನ.
ಇಷ್ಟು ಮಾಡಿ ಅರ್ಜುನ ಕಟ್ಟಿದ ಹಗ್ಗದಿಂದ ಅಶ್ವತ್ಥಾಮನನ್ನು ಬಿಚ್ಚುತ್ತಾನೆ. ಈ ಅವಮಾನದಿಂದಾಗಿ ಅಶ್ವತ್ಥಾಮನಲ್ಲಿ ಯಾವ ಬ್ರಹ್ಮಕಳೆಯೂ ಉಳಿದಿರುವುದಿಲ್ಲ. ನಂತರ ಪಾಂಡವರ ಶಿಬಿರದಿಂದ  ಆತನನ್ನು ಹೊರಹಾಕಿ “ಇನ್ನು ಮುಂದೆ ನಮ್ಮ ಕಣ್ಣಮುಂದೆ ಸುಳಿಯಬೇಡ” ಎಂದು  ಹೇಳಿ ಗಡಿಪಾರು ಮಾಡುತ್ತಾರೆ.

ಬಂಧನಂ ದ್ರವಿಣಾದಾನಂ ಸ್ಥಾನಾನ್ನಿರ್ಯಾಪಣಂ ತಥಾ
ಏಷ ಹಿ ಬ್ರಹ್ಮಬಂಧೂನಾಂ ವಧೋ ನಾನ್ಯೋSಸ್ತಿ ದೈಹಿಕಃ೫೭

ಒಬ್ಬ ಬ್ರಹ್ಮಜ್ಞಾನಿಯ ವಂಶದಲ್ಲಿ ಹುಟ್ಟಿದ ವ್ಯಕ್ತಿ ಅಪರಾಧ ಮಾಡಿದಾಗ ಅವನಿಗೆ ಕೊಡಬೇಕಾದ ಶಿಕ್ಷೆ ಏನೆಂಬುದನ್ನು ಶಾಸ್ತ್ರ ವಿವರಿಸುತ್ತದೆ. ಬಂಧನಕ್ಕೆ ಒಳಪಡಿಸುವುದು, ತಲೆಬೋಳಿಸುವುದು, ಅವರಲ್ಲಿರುವ ಸರ್ವಸಂಪತ್ತನ್ನೂ ಕಿತ್ತುಕೊಂಡು ಅವರನ್ನು ದೇಶಭ್ರಷ್ಟರನ್ನಾಗಿ ಮಾಡುವುದು, ಇತ್ಯಾದಿ ಶಿಕ್ಷೆ ಮರಣದಂಡನೆಗೆ ಪರ್ಯಾಯ ಶಿಕ್ಷೆ.

ಇದು ಅಶ್ವತ್ಥಾಮ ಕಾಡಿನಲ್ಲಿ ಅಡಗಿಕುಳಿತಾಗ ಕಂಡ ಕನಸು. ಈ ಕನಸಿನ ನಂತರದ ಘಟನೆಯನ್ನು ಮಹಾಭಾರತ ವರ್ಣಿಸುತ್ತದೆ. ಹಿಂದೆ ಹೇಳಿದಂತೆ ಅಶ್ವತ್ಥಾಮಾಚಾರ್ಯರು ಶಾಪಗ್ರಸ್ಥನಾಗುತ್ತಾರೆ. ಅದರಿಂದಾಗಿ ಅವರಿಗೆ ಅಸಹ್ಯ ಮತ್ತು ದುರ್ನಾತದಿಂದ ಕೂಡಿದ ಶರೀರ ಪ್ರಾಪ್ತಿಯಾಗುತ್ತದೆ. ಮುಂದಿನ ದ್ವಾಪರದ ತನಕ ಮನುಷ್ಯಸಂಚಾರವಿಲ್ಲದ ಹಿಮಾಲಯದ ದುರ್ಗಮತಾಣದಲ್ಲಿ ಅವರು ಅವತಾರ ಸಮಾಪ್ತಿ ಮಾಡದೇ ಇರಬೇಕಾದ ಪ್ರಸಂಗ ಅವರಿಗೊದಗುತ್ತದೆ. ಆನಂತರ ಮುಂದಿನ ದ್ವಾಪರದಲ್ಲಿ ಅವರು ಈ ಕಷ್ಟದಿಂದ ಬಿಡುಗಡೆಗೊಂಡು ‘ವ್ಯಾಸ’ ಪದವಿಯನ್ನು ಅಲಂಕರಿಸಲಿದ್ದಾರೆ. ಇದು ಅವತಾರದಲ್ಲಿ ದೇವತೆಗಳು ಪಡುವ ಕಷ್ಟ! ಅವರು ಅನುಭವಿಸುವ ಕಷ್ಟದ ಮುಂದೆ ನಮ್ಮ ಕಷ್ಟ ಏನೂ ಅಲ್ಲ. ಅವರ ನೈಜ ಕಥೆಯೇ ನಮಗೆ ಒಂದು ಆತ್ಮವಿಶ್ವಾಸ ಮತ್ತು ಭರವಸೆಯಾಗಿರಬೇಕು.  

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪ್ರಥಮಸ್ಕಂಧೇ ಸಪ್ತಮೋSಧ್ಯಾಯಃ
ಭಾಗವತ ಮಹಾಪುರಾಣದ ಮೊದಲ ಸ್ಕಂಧದ ಏಳನೇ ಅಧ್ಯಾಯ ಮುಗಿಯಿತು.
*********

Friday, February 22, 2013

Shrimad BhAgavata in Kannada -Skandha-01-Ch-07(04)


ಅಶ್ವತ್ಥಾಮ ನಿಗ್ರಹ

 ಅಥೋಪಸ್ಪೃಶ್ಯ ಸಲಿಲಂ ಸಂದಧೇ ತತ್ ಸಮಾಹಿತಃ
ಅಜಾನನ್ನಪಿ ಸಂಹಾರಂ ಪ್ರಾಣಕೃಚ್ಛ್ರ ಉಪಸ್ಥಿತೇ೨೦

ತತಃ ಪ್ರಾದುಷ್ಕೃತಂ ತೇಜಃ ಪ್ರಚಂಡಂ ಸರ್ವತೋದಿಶಮ್
ಪ್ರಾಪತತ್ ತದಭಿಪ್ರೇಕ್ಷ್ಯ ವಿಷ್ಣುಂ ಜಿಷ್ಣುರುವಾಚ ಹ೨೧

ಒಂದು ಅಸ್ತ್ರ ಪ್ರಯೋಗಮಾಡಬೇಕಾದರೆ ಮೊದಲು ಆ ಅಸ್ತ್ರದ ಹಿಂದಿನ ಮಂತ್ರದ ಅಭಿಮಾನಿ ದೇವತೆ ಮನಸ್ಸಲ್ಲಿ ನೆಲೆಗೊಳ್ಳಬೇಕು. ಇದಕ್ಕೆ ಮನಶುದ್ಧಿ ಮತ್ತು ಏಕಾಗ್ರತೆ ಬಹಳ ಮುಖ್ಯ. ಹಿಂದಿನವರು ಯುದ್ಧರಂಗದಲ್ಲೂ ಕೂಡಾ ಅಂತಹ ಏಕಾಗ್ರತೆ ಸಾಧಿಸುತ್ತಿದ್ದರು. ಇಲ್ಲಿ ಅಶ್ವತ್ಥಾಮರು ಪ್ರಾಣಾಯಾಮದಿಂದ  ತಮ್ಮ ಮನಸ್ಸನ್ನು ಮಂತ್ರದಲ್ಲಿ ನೆಲೆಗೊಳಿಸಿ, ಬ್ರಹ್ಮಾಸ್ತ್ರವನ್ನು ಸಂಧಾನ ಮಾಡಿ ಪ್ರಯೋಗ ಮಾಡುತ್ತಾರೆ. ಕೃಷ್ಣಾರ್ಜುನರು ಬೆನ್ನೆಟ್ಟಿ ಬರುವುದನ್ನು ಕಂಡು ದಿಕ್ಕು ತೋಚದೆ ದುಡುಕಿನಿಂದ ಮಾಡಿದ ಇನ್ನೊಂದು  ಹೇಯ ಕೃತ್ಯವಿದು.
ಅಶ್ವತ್ಥಾಮರು ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಂತೆಯೇ ಆ ಬ್ರಹ್ಮಾಸ್ತ್ರ ಆಕಾಶದಲ್ಲಿ, ಇಡೀ ಪ್ರಪಂಚವನ್ನು ಸುಡಬಲ್ಲ ಮಹಾಜ್ವಾಲೆಯಾಗಿ ಕಾಣಿಸಿತು. ಇಂತಹ ಭಯಂಕರ ಬೆಂಕಿಯ ಉಂಡೆ ಎಲ್ಲಾ ಕಡೆಯಿಂದಲೂ ತನ್ನತ್ತ ಬರುವುದನ್ನು ಕಂಡ ‘ಗೆಲ್ಲಬಲ್ಲ’ ಅರ್ಜುನ, ಗೆಲ್ಲಲಾರದೆ, ಗಾಬರಿಯಿಂದ ವಿಷ್ಣುವಿನಲ್ಲಿ(ಕೃಷ್ಣನಲ್ಲಿ) ಈ ಜ್ವಾಲೆಯ ಮೂಲದ ಬಗ್ಗೆ ಕೇಳುತ್ತಾನೆ.

ಅರ್ಜುನ ಉವಾಚ-
ಕೃಷ್ಣ ಕೃಷ್ಣ ಮಹಾಬಾಹೋ ಭಕ್ತಾನಾಮಭಯಂಕರ
ತ್ವಮೇಕೋ ದಹ್ಯಮಾನಾನಾಮಪವರ್ಗೋSಸಿ ಸಂಸೃತೇಃ೨೨

ಅರ್ಜುನ ಗಾಬರಿಯಿಂದ ಹೇಳುತ್ತಾನೆ: ಕೃಷ್ಣ-ಕೃಷ್ಣ, ಮಹಾಬಾಹೋ, ನಾನು ಭಯಗ್ರಸ್ಥನಾಗಿದ್ದೇನೆ. ಏನಿದು? ಅಶ್ವತ್ಥಾಮನನ್ನು ಸೆರೆಹಿಡೆಯಬೇಕು ಎಂದು ಬಂದಾಗ ನನ್ನ ಮೇಲೆರಗುತ್ತಿರುವ ಈ ಬೆಂಕಿಯ ಜ್ವಾಲೆ?  ಎಲ್ಲಾ ಕಡೆಯಿಂದ ಬಂದು ನನ್ನನ್ನು ಆವರಿಸುತ್ತಿರುವ ಬೆಂಕಿಯ ಮಧ್ಯೆ ನಾನು ಸಿಕ್ಕಿ ಹಾಕಿಕೊಂಡಿದ್ದೇನೆ. ಎಲ್ಲಿಂದ ಬಂತು ಈ ಬೆಂಕಿ ಎನ್ನುವುದು ತಿಳಿಯದಾಗಿದೆ. ನಂಬಿದವರ ಭಯವನ್ನು ಪರಿಹರಿಸತಕ್ಕಂತಹ ಶಕ್ತಿ ಇರುವುದು ನಿನಗೊಬ್ಬನಿಗೆ. ಸಂಸಾರದ ಬೆಂಕಿಯಲ್ಲಿ ಬೆಂದವರನ್ನೂ ಪಾರುಮಾಡುವ ನೀನು, ಎಲ್ಲಾ ಕಡೆ ವ್ಯಾಪಿಸುತ್ತಿರುವ ಈ ಬೆಂಕಿಯಿಂದ ನನ್ನನ್ನು ರಕ್ಷಿಸು.

ಶ್ರೀಭಗವಾನುವಾಚ-
ವೇತ್ಥೇದಂ ದ್ರೋಣಪುತ್ರಸ್ಯ ಬ್ರಾಹ್ಮಮಸ್ತ್ರಂ ಪ್ರದರ್ಶಿತಮ್
ನೈವಾಸೌ ವೇದ ಸಂಹಾರಂ ಪ್ರಾಣಬಾಧ ಉಪಸ್ಥಿತೇ೨೭

ನ ಹ್ಯಸ್ಯಾನ್ಯತಮಂ ಕಿಂಚಿದಸ್ತ್ರಂ ಪ್ರತ್ಯವಕರ್ಷಣಮ್
ಜಹ್ಯಸ್ತ್ರತೇಜ ಉನ್ನದ್ಧಮಸ್ತ್ರಜ್ಞೋ ಹ್ಯಸ್ತ್ರತೇಜಸಾ೨೮


ಕೃಷ್ಣ ನಗುತ್ತಾ ಅರ್ಜುನನಲ್ಲಿ ಹೇಳುತ್ತಾನೆ: ದ್ರೋಣಪುತ್ರ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ದಾನೆ. ಅಸ್ತ್ರವನ್ನು ಹಿಂದೆ ಪಡೆಯಲು ತಿಳಿಯದಿದ್ದರೂ ಕೂಡಾ, ಅದರ ಪ್ರದರ್ಶನ ಮಾಡುತ್ತಿದ್ದಾನೆ. ಬದುಕುವ ಆಸೆಯಿಂದ ದುಡುಕಿನಲ್ಲಿ ಮಾಡಿದ  ಪ್ರಯೋಗವಿದು. ಈ ಅಸ್ತ್ರವನ್ನು ಉಪಸಂಹಾರ ಮಾಡುವ ವಿಧಾನ ಆತನಿಗೆ ತಿಳಿದಿಲ್ಲ. ಪ್ರಪಂಚದಲ್ಲಿ ಬ್ರಹ್ಮಾಸ್ತ್ರಕ್ಕೆ ಪ್ರತಿಯಾದ ಇನ್ನೊಂದು ಅಸ್ತ್ರವಿಲ್ಲ. ಆದ್ದರಿಂದ ಇದನ್ನು ಬೇರೆ ಅಸ್ತ್ರದಿಂದ ಉಪಸಂಹಾರ ಮಾಡಲು ಸಾಧ್ಯವಿಲ್ಲ. ಹಾಗಾಗಿ ಬ್ರಹ್ಮಾಸ್ತ್ರದಿಂದಲೇ ಅದನ್ನು ಎದುರಿಸಬೇಕು. ನೀನೇ ಆ ಬ್ರಹ್ಮಾಸ್ತ್ರದ ತೇಜಸ್ಸನ್ನು ಉಪಶಮನ ಮಾಡಬೇಕು. ಇಲ್ಲದಿದ್ದರೆ ಸರ್ವನಾಶವಾಗುತ್ತದೆ ಎನ್ನುತ್ತಾನೆ ಕೃಷ್ಣ.