Saturday, October 26, 2013

Shrimad BhAgavata in Kannada -Skandha-02-Ch-01(8)

ಜಿತಾಸನದ ನಂತರ ಶುಕಾಚಾರ್ಯರು ‘ಜಿತಶ್ವಾಸಃ’ ಎಂದಿದ್ದಾರೆ. ಅಂದರೆ ಉಸಿರಿನ(ಪ್ರಾಣಕೋಶದ) ನಿಯಂತ್ರಣ. ಒಬ್ಬ ಮನುಷ್ಯ ಸರಿಯಾಗಿ ಉಸಿರಾಡುತ್ತಿದ್ದಾನೆ ಎಂದರೆ ಆತ ಆರೋಗ್ಯವಾಗಿದ್ದಾನೆ ಎಂದರ್ಥ. ನಮ್ಮ ಉಸಿರು ಹೇಗಿರಬೇಕು, ಅದರಿಂದ ಹೇಗೆ ಆರೋಗ್ಯ ಬರುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಶ್ವಾಸ ಎಂದರೆ ವಾತಾವರಣದಲ್ಲಿರುವ ಪ್ರಾಣಶಕ್ತಿಯನ್ನು(ಆಮ್ಲಜನಕ) ಒಳಗೆ ತೆಗೆದುಕೊಂಡು ನಂತರ ಒಳಗಿರುವ ಅಪಾನ ಶಕ್ತಿ(ಕಾರ್ಬನ್ ಡೈ ಆಕ್ಸೈಡ್)ಯನ್ನು ಹೊರ ಹಾಕುವುದು. ಉಸಿರಾಡುವಾಗ ಅವಸರ-ಅವಸರವಾಗಿ ಉಸಿರಾಡಬಾರದು. ಒಳಗೆ ತೆಗೆದುಕೊಳ್ಳುವಾಗ ಧೀರ್ಘ ಹಾಗೂ ಪೂರ್ಣವಾಗಿ ಒಳಗೆ ತೆಗೆದುಕೊಳ್ಳಬೇಕು ಹಾಗೂ ಹೊರ ಹಾಕುವಾಗ ಒಳಗೆ ಕೊಳೆ ಉಳಿಯದಂತೆ ಪೂರ್ತಿಯಾಗಿ ಹೊರ ಹಾಕಬೇಕು. ಈ ರೀತಿ ಒಳಗೆ ಯಾವುದೇ ಕೊಳೆ ಇಲ್ಲದಂತೆ ನಿರಂತರ ಶುದ್ಧೀಕರಣ ನಡೆಯಬೇಕು. ಇದೇ ಪ್ರಾಣಶುದ್ಧಿ.
ಪ್ರಾಣಶುದ್ಧಿ ಆದ ಮೇಲೆ ಪ್ರಾಣ ಸ್ಥಿರತೆ. ಅಂದರೆ ಪ್ರಾಣಮಯಕೋಶವನ್ನು ನಿಶ್ಚಲಗೊಳಿಸುವಿಕೆ.  ಇದಕ್ಕೆ ಎರಡು ವಿಧಾನಗಳಿವೆ. ೧. ಬಾಹ್ಯಕುಂಭಕ ೨. ಅಂತಃಕುಂಭಕ.  ಶ್ವಾಸವನ್ನು ಪೂರ್ತಿಯಾಗಿ ಹೊರಬಿಟ್ಟಮೇಲೆ ಒಳಗೆ  ನಿರ್ವಾತ ಸ್ಥಿತಿಯಲ್ಲಿ  ಶ್ವಾಸವನ್ನು  ಒಳಗೆ ತೆಗೆದುಕೊಳ್ಳದೆ ಸ್ಥಿರವಾಗಿ ಕುಳಿತುಕೊಳ್ಳವುದು ಬಾಹ್ಯಕುಂಭಕ;  ಪೂರ್ಣವಾಗಿ ಶ್ವಾಸವನ್ನು ಒಳಕ್ಕೆ ತೆಗೆದುಕೊಂಡ ನಂತರ, ಹೊರಬಿಡದೆ ಸ್ಥಗನಗೊಳಿಸುವುದು ಅಂತಃಕುಂಭಕ.  [ಪ್ರಾಣಾಯಾಮ ಮಾಡುವಾಗ ಎಚ್ಚರಿಕೆ ಅಗತ್ಯ. ಯೋಗ್ಯ ಗುರುವಿನ ಮಾರ್ಗದರ್ಶನ ಅಗತ್ಯ. ಹೃದ್ರೋಗಿಗಳು ಅಂತಃಕುಂಭಕ ಮಾಡಕೂಡದು. ತಲೆನೋವು ಇದ್ದಾಗ ಪ್ರಾಣಾಯಾಮ ಮಾಡಬಾರದು]. ಈ ಎರಡೂ ಸ್ಥಿತಿಯಲ್ಲಿ ಒಳಗೆ ಪ್ರಾಣಾಗ್ನಿ ನಿರ್ಮಾಣವಾಗುತ್ತದೆ. ಈ ಪ್ರಾಣಾಗ್ನಿ ಒಳಗಿರುವ ಎಲ್ಲಾ ದೋಷಗಳನ್ನು ಸುಡುವ ಅಗ್ನಿಯಾಗುತ್ತದೆ. ಇದು ಕೇವಲ ಪಾಪಪುರುಷ ಬಸ್ಮೀಕರಣ ಮಾಡುವ ಪ್ರಕ್ರಿಯೆಯಷ್ಟೇ ಅಲ್ಲ, ನಮ್ಮೊಳಗೆ ಕೂತು ನಮ್ಮಲ್ಲಿ ಕೆಟ್ಟ ಬುದ್ಧಿ ಹುಟ್ಟಿಸುವ ಕ್ಷುದ್ರ ಆಸುರೀ ಶಕ್ತಿಗಳನ್ನು ಇದು ಓದ್ದೋಡಿಸುತ್ತದೆ. ಇದೇ ಪಾಪಪುರುಷ ನಿರಸನ.
ಪ್ರಾಣಾಯಾಮ ಮಾಡುವಾಗ ಮೊದಲು ರೇಚಕ ಮತ್ತು ಪೂರಕವನ್ನು ಮೂಗಿನ ಎರಡೂ ಹೊಳ್ಳೆಗಳಿಂದ ಮಾಡಬಹುದು. ನಂತರ ಒಂದು ಹೊಳ್ಳೆಯಿಂದ ತೆಗೆದುಕೊಂಡು ಅದೇ ಹೊಳ್ಳೆಯಿಂದ ಹೊರಕ್ಕೆ ಬಿಡುವುದು, ಇನ್ನೊಂದು ಹೊಳ್ಳೆಯಿಂದ ತೆಗೆದುಕೊಂಡು ಅದೇ ಹೊಳ್ಳೆಯಿಂದ ಹೊರ ಬಿಡುವುದು ಮತ್ತು ಒಂದು ಹೊಳ್ಳೆಯಿಂದ ತೆಗೆದುಕೊಂಡು ಇನ್ನೊಂದು ಹೊಳ್ಳೆಯಿಂದ ಬಿಡುವುದು, ಹೀಗೆ ನಾನಾ ವಿಧಾನದಿಂದ ನಾಸಾಶುದ್ಧಿ-ನಾಡಿಶುದ್ಧಿ ಸಾಧಿಸಿ, ಆಮೇಲೆ ಪ್ರಾಣಶುದ್ಧಿ ಸಾಧಿಸಬೇಕು.
ಸಾಮಾನ್ಯವಾಗಿ ಪ್ರಾಣಾಯಾಮ ಎಂದರೆ ಬಲದಿಂದ ರೇಚಕ, ಎಡದಿಂದ ಪೂರಕ, ಆಮೇಲೆ  ಕುಂಭಕ. ಹಿಂದೆ ಹೇಳಿದಂತೆ ಶ್ವಾಸವನ್ನು ಒಳಕ್ಕೆ ತೆಗೆದುಕೊಳ್ಳುವಾಗ ಮೈ ಬೆಲೂನಿನಂತೆ ಉಬ್ಬಿಕೊಳ್ಳಬೇಕು. ರೇಚಕ ಮಾಡುವಾಗ ಹೊಟ್ಟೆ ಒಳಕ್ಕೆ ಎಳೆದುಕೊಂಡು ಒಳಗಿರುವ ಎಲ್ಲಾ ಗಾಳಿಯನ್ನು  ಖಾಲಿ ಮಾಡಬೇಕು. ಕುಂಭಕ ಸ್ಥಿತಿಯಲ್ಲಿ ಎಲ್ಲಿಯೂ ಸೋರದಂತೆ ಹೃದಯದಲ್ಲಿ ಶ್ವಾಸವನ್ನು ಸ್ಥಗನಗೊಳಿಸಬೇಕು. ಹೃದಯದಲ್ಲಿ ಶ್ವಾಸವನ್ನು ಸ್ಥಗನಗೊಳಿಸುವಾಗ ಮಲ-ಮೂತ್ರದ್ವಾರವನ್ನು ಒಳಕ್ಕೆಳೆದುಕೊಳ್ಳಲು ಮರೆಯಬಾರದು. ಇದನ್ನು ಮೂಲಬಂಧ ಎನ್ನುತ್ತಾರೆ. ಈ ರೀತಿ ಮಾಡದೇ ಕುಂಭಕ ಮಾಡಿದರೆ ಮೂಲವ್ಯಾಧಿ ಬರುವ ಸಾಧ್ಯತೆ ಹೆಚ್ಚು.   ಹೀಗೆ ಪ್ರಾಣಾಯಾಮದಿಂದ ಪ್ರಾಣಮಯಕೋಶದ ಸ್ಥಿರತೆ ಸಾಧಿಸುವುದನ್ನು ಶುಕಾಚಾರ್ಯರು ಇಲ್ಲಿ ಜಿತಶ್ವಾಸಃ ಎಂದಿದ್ದಾರೆ.
ಶ್ವಾಸವನ್ನು ಗೆದ್ದಮೇಲೆ ಮನಸ್ಸನ್ನು ಸ್ಥಿರಗೊಳಿಸಬೇಕು. ಅದಕ್ಕಾಗಿ ನಾವು ಸಂಗವನ್ನು ಗೆಲ್ಲಬೇಕು(ಜಿತಸಂಗಃ) ಎಂದಿದ್ದಾರೆ ಶುಕಾಚಾರ್ಯರು. ಶ್ರೀಕೃಷ್ಣ ಗೀತೆಯಲ್ಲಿ ಹೇಳುವಂತೆ: ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋSಭಿಜಾಯತೇ ॥೨-೬೨॥. ಮನಸ್ಸಿನ ಕೊಳೆ ಎಂದರೆ ಅದು ಕಾಮ-ಕ್ರೋಧ ಹಾಗೂ ಅದು ಬರುವುದು ಸಂಗದಿಂದ. ಒಂದು ವಸ್ತುವನ್ನು ನೋಡದೇ ಇದ್ದರೆ, ಅದರ ಬಗ್ಗೆ ಕೇಳದೇ ಇದ್ದರೆ ಅದು ಬೇಕು ಎನಿಸುವುದಿಲ್ಲ. ನೋಡಿದ ಮೇಲೆ ಕಾಮ ಹುಟ್ಟುತ್ತದೆ. ನಂತರ ಅದು ಸಿಗದಿದ್ದರೆ ಕ್ರೋಧ. ಆದ್ದರಿಂದ ಮನಸ್ಸನ್ನು ಸ್ವಚ್ಛವಾಗಿಡಲು ನಾವು ನಮ್ಮಿಂದ ಸಾಧ್ಯವಾದಷ್ಟು ವಿಷಯ ಸಂಪರ್ಕದ ಕಡೆಗೆ ಮನಸ್ಸಿನ ಸಂಪರ್ಕವನ್ನು ಕಡಿಮೆ ಮಾಡಬೇಕು. ಆಗ ಕಾಮ-ಕ್ರೋಧಗಳು ಕಡಿಮೆಯಾಗಿ ಮನಸ್ಸು ಶುದ್ಧವಾಗಲು ಸಹಾಯವಾಗುತ್ತದೆ. ಗೀತೆಯಲ್ಲಿ ಶ್ರೀಕೃಷ್ಣ ಸಂಗವನ್ನು ಹೇಗೆ ಗೆಲ್ಲಬೇಕು ಎನ್ನುವುದನ್ನು ವಿವರಿಸುತ್ತಾ ಹೇಳುತ್ತಾನೆ: “ವಿವಿಕ್ತದೇಶಸೇವಿತ್ವಮರತಿರ್ಜನಸಂಸದಿ” ಎಂದು. ॥೧೩-೧೦॥. ಅಂದರೆ- ಎಲ್ಲಿ ಬೇಡವಾದ ವಿಚಾರಕ್ಕಾಗಿ ಜನಜಂಗುಳಿ ಸೇರುತ್ತದೋ, ಅಂತಹ ಜನಜಂಗುಳಿಯಿಂದ ದೂರವಿರು ಎಂದರ್ಥ. ಮೌನ ಮತ್ತು ಏಕಾಂತ ಇದು ಮನಸ್ಸಿನ ಏಕಾಗ್ರತೆಗೆ ಬಹಳ ಮುಖ್ಯ ಸಾಧನ.  ಇಷ್ಟೇ ಅಲ್ಲದೇ ಮನಸ್ಸನ್ನು ಕೆಡಿಸುವ ಬಿಟ್ಟಿ ಭೋಜನಕ್ಕೆ ಹಾತೊರೆಯುವುದನ್ನೂ ನಾವು ಬಿಡಬೇಕು. ಊಟದ ಸಮಯದಲ್ಲಿ ಹಾಳು ಹರಟೆ ನಿಷಿದ್ಧ. ಭೋಜನ ಎನ್ನುವುದು ಮೌನದಲ್ಲಿ, ಭಗವಂತನ ಸ್ಮರಣೆಯಲ್ಲಿ ನಡೆಯಬೇಕು. ಹೀಗೆ ಯಾವ ಸಂಪರ್ಕದಿಂದ ಮನಸ್ಸು ಕಲುಷಿತವಾಗುತ್ತದೋ ಅಂತಹ ಸಾಮಾಜಿಕ ಸಂಪರ್ಕದಿಂದ ದೂರವಿರಲು ಪ್ರಯತ್ನಿಸಬೇಕು.
ಕೇವಲ ಬಾಹ್ಯಸಂಗ ತೊರೆದರೆ ಸಾಲದು, ನಾವು ನಮ್ಮೊಳಗೇ ಇರುವ ಅಂತಃಶತ್ರುಗಳಾದ ಇಂದ್ರಿಯಗಳನ್ನು ನಿಯಂತ್ರಿಸಬೇಕು. ಅದಕ್ಕಾಗಿ ಶುಕಾಚಾರ್ಯರು ಇಲ್ಲಿ ‘ಜಿತೇಂದ್ರಿಯಃ’ ಎಂದಿದ್ದಾರೆ. ನಾವು ಬೇಡವಾದುದನ್ನು ಬಯಸುವ ಇಂದ್ರಿಯ ಚಾಪಲ್ಯಕ್ಕೆ ನಿಧಾನವಾಗಿ ಕಡಿವಾಣ ಹಾಕಬೇಕು. ಹೀಗೆ ಆಸನ ಸ್ವಚ್ಛಗೊಳಿಸಿ ಆಸನ ಸ್ಥಿರಗೊಳಿಸಬೇಕು,  ಪ್ರಾಣ ಸ್ವಚ್ಛಗೊಳಿಸಿ ಪ್ರಾಣ ಸ್ಥಿರಗೊಳಿಸಬೇಕು ಮತ್ತು ಮನಸ್ಸನ್ನು ಸ್ವಚ್ಛಗೊಳಿಸಿ ಮನಸ್ಸನ್ನು ಸ್ಥಿರಗೊಳಿಸಬೇಕು. ನಂತರ ಸ್ವಚ್ಛವಾದ ಮನಸ್ಸಿನಲ್ಲಿ ಭಗವಂತನನ್ನು ತುಂಬಿಸಬೇಕು.
ಭಗವಂತನ ಪರಿಚಯವೇ ಇಲ್ಲದಿರುವಾಗ ಭಗವಂತನನ್ನು ಮನಸ್ಸಿನಲ್ಲಿ ತುಂಬುವುದು ಹೇಗೆ? ಈ ಪ್ರಶ್ನೆಗೆ ಶುಕಾಚಾರ್ಯರು ಇದೇ ಶ್ಲೋಕದಲ್ಲಿ ಉತ್ತರಿಸಿರುವುದನ್ನು ಕಾಣುತ್ತೇವೆ. ಶುಕಾಚಾರ್ಯರು ಹೇಳುತ್ತಾರೆ: “ತಿಳಿದಿರುವ ಭಗವಂತನ ಸ್ಥೂಲ ರೂಪವನ್ನು ಮೊದಲು ಧ್ಯಾನದಲ್ಲಿ ಕಾಣಬೇಕು” ಎಂದು.  ತಿಳಿದಿರುವ ರೂಪ ಎಂದರೆ ಅದು ಜ್ಞಾನಾನಂದಮಯವಾದ ರೂಪವಲ್ಲ. ಅದು ನಾವು ಮನೆಯಲ್ಲಿ ಪೂಜಿಸುವ ಭಗವಂತನ ಸ್ಥೂಲ ಪ್ರತೀಕ. ಅಷ್ಟೇ ಅಲ್ಲದೆ ಇಡೀ ಬ್ರಹ್ಮಾಂಡವೇ ಆತನ ಪ್ರತೀಕ. ಪುರುಷಸೂಕ್ತದಲ್ಲಿ ಹೇಳುವಂತೆ: ಸ ಭೂಮಿಂ ವಿಶ್ವತೋ ವೃತ್ವಾsತ್ಯತಿಷ್ಠದ್ದಶಾಂಗುಲಂ ॥೧॥ ಭಗವಂತ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ಹೀಗಾಗಿ ಕಣ್ಣಿಗೆ ಕಾಣುವ ವಿಶ್ವದಲ್ಲಿ ಕಾಣದ ಭಗವಂತನನ್ನು ಕಾಣುವ ಪ್ರಯತ್ನ ಮಾಡಬೇಕು. ಕಣ್ಮುಚ್ಚಿ ಧ್ಯಾನದಲ್ಲಿ ಕುಳಿತಾಗ ಅಲ್ಲಿ ಏನೇ ಕಾಣಲಿ, ಅದರಲ್ಲಿ ಭಗವಂತನ ಅನುಸಂಧಾನ ಮಾಡಬೇಕು. ಅಲ್ಲಿ ನಗರ ಕಾಣಬಹುದು, ಪರಿಚಿತ ವ್ಯಕ್ತಿ ಕಾಣಬಹುದು, ಯುವಕನಿಗೆ ಯುವತಿ ಕಾಣಬಹುದು ಹಾಗೂ ಯುವತಿಗೆ ಯುವಕ. ಆದರೆ ಇವೆಲ್ಲವುದರ ಹಿಂದೆ ಒಂದು ಜ್ಞಾನಾನಂದಮಯವಾದ ಶಕ್ತಿ ಇದೆ ಎಂದು ತಿಳಿದು ಧ್ಯಾನ ಮುಂದುವರಿಸಬೇಕು. ಧ್ಯಾನ ಪ್ರಕ್ರಿಯೆಯಲ್ಲಿ ಇದೊಂದು ಭವ್ಯ ಕಲ್ಪನೆ. ಜ್ಞಾನಾನಂದನಾದ ಭಗವಂತ ನನ್ನೊಳಗೆ, ಪ್ರಪಂಚದ ಪ್ರತಿಯೊಂದು ಅಣು-ಕಣದೊಳಗೆ ತುಂಬಿದ್ದಾನೆ ಎನ್ನುವ ವಿವೇಕಪ್ರಜ್ಞೆ ಬೆಳೆಸಿಕೊಂಡು, ಮನಸ್ಸನ್ನು ತರಬೇತಿಗೊಳಿಸಿದಾಗ, ಧ್ಯಾನದಲ್ಲಿ ಭಗವಂತನ ದರ್ಶನವಾಗುತ್ತದೆ. ಇದು ಈ ಶ್ಲೋಕದಲ್ಲಿ ನಾವು ಕಾಣಬಹುದಾದ  ಧ್ಯಾನದ ಸಮಗ್ರ ಪ್ರಕ್ರಿಯೆಯ ಸಂಕ್ಷಿಪ್ತ ವಿವರಣೆ.
ಭಾಗವತದ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ಧ್ಯಾನದ ವಿಷಯದಲ್ಲಿ ಸರ್ವೇಸಾಮಾನ್ಯವಾಗಿ ಬರುವ ಎರಡು ಮುಖ್ಯವಾದ ವಿಷಯವನ್ನು ಇಲ್ಲಿ  ನೋಡೋಣ. ಮೊದಲನೆಯದಾಗಿ ಹೆಂಗಸರು ಧ್ಯಾನ ಮಾಡಬಹುದೇ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ನೇರವಾಗಿ ಉತ್ತರಿಸಬೇಕು ಎಂದರೆ ಹೆಂಗಸರಷ್ಟೇ ಅಲ್ಲ, ಎಲ್ಲರೂ ಧ್ಯಾನ ಮಾಡಬಹುದು. ಧ್ಯಾನಕ್ಕೆ ಲಿಂಗ ನಿಶಿದ್ಧವಿಲ್ಲ. ಆದರೆ ಇಲ್ಲಿ ನಾವು ನೋಡಬೇಕಾಗಿರುವುದು ಸಾಮಾಜಿಕವಾಗಿ ಹೆಂಗಸರು ಧ್ಯಾನ ಮಾಡುವುದು ಏಕೆ ಅಷ್ಟೊಂದು ಬಳಕೆಗೆ ಬಂದಿಲ್ಲ ಎನ್ನುವ ವಿಚಾರವನ್ನು. ಸಾಮಾನ್ಯವಾಗಿ ಹೆಣ್ಣಿಗೆ ಸಾಂಸಾರಿಕ ಜೀವನದಲ್ಲಿ ಹೆಚ್ಚಿನ ಜವಾಬ್ಧಾರಿ ಇರುತ್ತದೆ. ಹೀಗಿರುವಾಗ ಕುಟುಂಬದ ಲಾಲನೆ-ಪಾಲನೆಯ ಜೊತೆಗೆ ಧ್ಯಾನಾಸಕ್ತಿ ಒಂದಕ್ಕೊಂದು ಹೊಂದಾಣಿಕೆ ಆಗದಿದ್ದರೆ ಅಲ್ಲಿ ವೈರಸ್ಯ ಬರುವ ಸಾಧ್ಯತೆ ಹೆಚ್ಚು. ಅದಕ್ಕೋಸ್ಕರ ಹಿಂದಿನವರು ಧ್ಯಾನದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಲಿಲ್ಲ.
ಎರಡನೇಯದಾಗಿ ಸ್ನಾನ ಮಾಡಲು ಆಗದೇ ಇದ್ದಾಗ, ರಾತ್ರಿ ಮಲಗುವಾಗ ಧ್ಯಾನ ಮಾಡಬಹುದೇ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ನಾವು ಈ ಹಿಂದೆಯೇ ಉತ್ತರ ಕಂಡುಕೊಂಡಿದ್ದೇವೆ. ಧ್ಯಾನಕ್ಕೆ ಮುಖ್ಯವಾಗಿ ಬೇಕಾಗಿರುವುದು ಮನಃಶುದ್ಧಿ. ಮನಸ್ಸು ಧ್ಯಾನಕ್ಕೆ ಬಯಸುತ್ತಿದೆ ಎಂದರೆ ಅದು ಶುದ್ಧವಾಗಿದೆ ಎಂದರ್ಥ. ಆದ್ದರಿಂದ ಯಾವ ಕಾಲದಲ್ಲಿ ಮನಸ್ಸು ಶ್ರುತಿಗೂಡುತ್ತದೋ ಆಗ ಧ್ಯಾನ ಮಾಡಬಹುದು. ಸ್ನಾನ ಮಾಡಲು ಆಗದಿದ್ದಾಗ ಅಲ್ಲಿ ಮಂತ್ರಸ್ನಾನ ಮಾಡಬಹುದು. ಮಂತ್ರಸ್ನಾನಕ್ಕಾಗಿ ಶಾಸ್ತ್ರಕಾರರು ಈ ಕೆಳಗಿನ ಎರಡು ಮಂತ್ರಗಳನ್ನು ನೀಡಿದ್ದಾರೆ:

ಅಪವಿತ್ರಃ ಪವಿತ್ರೋವ ಸರ್ವಾವಸ್ಥಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅತಿನೀಲಘನಶ್ಯಾಮಂ ನಲಿನಾಯತಲೋಚನಂ |
ಸ್ಮರಾಮಿ ಪುಂಡರೀಕಾಕ್ಷಂ ತೇನ ಸ್ನಾತೋ ಭಾವಾಮ್ಯಹಂ||


ಇಲ್ಲಿ ಪುಂಡರೀಕಾಕ್ಷನನ್ನು ಸ್ಮರಣೆ ಮಾಡಬೇಕು ಎಂದು ಹೇಳಿದ್ದಾರೆ. ಇದೊಂದು ಭಗವಂತನ ವಿಶೇಷ ನಾಮ. ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತದೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತ ಪ್ರೀತಿಯಿಂದ ಕಣ್ಣರಳಿಸಿ ನನ್ನನ್ನು ನೋಡುತ್ತಿದ್ದಾನೆ, ಅವನ ಕಣ್ಣಿನಿಂದ ಹರಿದುಬರುತ್ತಿರುವ ಅನುಗ್ರಹದ ರಸಧಾರೆಯಲ್ಲಿ ನಾನು ಮೀಯುತ್ತಿದ್ದೇನೆ, ಅವನ ಅನುಗ್ರಹದ ಕೃಪಾದೃಷ್ಟಿ ನನ್ನ ಮೇಲೆ ಹರಿದಿದೆ, ನಾನು ಅದರಲ್ಲಿ ಮಿಂದೆ ಎನ್ನುವ ಅನುಸಂಧಾನ ಶುಚಿ. ಹೀಗೆ ನಾವು ಭಗವಂತನ ಅನುಗ್ರಹದಿಂದ ಒಳಗೂ ಹೊರಗೂ ಮಡಿಯಾಗಿ ಧ್ಯಾನದಲ್ಲಿ ತೊಡಗಬಹುದು. 

Sunday, October 20, 2013

Shrimad BhAgavata in Kannada -Skandha-02-Ch-01(7)

ಯಸ್ಯಾಂ ಸಂಧಾರ್ಯಮಾಣಾಯಾಂ ಯೋಗಿನೋ ಭಕ್ತಿಲಕ್ಷಣಃ
ಆಶು ಸಂಪದ್ಯತೇ ಯೋಗ ಆಶ್ರಯಂ ಭದ್ರಮೀಕ್ಷತಃ  ೨೧

ಸಾಮಾನ್ಯವಾಗಿ ನಮ್ಮಲ್ಲಿರುವುದು ‘ಕೇಳಿ ಬಂದ ಭಕ್ತಿ’. ಅಂದರೆ ಭಗವಂತನಲ್ಲಿ ಭಕ್ತಿ ಮಾಡಬೇಕು ಎಂದು ಹಿರಿಯರು ಹೇಳಿದ್ದನ್ನು ಕೇಳಿ ನಾವು ಭಕ್ತಿ ಮಾಡುವುದು. ಆದರೆ ನಿಜವಾದ ಭಕ್ತಿ ಮೂಡುವುದು ಧ್ಯಾನ ಸ್ಥಿತಿಯಲ್ಲಿ ಭಗವಂತನ ಸ್ವರೂಪವೆಂಬ ಮಹಾ ಸಂಪತ್ತನ್ನು ಕಂಡಾಗ.  ಜಗತ್ತಿನಲ್ಲಿ ನಾವು ಪ್ರೀತಿಸಿದ ಎಲ್ಲಾ ವಸ್ತುಗಳಿಗಿಂತ ಅದ್ಭುತವಾದ ವಸ್ತು ನಮಗೆ ಸಿಕ್ಕಿದಾಗ ನಮ್ಮೆಲ್ಲಾ ಪ್ರೀತಿ ಅದಕ್ಕೆ ಮೀಸಲಾಗುತ್ತದೆ. ಅದಕ್ಕಿಂತ ಬೇರೆ ಯಾವುದೂ ಬೇಡ ಎನಿಸುತ್ತದೆ. ಈ ರೀತಿ ಹುಟ್ಟುವ ಪ್ರೀತಿ ಮಹಾತ್ಮ್ಯಪೂರಕವಾದ ಪ್ರೀತಿ. ಈ ಸ್ಥಿತಿಯಲ್ಲಿ ಇನ್ನೊಬ್ಬರು ನಮಗೆ ಭಕ್ತಿ ಮಾಡು ಎಂದು ಹೇಳಬೇಕಾಗಿಲ್ಲ, ಭಕ್ತಿ ತನ್ನಷ್ಟಕ್ಕೆ ತಾನು ಬಂದುಬಿಡುತ್ತದೆ. ಹೀಗಾಗಲು ಕಾರಣ ಏನೆಂದರೆ: ನಮಗೆ ಬದುಕಿನಲ್ಲಿ ಇರುವ ಮೂಲಭೂತವಾದ ಚಿಂತೆ ಎಂದರೆ ‘ನೆಲೆ ಕಾಣುವುದು ಹೇಗೆ’ ಎನ್ನುವುದು. ಈ ಅಭದ್ರತೆ ಪ್ರತಿಯೊಬ್ಬರನ್ನೂ ಕಾಡುತ್ತಿರುತ್ತದೆ. ಹೀಗಿರುವಾಗ ಅಂತರಂಗದಲ್ಲಿ ಭಗವಂತನನ್ನು ಕಂಡಾಗ ‘ನಾವು ಭಗವಂತನ ರಕ್ಷಣೆಯಲ್ಲಿದ್ದೇವೆ’ ಎನ್ನುವ ಸತ್ಯ ತಿಳಿದುಬಿಡುತ್ತದೆ.   ಈ ಸತ್ಯ ತಿಳಿದ ಪ್ರತಿಯೊಬ್ಬನೂ ಭಯಾತೀತನಾಗುತ್ತಾನೆ. ಪರಮಮಾಂಗಲಿಕವಾದ ಸುಭದ್ರ ನೆಲೆ ಸಿಗುವುದು ಭಗವಂತನಿಂದ. ಧ್ಯಾನದ ಮೂಲಕ ಬಾಹ್ಯ ಸಂಪತ್ತಿನ ಸೀಮೆ ಹಾಗೂ ಭಗವಂತನ ಅನಂತ ರಕ್ಷಣೆಯ ಸತ್ಯವನ್ನು ಅನುಭವಿಸಿದಾಗ ಮನಸ್ಸು ನಿಶ್ಚಲವಾಗಿ ಆನಂದವನ್ನು ಅನುಭವಿಸುತ್ತದೆ.
ರಾಜೋವಾಚ--
ಯಥಾ ಸಂಧಾರ್ಯತೇ ಬ್ರಹ್ಮನ್ ಧಾರಣಾ ಯತ್ರ ಸಮ್ಮತಾ
ಯಾದೃಶೀ ವಾ ಹರೇದಾಶು ಪುರುಷಸ್ಯ ಮನೋಮಲಮ್  ೨೨

ಶುಕಾಚಾರ್ಯರು ಒಂದು ಘಟ್ಟದಲ್ಲಿ ಧ್ಯಾನದ ಕುರಿತು ಹೇಳಿ ಮುಗಿಸಿದಾಗ  ಪರೀಕ್ಷಿತ “ನನಗೆ ಧ್ಯಾನದ ಕುರಿತು ಇನ್ನೂ ವಿವರವಾಗಿ ಹೇಳಿ” ಎಂದು ಕೇಳಿಕೊಳ್ಳುತ್ತಾನೆ. ಇದು ನಮ್ಮ ನಿಮ್ಮೆಲ್ಲರ ಪರ ಪರೀಕ್ಷಿತ ಹಾಕಿದ ಪ್ರಶ್ನೆ. ಆತ ಇಲ್ಲಿ ಶುಕಾಚಾರ್ಯರಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತಾನೆ. ಮನಸ್ಸನ್ನು ಎಲ್ಲಿ ಧಾರಣೆ ಮಾಡಬೇಕು? ಹೇಗೆ ಧಾರಣೆ ಮಾಡಬೇಕು ಮತ್ತು ಮನಸ್ಸನ್ನು ಸ್ವಚ್ಛಗೊಳಿಸುವುದು ಹೇಗೆ? ಇವೇ ಆ ಮೂರು ಪ್ರಶ್ನೆಗಳು. ನಮ್ಮಲ್ಲಿ ಇಂದು ಹೆಚ್ಚಿನವರು ಬಾಹ್ಯ ಮಡಿ ಕುರಿತು ಅನೇಕ ರೀತಿ ಹೇಳುತ್ತಾರೆ. ಆದರೆ ಮನಸ್ಸಿನ ಕೊಳೆಯನ್ನು ತೊಳೆದು ಮಡಿಯಾಗುವುದು ಹೇಗೆ ಎನ್ನುವುದು ನಮಗೆ ತಿಳಿದಿಲ್ಲ.  ಇದೇ ಪ್ರಶ್ನೆಯನ್ನು ಇಲ್ಲಿ ಪರೀಕ್ಷಿತ ಶುಕಾಚಾರ್ಯರಲ್ಲಿ ಕೇಳುತ್ತಿದ್ದಾನೆ.
 ಶ್ರೀಶುಕ ಉವಾಚ--
ಜಿತಾಸನೋ ಜಿತಶ್ವಾಸೋ ಜಿತಸಂಗೋ ಜಿತೇಂದ್ರಿಯಃ
ಸ್ಥೂಲೇ ಭಗವತೋ ರೂಪೇ ಮನಃ ಸಂಧಾರಯೇದ್ ಧಿಯಾ  ೨೩

ಧ್ಯಾನಕ್ಕೆ ಪೂರ್ವ ಸಿದ್ಧತೆ ಅಗತ್ಯ. ಕೇವಲ ಕಣ್ಮುಚ್ಚಿ ಕುಳಿತಾಗ ಮನಸ್ಸು ಏಕಾಗ್ರವಾಗುವುದಿಲ್ಲ. ಈ ಹಿಂದೆ ಹೇಳಿದಂತೆ ಧ್ಯಾನ ನಡೆಯುವುದು ಚಿತ್ತದಲ್ಲಿ. ಚಿತ್ತ ಸ್ಥಿರವಾಗಬೇಕಾದರೆ ಮನಸ್ಸು ಸ್ಥಿರವಾಗಬೇಕು. ಮನಸ್ಸು ಸ್ಥಿರವಾಗಬೇಕಾದರೆ ಪ್ರಾಣಮಯಕೋಶ ಸ್ಥಿರವಾಗಬೇಕು. ಅದಕ್ಕಾಗಿ ಉಸಿರಾಟದ ಸ್ಥಿರತೆ ಸಾಧಿಸಬೇಕು. ಪ್ರಾಣಮಯಕೋಶ ಸ್ಥಿರವಾಗುವ ಮೊದಲು ಅನ್ನಮಯಕೋಶ ಸ್ಥಿರವಾಗಬೇಕು. ಅಂದರೆ ನಿಶ್ಚಲವಾಗಿ ಕುಳಿತುಕೊಳ್ಳುವ ಅಭ್ಯಾಸ ಮಾಡಬೇಕು. ಅದನ್ನೇ ಇಲ್ಲಿ ಶುಕಾಚಾರ್ಯರು ‘ಜಿತಾಸನಃ’ ಎಂದಿದ್ದಾರೆ. ನಾವು ಎಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳುತ್ತೇವೆ ಆ ಪರಿಸರ ಶುದ್ಧವಾಗಿರಬೇಕು, ಕುಳಿತುಕೊಳ್ಳುವ ಆಸನ ಶುದ್ಧವಾಗಿರಬೇಕು ಮತ್ತು ನಮ್ಮ ದೇಹ ಶುದ್ಧವಾಗಿರಬೇಕು. ಇದಲ್ಲದೇ ತೀರಾ ಅವಶ್ಯವಾದ ನಾಲ್ಕನೇ ಶುದ್ಧಿ-ಮನಃಶುದ್ಧಿ. ಈ ನಾಲ್ಕು ವಿಧದ ಶೌಚದ ನಂತರ ಮುಂದಿನ ಪ್ರಕ್ರಿಯೆ.
ಮೊದಲನೆಯದಾಗಿ ಧ್ಯಾನಕ್ಕೆ ಕುಳಿತುಕೊಳ್ಳುವ ಪರಿಸರದ ಶುದ್ಧಿ. ಕುಳಿತುಕೊಳ್ಳುವ ಧ್ಯಾನಕೋಣೆ ಏಕಾಂತವಾಗಿರಬೇಕು. ಅಲ್ಲಿ ಶಬ್ದ ಮಾಲಿನ್ಯ ಇರಕೂಡದು. [ಹಕ್ಕಿಗಳ ಚಿಲಿಪಿಲಿ, ವೇದಮಂತ್ರಪಠಣ ಧ್ಯಾನಕ್ಕೆ ಪೂರಕ. ವೇದವನ್ನು ಶ್ರುತಿಬದ್ಧವಾಗಿ ಹಾಡಬೇಕು. ಹೇಗೆ ಸಂಗೀತಕಾರರು ತಂಬೂರ ಶ್ರುತಿಮಾಡಿ ಹಾಡುತ್ತಾರೆ ಹಾಗೆ ಶ್ರುತಿಯೊಂದಿಗೆ ವೇದಮಂತ್ರ ಪಠಣ ಮಾಡಬೇಕು. ಅಪಶ್ರುತಿಯಲ್ಲಿ ಪಠಿಸಿದರೆ  ಅದು ಶುದ್ಧವಾದ ವೇದ ನಾದವಾಗುವುದಿಲ್ಲ ಮತ್ತು ಅದು ಧ್ಯಾನಕ್ಕೆ ಪೂರಕವಲ್ಲ. ಇನ್ನು ಹಕ್ಕಿಗಳು ಎಂದೂ ಅಪಶ್ರುತಿಯಲ್ಲಿ ಹಾಡುವುದಿಲ್ಲ. ಅದು ಭಗವದ್ ದತ್ತವಾಗಿ ಬಂದಿರುವ ಸಹಜ ನಾದವಾಗಿರುವುದರಿಂದ ಅದರಿಂದ ಧ್ಯಾನಕ್ಕೆ ತೊಂದರೆಯಾಗುವುದಿಲ್ಲ]
ಎರಡನೇ ಶುದ್ಧಿ-ದೇಹಶುದ್ಧಿ : ಮುಂಜಾನೆ ಎದ್ದ ನಂತರ ಮೊದಲ ಶೌಚ ಎಂದರೆ ಮಲ-ಮೂತ್ರ ವಿಸರ್ಜನೆ, ದಂತ ಮಾರ್ಜನ. ನಂತರ  ಮುಖ-ಮಾರ್ಜನಮಾಡಿ, ಮಂತ್ರಾಚಮನದಿಂದ ವೇದಪ್ರತಿಪಾದ್ಯನಾದ ಭಗವಂತನನ್ನು ನೆನೆದು, ಸಮಗ್ರ ಸ್ನಾನದಿಂದ ದೇಹಶುದ್ಧಿ ಮಾಡಬೇಕು. ದೇಹಶುದ್ದಿಗೆ ಪ್ರಕೃತಿದತ್ತವಾದ ಸಾಧನ ಮೃತ್ತಿಕೆ. ಶುದ್ಧವಾದ ಸ್ಥಳದಲ್ಲಿರುವ ಕೆಂಪು ಮಣ್ಣನ್ನು ಚೆನ್ನಾಗಿ ಗಾಳಿಸಿದರೆ ಹಿಟ್ಟಿನಂತಹ ಭಾಗ ಕೆಳಕ್ಕೆ ಬೀಳುತ್ತದೆ. ಅದಕ್ಕೆ ನೀರನ್ನು ಸೇರಿಸಿದಾಗ ಅದು ಕೆನೆ(Cream)ಯಂತಾಗುತ್ತದೆ. ಅದನ್ನು ಪಾತ್ರೆಯಲ್ಲಿ ಸಂಗ್ರಹಮಾಡಿಟ್ಟುಕೊಂಡು ಮೈಗೆ ಹಚ್ಚಿಕೊಳ್ಳಬೇಕು. ಸಾಬೂನನ್ನು ಬಳಸದೇ ಶುದ್ಧ ಮೃತ್ತಿಕಾ ಸ್ನಾನ ಮಾಡುವುದರಿಂದ ಯಾವುದೇ ಚರ್ಮರೋಗ ಬರುವುದಿಲ್ಲ, ಚರ್ಮರೋಗ ಇದ್ದರೆ ವಾಸಿಯಾಗುತ್ತದೆ, ಚರ್ಮಕ್ಕೆ ಹೊಳಪು ಬರುತ್ತದೆ ಮತ್ತು ಮನಸ್ಸಿಗೆ ಸ್ಫೂರ್ತಿ ಸಿಗುತ್ತದೆ.
ಮೂರನೆಯದಾಗಿ ಮನಃಶುದ್ಧಿ. ಇದಕ್ಕಾಗಿ ಮುಖ್ಯವಾಗಿ ಯಮ-ನಿಯಮನ ಪಾಲನೆ ಮಾಡಬೇಕು. ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಮತ್ತು ಸಾಮಾಜಿಕವಾಗಿ ನಮ್ಮ ನಡೆ ಹೇಗಿರಬೇಕು ಎನ್ನುವುದನ್ನು ವಿವರಿಸುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಇವು ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಐದು ನಿಯಮಗಳು. ಈ ಐದರಿಂದ ಸಮಾಜದ ಸ್ವಾಸ್ಥ್ಯ ಕೆಡುವುದಷ್ಟೇ ಅಲ್ಲದೆ, ನಮ್ಮ ಮನಸ್ಸೂ ಕೂಡಾ ಕೆಡುತ್ತದೆ.
ಮುಖ್ಯವಾಗಿ ಮನಃಶುದ್ಧಿಗಾಗಿ ನಾವು ಬಿಡಬೇಕಾಗಿರುವುದು ಕಾಮ-ಕ್ರೋಧ-ಲೋಭಗಳನ್ನು. ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ಸುಂದರವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ.  ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ । ಕಾಮಃ ಕ್ರೋಧಸ್ತಥಾ ಲೋಭಸ್ತಸ್ಮಾದೇತತ್ ತ್ರಯಂ ತ್ಯಜೇತ್ ॥೧೬-೨೧॥ ಇಲ್ಲಿ ಶ್ರೀಕೃಷ್ಣ ಹೇಳುತ್ತಾನೆ: “ಕಾಮ, ಕ್ರೋಧ, ಮತ್ತು ಲೋಭ ಇವು ಆತ್ಮನಾಶದ ಮೂರು ದಾರಿ” ಎಂದು. ಕ್ರೋಧ ಎನ್ನುವುದು ಕಾಮದ ಮರಿ. ನಮಗೆ ಕ್ರೋಧ ಬರುತ್ತಿದೆ ಎಂದರೆ ನಮ್ಮ ಒಳಗೆ ಬಹಳ ಆಸೆಗಳು ಹುದುಗಿವೆ ಎಂದರ್ಥ. ಅದು ನೆರವೇರದೇ ಇದ್ದಾಗ ನಮಗೆ ಕೋಪ ಬರುತ್ತದೆ.  “ಕಾಮ-ಕ್ರೋಧ-ಲೋಭ ಎನ್ನುವುದು ನಮ್ಮನ್ನು ಅಧಃಪಾತಕ್ಕೆ ತಳ್ಳುವ ಮೂರು ನರಕದ ಬಾಗಿಲುಗಳಾಗಿರುವುದರಿಂದ ಅವುಗಳಿಂದ ದೂರವಿರುಎಂದು ಶ್ರೀಕೃಷ್ಣ ನಮ್ಮನ್ನು ಎಚ್ಚರಿಸಿದ್ದಾನೆ. ಇವು ನಮ್ಮ ವ್ಯಕ್ತಿತ್ವವನ್ನು ಹಾಳುಮಾಡುವ ಮೂಲ ಶತ್ರುಗಳು. ಇತರ ಎಲ್ಲಾ ದುರ್ಗುಣಗಳೂ ಇವುಗಳ ಮರಿಗಳು. ಮನುಷ್ಯ ಈ ಮೂರು ದುರ್ಗುಣಗಳಿಂದ ತನ್ನ ನರಕವನ್ನು ತಾನೇ ಸೃಷ್ಟಿಸಿಕೊಳ್ಳುತ್ತಾನೆ. ಈ ಮೂರನ್ನು ಬಿಟ್ಟರೆ ಮನಸ್ಸು ಸ್ವಚ್ಛವಾಗುತ್ತದೆ.
ನಾಲ್ಕನೆಯದಾಗಿ ಆಸನಶುದ್ಧಿ: ಧ್ಯಾನಕ್ಕೆ ಕುಳಿತುಕೊಳ್ಳುವ ಆಸನ ಶುದ್ಧವಾಗಿಲ್ಲದಿದ್ದರೆ ಧ್ಯಾನ ಸಾಧ್ಯವಿಲ್ಲ. ಆಸನ ಸಿದ್ಧಪಡಿಸುವ ಮೊದಲು ಏಕಾಂತ ಸ್ಥಳದಲ್ಲಿ ನೆಲ ಶುದ್ಧವಾಗಿದೆಯೋ ಇಲ್ಲವೋ ಎಂದು ನೋಡಬೇಕು. ನಮಗೆ ತಿಳಿದಂತೆ ಭೂಮಿಯಲ್ಲಿ ಕೆಲವು ಸ್ಥಳಗಳಲ್ಲಿ ಮನಸ್ಸಿಗೆ ಪೋಷಕವಾದ ಕಂಪನವಿದ್ದರೆ ಇನ್ನು ಕೆಲವು ಸ್ಥಳಗಳಲ್ಲಿ ಇರುವುದಿಲ್ಲ. ಎಲ್ಲಿ ಕುಳಿತಾಗ ನಮಗೆ ಹೆಚ್ಚು ಏಕಾಗ್ರತೆ ಸಿಗುತ್ತದೋ ಮತ್ತು ಮನಸ್ಸು ಪ್ರಸನ್ನವಾಗಿ ವಿಷಯಗಳನ್ನು ಯೋಚಿಸುವುದರ ಕಡೆಗೆ ಹರಿಯುತ್ತದೋ, ಅಲ್ಲಿ ಮನಸ್ಸಿಗೆ ಪೂರಕವಾದ ತರಂಗವಿರುತ್ತದೆ ಹಾಗೂ ಅದು ಧ್ಯಾನಕ್ಕೆ ಪೂರಕವಾದ ಸ್ಥಳವಾಗಿರುತ್ತದೆ. ಪುಣ್ಯ ಕ್ಷೇತ್ರಗಳು ಸಾತ್ತ್ವಿಕ ಕಂಪನ ಇರುವ ಕಡೆಯೇ ಇರುವುದರಿಂದ ಅಲ್ಲಿ ಸದಾ ಸಾತ್ತ್ವಿಕ ಕಂಪನವಿರುತ್ತದೆ.
ಸ್ಥಳ ನಿಗದಿಯಾದ ನಂತರ ನೆಲದಲ್ಲಿರುವ, ನಮ್ಮ ಧ್ಯಾನಕ್ಕೆ ಭಾದಕವಾಗುವ ತರಂಗಗಳು ನಮ್ಮ ದೇಹ ಪ್ರವೇಶಿಸದಂತೆ ತಡೆಯಲು ಅಲ್ಲಿ ಆಸನವನ್ನು ಸಿದ್ಧಪಡಿಸಬೇಕಾಗುತ್ತದೆ. ಆಸನದಲ್ಲಿ ಎರಡು ವಿಧ. ಒಂದು ಕುಳಿತುಕೊಳ್ಳುವ ಭಂಗಿ(Posture) ಮತ್ತು ಇನ್ನೊಂದು ಕುಳಿತುಕೊಳ್ಳುವ ಸಾಧನ. ಕುಳಿತುಕೊಳ್ಳುವ ಸಾಧನವಾಗಿ ಪಟ್ಟೆ, ದಾವಳಿ, ದರ್ಭೆಯ ಚಾಪೆ ಬಳಸಬೇಕು ಮತ್ತು ಅದರ ಮೇಲೆ ಕೃಷ್ಣಾಜಿನ(ಸಂಸಾರಿಗಳಿಗೆ) ಅಥವಾ ವ್ಯಾಘ್ರಾಜಿನ(ಸನ್ಯಾಸಿಗಳಿಗೆ) ಬಳಸಬೇಕು. ಒಂದು ವೇಳೆ ಇದ್ಯಾವುದೂ ಸಿಗದಿದ್ದರೆ ಮಣೆಯನ್ನು ಬಳಸಬಹುದು.  ಇಲ್ಲಿ ಕೃಷ್ಣಾಜಿನ ಮತ್ತು ವ್ಯಾಘ್ರಾಜಿನ ಪ್ರಾಣಿಯ ಚರ್ಮವಾಗಿದ್ದರೂ ಕೂಡಾ, ಅದರಲ್ಲಿ ಮನಸ್ಸನ್ನು ಶುದ್ಧಗೊಳಿಸುವ ವಿಶೇಷ ಶಕ್ತಿ ಇರುವುದರಿಂದ ಅದು ಮಡಿ. ಹಾಗಾಗಿ ಅದನ್ನು ಬಳಸುವಾಗ ಅದಕ್ಕೆ ಗೋಮಯವನ್ನು ಸಿಂಪಡಿಸುವ ಅಗತ್ಯವಿಲ್ಲ. ವ್ಯಾಘ್ರಾಜಿನ ನಮ್ಮ ಮನಸ್ಸನ್ನು ಸಂಸಾರದಿಂದ ವಿರಕ್ತಿಯತ್ತ ಕೊಂಡೊಯ್ಯಲು ಪೂರಕವಾಗಿರುವುದರಿಂದ ಗೃಹಸ್ಥನಾದವನು ವ್ಯಾಘ್ರಾಜಿನವನ್ನು ಬಳಸಬಾರದು. ಸಂಸಾರವನ್ನು ತೊರೆದ ನೈಷ್ಠಿಕ ಬ್ರಹ್ಮಚಾರಿಗಳಷ್ಟೇ ವ್ಯಾಘ್ರಾಜಿನ ಬಳಸುವುದು.
ಈ ರೀತಿಯ ಆಸನವನ್ನು ತಯಾರಿಸಿಕೊಂಡ ನಂತರ ಸ್ವಚ್ಛವಾದ ಧ್ಯಾನಕ್ಕೆ ಅನುಕೂಲವಾದ  ಭಂಗಿ(Posture)ಯಲ್ಲಿ ನೆಟ್ಟಗೆ ಕುಳಿತುಕೊಳ್ಳಬೇಕು. ನಮಗೆ ಸಾಧ್ಯವಾಗದ ಆಸನದಲ್ಲಿ ಬಲವಂತವಾಗಿ ಕೂರುವುದು ಧ್ಯಾನಕ್ಕೆ ಪೂರಕವಲ್ಲ. ಸಾಮಾನ್ಯವಾಗಿ ನಾಲ್ಕು ಆಸನಗಳನ್ನು ವಿಶೇಷವಾಗಿ ಧ್ಯಾನಕ್ಕೆ ಬಳಸುತ್ತಾರೆ. ೧. ಪದ್ಮಾಸನ, ೨. ವೀರಾಸನ, ೩.  ಸ್ವಸ್ತಿಕಾಸನ ಮತ್ತು ೪. ವಜ್ರಾಸನ. ಹೀಗೆ ಒಳ್ಳೆಯ ಪರಿಸರದಲ್ಲಿ, ಸ್ವಚ್ಛವಾದ ಮೈ-ಮನಗಳ ಜೊತೆಗೆ , ಸ್ವಚ್ಛವಾದ ಕೋಣೆಯಲ್ಲಿ, ಶುದ್ಧವಾದ ಆಸನದಮೇಲೆ, ಚಲನೆ ಇಲ್ಲದೆ ನಿಶ್ಚಲವಾಗಿ ಧ್ಯಾನಕ್ಕೆ ಕುಳಿತುಕೊಳ್ಳಬೇಕು.    

Sunday, October 13, 2013

Shrimad BhAgavata in Kannada -Skandha-02-Ch-01(6)

ತತ್ರೈಕಾವಯವಂ ಧ್ಯಾಯೇದವ್ಯುಚ್ಛಿನ್ನೇನ ಚೇತಸಾ  
ಮನೋ ನಿರ್ವಿಷಯಂ ಯುಕ್ತ್ವಾ ತತಃ ಕಿಂಚಿನ್ನ ಸಂಸ್ಮರೇತ್
ಪದಂ ತತ್ಪರಮಂ ವಿಷ್ಣೋರ್ಮನೋ ಯತ್ರ ಪ್ರಸೀದತಿ  ೧೯

ಈ ಹಿಂದೆ “ಮನಃಶುದ್ಧಿಯಿಂದ ಭಗವಂತನನ್ನು ಧ್ಯಾನ ಮಾಡಬೇಕು” ಎಂದು ಹೇಳಿದ ಶುಕಾಚಾರ್ಯರು, ಇಲ್ಲಿ ಧ್ಯಾನದಲ್ಲಿ ಭಗವಂತನನ್ನು ಹೇಗೆ ಕಾಣಬೇಕು ಎನ್ನುವುದನ್ನು ವಿವರಿಸಿದ್ದಾರೆ. ನಮ್ಮಂತೆ ಭಗವಂತನಿಗೂ ಕರ-ಚರಣಗಳಿರುವ ರೂಪವಿದೆ ಎಂದು ಅವನನ್ನು ನಾವು ಪಾದದಿಂದ ಕೇಶದ ತನಕ ಮನಸ್ಸಿನ ಕಣ್ಣಿನಲ್ಲಿ ಕಾಣಬೇಕು. ಆದರೆ ಧ್ಯಾನದಲ್ಲಿ ಆತನ ಪೂರ್ಣ ಶರೀರವನ್ನು ಸೆರೆ ಹಿಡಿದು ಏಕಾಗ್ರ ಸಾಧಿಸುವುದು ಕಷ್ಟ. ಅದಕ್ಕಾಗಿ ಶುಕಾಚಾರ್ಯರು ಹೇಳುತ್ತಾರೆ: “ಭಗವಂತನ ಯಾವುದಾದರೂ ಒಂದು ಅವಯವವನ್ನು ಮನಸ್ಸಿನಲ್ಲಿ ಏಕಾಗ್ರ ಮಾಡು” ಎಂದು. ಭಗವಂತನ ಮುಂಗುರುಳು, ಕೊಳಲನ್ನೂದುವ ಆತನ ಕಿರಿಬೆರಳು, ಮಂದಹಾಸ ಬೀರುವ ಆತನ ತುಟಿ, ಕರುಣಾರಸವನ್ನು ಬೀರುವ ಆತನ ಕಣ್ಣು, ಹೊಂಬೆಳಕನ್ನು ಸೂಸುವ ಆತನ ಉಗುರು, ಹೀಗೆ ನಮಗೆ ಯಾವುದು ಇಷ್ಟವೋ ಆ ಅವಯವವನ್ನು ಮನಸ್ಸಿನಲ್ಲಿ ನೆಲೆಗೊಳಿಸಲು ಪ್ರಯತ್ನಪಡಬೇಕು. ಉದಾಹರಣೆಗೆ: ಭಗವಂತ ತನ್ನ ಅರಳುಗಣ್ಣಿನಿಂದ ನನ್ನನ್ನು ನೋಡುತ್ತಿದ್ದಾನೆ, ಅವನ ಕಾರುಣ್ಯದ ರಸ ನನ್ನ ಮೇಲೆ ಹರಿಯುತ್ತಿದೆ, ಆ ರಸಪೂರದಲ್ಲಿ ನಾನು ಆನಂದವಾಗಿ ಓಲಾಡುತ್ತಿದ್ದೇನೆ ಎಂದು ಯೋಚಿಸುತ್ತಾ, ಭಗವಂತನ ಕಣ್ಣಿನ ಬೆಳಕಲ್ಲಿ ಮನಸ್ಸನ್ನು ನೆಲೆಗೊಳಿಸಿ ಧ್ಯಾನ ಮಾಡಬಹುದು.
ಮೊದಲು ನಾವು ಭಗವಂತನ ಏಕ ಅವಯವವನ್ನು ಮನಸ್ಸಿನಲ್ಲಿ ಧಾರಣೆ ಮಾಡಬೇಕು. ಕೆಲವೊಮ್ಮೆ ಮನಸ್ಸಿನ ಕಣ್ಣಿಗೆ ರೂಪ ಕಾಣುತ್ತದೆ, ಆದರೆ ಸ್ವಲ್ಪ ಹೊತ್ತಿನಲ್ಲಿ ಅದು ಕಣ್ಮರೆಯಾಗುತ್ತದೆ. ಹೀಗಾದಾಗ ಆ ರೂಪವನ್ನು ಕಾಣಲು ಮರಳಿ ಪ್ರಯತ್ನಿಸುವುದೇ ಧಾರಣೆ. ಎಷ್ಟು ಸಲ ರೂಪ ಕಣ್ಮರೆಯಾಗುತ್ತದೋ ಅಷ್ಟು ಸಲ ಕಣ್ಮುಚ್ಚಿ  ಏಕಾಗ್ರತೆಯನ್ನು ಸಾಧಿಸಿ ಆ ರೂಪವನ್ನು ಮರಳಿ ಕಾಣಬೇಕು. ಹೀಗೆ ಮಾಡುತ್ತಾ-ಮಾಡುತ್ತಾ ಕೊನೆಗೆ ಆ ರೂಪ ಮನಸ್ಸಿನಲ್ಲಿ ಸ್ಥಿರಗೊಳ್ಳುತ್ತದೆ. ಇದೇ ಧ್ಯಾನ ಸ್ಥಿತಿ.
ಧ್ಯಾನ ಮಾಡಬೇಕೆಂದು ಬಯಸುವುದು ಮನಸ್ಸು, ಆದರೆ  ಆ ನಂತರ ಅದೇ ಮನಸ್ಸು ಧ್ಯಾನ ಮಾಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬೀಳುತ್ತದೆ. ಹೀಗಾದಾಗ ಬುದ್ಧಿ ಕೆಲಸ ಮಾಡುತ್ತದೆ. ಧ್ಯಾನ ಮಾಡಲೇಬೇಕು ಎಂದು ಅದು ತೀರ್ಮಾನ ತೆಗೆದುಕೊಳ್ಳುತ್ತದೆ. ಈ ರೀತಿ ತೀರ್ಮಾನವಾದ ಮೇಲೆ ಚಿತ್ತ ಧ್ಯಾನದಲ್ಲಿ ತೊಡಗುತ್ತದೆ. ಹೀಗೆ ಧ್ಯಾನದಲ್ಲಿ ತೊಡಗಿದಾಗ ಕೆಲವೊಮ್ಮೆ ಅದು ನಮಗರಿವಿಲ್ಲದೇ  ವಿಚ್ಛೇದಗೊಳ್ಳುತ್ತದೆ(Disconnect/Switch off).   ಅದಕ್ಕಾಗಿ ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಎಂದೂ ಚಿತ್ತ ವಿಚ್ಛೇದಗೊಳ್ಳದಂತೆ ಅದನ್ನು ಪರಿಣತಿಗೊಳಿಸಬೇಕು” ಎಂದು. ಹೀಗೆ ಮನಸ್ಸು ನಿರ್ವಿಷಯವಾಗಿ ಸ್ವಚ್ಚವಾದಾಗ ಅದರಲ್ಲಿ ಭಗವಂತನನ್ನು ತುಂಬಿಸಿ, ಭಗವಂತನನ್ನಲ್ಲದೆ ಇನ್ನ್ಯಾವುದರ ಬಗ್ಗೆ ಯೋಚನೆ ಮಾಡದೆ ಏಕಾಗ್ರವಾಗಿ ಭಗವಂತನಲ್ಲಿ ನೆಲೆನಿಲ್ಲಬೇಕು.

ಕೆಲವರಿಗೆ ಮೇಲೆ ವಿವರಿಸಿದ ಧ್ಯಾನ ಪ್ರಕ್ರಿಯೆಯಲ್ಲಿ ಒಂದು ಸಂಶಯ ಬರುತ್ತದೆ. ಅದೇನೆಂದರೆ: “ಸರ್ವಗತನಾದ ಭಗವಂತನನ್ನು ಒಂದು ಚಿಕ್ಕ ರೂಪದಲ್ಲಿ ಧ್ಯಾನಿಸುವುದು ಸರಿಯೆ” ಎಂದು. ಅದಕ್ಕಾಗಿ ಇಲ್ಲಿ ಶುಕಾಚಾರ್ಯರು ಹೇಳುತ್ತಾರೆ: “ಈ ರೀತಿ ಧ್ಯಾನದಲ್ಲಿ ನೀನು ಕಾಣುವುದು ವಿಷ್ಣುವಿನ ಸ್ವರೂಪವನ್ನು” ಎಂದು. ಇಲ್ಲಿ ಬಳಸಿರುವ ‘ವಿಷ್ಣು’ ಎನ್ನುವ ಪದ ನಮ್ಮ ಮೇಲಿನ ಸಂಶಯವನ್ನು ಪರಿಹರಿಸುತ್ತದೆ. ಏಕೆಂದರೆ ವಿಷ್ಣು ಎಂದರೆ ‘ವೇವೇಷ್ಟತಿ ವಿಷ್ಣುಃ’. ಅಂದರೆ ಯಾರು ಸರ್ವಗತನೋ ಆತ ವಿಷ್ಣು. ವಿಷತೀತಿ ವಿಷ್ಣುಃ. ಅಂದರೆ ದೊಡ್ದದಕ್ಕಿಂತ ದೊಡ್ಡವನಾಗಿ ಎಲ್ಲೆಡೆ ತುಂಬಿರುವ ಭಗವಂತ ಸಣ್ಣದಕ್ಕಿಂತ ಸಣ್ಣವನಾಗಿ ನಮ್ಮೊಳಗೆ ತುಂಬಿದ್ದಾನೆ ಎಂದರ್ಥ. ಭಗವಂತ ಸಾಕಾರನೂ ಹೌದು ನಿರಾಕಾರನೂ ಹೌದು. ಸರ್ವಸಮರ್ಥನಾದ ಭಗವಂತ ತನ್ನ ಭಕ್ತನಿಗೆ ಯಾವ ರೂಪದಲ್ಲಿ ಬೇಕಾದರೂ ದರ್ಶನ ಕೊಡಬಲ್ಲ.  ಹೀಗಾಗಿ ಸರ್ವಗತನಾದ ಭಗವಂತನ ಆಕಾರವನ್ನು ನಾವು ಧ್ಯಾನ ಮಾಡಬಹುದು ಎನ್ನುವ ಸೂಚನೆಯನ್ನು ಇಲ್ಲಿ ಶುಕಾಚಾರ್ಯರು ‘ವಿಷ್ಣು’ ಎನ್ನುವ ಪದದ ಮೂಲಕ ನೀಡಿದ್ದಾರೆ.
ಧ್ಯಾನದಲ್ಲಿ ಭಗವಂತನನ್ನು ಕಂಡಾಗ ಮನಸ್ಸು ಹುಚ್ಚೆದ್ದು ಕುಣಿಯುತ್ತದೆ. ಆ ನಂತರ ಅದು ಆ ಸ್ಥಿತಿಯಿಂದೀಚೆಗೆ ಬರಲು ಒಪ್ಪುವುದಿಲ್ಲ. ಈ ಸ್ಥಿತಿಯನ್ನು ಕೆಲವರು ಪೂರ್ವಜನ್ಮದ ಸಾಧನೆಯ ಫಲದಿಂದಾಗಿ ತಕ್ಷಣ ಗಳಿಸಬಲ್ಲವರಾದರೆ, ಇನ್ನು ಕೆಲವರು ಅದಕ್ಕಾಗಿ ನಿರಂತರ ಸಾಧನೆ ಮಾಡಬೇಕಾಗುತ್ತದೆ. 

Saturday, October 12, 2013

Shrimad BhAgavata in Kannada -Skandha-02-Ch-01(5)

ಈ ಹಿಂದೆ ಹೇಳಿದಂತೆ-ಮನಸ್ಸನ್ನು ಬುದ್ಧಿಶಕ್ತಿಯಿಂದ ನಿಯಂತ್ರಣ ಮಾಡುವುದು ಅಷ್ಟು ಸುಲಭದ ವಿಷಯವಲ್ಲ. ಅನೇಕ ಮಂದಿಗೆ ಭೌದ್ಧಿಕ ಚಿಂತನೆಯೇ ಸಾಧ್ಯವಾಗುವುದಿಲ್ಲ. ಭೌದ್ಧಿಕ ಚಿಂತನೆ ಮಾಡಿದರೂ ಸಹ, ಅಲ್ಲಿ ಕಂಡ ಸತ್ಯವನ್ನು ಆಚರಣೆಗೆ ತರುವುದು ಕಷ್ಟವಾಗುತ್ತದೆ. ಇಂದ್ರಿಯ ಸೆಳೆತ ಅದೆಷ್ಟು ಬಲವಾಗಿದೆ ಎಂದರೆ, ಕೆಲವೊಮ್ಮೆ  ಅದಕ್ಕೆ ಕಡಿವಾಣ ಹಾಕಿ ನಿಯಂತ್ರಿಸುವುದು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಸಮಾಜದಲ್ಲಿ ಶಾಸನಗಳನ್ನು ತರಲಾಯಿತು. ಇಂದು ನಾವು ಹೆಚ್ಚು ಪಾಪಗಳನ್ನು ಮಾಡದೇ ಇರುವುದು ಕಾನೂನಿಗೆ ಹೆದರಿ ಹೊರತು, ಭೌದ್ಧಿಕ ಚಿಂತನೆಯಿಂದಲ್ಲ. ಆದರೆ ನಿಜವಾಗಿ ಇರಬೇಕಾಗಿರುವುದು ವಿವೇಕ, ಭಯವಲ್ಲ. ಏಕೆಂದರೆ ಭಯದಿಂದ ಮಾಡುವುದು ಶಾಶ್ವತವಲ್ಲ. ವಿವೇಕದ ಸಾರಥ್ಯ ಸಿಗುವ ತನಕ  ಮನಸ್ಸೆಂಬ ಕಡಿವಾಣವನ್ನು ಗಟ್ಟಿಯಾಗಿ ಹಿಡಿದು, ಇಂದ್ರಿಯವೆಂಬ ಕುದುರೆಗಳನ್ನು ನಿಯಂತ್ರಿಸುವುದು ಕಷ್ಟ.  ಆದ್ದರಿಂದ ಸಾಧನಾಮಾರ್ಗದಲ್ಲಿ ನಮಗಿರುವುದು ಒಂದೇ ಒಂದು ದಾರಿ. ನಾವು ಜೀವನದ ಸತ್ಯದ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಚಿಂತಿಸಿ, “ಸರಿಯಾದುದ್ದನ್ನೇ ಮಾಡಬೇಕು” ಎನ್ನುವ ನಿರ್ಧಾರ ಮಾಡಬೇಕು. ಅದೇ ವಿವೇಕ. ಈ ವಿವೇಕದ ಕೈಯಲ್ಲಿ  ನಾವು ನಮ್ಮ ಬದುಕಿನ ಸಾರಥ್ಯವನ್ನು ಕೊಟ್ಟಾಗ, ಇಂದ್ರಿಯಗಳು ದಾರಿ ತಪ್ಪುವುದು ಕಡಿಮೆಯಾಗುತ್ತದೆ. ಇದನ್ನೇ ಇಲ್ಲಿ ಶುಕಾಚಾರ್ಯರು ‘ಬುದ್ಧಿಸಾರಥಿ’ ಎಂದಿದ್ದಾರೆ. ಈ ರೀತಿ ಮನಸ್ಸಿನ ನಿಯಂತ್ರಣ ಸಾಧಿಸಲು ನಮಗೆ ಅನೇಕ ಜನ್ಮಗಳೇ ಬೇಕಾಗಬಹುದು. ಆದರೆ ಈ ದಿಕ್ಕಿನಲ್ಲಿ ಮಾಡುವ ಸಾಧನೆ ವ್ಯರ್ಥವಲ್ಲ. ಅದು ಜನ್ಮ-ಜನ್ಮಾಂತರವಾಗಿ ಮುಂದುವರಿಯುವ ಸಾಧನೆ.
ಶುಕಾಚಾರ್ಯರು ಹೇಳುತ್ತಾರೆ: “ಸಂಕಲ್ಪ ಮತ್ತು ವಿಕಲ್ಪ ಎನ್ನುವುದು ಮನಸ್ಸಿನ ಕರ್ಮಗಳು” ಎಂದು.  ಮನುಷ್ಯನ ಬದುಕೆಲ್ಲಾ ಆಸೆಗಳ ಸರಮಾಲೆ(ಸಂಕಲ್ಪ-Desire). ಏನೇನನ್ನೋ ಬಯಸುವುದು, ನಂತರ ಯಾವುದು ಬೇಕು, ಯಾವುದು ಬೇಡ ಎಂದು ತಿಳಿಯದೆ ಗೊಂದಲಕ್ಕೊಳಗಾಗುವುದು(ವಿಕಲ್ಪ-Confusion). ಖಚಿತವಾದ ತಿಳುವಳಿಕೆ ಇಲ್ಲದೇ ಇರುವುದರಿಂದ ಎಲ್ಲವೂ ಗೊಂದಲ. ನಮ್ಮ ಇಂದಿನ ಅನುಷ್ಠಾನಗಳೂ ಕೂಡಾ ಹೀಗೆ. ಅವು ಬುದ್ಧಿಯಿಂದ ಬಂದವುಗಳಲ್ಲ. ಅವು ಕೇವಲ ಮನಸ್ಸಿನ ಗೊಂದಲಗಳು.  ಕೆಲವು ಕಡೆ ಕೆಲವು ಆಚರಣೆಗಳಿರುತ್ತವೆ. ಅವುಗಳಿಗೆ ಶಾಸ್ತ್ರದ ಆಧಾರ ಇರುವುದಿಲ್ಲ. ಆದರೆ ಒಬ್ಬರು ಮಾಡುವುದನ್ನು ನೋಡಿ ಇನ್ನೊಬ್ಬರು ಮಾಡುತ್ತಾರೆ. ಮಾಡದಿದ್ದರೆ ಏನಾಗುತ್ತದೋ ಎನ್ನುವ ಭಯದಿಂದ ಮತ್ತೊಬ್ಬರು ಅದನ್ನು ಅನುಸರಿಸುತ್ತಾರೆ! ಈ ರೀತಿ ನಾವು ಮಾಡುವ ಧಾರ್ಮಿಕ ಕ್ರಿಯೆಗಳೂ ಕೂಡಾ ಬರೀ ಗೊಂದಲದ ಗೂಡಾಗುತ್ತಿದೆ.  ಅಲ್ಲಿ ಖಚಿತವಾದ ತೀರ್ಮಾನವಿರುವುದಿಲ್ಲ. ಇದರಿಂದಾಗಿ ಯಾವುದು ನಿಜವಾದ ಧರ್ಮ ಎನ್ನುವ ತಿಳುವಳಿಕೆ ಇಲ್ಲದೆ, ಸ್ವಚ್ಛವಾದ ಅನುಷ್ಠಾನವಿಲ್ಲದೆ, ಧರ್ಮಪ್ರಜ್ಞೆಯೇ ಇಲ್ಲದೆ, ಗೊಂದಲದಲ್ಲಿ ನಾವು ಬದುಕುತ್ತಿರುತ್ತೇವೆ. ಇನ್ನು ಕೆಲವೊಮ್ಮೆ ಯಾವುದು ಸರಿ, ಯಾವುದು ತಪ್ಪು ಎನ್ನುವುದು ತಿಳಿದಿದ್ದರೂ ಕೂಡಾ, ನಮ್ಮ ಮನಸ್ಸು ನಮ್ಮನ್ನು ಬೇಡವಾದ ಕಡೆಗೇ ಎಳೆದೊಯ್ಯುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು. ಆ ಕರ್ಮಫಲಕ್ಕನುಗುಣವಾಗಿ ನಾವು ದಾರಿ ತಪ್ಪುತ್ತೇವೆ.
ಶುಕಾಚಾರ್ಯರು ಹೇಳುತ್ತಾರೆ: “ಅಶುಭದ ಕಡೆಗೆ ಹೊಗುವ ಮನಸ್ಸನ್ನು ಶುಭದತ್ತ ತಿರುಗಿಸು” ಎಂದು. ಎಲ್ಲಕ್ಕಿಂತ ಪವಿತ್ರವಾದುದು, ಎಲ್ಲಕ್ಕಿಂತ ಮಂಗಳವಾದುದು ಎಂದರೆ ಭಗವಂತ. ಅದೇ ಶುಭ. ನಾವು  ನಮ್ಮ ಮನಸ್ಸಿನಲ್ಲಿ ತುಂಬಿರುವ ಕೊಳೆಯನ್ನು ತೊಳೆದು, ಅಲ್ಲಿ  ಶುಭ್ರವಾದ ಭಗವಂತನನ್ನು ತುಂಬಿಸುವ ಪ್ರಯತ್ನ ಮಾಡಬೇಕು. ಒಳಗಿರುವ ಕೊಳೆಯನ್ನು ತೊಳೆಯದೇ ಒಳ್ಳೆಯದನ್ನು ತುಂಬಿಸುವ ಪ್ರಯತ್ನ ಕೆಸರಿನ ಪಾತ್ರೆಗೆ ಹಾಲನ್ನು ತುಂಬಿಸಿದಂತೆ ವ್ಯರ್ಥವಾಗುತ್ತದೆ. ಹಾಗಾಗಿ ಮೊದಲು ವಿವೇಕದಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ಸ್ವಚ್ಛವಾದ ಮನಸ್ಸಿನಿಂದ ಮಾಂಗಲಿಕವಾದ ಭಗವಂತನ ಚಿಂತನೆ ಮಾಡಬೇಕು. 

Monday, October 7, 2013

Shrimad BhAgavata in Kannada -Skandha-02-Ch-01(4)

ನಿಯಚ್ಛೇದ್ವಿಷಯೇಭ್ಯೋSಕ್ಷಾನ್ ಮನಸಾ ಬುದ್ಧಿಸಾರಥಿಃ
ಮನಃ ಕರ್ಮಭಿರಾಕ್ಷಿಪ್ತಂ ಶುಭಾರ್ಥೇ ಧಾರಯೇದ್ ಧಿಯಾ  ೧೮

ಮನಸ್ಸು ಏಕಾಗ್ರವಾಗಬೇಕಾದರೆ ಅದಕ್ಕೆ ಪೂರ್ವಸಿದ್ಧತೆ ಬೇಕು. ಅಪರಿಚಿತ ಕ್ಷೇತ್ರದಲ್ಲಿ ಮನಸ್ಸಿಗೆ ತರಬೇತಿ ಕೊಡದಿದ್ದರೆ  ಅದು ಅದನ್ನು ಸ್ವೀಕರಿಸುವುದಿಲ್ಲ. ಧ್ಯಾನದ ರುಚಿ ಗೊತ್ತಿಲ್ಲದ ಮನಸ್ಸು ಧ್ಯಾನದಲ್ಲಿ ಕೇಂದ್ರೀಕೃತವಾಗಲಾರದು. ನಮ್ಮ ಮನಸ್ಸು ಸದಾ ವಿಷಯಗಳ(ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ) ಹಿಂದೆ ಸುತ್ತುತ್ತಿರುತ್ತದೆ. ಪ್ರತಿಯೊಂದು ಇಂದ್ರಿಯದ ಧರ್ಮ ವಿಷಯಗಳನ್ನು ಗ್ರಹಿಸುವುದಾದರೂ ಕೂಡಾ,  ವಿಷಯ ಗ್ರಹಣವೇ ಚಟವಾದಾಗ ಅದು ಅಧರ್ಮವಾಗುತ್ತದೆ. ಉದಾಹರಣೆಗೆ ನೋಡುವುದು ಕಣ್ಣಿನ ಧರ್ಮ, ಆದರೆ ನೋಡಬಾರದ್ದನ್ನು ನೋಡುವುದು ಅಧರ್ಮ.  ಇಂದ್ರಿಯಗಳಿಗೆ ಕೇವಲ ವಿಷಯಗಳೇ ಬಹಳ ಪ್ರಿಯವಾದ ಸಂಗತಿಯಾದಾಗ, ಇವುಗಳನ್ನು ಬಿಟ್ಟು ಇವುಗಳಿಂದಾಚೆಗಿನ ಅಪರಿಚಿತ ಸಂಗತಿಯನ್ನು ಮನಸ್ಸು ಯೋಚಿಸುವುದಿಲ್ಲ. ಮೊದಲು ಮನಸ್ಸನ್ನು ಈ ವ್ಯಸನದಿಂದ ಆಚೆ ಕೊಂಡೊಯ್ಯಬೇಕು. ಹೀಗೆ ಮಾಡಬೇಕಾದರೆ ಮೊದಲು ನಾವು ಯಾವುದನ್ನು ಹಚ್ಚಿಕೊಂಡಿದ್ದೇವೆ ಅದು ನಾವು ತಿಳಿದುಕೊಂಡಷ್ಟು ಮಹತ್ವದಲ್ಲ, ಅದರಿಂದ ನನಗೆ ಉಪಯೋಗವಿಲ್ಲ ಎನ್ನುವ ಎಚ್ಚರ ನಮ್ಮಲ್ಲಿ ಬೆಳೆಯಬೇಕು. ಈ ಎಚ್ಚರದಿಂದ ನಾವು ನಮ್ಮ  ಇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು.
ಇಂದ್ರಿಯಗಳನ್ನು ಹಿಡಿತದಲ್ಲಿಟ್ಟು ಸಾಧನೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಕಠೋಪನಿಷತ್ತಿನಲ್ಲಿ ಯಮ ಹೇಳುವಂತೆ: ಕ್ಷುರಸ್ಯ ಧಾರಾ ನಿಶಿತಾ ದುರತ್ಯಯಾ ದುರ್ಗಂ ಪಥಸ್ತತ್ ಕವಯೋ ವದಂತಿ ॥ಕಠ ೧-೩-೧೪॥  “ಭಗವಂತನ ಕಡೆಗೆ ಸಾಗುವ ಮಾರ್ಗ ಬಹಳ ದುರ್ಗಮ. ಅದು ಕತ್ತಿಯ ಅಲುಗಿನ ಮೇಲಿನ ನಡೆಯಂತೆ. ಇಂತಹ ಮಾರ್ಗದಲ್ಲಿನ ಕಷ್ಟಗಳನ್ನು ಸಹಿಸಿಕೊಂಡು ಮುನ್ನೆಡೆಯಬಲ್ಲವರು ಭಗವಂತನನ್ನು ಸೇರಬಲ್ಲರು”. ಕಷ್ಟ ಪಡದೇ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ ಇಂದ್ರಿಯ ನಿಗ್ರಹ ಅಷ್ಟು ಸುಲಭದ ಕೆಲಸವಲ್ಲ. ಇಂದ್ರಿಯ ನಿಗ್ರಹ ಯತತೋ ಹ್ಯಪಿ ಕೌಂತೇಯ ಪುರುಷಸ್ಯ ವಿಪಶ್ಚಿತಃ ।  ಇಂದ್ರಿಯಾಣಿ ಪ್ರಮಾಥೀನಿ ಹರಂತಿ ಪ್ರಸಭಂ ಮನಃ ॥೨-೬೦॥ -- “ಸಾಧಕ ಸಾಕಷ್ಟು ತಿಳಿದುಕೊಂಡರೂ, ಸಾಕಷ್ಟು ಪ್ರಯತ್ನಿಸಿದರೂ ಕೂಡಾ, ಇಂದ್ರಿಯಗಳು ಬಲವಂತವಾಗಿ ಮನಸ್ಸನ್ನು ಕಲುಕಿ ಸೆಳೆದುಬಿಡುತ್ತವೆ” ಎಂದು ಶ್ರೀಕೃಷ್ಣ ಗೀತೆಯಲ್ಲೇ ಹೇಳಿದ್ದಾನೆ. ಇಂತಹ ಸಂಧರ್ಭದಲ್ಲಿ ನಮ್ಮ ಸಾಧನೆ ಹೇಗಿರಬೇಕು ಎನ್ನುವುದನ್ನು ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ವಿವರಿಸುವುದನ್ನು ಕಾಣುತ್ತೇವೆ. ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ಚ । ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ॥೧-೩-೩॥ ಇಂದ್ರಿಯಾಣಿ ಹಯಾನಾಹುರ್ವಿಷಯಾಂಸ್ತೇಷು ಗೋಚರಾನ್ । ಆತ್ಮೇಂದ್ರಿಯಮನೋಯುಕ್ತಂ ಭೋಕ್ತೇತ್ಯಾಹುರ್ಮನೀಷಿಣಃ ॥೧-೩-೪॥ ಇಲ್ಲಿ ಹೇಳುವಂತೆ: “ ಜೀವ ಭಗವಂತನ ಕಡೆಗೆ ಸಾಗುವ ಪಯಣಿಗ. ಸಾಧನಾ ಶರೀರವೇ ಅವನ  ರಥ”. ಇಲ್ಲಿ ಸಾಧನಾ ಶರೀರ ಎಂದರೆ ಮನುಷ್ಯ ಶರೀರ. ಮಾನವ ಜನ್ಮ ಬಾರದೇ, ಮರವೋ, ಪ್ರಾಣಿಯೋ ಆಗಿ ಹುಟ್ಟಿದರೆ ಆ ಶರೀರ ಭಗವಂತನೆಡೆಗೆ ಸಾಗುವ ರಥವಾಗುವುದಿಲ್ಲ. ಆ ಶರೀರದ ಮೂಲಕ ಜೀವಕ್ಕೆ ಸಾಧನೆ ಸಾಧ್ಯವಿಲ್ಲ. ಹಾಗಾಗಿ ಮನುಷ್ಯ ಜನ್ಮ ಬಹಳ ಶ್ರೇಷ್ಠ ಜನ್ಮ. ಈ ಅರಿವು ಇಲ್ಲದ ನಾವು ಇಂದು ನಮಗೆ ಭಗವಂತ ನೀಡಿದ ಶ್ರೇಷ್ಠ ಜನ್ಮವನ್ನು ಯಾವುದೋ ಲೌಕಿಕ ವಿನೋದದಲ್ಲಿ ಕಳೆಯುತ್ತಾ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಇದರಿಂದಾಗಿ ನಮಗೆ ಭಗವಂತ ನೀಡಿದ ರಥವನ್ನು ನಾವು ಸರಿಯಾದ ದಿಕ್ಕಿನಲ್ಲಿ ಬಳಸುತ್ತಿಲ್ಲ. ಬೇಜವಾಬ್ಧಾರಿಯುತವಾಗಿ ಸಾಗುವ ಮನುಷ್ಯನ ಜೀವನ ಪ್ರಾಣಿ ಜೀವನಕ್ಕಿಂತ ಕಡೆ. ಭಗವಂತ ‘ನನ್ನೆಡೆಗೆ ಬಾ’ ಎಂದು ಕಳುಹಿಸಿಕೊಟ್ಟ ಈ ಶರೀರವೆಂಬ ರಥದಲ್ಲಿ ಕುಳಿತು, ಭಗವಂತನೆಡೆಗೆ ಸಾಗಬೇಕು ಎನ್ನುವ ಸಂದೇಶವನ್ನು ಯಮ ನಚಿಕೇತನ ಮೂಲಕ ನಮಗೆ ನೀಡಿದ್ದಾನೆ. ನಮ್ಮ ರಥ ದಾರಿ ತಪ್ಪದೇ ಸೇರಬೇಕಾದ ಗುರಿಯನ್ನು ತಲುಪಲು ಕುದುರೆ-ಕಡಿವಾಣದ ಜೊತೆಗೆ ನಮಗೊಬ್ಬ ಸಾರಥಿ ಬೇಕು. ನಮಗೆ ಆ ಸಾರಥಿಯನ್ನೂ ಕೂಡಾ ಭಗವಂತ ಕೊಟ್ಟಿದ್ದಾನೆ. ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಣಯಿಸುವ ವಿವೇಕ ಪ್ರಜ್ಞೆ(ಬುದ್ಧಿ)ಯೇ ಸಾರಥಿ ಹಾಗೂ ಮನಸ್ಸೇ ಕಡಿವಾಣ. ಭಗವಂತನೆಡೆಗೆ 'ಜೀವ' ಸಾಗಲು ಭಗವಂತ ಕೊಟ್ಟ ರಥಕ್ಕೆ ಐದು ಕುದುರೆಗಳು. ಅವುಗಳೆಂದರೆ: ಎರಡು ಕಿವಿ, ಎರಡು ಕಣ್ಣು ಹಾಗೂ ಒಂದು ಬಾಯಿ. ಶಬ್ದ, ರೂಪ ಮತ್ತು ಮಾತು ಈ ಕುದುರೆಗಳು ಮೇಯುವ ಹುಲ್ಲುಗಾವಲು. ಹಾಗಾಗಿ ನಾವು ನಮ್ಮ ಕಣ್ಣನ್ನು ಭಗವಂತನ ಕ್ಷೇತ್ರವನ್ನು ನೋಡುವುದಕ್ಕೆ ಉಪಯೋಗಿಸಬೇಕು, ಕಿವಿಯನ್ನು ಭಗವಂತನ ಮಹಿಮೆಯನ್ನು ಕೇಳಿ ತಿಳಿದುಕೊಳ್ಳುವುದಕ್ಕಾಗಿ ಹಾಗೂ ಮಾತು ಭಗವಂತನ ಮಹಿಮೆಯನ್ನು ಇನ್ನೊಬ್ಬರಿಗೆ ಹೇಳುವುದಕ್ಕಾಗಿ ಉಪಯೋಗಿಸಬೇಕು. ಭಗವಂತ ನಮಗೆ ನೀಡಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿಕೊಂಡು ಯಾವುದು ಸರಿ, ಯಾವುದು ತಪ್ಪು ಎನ್ನುವ ವಿಶ್ಲೇಷಣೆ ಮಾಡಬೇಕು. ಬುದ್ಧಿಶಕ್ತಿಯನ್ನು ಉಪಯೋಗಿಸಿ ನಾವು ನಮ್ಮನ್ನು ನಿಯಂತ್ರಿಸಿಕೊಳ್ಳದೇ ಸಮಯವನ್ನು ವ್ಯರ್ಥ ಮಾಡಿದರೆ, ಇಂದು ಕಳೆದುಕೊಂಡ ಕ್ಷಣ ಇನ್ನೆಂದೂ ಮರಳಿ ಬರಲಾರದು. ಬದುಕಿನ ಪ್ರತಿಯೊಂದು ಕ್ಷಣವನ್ನೂ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವ ಎಚ್ಚರ ಬೆಳೆದಾಗ, ಸರಿದಾರಿಯಲ್ಲೇ ನಡೆಯಬೇಕು ಎನ್ನುವ ಹಠ ಬರುತ್ತದೆ. ಈ ಸ್ಥಿತಿಯಲ್ಲಿ ಮನಸ್ಸನ್ನು ನಿಯಂತ್ರಿಸುವುದು ಸುಲಭವಾಗುತ್ತದೆ.

Saturday, October 5, 2013

Shrimad BhAgavata in Kannada -Skandha-02-Ch-01(3)

ಅಂತಕಾಲೇ ತು ಪುರುಷ ಆಗತೇ ಗತಸಾಧ್ವಸಃ
ಛಿಂದ್ಯಾದಸಂಗಶಸ್ತ್ರೇಣ ಸ್ಪೃಹಾಂ ದೇಹೇSನು ಯೇ ಚ ತಮ್ ೧೫

“ಮೊತ್ತಮೊದಲು ಸಾವಿನ ಭಯ ಬಿಟ್ಟುಬಿಡಬೇಕು”  ಎಂದಿದ್ದಾರೆ ಶುಕಾಚಾರ್ಯರು.  ಶಾಸ್ತ್ರಕಾರರು ಹೇಳುವಂತೆ: “ಗೃಹಿತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್”- ಯಾವ ಕ್ಷಣಕ್ಕೂ ನಾವು ಮೃತ್ಯು ವಶವಾಗಬಹುದು ಎಂದುಕೊಂಡು ನಾವು ಧರ್ಮಾಚರಣೆ ಮಾಡಬೇಕು. ಅಂತಕಾಲ ಎನ್ನುವುದು ಹೇಳಿಕೊಂಡು ಬರುವುದಿಲ್ಲ. ಅದು ಯಾವ ಕ್ಷಣದಲ್ಲಿ ಕೂಡಾ ಬರಬಹುದು. ಬದುಕು ಎಂದರೆ ಅದು ಸಾವಿನ ಸಿದ್ಧತೆ. ಅನಿವಾರ್ಯವಾಗಿರುವ ಸಾವಿನ ಬಗ್ಗೆ ಎಂದೂ ಭಯಪಡಬಾರದು.
ಸತ್ತ ನಂತರ ಏನು ಎನ್ನುವುದು ತಿಳಿದಿಲ್ಲದೇ ಇರುವುದೇ ಸಾವಿನ ಭಯಕ್ಕೆ ಕಾರಣ. ಅರಿವೇ ಅಭಯ, ಅಜ್ಞಾನವೇ ಭಯ. ಮೊತ್ತಮೊದಲು ನಾವು ತಿಳಿಯಬೇಕಾಗಿರುವುದು ಸಾವು ಭಯಾನಕವಲ್ಲ ಎನ್ನುವ ವಿಚಾರವನ್ನು. ಮರಣಂ ಪ್ರಕೃತಿ ಶರೀರಿಣಾಂ ವಿಕೃತಿ ಜೀವನಂ ಉಚ್ಯತೇ. ಸಾವು  ಅನ್ನುವುದು ಸಹಜ ಸ್ಥಿತಿ, ಬದುಕೇ ವಿಕೃತಿ. ಸ್ಥೂಲ ಶರೀರದೊಳಗಿರುವ ಜೀವ ಪಂಜರದೊಳಗಿರುವ ಗಿಳಿಯಂತೆ. ಆದರೆ ಸೂಕ್ಷ್ಮಶರೀರ ಎಂದರೆ ಪಂಜರವಿಲ್ಲ, ಅದು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಪಕ್ಷಿ.  ಜೀವ ತನ್ನ ಸಹಜ ಸ್ಥಿತಿಗೆ ಮರಳುವುದು ಸಾವು ಎಂದು ತಿಳಿದಾಗ ಸಾವಿನ ಭಯವಿಲ್ಲ.

ಅಭ್ಯಸೇನ್ಮನಸಾ ಶುದ್ಧಂ ತ್ರಿವೃತ್ ಬ್ರಹ್ಮಾಕ್ಷರಂ ಪರಮ್
ಮನೋ ಯಚ್ಛೇಜ್ಜಿತಶ್ವಾಸೋ ಬ್ರಹ್ಮಬೀಜಮವಿಸ್ಮರನ್ ೧೭

ಸಾಧನೆ ಹೇಗೆ ಮಾಡಬೇಕು ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಮನಸ್ಸಿನಲ್ಲಿ ಮೂರು ಮಡಿಕೆಯ(3-fold) ಅಕ್ಷರವನ್ನು ಧ್ಯಾನ ಮಾಡು” ಎಂದು.  ಇಲ್ಲಿ ಮೂರು ಮಡಿಕೆಯ ಅಕ್ಷರ(ತ್ರಿವೃತ್) ಅಂದರೆ ಅ-ಕಾರ, ಉ-ಕಾರ ಮತ್ತು ಮ-ಕಾರದಿಂದ ಕೂಡಿದ ಓಂಕಾರ. ಈ ಓಂಕಾರವನ್ನು ಶುಕಾಚಾರ್ಯರು ‘ಬ್ರಹ್ಮಾಕ್ಷರಂ ಪರಮ್’  ಎಂದಿದ್ದಾರೆ. ಅಂದರೆ ಇದು ಭಗವಂತನನ್ನು ಹೇಳುವ ಅಕ್ಷರಗಳಲ್ಲೇ ಅತ್ಯಂತ ಶ್ರೇಷ್ಠವಾದ ಅಕ್ಷರ ಹಾಗೂ ಭಗವಂತನನ್ನು ಚಿಂತನೆ ಮಾಡಲು ಇರತಕ್ಕಂತಹ ಮಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಮಂತ್ರ. ಓಂಕಾರ ಎನ್ನುವುದು ಇಡೀ ಉಪಾಸನೆಯ ಬೆಳವಣಿಗೆಯ ಬೀಜ. ಹಾಗಾಗಿ ಓಂಕಾರದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿದರೆ  ಎಲ್ಲಾ ಸತ್ಯಗಳೂ ಒಂದೊಂದಾಗಿ ತೆರೆದುಕೊಳ್ಳುತ್ತವೆ.
ಓಂಕಾರದಲ್ಲಿರುವ ಮೂರು ಅಕ್ಷರಗಳಲ್ಲಿ ಮೊದಲನೇ ಅಕ್ಷರ ಅ-ಕಾರ. ‘ಅ’ ಎನ್ನುವುದು ‘ಆಪ್ತಿ’  ಎನ್ನುವ ಪದದ ಸಂಕ್ಷೇಪಾಕ್ಷರ(abbreviation). ಬಾಹ್ಯ ಪ್ರಪಂಚದೊಂದಿಗೆ ನಮ್ಮ ಸಂಪರ್ಕವೇ ಆಪ್ತಿ. ಅಂದರೆ ಇದು ಮೂರು ಅವಸ್ಥೆಗಳಲ್ಲಿ(ಎಚ್ಚರ, ಕನಸು ಮತ್ತು  ನಿದ್ರೆ)  ಮೊದಲನೆಯದಾದ ಎಚ್ಚರವನ್ನು ಹೇಳುತ್ತದೆ. ನಮ್ಮ ಎಚ್ಚರಾವಸ್ಥೆಯನ್ನು ನಿಯಂತ್ರಿಸುವವನು ಭ್ರೂಮಧ್ಯದಲ್ಲಿ ಬಲಗಣ್ಣಿನ ಸಮೀಪದ ಶಕ್ತಿ ಕೇಂದ್ರದಲ್ಲಿ ನೆಲೆಸಿರುವ,       ಅ-ಕಾರವಾಚ್ಯನಾದ, ‘ವಿಶ್ವ’ ನಾಮಕ ಭಗವಂತ. ಇದು ಭಗವಂತನ ಅನಿರುದ್ಧ ರೂಪ. ಈ ಸ್ಥಿತಿಯಲ್ಲಿ ಪ್ರಪಂಚದ ಅರಿವಿಗೆ ಯಾವುದೇ ನಿರೋಧವಿಲ್ಲ  ಇದು ಎಲ್ಲಾ ಇಂದ್ರಿಯಗಳು ತೆರೆದುಕೊಂಡಿರುವ ಸ್ಥಿತಿಯಾಗಿರುವುದರಿಂದ ನಾವು ನಮ್ಮ ಇಂದ್ರಿಯಗಳಿಂದ ಅನುಭವವನ್ನು ಪಡೆಯುತ್ತೇವೆ. ಆದರೆ ಈ ಇಂದ್ರಿಯಗಳ ಒಡೆತನ ನಮಗಿಲ್ಲ. ಉದಾಹರಣೆಗೆ ಕಣ್ಣಿನಿಂದ ಒಂದು ವಸ್ತುವನ್ನು ನಾವು ನೋಡುತ್ತೇವೆ. ಈ ರೀತಿ ನೋಡಬೇಕಾದರೆ ಅಲ್ಲಿ ಕನಿಷ್ಠ ಮೂರು ಸಂಗತಿಗಳು ಬೇಕಾಗುತ್ತದೆ. ೧. ನಮಗೆ ಕಾಣುವ ಕಣ್ಣಿರಬೇಕು. ೨. ಕಾಣುವಂತಹ ರೂಪ ನಮ್ಮ ಮುಂದಿರಬೇಕು. ೩. ರೂಪಕ್ಕೂ ಕಣ್ಣಿಗೂ ಸಂಪರ್ಕವಾಗುವ ಬೆಳಕಿರಬೇಕು.  ಈ ಮೂರರಲ್ಲಿ ಯಾವುದರ ಒಡೆತನವೂ ನಮಗಿಲ್ಲ. ನಾವು ಹುಟ್ಟುವಾಗಲೇ ಆ ಭಗವಂತ ನಮಗೆ ಕಣ್ಣನ್ನು ಕಾಣಿಕೆಯಾಗಿ ಕೊಟ್ಟಿರುವುದರಿಂದ ಅದು ನಮ್ಮಲ್ಲಿದೆ(ಯಾವುದೇ ಕ್ಷಣದಲ್ಲಿ ಆತ ಅದನ್ನು ಹಿಂದೆ ಪಡೆಯಬಹುದು ಎನ್ನುವ ಎಚ್ಚರ ನಮ್ಮಲ್ಲಿರಬೇಕು). ನಮ್ಮ ಸುತ್ತ ರೂಪಾತ್ಮಕ ಪ್ರಪಂಚವನ್ನು ಭಗವಂತ  ಸೃಷ್ಟಿಸಿರುವುದರಿಂದ ನಾವು ಅದನ್ನು ನೋಡುಬಹುದು. ನಮ್ಮ ಕಣ್ಣು ರೂಪವನ್ನು ಗ್ರಹಿಸುವುದಕ್ಕೋಸ್ಕರ ಮುಗಿಲ ಕಣ್ಣಾದ ಸೂರ್ಯನನ್ನು ಭಗವಂತ ಇಟ್ಟಿರುವುದರಿಂದ ರೂಪ ಕಣ್ಣಿಗೆ ಕಾಣಿಸುತ್ತದೆ. ಇದೆಲ್ಲವನ್ನೂ ತಿಳಿದಾಗ, ಎಚ್ಚರದ ಸ್ಥಿತಿಯಲ್ಲಿನ ಇಂದ್ರಿಯಾನುಭವದ ಹಿಂದಿನ ಆ ಭಗವದ್  ಶಕ್ತಿಯ ಮಹತ್ವ ತಿಳಿಯುತ್ತದೆ. ಇಂತಹ ವಿಶ್ವ ನಾಮಕ ಭಗವಂತನನ್ನು ಓಂಕಾರದಲ್ಲಿ ಧ್ಯಾನಿಸುವುದೇ ಅ-ಕಾರೋಪಾಸನೆ.
ಓಂಕಾರದಲ್ಲಿನ ಎರಡನೇ ಅಕ್ಷರವಾದ ‘ಉ’ ಉತ್ಕರ್ಷ ಎನ್ನುವುದರ  ಸಂಕ್ಷೇಪಾಕ್ಷರ. ಉತ್ಕರ್ಷ ಎಂದರೆ ಒಳಕ್ಕೆ ಸೆಳೆದುಕೊಳ್ಳುವುದು. ಎಲ್ಲಾ ಇಂದ್ರಿಯಗಳನ್ನು ಒಳಕ್ಕೆ ಸೆಳೆದುಕೊಂಡು ಒಳಗಿನ ಪ್ರಪಂಚದಲ್ಲಿ ಕನಸು ಕಾಣುವುದೇ ಎಚ್ಚರದ ನಂತರದ ಎರಡನೇ ಅವಸ್ಥೆ. ಯ ಏಷ ಸುಪ್ತೇಷು ಜಾಗರ್ತಿ ಕಾಮಂ ಕಾಮಂ ಪುರುಷೋ ನಿರ್ಮಿಮಾಣಃ (ಕಠ-೨-೨-೮)    ನಾವು ಮಲಗಿರುವಾಗ ಎಚ್ಚರದಿಂದಿದ್ದು, ನಮ್ಮ ಗಂಟಲಿನಲ್ಲಿ ವಿಶುದ್ಧಿಚಕ್ರದ ಒಂದು ಸೂಜಿ ಮೊನೆಯಷ್ಟು ಸೂಕ್ಷ್ಮ ಪರದೆಯಲ್ಲಿ    ನಮಗೆ ಕನಸಿನ ಪ್ರಪಂಚವನ್ನು ತೋರುವವನು ಉ-ಕಾರ ವಾಚ್ಯ ತೈಜಸ ನಾಮಕ ಭಗವಂತ. ಇದು ಭಗವಂತನ ಪ್ರದ್ಯುಮ್ನ ರೂಪ. ಒಳಗೆ ಬೆಳಕು(ದ್ಯುಮ್ನ) ಹಾಯಿಸಿ ಕನಸು ಕಾಣಿಸುವ ರೂಪವಿದು. ಕನಸು ಕಾಲದ ಬೇಲಿಯನ್ನು ಮೀರಿ ಕೆಲಸ ಮಾಡಬಲ್ಲುದು. ಅಂದರೆ ಮುಂದೆ ನಡೆಯುವ ವಿಷಯ ಇಂದು ಕನಸಿನಲ್ಲಿ ಬಂದರೆ ಆಶ್ಚರ್ಯವಿಲ್ಲ. ಕನಸಿನ ಅದ್ಭುತ  ಪ್ರಪಂಚವನ್ನು ನಮ್ಮ ಮುಂದೆ ತೆರೆದಿಡುವ ಭಗವಂತನ ಲೀಲೆಯನ್ನು  ಬೃಹದಾರಣ್ಯಕ ಉಪನಿಷತ್ತು  ಸುಂದರವಾಗಿ ಚಿತ್ರಿಸುತ್ತದೆ. ಅಲ್ಲಿ ಹೇಳುತ್ತಾರೆ:  “ನ ತತ್ರ ರಥಾಃ ನ ರಥಯೋಗಾ ನ ಪಂಥಾನೋ ಭವಂತಿ ಅಥ ರಥಾನ್ ರಥಯೋಗಾನ್  ಪಥಃ ಸೃಜತೇ; ನ ತತ್ರಾನಂದಾ ಮುದಃ ಪ್ರಮುದೋ ಭವಂತಿ, ಅಥಾನಂದಾನ್  ಮುದಃ ಪ್ರಮುದಃ ಸೃಜತೇ; ನ ತತ್ರ ವೇಶಾಂತಾಃ ಪುಷ್ಕರಿಣ್ಯಃ ಸ್ರವಂತ್ಯೋ ಭವಂತಿ, ಅಥ ವೇಶಾಂತಾನ್ ಪುಷ್ಕರಿಣೀಃ ಸ್ರವಂತೀಃ ಸೃಜತೇ; ಸ ಹಿ ಕರ್ತಾ” (೪-೩-೧೦).  ಅಂದರೆ- ಅಲ್ಲಿ ರಥವಿಲ್ಲ-ಕುದುರೆಗಳಿಲ್ಲ-ರಸ್ತೆಗಳಿಲ್ಲ, ಆನಂದ-ಹರ್ಷ-ಪ್ರಮೋದಗಳಿಲ್ಲ, ಕೆರೆ-ಸರೋವರ-ನದಿಗಳಿಲ್ಲ. ಆದರೆ ಎಲ್ಲವನ್ನೂ ಸೃಷ್ಟಿಮಾಡಿ ನಮ್ಮ ಅನುಭವಕ್ಕೆ ಬರುವಂತೆ ಮಾಡುತ್ತಾನೆ ಕನಸಿನ ನಿಯಾಮಕನಾದ ತೈಜಸ ನಾಮಕ ಭಗವಂತ. ಇಂತಹ ಉ-ಕಾರ ವಾಚ್ಯ ಭಗವಂತನನ್ನು ಓಂಕಾರದಲ್ಲಿ ಧ್ಯಾನಿಸುವುದೇ  ಉ-ಕಾರೋಪಾಸನೆ.
ಓಂಕಾರದಲ್ಲಿನ ಮೂರನೇ ಅಕ್ಷರ ಮ-ಕಾರ. ಇದು ಮಾನ(ಅಂತರ್ಗತ) ಎನ್ನುವುದರ ಸಂಕ್ಷೇಪಾಕ್ಷರ. ಮಾನ ಎಂದರೆ ಹುದುಗಿಕೊಳ್ಳುವುದು. ಹೃದಯದಲ್ಲಿರುವ ಜೀವವನ್ನು  ಹೃದಯದಲ್ಲೇ ನೆಲೆಸಿರುವ ಮ-ಕಾರವಾಚ್ಯ ಭಗವಂತ  ತನ್ನ ಮಡಿಲಿನಲ್ಲಿ ಹುದುಗಿಸಿಕೊಳ್ಳುವ ಸ್ಥಿತಿ- ನಮ್ಮ ನಿದ್ರಾಸ್ಥಿತಿ.  ಈ ಸ್ಥಿತಿಯಲ್ಲಿ ನಮ್ಮ ಯಾವ ಬಾಹ್ಯೇಂದ್ರಿಯಗಳೂ ಕೆಲಸ ಮಾಡುವುದಿಲ್ಲ. ಜೀವನನ್ನು ತನ್ನೊಳಗೆ ಕರ್ಷಣೆಮಾಡಿ ನಿದ್ರೆ ಬರಿಸುವ ಸಂಕರ್ಷಣ ಈ ಸ್ಥಿತಿಯ ನಿಯಾಮಕ. ಹೇಗೆ ತಾಯಿಯ ಮಡಿಲಲ್ಲಿರುವ ಮಗು ಭಯಾತೀತವಾಗಿರುತ್ತದೋ ಹಾಗೇ, ಭಗವಂತನ ಮಡಿಲಲ್ಲಿ ನಿದ್ರಿಸುವ ಜೀವಕ್ಕೆ ಭಯ ಮತ್ತು ದುಃಖದ ಸ್ಪರ್ಶವಿಲ್ಲ. ನಿದ್ರೆಯಲ್ಲಿ ನಮಗೆ ‘ನನ್ನದು’ ಎನ್ನುವುದರ ಅರಿವಿಲ್ಲದಿರುವುದರಿಂದ ಭಯವಿಲ್ಲ. ನಾವು ಜೀವನದಲ್ಲಿ ದುಃಖಾತೀತರಾಗಬೇಕೆಂದರೆ ಎಚ್ಚರದಲ್ಲೂ ಕೂಡಾ ಈ ‘ನನ್ನ’ ಎನ್ನುವ ಕುಕ್ಕುಲತೆ(attachment-ಮೋಹ-ವಾಂಛಲ್ಯ)ಯನ್ನು ಕಡಿಮೆ ಮಾಡಿಕೊಳ್ಳಬೇಕು. ಇದು ಭಾರತೀಯ ತತ್ತ್ವಶಾಸ್ತ್ರ ಹೇಳುವ ಅಪೂರ್ವ ಮನಃಶಾಸ್ತ್ರ. ನಿದ್ರೆಯ ನಿಯಾಮಕ, ಮ-ಕಾರವಾಚ್ಯ, ಪ್ರಾಜ್ಞ ನಾಮಕ ಭಗವಂತನನ್ನು ಓಂಕಾರದಲ್ಲಿ ಉಪಾಸನೆ ಮಾಡುವುದೇ ಮ-ಕಾರೋಪಾಸನೆ.
ಒಟ್ಟಿನಲ್ಲಿ ಹೇಳಬೇಕೆಂದರೆ:  ಬ್ರಹ್ಮನನ್ನು ಹೇಳುವ ಅಕ್ಷರದಿಂದ (ಓಂಕಾರದಿಂದ) ಅಕ್ಷರನಾದ ಬ್ರಹ್ಮನನ್ನು ಧ್ಯಾನದಲ್ಲಿ ತಿಳಿಯಬೇಕು.  ಮೂರು ಕಾಲದಲ್ಲಿ ಹಾಗೂ ಮೂರು ಲೋಕದಲ್ಲಿ ತುಂಬಿರುವ, ಮೂರು ಅವಸ್ಥೆಗಳನ್ನು ನಿಯಂತ್ರಿಸುವ,  ಸೃಷ್ಟಿ-ಸ್ಥಿತಿ-ಸಂಹಾರಕರ್ತನಾದ, ಮೂರು ವೇದಗಳಿಂದ ಪ್ರತಿಪಾದ್ಯನಾದ ಭಗವಂತನನ್ನು ಧ್ಯಾನದಲ್ಲಿ ಕಾಣುವ ಪ್ರಯತ್ನವನ್ನು ನಾವು ಮಾಡಬೇಕು. ಓಂಕಾರ ವಾಚ್ಯನಾದ ಭಗವಂತನ ಗುಣವನ್ನು ಓಂಕಾರದ ಒಂದೊಂದು ಅಕ್ಷರದಲ್ಲಿ ಹಾಗೂ ಸಮಷ್ಟಿಯಾಗಿ ಅನುಸಂಧಾನ ಮಾಡಬೇಕು.
ಓಂಕಾರಕ್ಕಿರುವುದು ಒಂದೇ ಮುಖವಲ್ಲ. ಅದಕ್ಕೆ ಅನೇಕ ಮುಖಗಳಿವೆ. ಮಾಂಡೂಕ್ಯ ಉಪನಿಷತ್ತಿನಲ್ಲಿ ಹೇಳುವಂತೆ: ಅಮಾತ್ರೋSನಂತಮಾತ್ರಶ್ಚ ದ್ವೈತಸ್ಸ್ಯೋಪಶಮಃ ಶಿವಃ   ಓಂಕಾರೋ ವಿದಿತೋ ಏನ ಸ ಮುನಿರ್ನೇತಾರೋ ಜನಃ  ಇಲ್ಲಿ ಹೇಳುವಂತೆ-ಓಂಕಾರ ‘ಅನಂತಮಾತ್ರ’.  ಮಾತ್ರೆಗಳು ಎಂದರೆ ರೂಪಗಳು. ಅನಂತ ರೂಪನಾದ ಭಗವಂತನ ಅನಂತ ರೂಪಗಳನ್ನೂ  ಓಂಕಾರ ಹೇಳುತ್ತದೆ. ಹಾಗಾಗಿ ಓಂಕಾರದ ಅರ್ಥವೂ ಅನಂತ. ಓಂಕಾರದ ಒಂದು ಅಧಿಷ್ಠಾನದಲ್ಲಿ ಭಗವಂತನ ಅನಂತ ರೂಪಗಳ ಚಿಂತನೆ ಸಾಧ್ಯ. ಎಚ್ಚರ-ಕನಸು-ನಿದ್ರೆಯನ್ನು ನಿಯಂತ್ರಿಸುವ ಭಗವಂತನನ್ನು ನಾವು ಈ ಮೂರು ಅವಸ್ಥೆಗಳಿನ್ದಾಚೆಗೆ ಹೋಗಿ ಧ್ಯಾನ ಮಾಡಬೇಕು. ಓಂಕಾರದ ನಾದದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ, ನಾದವಾಚ್ಯನಾದ ಭಗವಂತನಲ್ಲಿ ಮನಸ್ಸನ್ನು ನೆಲೆಗೊಳಿಸಬೇಕು.  ಎಚ್ಚರ-ಕನಸು-ನಿದ್ರೆಯಿಂದಾಚೆಗಿನ ನಾಲ್ಕನೇ ಸ್ಥಿತಿ ‘ತುರಿಯಾವಸ್ಥೆ’. ಈ ಸ್ಥಿತಿಯಲ್ಲಿ ಕಾಣುವ ಭಗವಂತನ ಹೆಸರು ‘ತುರಿಯ’(ನಾಲ್ಕನೇ ರೂಪ). ಇದು ವಾಸ್ತವವಾಗಿ ವಾಸುದೇವ ರೂಪ.  ಮೋಕ್ಷಗಮ್ಯನಾದ ಭಗವಂತನ ಮೋಕ್ಷಪ್ರದ ರೂಪವಿದು. ಇದಲ್ಲದೆ ನಾದ ಪ್ರತಿಪಾದ್ಯವಾದ ಭಗವಂತನ ಇನ್ನೊಂದು ರೂಪ ವರಾಹರೂಪ.
ನಾದೋಪಾಸನೆ ಬಹಳ ಕ್ಲಿಷ್ಟವಾದ ಉಪಾಸನೆ. ಸಾಧನೆಯಲ್ಲಿ ಅಪರೋಕ್ಷ ಜ್ಞಾನಿಗಳಿಗೂ ಕೂಡಾ ಭಗವಂತನ ಸಾಕ್ಷಾತ್ಕಾರ ಪಡೆಯುವ ಸ್ಥಿತಿಯಲ್ಲಿ ವಾಸುದೇವ ರೂಪ ಸದಾ ಕಾಣಿಸುವುದಿಲ್ಲ. ಅವರು ಎಲ್ಲೋ ಆಗೊಮ್ಮೆ-ಈಗೊಮ್ಮೆ ಮಿಂಚಿನಂತೆ ಈ ರೂಪವನ್ನು ಕಾಣುತ್ತಾರೆ. ಇಂತಹ ದುರ್ಲಭವಾದ ವಾಸುದೇವ ರೂಪದ ಸಾಕ್ಷಾತ್ಕಾರಕ್ಕಾಗಿ ಯಾವ ಸಿದ್ಧತೆ ಬೇಕು ಎನ್ನುವುದನ್ನು ಶುಕಾಚಾರ್ಯರು ಮುಂದೆ ವಿವರಿಸುತ್ತಾರೆ.

Wednesday, October 2, 2013

Shrimad BhAgavata in Kannada -Skandha-02-Ch-01(2)

ಶುಕಾಚಾರ್ಯರು “ನಾನು ಈಗ ಹೇಳುತ್ತಿರುವ ಗ್ರಂಥ ಭಾಗವತ ಪುರಾಣ ಎನ್ನುವ ಬ್ರಹ್ಮಸಮ್ಮಿತ” ಎಂದಿದ್ದಾರೆ. ಇಲ್ಲಿ ‘ಭಾಗವತ’ ಎನ್ನುವ ಶಬ್ದ ಮೂರು ಅರ್ಥಗಳಲ್ಲಿ ಈ ಪುರಾಣಕ್ಕೆ ಅನ್ವರ್ಥವಾಗಿದೆ. ಭಗವಂತನನ್ನು ಪ್ರತಿಪಾದಿಸುವ ಗ್ರಂಥವಾಗಿರುವುದರಿಂದ ಇದು ಭಾಗವತ; ಭಗವಂತನ ಅವತಾರವಾದ ವೇದವ್ಯಾಸರು ರಚಿಸಿರುವ ಗ್ರಂಥವಾಗಿರುವುದರಿಂದ ಇದು ಭಾಗವತ ಮತ್ತು ಭಗವದ್ ಭಕ್ತರಿಗೆ(ಭಾಗವತರಿಗೆ) ಪ್ರಿಯವಾದ ಗ್ರಂಥವಾದುದರಿಂದ ಇದು ಭಾಗವತ. ಇನ್ನು ಪುರಾಣ ಎಂದರೆ ಪ್ರಾಚೀನ ಗ್ರಂಥ. ಇದು ಎಂದೂ ಹೊಸತನವನ್ನು ಕಳೆದುಕೊಳ್ಳದ ಹಳೇ ಗ್ರಂಥ.
ಇಲ್ಲಿ ಬಳಸಿರುವ ‘ಬ್ರಹ್ಮಸಮ್ಮಿತ’ ಎನ್ನುವ ವಿಶೇಷಣ ಎರಡು ವಿಧದಲ್ಲಿ ತೆರೆದುಕೊಳ್ಳುತ್ತದೆ. ‘ಸಮ್ಮಿತ’ ಎಂದರೆ ‘ತಿಳಿಯಲ್ಪಟ್ಟದ್ದು’.  ಬ್ರಹ್ಮ ಎಂದರೆ ಶಬ್ದಗಳಲ್ಲೇ ಅತಿ ದೊಡ್ಡದಾದದ್ದು--ಅಂದರೆ  ವೇದ.  ಅದೇ ರೀತಿ ಬ್ರಹ್ಮ ಎಂದರೆ ಸಮಸ್ತ ಪ್ರಪಂಚದಲ್ಲಿ ಅತಿ ದೊಡ್ಡ ವಸ್ತುವಾಗಿರುವ ಭಗವಂತ. ಹೀಗಾಗಿ ವೇದತುಲ್ಯವಾದುದು ಹಾಗೂ  ಯಾವುದರಿಂದ ಭಗವಂತ ಚೆನ್ನಾಗಿ ತಿಳಿಯಲ್ಪಡುತ್ತಾನೋ ಅದು ಬ್ರಹ್ಮಸಮ್ಮಿತ. ಅಂದರೆ ಭಗವಂತನ ಬಗೆಗೆ ನಮಗೆ ಯಥಾರ್ಥವಾದ ಅರಿವನ್ನು ಕೊಡತಕ್ಕಂತಹ ಗ್ರಂಥ ಭಾಗವತ. ಒಟ್ಟಿನಲ್ಲಿ ಹೇಳಬೇಕೆಂದರೆ: “ಭಗವಂತನನ್ನು ಚೆನ್ನಾಗಿ ತಿಳಿಸುವ, ವೇದತುಲ್ಯವಾದ ಭಾಗವತವೆಂಬ ಪುರಾಣವನ್ನು ನಾನು ನಿನಗೆ ಹೇಳುತ್ತೇನೆ” ಎಂದಿದ್ದಾರೆ ಶುಕಾಚಾರ್ಯರು. [ಭಾಗವತವನ್ನು ಪಂಚಮವೇದ ಎಂದು ಕರೆಯುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.]
ಇಲ್ಲಿ ಶುಕಾಚಾರ್ಯರು “ನಾನು ನನ್ನ ತಂದೆಯಾದ ದ್ವೈಪಾಯನರಿಂದ ‘ದ್ವಾಪರಾದೌ’ದಲ್ಲಿ ಅಧ್ಯಯನ ಮಾಡಿರುವ  ಭಾಗವತವನ್ನು ನಿನಗೆ ಹೇಳುತ್ತೇನೆ” ಎಂದಿದ್ದಾರೆ. ಮೇಲ್ನೋಟದಲ್ಲಿ ನೋಡಿದರೆ  ‘ದ್ವಾಪರಾದೌ’  ಎಂದರೆ ದ್ವಾಪರದ ಆದಿ. ಆದರೆ ನಮಗೆ ತಿಳಿದಂತೆ ದ್ವಾಪರದ ಅಂತ್ಯದಲ್ಲಿ ವೇದವ್ಯಾಸರ ಅವತಾರವಾಗಿರುವುದು. ಹೀಗಿರುವಾಗ ದ್ವಾಪರದ ಆದಿಯಲ್ಲಿ ಹೇಗೆ ಈ ಉಪದೇಶ ನಡೆಯಿತು? ಈ ಎಲ್ಲಾ ಸಮಸ್ಯೆಗೆ ಉತ್ತರ ಸ್ಕಾಂದಪುರಾಣದಲ್ಲಿದೆ. ಅಲ್ಲಿ ಹೇಳುತ್ತಾರೆ: ದ್ವಾಪರೇ, ಆದೌ ಚ ಕೃಷ್ಣಾವತಾರಾಪೇಕ್ಷಯಾ ವ್ಯಾಸಃ ಷಟ್ ಶತ ವರ್ಷೀಯೋ ಧೃತರಾಷ್ಟ್ರ ಮಜೀಜನತ್ ಇತಿ ಸ್ಕಾಂದೇ    ಇಲ್ಲಿ  ಹೇಳುವಂತೆ ‘ದ್ವಾಪರಾದೌ’ ಎಂದರೆ ದ್ವಾಪರದ ಆದಿ ಅಲ್ಲ. ದ್ವಾಪರದಲ್ಲಿ, ಅದರಲ್ಲಿಯೂ ಕೃಷ್ಣಾವತಾರಕ್ಕಿಂತ ಮೊದಲು ವೇದವ್ಯಾಸರ ಅವತಾರವಾಯಿತು; ವೇದವ್ಯಾಸರು ಆರುನೂರು ವರ್ಷ ವಯಸ್ಸಿನವರಿದ್ದಾಗ ಅವರಿಂದ ಧೃತರಾಷ್ಟ್ರನ  ಜನನವಾಯಿತು.  ಈ ಹಿನ್ನೆಲೆಯಲ್ಲಿ ಶುಕಾಚಾರ್ಯರ ಮಾತನ್ನು ಗಮನಿಸಿದರೆ ಅವರು ಹೇಳಿರುವುದು “ಕೃಷ್ಣಾವತಾರಕ್ಕಿಂತ ಮೊದಲು, ದ್ವಾಪರದಲ್ಲಿ ವ್ಯಾಸರು ನನಗೆ ಭಾಗವತವನ್ನು ಹೇಳಿದರು” ಎಂದು.  ಈ ಮಾತಿನಿಂದ ನಮಗೆ ತಿಳಿಯುವುದೇನೆಂದರೆ: ಮಹಾಭಾರತವನ್ನು ಹೇಗೆ ವೇದವ್ಯಾಸರು ಮಹಾಭಾರತ ನಡೆಯುವ ಮೊದಲೇ ರಚಿಸಿದ್ದರೋ ಹಾಗೇ, ಕೃಷ್ಣನ ಕಥೆಯಾಗಿರುವ ಭಾಗವತವನ್ನು ರಚಿರುವುದು  ಕೃಷ್ಣಾವತಾರಕ್ಕಿಂತಲೂ ಮೊದಲು! ಏಕೆಂದರೆ ಈ ಎಲ್ಲಾ ಘಟನೆಗಳೂ ಕೂಡಾ ಕಾಲಚಕ್ರದಲ್ಲಿ ಕಾಲಾತೀತವಾಗಿ ನಡೆಯುವಂತಹದ್ದು. ಈ ಘಟನೆ ಹಿಂದಿನ ಕಲ್ಪದಲ್ಲಿಯೂ ಆಗಿದೆ, ಈ ಕಲ್ಪದಲ್ಲಿಯೂ ನಡೆದಿದೆ, ಮುಂದಿನ ಕಲ್ಪದಲ್ಲೂ ನಡೆಯುತ್ತದೆ. ವೈದಿಕವಾದ, ಶಾಸ್ತ್ರೀಯವಾದ ಇತಿಹಾಸಕ್ಕೆ ಭೂತಕಾಲವಿದೆ, ವರ್ತಮಾನ ಕಾಲವಿದೆ ಹಾಗೂ ಭವಿಷ್ಯತ್ಕಾಲವೂ ಇದೆ.
ಇಲ್ಲಿ ವೇದವ್ಯಾಸರನ್ನು ‘ದ್ವೈಪಾಯನ’ ಎಂದು ಸಂಬೋಧಿಸಿದ್ದಾರೆ. ವ್ಯಾಸರ ಮೂಲನಾಮ ಕೃಷ್ಣ. ಅವರು ಯಮುನಾದ್ವೀಪದಲ್ಲಿ ಹುಟ್ಟಿರುವುದರಿಂದ ಅವರಿಗೆ ಬಂದ ಹೆಸರು ದ್ವೈಪಾಯನ. ನಂತರ ವೇದವನ್ನು ವಿಂಗಡಣೆ ಮಾಡಿ ಕೊಟ್ಟಿರುವುದರಿಂದ ಅವರಿಗೆ ವೇದವ್ಯಾಸ ಎನ್ನುವ ಶಿರೋನಾಮೆ ಬಂತು. ಭಾಗವತವನ್ನು ಭಗವಂತನ ಅವತಾರವಾದ ವೇದವ್ಯಾಸರು(ಹರಿ) ತನ್ನ ಮಗ, ಶಿವನ ಅವತಾರವಾದ ಶುಕಾಚಾರ್ಯರಿಗೆ(ಹರ)  ಹೇಳಿದರು. ಹೀಗೆ ಹರಿ-ಹರರಿಂದ ಹರಿದುಬಂದ ಗ್ರಂಥ ಭಾಗವತ.

ಪರಿನಿಷ್ಠಿತೋSಪಿ ನೈರ್ಗುಣ್ಯ ಉತ್ತಮಶ್ಲೋಕಲೀಲಯಾ
ಗೃಹೀತಚೇತಾ ರಾಜರ್ಷ ಆಖ್ಯಾನಂ ಯದಧೀತವಾನ್ ೦೯
      
ತಾನೇಕೆ ಭಾಗವತವನ್ನು ಕೇಳಿದೆ ಎನ್ನುವುದನ್ನು ವಿವರಿಸುತ್ತಾ ಶುಕಾಚಾರ್ಯರು ಹೇಳುತ್ತಾರೆ: “ಜೀವನ್ಮುಕ್ತನಾದ ನಾನು ಏನನ್ನೋ  ಗಳಿಸುವುದಕ್ಕೊಸ್ಕರ ಭಾಗವತ ಶ್ರವಣ ಮಾಡಿದ್ದಲ್ಲ, ಬದಲಿಗೆ ಭಗವಂತನ ಲೀಲೆಗಳನ್ನು ಕೇಳಬೇಕು ಎನ್ನುವ ತುಡಿತದಿಂದಾಗಿ ತಂದೆಯಿಂದ ಭಾಗವತ ಕೇಳಿದೆ” ಎಂದು.  ಇಲ್ಲಿ ಶುಕಾಚಾರ್ಯರು ಭಗವಂತನನ್ನು ‘ಉತ್ತಮಶ್ಲೋಕ’ ಎಂದು ಸಂಬೋಧಿಸಿದ್ದಾರೆ.   ಸಂಸಾರ ಬಂಧವನ್ನು ದಾಟಿನಿಂತ   ಅಪರೋಕ್ಷ ಜ್ಞಾನಿಗಳೂ ಕೂಡಾ ಯಾರ ಗುಣಗಾನ ಮಾಡಲು ಇಷ್ಟಪಡುತ್ತಾರೋ ಅಂತಹ ಭಗವಂತ ಉತ್ತಮಶ್ಲೋಕ.