Tuesday, January 29, 2013

Shrimad BhAgavata in Kannada -Skandha-01-Ch-03(06)


ಅವತಾರಾ ಹ್ಯಸಂಖ್ಯೇಯಾ ಹರೇಃ ಸತ್ತ್ವನಿಧೇರ್ದ್ವಿಜಾಃ                       
ಯಥಾ ವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ                 ೨೬

ಭಗವಂತನ ಅವತಾರಗಳ ಕುರಿತು ವಿವರಿಸಿದ ಉಗ್ರಶ್ರವಸ್ ಹೇಳುತ್ತಾರೆ: “ಭಗವಂತನ ಅವತಾರವನ್ನು ‘ಇಷ್ಟು’ ಎಂದು ಲೆಕ್ಕ ಹಿಡಿಯಲು ಸಾಧ್ಯವಿಲ್ಲ. ಆತನ ಅನುಸಂಧಾನಕ್ಕಾಗಿ ಕೆಲವು ಮುಖ್ಯ ಅವತಾರಗಳನ್ನು ಹೇಳುತ್ತೇವೆ ಹೊರತು, ನಾವು ಹೇಳಿದಷ್ಟೇ ಅವತಾರಗಳಲ್ಲ” ಎಂದು. ಭಗವಂತನ ಅವತಾರಗಳು ಅಸಂಖ್ಯ. ಅವುಗಳನ್ನು ಎಣಿಸಲು ಸಾಧ್ಯವಿಲ್ಲ. ಲೋಕದಲ್ಲಿ ರಜಸ್ಸು-ತಮಸ್ಸು ವೃದ್ಧಿಯಾದಾಗ, ಸತ್ತ್ವವನ್ನು ಸ್ಥಾಪಿಸಲು ಭಗವಂತ ಅವತರಿಸಿ ಬರುತ್ತಾನೆ. ಹೀಗಾಗಿ ಆತ ರಜಸ್ಸು-ತಮಸ್ಸನ್ನು ಪರಿಹರಿಸುವ ಹರಿಯೂ ಹೌದು, ಸತ್ತ್ವ ನಿಧಿಯೂ ಹೌದು. ಇಂತಹ ಭಗವಂತನ ಅನಂತ ಅವತಾರಗಳನ್ನು ನಮ್ಮಿಂದ ಊಹಿಸುವುದೂ ಕಷ್ಟ.
ಇಲ್ಲಿ   “ಯಥಾ ವಿದಾಸಿನಃ ಕುಲ್ಯಾಃ ಸರಸಃ ಸ್ಯುಃ ಸಹಸ್ರಶಃ” ಎಂದರೆ: "ವಿದಾಸಿನವಾದ ಸರೋಹರದಿಂದ ಸಾವಿರಾರು ಮುಖವಾಗಿ ನೀರು ಕೆಳಕ್ಕೆ ಹರಿದು ಬರುವಂತೆ ಭಗವಂತ ಅವತರಿಸಿ ಬರುತ್ತಾನೆ" ಎಂದರ್ಥ. ಇಲ್ಲಿ ಬಳಸಿರುವ  ‘ವಿದಾಸಿನಃ’ ಎನ್ನುವ ಪದಕ್ಕೆ ಇಂದಿನ ಕೊಶಗಳಲ್ಲಿ ಅರ್ಥ ವಿವರಣೆ ಇಲ್ಲ. ‘ವಿದಾಸಿ’ ಎನ್ನುವುದಕ್ಕೆ ‘ಉನ್ನತ’ ಮತ್ತು ‘ಒಡೆದು ಹೋಗಿರುವ’ ಎನ್ನುವ ಅರ್ಥ ಕೊಡುವ ಎರಡು ಪೌರಾಣಿಕ ಪ್ರಯೋಗವನ್ನು ಆಚಾರ್ಯರು ಉಲ್ಲೇಖಿಸುತ್ತಾರೆ:
ವಿದಾಸಿನಃ ಉನ್ನತಾದ್ ಭಿನ್ನಾದ್ವಾ  
ತ್ರಿವಿಧಾ ಪುರುಷಾ ಲೋಕೇ ನೀಚಮಧ್ಯವಿದಾಸಿನಃ ಇತಿ ಬ್ರಾಹ್ಮೇ
ಚತುರ್ದಾ ವರ್ಣರೂಪೇಣ ಜಾಗದೇತದ್ ವಿದಾಸಿತಂ ಇತಿ ಚ

ಹೀಗಾಗಿ ವಿದಾಸಿಯಾದ ಸರೋಹರ ಎಂದರೆ ಎತ್ತರದಲ್ಲಿರುವ ಅಥವಾ ಒಡೆದುಹೋದ ಸರೋಹರ ಎಂದರ್ಥ. ಭಗವಂತ ಎತ್ತರದಲ್ಲಿರುವ ತುಂಬಿದ ಕೊಡ. ಎಂದೂ ಬತ್ತದ ಆ  ತುಂಬಿದ ಕೊಡ ಸಾವಿರಾರು ಮುಖವಾಗಿ ನಮ್ಮ ಉದ್ಧಾರಕ್ಕಾಗಿ ಕೆಳಕ್ಕೆ ಹರಿದು ಬರುತ್ತದೆ.

ಋಷಯೋ ಮನವೋ ದೇವಾ ಮನುಪುತ್ರಾ ಮಹೌಜಸಃ          
ಕಲಾಃ ಸರ್ವೇ ಹರೇರೇವ ಸಪ್ರಜಾಪತಯಃ ಸ್ಮೃತಾಃ                ೨೭

ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್      
ಇಂದ್ರಾರಿವ್ಯಾಕುಲಂ ಲೋಕಂ ಮೃಡಯಂತಿ ಯುಗೇ ಯುಗೇ     ೨೮

ಭಗವಂತನ ಅವತಾರಗಳ ಬಗ್ಗೆ ಹೆಚ್ಚಿನವರಲ್ಲಿ ಒಂದು ಸಂಶಯವಿದೆ. ಅದೇನೆಂದರೆ:  ಭಗವಂತನ ಅವತಾರರೂಪಕ್ಕೂ ಹಾಗೂ ಮೂಲ ರೂಪಕ್ಕೂ ಏನಾದರೂ ವ್ಯತ್ಯಾಸವಿದೆಯೋ ಎನ್ನುವುದು.  ಏಕೆಂದರೆ  ದೇವತೆಗಳು ಭೂಮಿಯಲ್ಲಿ ಅವತರಿಸಿದಾಗ ಅಲ್ಲಿ ಅವರಿಗೆ ಮೂಲ ರೂಪದ ಶಕ್ತಿ ಇರಬೇಕೆಂದೇನೂ ಇಲ್ಲ. ಇದೇ ರೀತಿ ಭಗವಂತನ ಅವತಾರ ಕೂಡಾ ಇರಬಹುದೇ ಎನ್ನುವುದು ಕೆಲವರ ಪ್ರಶ್ನೆ. ಈ ಸಂಶಯಕ್ಕೆ ಪೂರಕವಾಗಿ ರಾಮಾಯಣದಲ್ಲಿನ ಶ್ರೀರಾಮಚಂದ್ರನ ನುಡಿ. ಅಲ್ಲಿ ರಾಮ ಹೇಳುತ್ತಾನೆ: “ಆತ್ಮಾನಮ್ ಮಾನುಷಮ್ ಮನ್ಯೇ” ಎಂದು (ಯುದ್ಧಕಾಂಡ-೧೨೦-೧೧). ಅಂದರೆ: ‘ನಾನು ಒಬ್ಬ ಸಾಮಾನ್ಯ ಮನುಷ್ಯ’  ಎಂದರ್ಥ. ಇದು ಹೆಚ್ಚಿನವರಿಗೆ ಗೊಂದಲವನ್ನುಂಟುಮಾಡುತ್ತದೆ. ಕೆಲವರು “ಶ್ರೀರಾಮನಿಗೆ ತನ್ನ ಮೂಲರೂಪದ ಅರಿವಿರಲಿಲ್ಲ” ಎಂದು ತಪ್ಪಾಗಿ ತಿಳಿದಿರುವುದೂ ಉಂಟು. ಹಾಗಾಗಿ ನಾವಿಲ್ಲಿ ತಿಳಿಯಬೇಕಾಗಿರುವುದು ಭಗವಂತನ ಅವತಾರ ಮತ್ತು ಮೂಲರೂಪ ಎರಡೂ ಸಮಾನವೋ ಅಥವಾ ಅಲ್ಲಿ ವ್ಯತ್ಯಾಸವಿದೆಯೋ ಎನ್ನುವ ವಿಚಾರವನ್ನು. ಇದನ್ನು ತಿಳಿಸುವುದಕ್ಕಾಗಿಯೇ ಮೇಲಿನ ಶ್ಲೋಕವಿದೆ. ಈ ಶ್ಲೋಕವನ್ನು ಎಚ್ಚರದಿಂದ ಗಮನಿಸದೇ ಇದ್ದರೆ, ಇಲ್ಲೂ ಕೂಡಾ, ಇನ್ನೊಂದು ಗೊಂದಲ ಹುಟ್ಟುವ ಸಾಧ್ಯತೆ ಇದೆ!  ಇಲ್ಲಿ ಹೇಳುತ್ತಾರೆ: “ಏತೇ ಸ್ವಾಂಶಕಲಾಃ ಪುಂಸಃ ಕೃಷ್ಣಸ್ತು ಭಗವಾನ್ ಸ್ವಯಮ್” ಎಂದು. ಇದನ್ನು ಮೇಲ್ನೋಟದಲ್ಲಿ ನೋಡಿದರೆ: “ಎಲ್ಲಾ ಅವತಾರಗಳು ಭಗವಂತನ ಒಂದು ಅಂಶ, ಕೃಷ್ಣ ಒಬ್ಬನೇ ಪೂರ್ಣಾವತಾರ” ಎಂದು ಹೇಳಿದಂತೆ ಕಾಣಿಸುತ್ತದೆ. ಆದರೆ ನಾವು ಇಲ್ಲಿ ಹೇಳಿರುವ ವಿಚಾರವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. “ಏತೇ ಸ್ವಾಂಶಕಲಾಃ” ಎಂದರೆ: “ಇವು ಭಗವಂತನ ಕಲೆಗಳು ಅಥವಾ ಭಗವಂತನ ಅಂಶ” ಎಂದರ್ಥ. ಆದರೆ ಭಗವಂತ ಒಂದು ಅಖಂಡವಾದ ಶಕ್ತಿಯಾಗಿರುವುದರಿಂದ,  ಅಲ್ಲಿ ಒಂದು ತುಣುಕು ಎಂದೇನೂ ಇಲ್ಲ. ಆದ್ದರಿಂದ ಆತನ ಎಲ್ಲಾ ಅವತಾರಗಳೂ ಪೂರ್ಣಾವತಾರವೇ. ಇನ್ನು ಇಲ್ಲಿ ಬಳಕೆಯಾಗಿರುವ ‘ಕೃಷ್ಣ’ ಎನ್ನುವ ಪದ. ಈ ನಾಮ ಭಗವಂತನ ಮೂಲ ನಾಮ. ಕೃಷ್ಣಾವತಾರಕ್ಕೂ ಮೊದಲು ಭಗವಂತನನ್ನು ‘ಕೃಷ್ಣ’ ಎನ್ನುವ ನಾಮದಿಂದ ಸಂಬೋಧಿಸುವುದನ್ನು ನಾವು ಶಾಸ್ತ್ರದಲ್ಲಿ ಕಾಣಬಹುದು. ‘ಕೃಷ್ಣ’ ಎಂದರೆ ‘ಕರ್ಷಣೆ ಮಾಡುವವ. ನಮ್ಮನ್ನು ಸಂಸಾರದಿಂದ ಕರ್ಷಣೆ ಮಾಡಿ ಮೋಕ್ಷ ಕರುಣಿಸುವವ ಎಂದರ್ಥ. ಭಗವಂತನ ಸ್ವರೂಪಾವತಾರದಲ್ಲಿ ಎಂದೂ ಭೇದವಿಲ್ಲ. ಇದನ್ನು ಸ್ಪಷ್ಟವಾಗಿ ಬ್ರಹ್ಮವೈವರ್ತ ಪುರಾಣದಲ್ಲಿ  ಹೇಳಲಾಗಿದೆ:

ಏತೇ ಪ್ರೋಕ್ತಾ ಅವತಾರಾ ಮೂಲರೂಪೀ ಕೃಷ್ಣಃ ಸ್ವಯಮೇವ
ಜೀವಾಸ್ತತ್ಪ್ರತಿಬಿಂಬಾಂಶಾ ವರಾಹಾದ್ಯಾಃ ಸ್ವಯಂ ಹರಿಃ
ದೃಶ್ಯತೇ ಬಹುಧಾ ವಿಷ್ಣುರೈಶ್ವರ್ಯಾದೇಕ ಏವ ತು ಇತಿ ಬ್ರಹ್ಮವೈವರ್ತೇ

ಅಂದರೆ: “ಋಷಿಗಳು, ದೇವತೆಗಳು ಮುಂತಾದ ಜೀವರು ಭಗವಂತನ ಪ್ರತಿಬಿಂಬರೂಪ. ಆದರೆ  ವರಾಹ ಮುಂತಾದ  ಅವತಾರಗಳು ಸ್ವಯಂ ಭಗವಂತನಿಂದ ಅಭಿನ್ನ. ಒಬ್ಬನೇ ಒಬ್ಬ ವಿಷ್ಣುವು ತನ್ನ ಅನಂತ ಶಕ್ತಿಯಿಂದ ಅನೇಕ ರೂಪನಾಗಿ ಕಾಣಿಸಿಕೊಳ್ಳುತ್ತಾನೆ” ಎಂದರ್ಥ. ಭಗವಂತನ ಎಲ್ಲಾ ಅವತಾರಗಳೂ ಒಂದೇ. ಅಲ್ಲಿ ಒಂದು ಕಡಿಮೆ- ಇನ್ನೊಂದು ಹೆಚ್ಚು, ಒಂದು ಸಮಗ್ರ-ಇನ್ನೊಂದು ಅಸಮಗ್ರ; ಒಂದು ಪೂರ್ಣ-ಇನ್ನೊಂದು ಅಪೂರ್ಣ; ಒಂದರಲ್ಲಿ ಹೆಚ್ಚು ಶಕ್ತಿ-ಇನ್ನೊಂದರಲ್ಲಿ ಕಡಿಮೆ ಶಕ್ತಿ  ಎನ್ನುವ ವಿಭಾಗಗಳಿಲ್ಲ. ಸರ್ವಶಕ್ತನಾದ ಭಗವಂತನ ಪೂರ್ಣವಾದ ಶಕ್ತಿಯಲ್ಲಿ ಅಪೂರ್ಣತೆ ಇಲ್ಲ. ಆದರೆ ಅದನ್ನು ಆತ ಅಭಿವ್ಯಕ್ತ ಮಾಡುವುದರಲ್ಲಿ ವ್ಯತ್ಯಾಸವಿರಬಹುದು. ಭಗವಂತನ ಶಕ್ತಿ ಬೇರೆ ಮತ್ತು ಅದರ ಅಭಿವ್ಯಕ್ತಿ ಬೇರೆ. ಗೀತೆಯಲ್ಲಿ ಹೇಳುವಂತೆ:
ವಿದ್ಯಾವಿನಯಸಂಪನ್ನೇ  ಬ್ರಾಹ್ಮಣೇ ಗವಿ ಹಸ್ತಿನಿ ।
ಶುನಿ ಚೈವ ಶ್ವಪಾಕೇ ಚ ಪಂಡಿತಾಃ  ಸಮದರ್ಶಿನಃ      ॥೫-೧೮॥

ಎಲ್ಲಾ ಕಡೆ ಇರುವ ಭಗವಂತ ಸಮಾನ. ಆದ್ದರಿಂದ ಅವನ ರೂಪದಲ್ಲಿ ನಾವು ತಾರತಮ್ಯ ಕಲ್ಪಿಸಬಾರದು.
ಏಕೆ ಭಗವಂತ ಭೂಮಿಗಿಳಿದು  ಬರುತ್ತಾನೆ ಎಂದರೆ: ದೈತ್ಯರಿಂದ ಲೋಕಕ್ಕೆ ತೊಂದರೆಯುಂಟಾದಾಗ, ದೇವ-ದಾನವರ ಸಂಘರ್ಷದಲ್ಲಿ  ಆಸುರೀ ಶಕ್ತಿ ಅಥವಾ ತಮೋಗುಣ ಗೆದ್ದಾಗ-ಭಗವಂತ ಅನೇಕ ರೂಪದಲ್ಲಿ, ಯುಗ-ಯುಗದಲ್ಲೂ ಭೂಮಿಗಿಳಿದು ಬರುತ್ತಾನೆ. "ಸತ್ತ್ವವನ್ನು ಸ್ಥಾಪಿಸಿ ಜಗತ್ತಿಗೆ ನೆಮ್ಮದಿಯನ್ನು ಕೊಡಲು ಭಗವಂತ ಅವತಾರ ರೂಪಿಯಾಗಿ ಬರುತ್ತಾನೆ" ಎನ್ನುತ್ತಾರೆ ಉಗ್ರಶ್ರವಸ್

Saturday, January 26, 2013

Shrimad BhAgavata in Kannada -Skandha-01-Ch-03(05)



ತತಃ ಸಪ್ತದಶೇ ಜಾತಃ ಸತ್ಯವತ್ಯಾಂ ಪರಾಶರಾತ್    
ಚಕ್ರೇ ವೇದತರೋಃ ಶಾಖಾ ದೃಷ್ಟ್ವಾ ಪುಂಸೋSಲ್ಪಮೇಧಸಃ     ೨೧

ಭಗವಂತನ ಹದಿನೇಳನೇ ಅವತಾರ ವ್ಯಾಸಾವತಾರ.  ಸತ್ಯವತಿ-ಪರಾಶರರ ಮಗನಾಗಿ ವ್ಯಾಸಾವತಾರವಾಯಿತು. ಇದು ವೇದವನ್ನು ವಿಭಾಗ ಮಾಡಿದ ವಿಶಿಷ್ಠರೂಪ. ಇಲ್ಲಿ ರಾಮಾವತಾರಕ್ಕೂ ಮೊದಲು ವ್ಯಾಸಾವತಾರವನ್ನು ಕಾಲಕ್ರಮದಲ್ಲಿ ಹೇಳಿರುವುದನ್ನು ಕಾಣುತ್ತೇವೆ. ಇದು ನಮಗೆ ಸ್ವಲ್ಪ ಗೊಂದಲವನ್ನುಂಟುಮಾಡುತ್ತದೆ. ಇದನ್ನು ವಿವರಿಸುತ್ತಾ ಆಚಾರ್ಯರು ಹೇಳುತ್ತಾರೆ: “ರಾಮಾತ್ ಪೂರ್ವಮಪ್ಯಸ್ತಿ ವ್ಯಾಸಾವತಾರಃ” ಎಂದು. ಕೂರ್ಮ ಪುರಾಣದಲ್ಲಿ ಹೇಳುವಂತೆ: “ತೃತೀಯಂ ಯುಗಮಾರಭ್ಯ ವ್ಯಾಸೋ ಬಹುಷು ಜಿಜ್ಞವಾನ್”. ಇಲ್ಲಿ ಈ ಮನ್ವಂತರದಲ್ಲಿ ಮೂರನೇ ದ್ವಾಪರದಿಂದಾರಂಭಿಸಿ ಅನೇಕ ದ್ವಾಪರಗಳಲ್ಲಿ ವ್ಯಾಸರು ಅವತರಿಸುತ್ತಾರೆ ಎಂದಿದ್ದಾರೆ. ವ್ಯಾಸರ ಅವತಾರ ಈಗಾಗಲೇ ವೈವಸ್ವತ ಮನ್ವಂತರದ ಮೂರನೇ, ಏಳನೇ, ಹದಿನಾರನೇ, ಇಪ್ಪತ್ತೈದನೇ ಹಾಗೂ ಈಗ ಮುಗಿದಿರುವ ಇಪ್ಪತ್ತೆಂಟನೇ ದ್ವಾಪರದಲ್ಲಿ ಐದು ಬಾರಿ ಆಗಿದೆ. ರಾಮಾವತಾರ ಆಗಿರುವುದು ವೈವಸ್ವತ ಮನ್ವಂತರದ ಇಪ್ಪತ್ನಾಲ್ಕನೇ ತ್ರೇತಾಯುಗದಲ್ಲಿ.  ಈ ಕಾಲಕ್ರಮದಲ್ಲಿ ನೋಡಿದಾಗ ಭಗವಂತನ ಮೊದಲ ವ್ಯಾಸಾವತಾರ ಆಗಿರುವುದು ರಾಮಾವತಾರಕ್ಕಿಂತ ಮೊದಲು. ಇನ್ನೊಂದು ವಿಶೇಷವೇನೆಂದರೆ: ತನ್ನ ಪ್ರತೀ ಅವತಾರದಲ್ಲೂ ವ್ಯಾಸರು ಅವತರಿಸಿರುವುದು ಸತ್ಯವತಿ-ಪರಾಶರರ ಮಗನಾಗಿ.
ವ್ಯಾಸಾವತಾರವಾಗಿರುವುದೇ ವೇದ ವೃಕ್ಷಕ್ಕೆ ಶಾಖೆಗಳನ್ನು ನೀಡುವುದಕ್ಕೋಸ್ಕರ. ಅಖಂಡವಾದ ಮೂಲ ವೇದವನ್ನು ವಿಂಗಡಿಸಿ, ಜನರಿಗೆ ನೀಡಿದ ಅವತಾರವಿದು. ತನ್ನ ಮೊದಲ ನಾಲ್ಕು ಅವತಾರಗಳಲ್ಲಿ ಜ್ಞಾನಿಗಳಿಗೆ ವೇದ ವಿಂಗಡಣೆ ಮಾಡಲು ಮಾರ್ಗದರ್ಶಿಯಾಗಿದ್ದ ವ್ಯಾಸರು, ಇಪ್ಪತ್ತೆಂಟನೇ ದ್ವಾಪರದ ತನ್ನ ಅವತಾರದಲ್ಲಿ ಸ್ವಯಂ ವೇದ ವಿಂಗಡಣೆ ಮಾಡಿ ನಮಗೆ ನೀಡಿರುವುದು ಗಮನಾರ್ಹ.

ನರದೇವತ್ವಮಾಪನ್ನಃ ಸುರಕಾರ್ಯಚಿಕೀರ್ಷಯಾ      
ಸಮುದ್ರನಿಗ್ರಹಾದೀನಿ ಚಕ್ರೇ ವೀರ್ಯಾಣ್ಯತಃ ಪರಮ್   ೨೨

ರಾಜನಾಗಿ ಭೂಮಿಯಲ್ಲಿ ಅವತರಿಸಿ ಬಂದು, ರಾವಣನ ಸಂಹಾರಕ್ಕಾಗಿ ಸೀತೆಯನ್ನು ಅನ್ವೇಷಿಸುತ್ತಾ ಹೋಗಿ, ಸಮುದ್ರ ಸ್ತಂಭನ ಮಾಡಿ, ಸಮುದ್ರಕ್ಕೆ ಸೇತುವೆಯನ್ನು ಕಟ್ಟಿ, ರಾವಣನನ್ನು ಸಂಹಾರ ಮಾಡಿದ, ಅತಿಮಾನುಷ ಪೌರುಷ ತೋರಿದ ವಿಶೇಷ ಅವತಾರ ರಾವಾವತಾರ. ಇದು ಭಗವಂತನ ಹದಿನೆಂಟನೇ ಅವತಾರ.

ಏಕೋನವಿಂಶೇ ವಿಂಶತಿಮೇ ವೃಷ್ಣಿಷು ಪ್ರಾಪ್ಯ ಜನ್ಮನೀ            
ರಾಮಕೃಷ್ಣಾವಿತಿ ಭುವೋ ಭಗವಾನಹರದ್ ಭರಮ್                 ೨೩

ಬಲರಾಮ ಮತ್ತು ಕೃಷ್ಣ ಭಗವಂತನ ಹತ್ತೊಂಬತ್ತು ಮತ್ತು ಇಪ್ಪತ್ತನೇ ಅವತಾರ. ಇಲ್ಲಿ 'ಬಲರಾಮ' ಅವತಾರ ಪ್ರಥುಚಕ್ರವರ್ತಿಯಂತೆ ಆವೇಶಾವತಾರ. ಶೇಷನಲ್ಲಿ ಭಗವಂತನ ವಿಶೇಷ ಆವೇಶ ಇದ್ದ ರೂಪ ಬಲರಾಮ ರೂಪವಾದರೆ, ಶ್ರೀಕೃಷ್ಣ ಭಗವಂತನ ಸಾಕ್ಷಾತ್ ಅವತಾರ.  ರಾಮ ಮತ್ತು ಕೃಷ್ಣ ಎನ್ನುವ ಹೆಸರಿನಿಂದ, ಭೂಮಿಯ ಭಾರವನ್ನು ಇಳಿಸಲು, ವೃಷ್ಣಿ(ಯಾದವ) ವಂಶದಲ್ಲಿ ಭಗವಂತನ ಅವತಾರವಾಯಿತು.

ತತಃ ಕಲೌ ಸಂಪ್ರವೃತ್ತೇ ಸಮ್ಮೋಹಾಯ ಸುರದ್ವಿಷಾಮ್          
ಬುದ್ಧೋ ನಾಮ್ನಾ ಜಿನಸುತಃ ಕೀಕಟೇಷು ಭವಿಷ್ಯತಿ                  ೨೪

ಇಪ್ಪತ್ತೊಂದನೇ  ಅವತಾರ ಬುದ್ಧಾವತಾರ. ಈ ಅವತಾರ ಮೋಹಿನಿ ಅವತಾರದಂತೆ ಇನ್ನೊಂದು ಮೋಹಕ ಅವತಾರ. ತನ್ನ ಮೋಹಕ ರೂಪದಿಂದ ಅಸುರರನ್ನು  ಸೆಳೆದ ಅವತಾರವಿದು. ಹೀಗಾಗಿ ಬುದ್ಧ ದಶಾವತಾರದಲ್ಲಿ ಸೇರಿದ್ದರೂ ಕೂಡಾ, ಜಗತ್ತು ಶೂನ್ಯವೆಂದ ಮೋಹಕ ಅವತಾರಿಯಾಗಿರುವುದರಿಂದ, ಆ ರೂಪದಲ್ಲಿ ಭಗವಂತನ ಆರಾಧನೆ ಇಲ್ಲ. ಬ್ರಹ್ಮಾಂಡಪುರಾಣದಲ್ಲಿ ಬುದ್ಧನ ಮೋಹಕ ರೂಪದ ವರ್ಣನೆ ಕಾಣಬಹುದು:

ಮೋಹನಾರ್ಥಾಂ ದಾನವಾನಾಂ ಬಾಲರೂಪೀ ಪರಃ ಸ್ಥಿತಃ
ಪುತ್ರಂ ತಮ್ ಕಲ್ಪಯಾಮಾಸ ಮೂಢಬುದ್ಧಿರ್ಜಿನಃ ಸ್ವಯಂ
ತತಃ ಸಂಮೋಹಯಾಮಾಸ ಜಿನಾದ್ಯಾನ ಸುರಾಂಶಕಾನ್
ಭಗವಾನ್ ವಾಗ್ಭಿರುಗ್ರಾಭಿರಹಿಂಸಾವಾಚಿಭಿರ್ಹರಿಃ

ಕಲಿಯುಗದಲ್ಲಿ ಭಗವಂತನ ಅವತಾರವಾಗುವುದಿಲ್ಲ ಎನ್ನುತ್ತಾರೆ. ಹಾಗಿರುವಾಗ ಬುದ್ಧನ ಅವತಾರ ಈ ಕಲಿಯುಗದಲ್ಲಿ ಹೇಗಾಯಿತು ಎನ್ನುವುದು ಕೆಲವರ ಪ್ರಶ್ನೆ. ನಿಜ, ಕಲಿಯುಗದಲ್ಲಿ ಭಗವಂತನ ಅವತಾರವಿಲ್ಲ. ಆದರೆ ಈ ಅವತಾರವಾಗಿರುವುದು ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ. ಈಗ ನಡೆಯುತ್ತಿರುವುದು ಈ ಸಂಧಿಕಾಲ ಎನ್ನುವುದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬೇಕು.  ಇನ್ನೊಂದು ಪ್ರಶ್ನೆ ಏನೆಂದರೆ: ಬುದ್ಧ ಶುದ್ಧೋದನನ ಮಗ ಮತ್ತು ಆತ ಹುಟ್ಟಿದ್ದು ನೇಪಾಳದಲ್ಲಿ. ಆದರೆ ಇಲ್ಲಿ ಬುದ್ಧ ಜಿನನ ಮಗ ಮತ್ತು ಆತ ಕೀಕಟ(ಈಗಿನ ಬಿಹಾರ) ದೇಶದಲ್ಲಿ ಹುಟ್ಟಿದ ಎಂದಿದ್ದಾರೆ. ಹೌದು, ಗೌತಮ ಬುದ್ಧ ಶುದ್ಧೋದನನ ಮಗ . ಆದರೆ ಶುದ್ಧೋದನನ ಇನ್ನೊಂದು ಹೆಸರು ‘ಜಿನ’. ಜಿನನ ಮಗ ‘ಸಿದ್ಧಾರ್ಥ’ ಹುಟ್ಟಿದ್ದು ನೇಪಾಳದಲ್ಲಾದರೂ ಕೂಡಾ, ಆತ ‘ಬುದ್ಧ’ನೆಂದು ಹೆಸರು ಪಡೆದದ್ದು ಕೀಕಟ ದೇಶದಲ್ಲಿ.

ಅಥಾಸೌ ಯುಗಸಂಧ್ಯಾಯಾಂ ದಸ್ಯುಪ್ರಾಯೇಷು ರಾಜಸು      
ಜನಿತಾ ವಿಷ್ಣುಯಶಸೋ ನಾಮ್ನಾ ಕಲ್ಕೀ ಜಗತ್ಪತಿಃ                  ೨೫

ಕಲಿಯುಗ ಮುಗಿದು ತ್ರೇತಾಯುಗ ಸಂಧಿ ಬಂದಾಗ, ರಾಜರುಗಳೇ ದರೋಡೆಕೋರರಾದಾಗ, ‘ವಿಷ್ಣುಯಶಸ್ಸು’ ಎನ್ನುವ ಬ್ರಾಹ್ಮಣನ ಮಗನಾಗಿ  ಭಗವಂತ ಕಲ್ಕಿ ರೂಪದಲ್ಲಿ ಅವತರಿಸುತ್ತಾನೆ. ಇದು ಭಗವಂತನ ಇಪ್ಪತ್ತೆರಡನೇ ಅವತಾರ.
ಹೀಗೆ ಇಲ್ಲಿ ಭಗವಂತನ ‘ಪುರುಷ ‘ ಅವತಾರವನ್ನು ಸೇರಿಸಿ ನೋಡಿದರೆ ಒಟ್ಟು ಇಪ್ಪತ್ಮೂರು ಅವತಾರಗಳನ್ನು ಕಾಣುತ್ತೇವೆ. ಮೂಲ ಪದ್ಮನಾಭ ರೂಪ ಹಾಗೂ ಎರಡು ಆವೇಶಾವತಾರ(ಪ್ರಥುಚಕ್ರವರ್ತಿ ಮತ್ತು ಬಲರಾಮ)ವನ್ನು ಬಿಟ್ಟರೆ ಇಲ್ಲಿ ಒಟ್ಟು ಇಪ್ಪತ್ತು ಸ್ವರೂಪಾವತಾರವನ್ನು ಹೇಳಲಾಗಿದೆ. ಇದು ಒಂದು ರೀತಿಯಲ್ಲಿ ವಾಸುದೇವ ದ್ವಾದಶಾಕ್ಷರ ಮತ್ತು ಅಷ್ಟಾಕ್ಷರಗಳು(೧೨+೮=೨೦) ಹೇಳುವ ಭಗವಂತನ ಇಪ್ಪತ್ತು ಅವತಾರಗಳು.  

Tuesday, January 22, 2013

Shrimad BhAgavata in Kannada -Skandha-01-Ch-03(04)


ರೂಪಂ ಸ ಜಗೃಹೇ ಮಾತ್ಸ್ಯಂ ಚಾಕ್ಷುಷಾಂತರಸಂಪ್ಲವೇ          
ನಾವ್ಯಾರೋಪ್ಯ ಮಹೀಮಯ್ಯಾಮಪಾದ್ ವೈವಸ್ವತಂ ಮನುಮ್ ೧೫

ವೈವಸ್ವತ ಮನ್ವಂತರದ ಮೊದಲನೇ ಅವತಾರ ದಶಾವತಾರಗಳಲ್ಲಿ ಒಂದಾದ ಮತ್ಸ್ಯಾವತಾರ. ಈ ಅವತಾರ ನಡೆದದ್ದು ಚಾಕ್ಷುಷ ಮತ್ತು ವೈವಸ್ವತ ಮನ್ವಂತರದ ಸಂಧಿಕಾಲದಲ್ಲಿ. ನಮಗೆ ತಿಳಿದಂತೆ ಒಂದೊಂದು ಮನ್ವಂತರ ಮುಗಿದಾಗಲೂ ಒಂದು ಚಿಕ್ಕ ಪ್ರಳಯವಾಗುತ್ತದೆ. ಆ ಪ್ರಳಯದ ಅವಧಿ ಸುಮಾರು ೧೪೦೦ ರಿಂದ ೨೦೦೦ ವರ್ಷಗಳು. ಈ ಪ್ರಳಯಕಾಲದಲ್ಲಿ ಭೂಮಿಯ ಮೇಲಿನ ಬಹುತೇಕ ನಾಗರೀಕತೆ ನಾಶವಾಗುತ್ತದೆ. ಈ ಕಾಲದಲ್ಲಿ ಬದುಕುಳಿದ ಜನಾಂಗದಿಂದ ಮತ್ತೆ ಮರಳಿ ನಾಗರೀಕತೆ ಬೆಳೆಯುತ್ತದೆ. ಚಾಕ್ಷುಷ ಮತ್ತು ವೈವಸ್ವತ ಮನ್ವತರದ ಸಂಧಿಕಾಲದಲ್ಲಿನ ಪ್ರಳಯದಲ್ಲಿ ವೈವಸ್ವತ ಮನುವನ್ನು ರಕ್ಷಿಸುವುದಕ್ಕೋಸ್ಕರ ಕೋಡಿರುವ ಮೀನಿನ ರೂಪದಲ್ಲಿ ಭಗವಂತ ಕಾಣಿಸಿಕೊಂಡು, ಭೂಮಿಯಿಂದ ನಿರ್ಮಾಣಗೊಂಡ ದೋಣಿಯಲ್ಲಿ ಮನುವನ್ನು ಕುಳ್ಳಿರಿಸಿ ರಕ್ಷಿಸಿದ ಅವತಾರವಿದು. ಹೀಗೆ ಮುಂದಿನ ಸಂವತ್ಸರದ ಅಧಿಪತಿಯಾಗುವಂತೆ ಅವನನ್ನು ಉಳಿಸಿ, ಅವನಿಗೆ ಪೂರ್ಣಪ್ರಮಾಣದಲ್ಲಿ ತತ್ತ್ವ ಬೋಧನೆ ಮಾಡಿ ರಕ್ಷೆ ಕೊಟ್ಟ ಭಗವಂತನ ಹತ್ತನೇ ಅವತಾರ-ಮತ್ಸ್ಯಾವತಾರ.

ಸುರಾಸುರಾಣಾಮುದಧಿಂ ಮಥ್ನತಾಂ ಮಂದರಾಚಲಮ್         
ದಧ್ರೇ ಕಮಠರೂಪೇಣ ಪೃಷ್ಠ ಏಕಾದಶಂ ವಿಭುಃ                       ೧೬

ಭಗವಂತನ ಅವತಾರ ಮಾಲಿಕೆಯಲ್ಲಿ ಹನ್ನೊಂದನೇ ಅವತಾರ ಕೂರ್ಮಾವತಾರ. ದೇವತೆಗಳು ದಾನವರು ಸೇರಿ ಸಮುದ್ರ ಮಥನ ಮಾಡಿದಾಗ ಮಥನಕ್ಕೆ ಕಡಗೋಲಾಗಿ ಬಳಸಿದ ಮಂದರ ಪರ್ವತವನ್ನು, ಅದು ಸಮುದ್ರದಲ್ಲಿ ಮುಳುಗಿ ಹೋಗದಂತೆ ಕೂರ್ಮರೂಪವನ್ನು ತಾಳಿ, ತನ್ನ ಬೆನ್ನಲ್ಲಿ ಹೊತ್ತ  ಅವತಾರವಿದು. 

ಧಾನ್ವಂತರಂ ದ್ವಾದಶಮಂ ತ್ರಯೋದಶಮಮೇವ ಚ  
ಅಪಾಯಯತ್ ಸುಧಾಮನ್ಯಾನ್ ಮೋಹಿನ್ಯಾ ಮೋಹಯನ್ ಸ್ತ್ರೀಯಾ     ೧೭

ಸಮುದ್ರ ಮಥನ ಮಾಡುವಾಗ ಮೊದಲು ವಿಷ ಬರುತ್ತದೆ ಹಾಗೂ ಕೊನೆಯಲ್ಲಿ ಅಮೃತವನ್ನು ಹೊತ್ತು ಭಗವಂತ ಧನ್ವಂತರಿ ರೂಪಿಯಾಗಿ ಬರುತ್ತಾನೆ. ಇದು ಭಗವಂತನ ಹನ್ನೆರಡನೇ ಅವತಾರ. ಅಮೃತವನ್ನು ಪಡೆಯಲಿಕ್ಕಾಗಿ ಅಸುರರು ಗದ್ದಲ ಮಾಡಿದಾಗ, ಮೋಹಿನಿ ರೂಪ ತಾಳಿ, ಅಸುರರನ್ನು ಮೋಹಗೊಳಿಸಿ, ದೇವತೆಗಳಿಗೆ ಅಮೃತವನ್ನು ಹಂಚಿದ ಅವತಾರ ಭಗವಂತನ ಹದಿಮೂರನೇ ಅವತಾರ. 
 ಕಾಲಕ್ರಮಕ್ಕನುಗುಣವಾಗಿ ಇಲ್ಲಿ ಸಮುದ್ರಮಥನವನ್ನು ನರಸಿಂಹ ಅವತಾರಕ್ಕೂ ಮೊದಲು ಹೇಳಿರುವುದನ್ನು ಕಾಣುತ್ತೇವೆ. ಇದು ಸ್ವಲ್ಪ ಗೊಂದಲವನ್ನುಂಟುಮಾಡುತ್ತದೆ. ಏಕೆಂದರೆ ಪ್ರಹ್ಲಾದನ ಮೊಮ್ಮಗ ಬಲಿಚಕ್ರವರ್ತಿ ಸಮುದ್ರಮಥನ ಕಾಲದಲ್ಲಿ ದೇವತೆಗಳ ವಿರುದ್ಧ ಹೋರಾಡಿದ ಎನ್ನುವ ಕಥೆಯೊಂದಿದೆ. ಆದರೆ ಇಲ್ಲಿ ಪ್ರಹ್ಲಾದ ಹುಟ್ಟುವ ಮೊದಲು ಹಾಗೂ ಮತ್ಸ್ಯಾವತಾರದ ನಂತರ ಸಮುದ್ರಮಥನವನ್ನು ಹೇಳಿದ್ದಾರೆ. ಇದನ್ನು ವಿಶ್ಲೇಷಿಸಿದಾಗ ನಮಗೆ ತಿಳಿಯುವುದೇನೆಂದರೆ: ಇತಿಹಾಸದಲ್ಲಿ ಎರಡು ಸಮುದ್ರಮಥನವನ್ನು ಹೇಳಲಾಗುತ್ತದೆ. ಒಂದು ರೈವತ ಮನ್ವಂತರದಲ್ಲಿ ಹಾಗೂ ಇನ್ನೊಂದು ವೈವಸ್ವತ ಮನ್ವಂತರದಲ್ಲಿ. ಬಲಿ ದೇವತೆಗಳೊಂದಿಗೆ ಹೋರಾಡಿದ ಕಥೆ ರೈವತ ಮನ್ವಂತರಕ್ಕೆ ಸಂಬಂಧಿಸಿದ್ದು. ಆದರೆ ಭಗವಂತನ ಕೂರ್ಮಾವತಾರ ನಡೆದಿರುವುದು ವೈವಸ್ವತ ಮನ್ವಂತರದಲ್ಲಿ. ಆದ್ದರಿಂದ ವೈವಸ್ವತ ಮನ್ವಂತರದಲ್ಲಿ ನಡೆದ ಸಮುದ್ರಮಥನ ಪ್ರಹ್ಲಾದನ ಜನನಕ್ಕಿಂತ ಮೊದಲು ಹಾಗೂ ಮತ್ಯಾವತಾರದ ನಂತರ ನಡೆದ ಘಟನೆ. ಈ ಕಾಲದಲ್ಲಿ ಬಲಿ ದೇವತೆಗಳ ವಿರುದ್ಧ ಹೊರಾಡಿರಲಿಲ್ಲ. ಇನ್ನು ರೈವತ ಮನ್ವಂತರದಲ್ಲಿ ಹೇಗೆ ಬಲಿ ಜನಿಸಿದ್ದ ಎನ್ನುವುದಕ್ಕೆ ಆಚಾರ್ಯರು ಒಂದು ಕಡೆ ಹೇಳುತ್ತಾರೆ: “ಪ್ರತಿ ಮನ್ವಂತರಂ ಪ್ರಾಯಃ ಪ್ರಹ್ಲಾದಾದ್ಯಾಃ ಪ್ರಜಾತಿರೆ” ಎಂದು. ಅಂದರೆ ಪ್ರಹ್ಲಾದನ ಸಂತತಿ ಪ್ರತಿ ಮನ್ವಂತರದಲ್ಲಿ ಹುಟ್ಟುತ್ತಾರೆ ಎಂದರ್ಥ. ಎಲ್ಲವನ್ನೂ ಸಮಷ್ಟಿಯಾಗಿ ನೋಡಿದಾಗ ಇಲ್ಲಿ ಗೊಂದಲವಿಲ್ಲ.

ಚತುರ್ದಶಂ ನಾರಸಿಂಹಂ ಬಿಭ್ರದ್ ದೈತ್ಯೇಂದ್ರಮೂರ್ಜಿತಮ್  
ದದಾರ ಕರಜೈರೂರಾವೇರಕಾನ್  ಕಟಕೃದ್ ಯಥಾ                ೧೮

ಭಗವಂತನ ಹದಿನಾಲ್ಕನೇ ಅವತಾರ ನರಸಿಂಹಾವತಾರ. ನರಸಿಂಹ ಅವತಾರದ ಮೊದಲು ಹಿರಣ್ಯಾಕ್ಷನ ಸಂಹಾರಕ್ಕಾಗಿ ವರಾಹ ಅವತಾರವಾಗಿರುವುದು ನಮಗೆ ತಿಳಿದಿದೆ. ವರಾಹ ಅವತಾರ ವೈವಸ್ವತ ಮನ್ವಂತರದಲ್ಲಿ ನಡೆದ ದಶಾವತಾರದಲ್ಲಿ ಸೇರಿದ ಅವತಾರ. ಆದರೆ ಕಾಲಕ್ರಮಕ್ಕನುಗುಣವಾಗಿ ಸ್ವಾಯಂಭುವ ಮನ್ವಂತರದಲ್ಲಿ ಮೊದಲ ವರಾಹ ಅವತಾರವಾಗಿರುವುದರಿಂದ ಅದನ್ನು ಇಲ್ಲಿ ಪುನಃ ಉಲ್ಲೇಖಿಸಿಲ್ಲ.
ಪ್ರಹ್ಲಾದನಿಗೋಸ್ಕರ ನರಸಿಂಹರೂಪದಲ್ಲಿ ಅವತರಿಸಿ, ಮಹಾಬಲಿಷ್ಠನಾದ ಹಿರಣ್ಯಕಶಿಪುವನ್ನು ತನ್ನ ತೊಡೆಯಮೇಲಿಟ್ಟು, ತನ್ನ ಉಗುರಿನಿಂದ ಬಗೆದು,  ಹುಲ್ಲುಗರಿಯನ್ನು ಕಿತ್ತಂತೆ ಹಿರಣ್ಯಕಶಿಪುವಿನ ಅಸುವನ್ನು ಹೀರಿದ ಅವತಾರವಿದು.

ಪಂಚದಶಂ ವಾಮನಕಂ ಕೃತ್ವಾSಗಾದಧ್ವರಂ ಬಲೇಃ   
ಪದತ್ರಯಂ ಯಾಚಮಾನಃ ಪ್ರತ್ಯಾದಿತ್ಸುಸ್ತ್ರಿಪಿಷ್ಟಪಮ್              ೧೯

ಪ್ರಹ್ಲಾದನ ಮಗ ವಿರೋಚನ. ಆತನ ಮಗ ಬಲಿ. ಬಲಿಯ ಆಡಳಿತಾವಧಿಯಲ್ಲಿ ಭಗವಂತ ಪುಟ್ಟ ವಾಮನರೂಪಿಯಾಗಿ ಅವತರಿಸಿದ. ಇದು ಭಗವಂತನ ಹದಿನೈದನೇ ಅವತಾರ. ಬಲಿ ನಡೆಸುತ್ತಿದ್ದ ಯಜ್ಞಕ್ಕೆ ಹೋದ ವಾಮನ ಅಲ್ಲಿ ಕೇಳಿದ್ದು ಮೂರು ಹೆಜ್ಜೆ ಭೂಮಿಯನ್ನು. ಆದರೆ ಪಡೆದದ್ದು ಮೂರು ಲೋಕಗಳನ್ನು.

ಅವತಾರೇ ಷೋಡಶಮೇ ಯಚ್ಛನ್ ಬ್ರಹ್ಮದ್ರುಹೋ ನೃಪಾನ್     
ತ್ರಿಃಸಪ್ತಕೃತ್ವಃ ಕುಪಿತೋ ನಿಃಕ್ಷತ್ರಾಮಕರೋನ್ಮಹೀಮ್             ೨೦

ಭಗವಂತನ ಹದಿನಾರನೇ ಅವತಾರ ಪರಶುರಾಮ ಅವತಾರ. ಭೂಮಿಯಲ್ಲಿ ಕ್ಷತ್ರ ವಂಶ ಅಧಿಕಾರದ ಉನ್ಮತ್ತತೆಯಿಂದ  ದೂರ್ತರಾಗಿ ದೇಶವನ್ನು ನಾಶಮಾಡುವ ಪರಿಸ್ಥಿತಿಗೆ ತಂದಾಗ,  ವೇದಗಳಿಗೆ ಹಾಗೂ ಜ್ಞಾನಿಗಳಿಗೆ ದ್ರೋಹಮಾಡಿದ ಅಂತಹ ಕೆಟ್ಟ ರಾಜ ಸಂತತಿಯನ್ನು, ಇಪ್ಪತ್ತೊಂದು ಬಾರಿ ಸಂಹಾರಮಾಡಿದ  ವಿಶಿಷ್ಠ ಅವತಾರವಿದು.  

Sunday, January 20, 2013

Shrimad BhAgavata in Kannada -Skandha-01-Ch-03(03)


ತತಃ ಸಪ್ತಮ ಆಕೂತ್ಯಾಂ ರುಚೇರ್ಯಜ್ಞೋSಭ್ಯಜಾಯತ         
ಸ ಯಾಮಾದ್ಯೈಃ ಸುರಗಣೈರಪಾತ್ ಸ್ವಾಯಂಭುವಾಂತರಮ್ ೧೨

ಸ್ವಾಯಂಭುವ ಮನುವಿನ ಮಗಳು ಆಕೂತಿಯನ್ನು ರುಚಿಪ್ರಜಾಪತಿ ವಿವಾಹವಾದ. ಇವರ ದಾಂಪತ್ಯ ಫಲವಾಗಿ ಇವರಿಗೆ ಗಂಡು ಮಗುವಾಗುತ್ತದೆ. ಆತನೇ ಯಜ್ಞ. ಈತನೇ ಸ್ವಾಯಂಭುವ ಮನ್ವಂತರದ ಇಂದ್ರ. ಸ್ವಾಯಂಭುವ ಮನುವನ್ನು ನಾಶಮಾಡಬೇಕೆಂದು ಅಸುರ ಶಕ್ತಿಗಳು ಒಂದಾಗಿ ಕುತಂತ್ರ ಮಾಡಿದಾಗ, ಮನು ಭಗವಂತನನ್ನು ಧ್ಯಾನ ಮಾಡುತ್ತಾನೆ. ಹೀಗೆ ಧ್ಯಾನ ಮಾಡುತ್ತಾ ಸ್ವಾಯಂಭುವ ಮನು ಕಂಡ ವೇದ ಮಂತ್ರವೇ ಇಂದಿನ ಈಶಾವಾಸ್ಯ ಉಪನಿಷತ್ತು. ಈ ಉಪನಿಷತ್ತಿಗೆ ಭಗವಂತನ ಪ್ರತಿಪಾದ್ಯ ರೂಪಮೂಲವಾದ ಹೆಸರು ‘ಯಾಜ್ಞೇಯ ಮಂತ್ರೋಪನಿಷತ್ತು’. ಇದು ಯಜ್ಞ ನಾಮಕ ಭಗವಂತನನ್ನು ಸ್ತುತಿಸುವ ಉಪನಿಷತ್ತು. ವೇದ ಮಂತ್ರದಿಂದ ಮನು  ಭಗವಂತನ ಧ್ಯಾನ ಮಾಡಿದಾಗ, ಭಗವಂತ ಯಜ್ಞ ನಾಮಕನಾಗಿ ಸ್ವಾಯಂಭುವ ಮನುವಿಗೆ ರಕ್ಷಣೆ ಕೊಡುತ್ತಾನೆ. ಇದು ಭಗವಂತನ ಏಳನೇ ಅವತಾರ.

ಅಷ್ಟಮೋ ಮೇರುದೇವ್ಯಾಂ ತು ನಾಭೇರ್ಜಾತ ಉರುಕ್ರಮಃ      
ದರ್ಶಯನ್ ವರ್ತ್ಮ ಧೀರಾಣಾಂ ಸರ್ವಾಶ್ರಮನಮಸ್ಕೃತಮ್      ೧೩

ಸ್ವಾಯಂಭುವ ಮನುವಿಗೆ ಇಬ್ಬರು ಗಂಡು ಮಕ್ಕಳು. ಉತ್ತಾನಪಾದ ಮತ್ತು ಪ್ರಿಯವೃತ. ಪ್ರಿಯವೃತನ ಮಗ ಆಗ್ನೀಂದ್ರ, ಆಗ್ನೀಂದ್ರನ ಮಗ ನಾಭಿರಾಜ. ನಾಭಿರಾಜ-ಮೇರುದೇವಿ ದಂಪತಿಗಳು. ಇವರು ತಮಗೆ ‘ದೇವರಂತಹ ಮಗ ಹುಟ್ಟಬೇಕು’ ಎಂದು ತಪಸ್ಸು ಮಾಡಿದುದರ ಫಲವಾಗಿ ಅವರಲ್ಲಿ ಭಗವಂತ ಋಷಭದೇವನಾಗಿ ಅವತರಿಸಿದ. ಇದು ಭಗವಂತನ ಎಂಟನೇ ಅವತಾರ. ಚಕ್ರವರ್ತಿಯಾಗಿ ದೇಶವಾಳಿದ ಋಷಭದೇವ, ಕೊನೆಗೆ ಒಂದು ದಿನ ಈ ದೇಶಕ್ಕೆ ಭಾರತ ಎಂದು ಹೆಸರು ಬರಲು ಕಾರಣನಾದ ತನ್ನ ಮಗ ಭರತನಿಗೆ ಅಧಿಕಾರವನ್ನು ಒಪ್ಪಿಸಿ, ಸರ್ವಸ್ವವನ್ನೂ ತ್ಯಾಗಮಾಡಿ, ಉಟ್ಟ ಬಟ್ಟೆಯನ್ನೂ ತೊರೆದು ಬತ್ತಲಾಗಿ ಹೊರಟು, ಕೊಡಚಾದ್ರಿಗೆ(ಇಂದಿನ ಕೊಲ್ಲೂರು) ಬಂದು ನೆಲೆಸಿ, ಅಲ್ಲಿ ತನ್ನ ಯೋಗಾಗ್ನಿಯಿಂದ ಅವತಾರ ಸಮಾಪ್ತಿ ಮಾಡಿದ ಎನ್ನಲಾಗುತ್ತದೆ. ಇದೊಂದು ಮೋಹಕ ಲೀಲೆ. ಋಷಭದೇವನನ್ನು ಜೈನ ಧರ್ಮದ ಆದಿತೀರ್ಥಂಕರ ಎಂದು ಹೇಳುತ್ತಾರೆ.      

ಋಷಿಭಿರ್ಯಾಚಿತೋ ಭೇಜೇ ನವಮಂ ಪಾರ್ಥಿವಂ ವಪುಃ         
ದುಗ್ಧೇಮಾನೋಷಧೀರ್ವಿಪ್ರಾಸ್ತೇನಾಯಂ ಚ ಉಶತ್ತಮಃ           ೧೪

ಸ್ವಾಯಂಭುವ ಮನ್ವಂತರದಲ್ಲಿನ ಎಂಟು ಅವತಾರಗಳ ನಂತರ ವೈವಸ್ವತ ಮನ್ವಂತರದ ತನಕ ಭಗವಂತನ ವಿಶೇಷ ಅವತಾರದ ಬಗ್ಗೆ ಭಾಗವತದಲ್ಲಿ ವಿವರಣೆ ಇಲ್ಲ. ಆದರೆ ಚಾಕ್ಷುಷ ಮನ್ವಂತರದಲ್ಲಿ ಭಗವಂತನ ಆವೇಶ ಅವತಾರವೊಂದಿದೆ. ಇದು  ಉತ್ತಾನಪಾದನ ಪರಂಪರೆಯಲ್ಲಿ ಬಂದ ‘ಪ್ರಥುಚಕ್ರವರ್ತಿ’ಯಲ್ಲಿ ಆವಿಷ್ಠನಾಗಿ ಭಗವಂತ ನೆಲೆಸಿದ ರೂಪ.
ಪ್ರಥುಚಕ್ರವರ್ತಿಯ ಅಜ್ಜ ಅಂಗರಾಜ. ಆತನ ಮಗ ವೇನ. ‘ವೇನ’ ಎಂದರೆ ಜ್ಞಾನಿ ಎನ್ನುವುದು ಒಂದರ್ಥವಾದರೆ ಲೋಕಕಂಟಕ ಎನ್ನುವುದು ಇನ್ನೊಂದು ಅರ್ಥ.  ತಂದೆ ತನ್ನ ಮಗ ಜ್ಞಾನಿಯಾಗಲಿ ಎಂದು ಬಯಸಿದರೆ, ವೇನ ಲೋಕಕಂಟಕನಾಗಿ ಬೆಳೆದ. ಚಿಕ್ಕವನಿರುವಾಗಲೇ ತನ್ನ ಸಹಪಾಟಿಗಳನ್ನು ಬಾವಿಗೆ ತಳ್ಳಿ ಆನಂದಿಸುತ್ತಿದ್ದ ವಿಚಿತ್ರ ಸ್ವಭಾವ ವೇನನದ್ದಾಗಿತ್ತು! ಇಂತಹ ಮಗ ಹುಟ್ಟಿರುವುದರಿಂದ ಅಂಗರಾಜನಿಗೆ ಬೇಸರವಾಗುತ್ತದೆ. ಮಗನನ್ನು ನಿಯಂತ್ರಿಸಲು ಆತ ಅನೇಕ ರೀತಿಯಿಂದ ಪ್ರಯತ್ನಪಟ್ಟ. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಒಂದು ದಿನ ರಾಜ ಯಾರಿಗೂ ಹೇಳದೆ, ಊರುಬಿಟ್ಟು ಕಾಡಿಗೆ ಹೊರಟುಹೋದ. ಇದರಿಂದಾಗಿ ‘ವೇನ’ ದೇಶದ ಅಧಿಪತಿಯಾದ. ರಾಜನಾದ ‘ವೇನ’ ತಕ್ಷಣ “ರಾಜಾ ಪ್ರತ್ಯಕ್ಷ ದೇವತಾ, ತನ್ನನ್ನು ಬಿಟ್ಟು ದೇವರನ್ನು ಯಾರೂ ಪೂಜಿಸಕೂಡದು” ಎನ್ನುವ ಆಜ್ಞೆಯನ್ನು ಹೊರಡಿಸಿ, ದೇಶದಲ್ಲಿ ಅಧಾರ್ಮಿಕತೆಯ ವಾತಾವರಣ ನಿರ್ಮಾಣಮಾಡಿದ. ಇದರ ಪರಿಣಾಮ ದೇಶದಲ್ಲಿ ದುರ್ಭಿಕ್ಷೆ ಬಂದು ಮನುಷ್ಯರಷ್ಟೇ ಅಲ್ಲ, ಸಾವಿರಾರು ಹಸುಗಳೂ ಕೂಡಾ ಆಹಾರವಿಲ್ಲದೆ ಸಾವನ್ನಪ್ಪಿದವು. ಇಷ್ಟಾದರೂ ಕೂಡಾ ವೇನ ಪಶ್ಚಾತ್ತಾಪಪಡಲಿಲ್ಲ. ಇದರಿಂದಾಗಿ ಕೋಪಗೊಂಡ ಋಷಿಗಳು ವೇನನನ್ನು ಅಧಿಕಾರದಿಂದ ಕಿತ್ತೆಸೆದರು. ಅಷ್ಟೇ ಅಲ್ಲ, ತಮ್ಮ ತಪಶಕ್ತಿಯಿಂದ, ಹೂಂಕಾರದಿಂದ ಆತನನ್ನು ನಾಶಮಾಡಿದರು. ಋಷಿಗಳು ತಮ್ಮ ತಪಶಕ್ತಿಯಿಂದ ವೇನನನ್ನು ಮಥನಮಾಡಿ, ಅಲ್ಲಿ ಇನ್ನೊಂದು ಜೀವ ಸೃಷ್ಟಿಯಾಗುವಂತೆ ಮಾಡಿದರು. ಅವನೇ ‘ಪ್ರಥುಚಕ್ರವರ್ತಿ’. ಋಷಿಗಳ ಪ್ರಾರ್ಥನೆಯಂತೆ ಭಗವಂತ ಪ್ರಥುಚಕ್ರವರ್ತಿಯಲ್ಲಿ ವಿಶೇಷವಾಗಿ ಆವಿಷ್ಠನಾಗಿ ಬಂದ.
ಪ್ರಥುಚಕ್ರವರ್ತಿ ಅಧಿಕಾರಕ್ಕೆ ಬರುವ ಮೊದಲು ಭೂಮಿಯಲ್ಲಿ ನಾಗರಿಕತೆ, ಉದ್ಯಮ, ಕಾಲುವೆಗಳು, ಕೃಷಿ, ಇತ್ಯಾದಿ ಯಾವುದೂ ಒಂದು ವ್ಯವಸ್ಥಿತ ರೀತಿಯಲ್ಲಿರಲಿಲ್ಲ.  ಭೂಮಿ ಏರುಪೇರಾಗಿತ್ತು. ಜನಸಂಖ್ಯೆ ಕಡಿಮೆ ಇದ್ದುದರಿಂದ ಎಲ್ಲಿ ಅನುಕೂಲವೋ ಅಲ್ಲಿ ಜನ ವಾಸ ಮಾಡುತ್ತಿದ್ದರು. ಪ್ರಥುಚಕ್ರವರ್ತಿ ಪ್ರಪಂಚದಲ್ಲಿ ಮೊಟ್ಟಮೊದಲಬಾರಿಗೆ ಒಂದು ವ್ಯವಸ್ಥಿತ ರೀತಿಯ ನಾಗರೀಕತೆಯನ್ನು ಪರಿಚಯಿಸಿ ಅಭಿವೃದ್ಧಿಪಡಿಸಿದ.  ಏರುಪೇರಾಗಿದ್ದ ಭೂಮಿಯನ್ನು ಸಮತಟ್ಟುಮಾಡಿ, ಕಾಲುವೆಗಳು, ಜಲಾಶಯ, ಬೇಸಾಯಕ್ಕೆ ಬೇಕಾದ ನೀರಿನ ವ್ಯವಸ್ಥೆ, ನಗರ, ಹುಲ್ಲುಗಾವಲು, ಕಾಡು, ನಾಡು, ಇತ್ಯಾದಿಯನ್ನು  ಅಭಿವೃದ್ಧಿಪಡಿಸಿದ. ಇದರಿಂದಾಗಿ ಸಂಪತ್ತಿನ ಹೊಳೆ ಹರಿಯಿತು. ಆತನ ಆಡಳಿತ ಅವಧಿಯಲ್ಲಿ ಭೂಮಿಗೊಂದು ಹೊಸ ಆಯಾಮ ಬಂದಿತು. [ಈ ಕಾರಣಕ್ಕಾಗಿ ಭೂಮಿಗೆ ಪೃಥ್ವಿ ಎನ್ನುವ ಹೆಸರು ಬಂದಿದೆ. ಪೃಥ್ವೀ ಎಂದರೆ ಪ್ರಥುಚಕ್ರವರ್ತಿಯ ಮಗಳು ಎಂದರ್ಥ]. ಇಂತಹ ಪ್ರಥುಚಕ್ರವರ್ತಿಯನ್ನು  ಜನರು ‘ಉಶತ್ತಮಃ’ ಎಂದು ಕರೆದರು. ಅಂದರೆ ಬಯಸಿದ್ದನ್ನು ಮಾಡಬಲ್ಲವ, ಸತ್ಯಕಾಮ ಎಂದರ್ಥ.
ಚಾಕ್ಷುಷ ಮನ್ವಂತರದಲ್ಲಿ ಭಗವಂತನ ಈ ಆವೇಶಾವತಾರದ ನಂತರ ಮನ್ವಂತರದ ಉಪೇಂದ್ರರೂಪ ಹಾಗೂ ತಾಪಸ ಮನ್ವಂತರದಲ್ಲಿ ಮನ್ವಂತರ ನಿಯಾಮಕ ‘ತಾಪಸ’ ರೂಪವನ್ನು ಬಿಟ್ಟರೆ, ವೈವಸ್ವತ ಮನ್ವಂತರದ ತನಕ ಭಗವಂತನ ಬೇರೆ ಅವತಾರಗಳಿಲ್ಲ. ವೈವಸ್ವತ ಮನ್ವಂತರದಲ್ಲಿನ ಭಗವಂತನ ವಿಶಿಷ್ಠ ಅವತಾರಗಳನ್ನು ಸೂತರು ಮುಂದೆ ವಿವರಿಸುವುದನ್ನು ಕಾಣಬಹುದು.

Saturday, January 19, 2013

Shrimad BhAgavata in Kannada -Skandha-01 -Ch-03(02)


ತೃತೀಯಮೃಷಿಸರ್ಗಂ ವೈ ದೇವರ್ಷಿತ್ವಮುಪೇತ್ಯ ಸಃ 
ತಂತ್ರಂ ಸಾತ್ವತಮಾಚಷ್ಟ ನೈಷ್ಕರ್ಮ್ಯಂ ಕರ್ಮಣಾಂ ಯತಃ     

ಸ್ವಾಯಂಭುವ ಮನ್ವಂತರದಲ್ಲಿ ಆದ ಭಗವಂತನ ಮೂರನೇ ಅವತಾರವನ್ನು ಈ ಶ್ಲೋಕ ವಿವರಿಸುತ್ತದೆ. ಹೆಚ್ಚಿನ ವ್ಯಾಖ್ಯಾನಕಾರರು ಈ ಅವತಾರವನ್ನು ಭಗವಂತನ ‘ನಾರದ ರೂಪದ ಅವತಾರ’ ಎಂದು ಹೇಳಿರುವುದನ್ನು ಕಾಣುತ್ತೇವೆ. ಆದರೆ ದೇವರ್ಷಿ ನಾರದ ಭಗವಂತನ ಅವತಾರವಲ್ಲ. ಇದು ನಾರದಾದಿ ಸಮಸ್ತ ದೇವತೆಗಳಿಗೂ ಋಷಿಯಾಗಿ ಉಪದೇಶ ಮಾಡಿದ ಭಗವಂತನ ‘ಐತರೇಯ” ನಾಮಕ ರೂಪ. ಯಾರಿಂದ ಐತರೇಯ ಉಪನಿಷತ್ತು, ಐತರೇಯ ಬ್ರಾಹ್ಮಣ ಮತ್ತು ಐತರೇಯ ಅರಣ್ಯಕ ಎನ್ನುವ ವೇದಭಾಗ ಆವಿಷ್ಕಾರವಾಯಿತೋ, ಅಂತಹ ಭಗವಂತನ ವಿಶಿಷ್ಠವಾದ ಮೂರನೇ ಅವತಾರವೇ ‘ಐತರೇಯ’ ರೂಪ. ಬ್ರಹ್ಮಪುರಾಣದಲ್ಲಿ ಹೇಳುವಂತೆ: ಭಗವಂತನ ಈ ಅವತಾರದ ಇನ್ನೊಂದು ಹೆಸರು ಮಹಿದಾಸ. ಈ ಹಿನ್ನೆಲೆಯಲ್ಲಿ ಪುರಾಣದಲ್ಲಿ ಒಂದು ರೋಚಕವಾದ ಕಥೆ ಇದೆ. ಅದನ್ನು ಭಾಗವತ ವಿವರಿಸುವುದಿಲ್ಲ. ಭಾಗವತದ ಮುಂದಿನ ಶ್ಲೋಕಕ್ಕೆ ಹೋಗುವ ಮುನ್ನ ನಾವು ಭಗವಂತನ ‘ಐತರೇಯ ಮಹಿದಾಸ’ ರೂಪದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿದು ಮುಂದುವರಿಯೋಣ.
ಐತರೇಯನ ತಂದೆಯ ಹೆಸರು ‘ವಿಶಾಲ’ ಎನ್ನುವ ಋಷಿ. ಈತನ ಇಬ್ಬರು ಹೆಂಡತಿಯರಲ್ಲಿ ಒಬ್ಬಳ ಹೆಸರು ‘ಇತರ’ ಹಾಗೂ ಆಕೆಯಲ್ಲಿ ಹುಟ್ಟಿದವನೇ ಐತರೇಯ. ಐತರೇಯ ಮಗುವಾಗಿದ್ದಾಗಿ ಬಹಳ ಅಳುತ್ತಿದ್ದನಂತೆ. ಅದೆಷ್ಟು ಅಳುತ್ತಿದ್ದನೆಂದರೆ ಒಂದು ದಿನ ಆತನ ಅಳುವನ್ನು ಕೇಳಿ ತಾಯಿಗೂ ಕೋಪ ಬಂದು, “ಬಾಯಿ ಮುಚ್ಚು” ಎಂದು ಗದರಿದಳಂತೆ. ಆಕೆ ಆ ರೀತಿ ಹೇಳಿದಾಗ ಮಗು ಬಾಯಿ ಮುಚ್ಚಿತು. ಆದರೆ ಅಂದಿನಿಂದ ಮಗು ಮತ್ತೆ ಬಾಯಿ ತೆರೆದು ಮಾತನಾಡಲಿಲ್ಲ. ಇದರಿಂದಾಗಿ ಎಲ್ಲರೂ ಮಗುವನ್ನು ‘ಮೂಗ’ ಎಂದೇ ತಿಳಿದರು. ಆತನ ಸಹೋದರರು ತಂದೆಯಿಂದ ವಿದ್ಯಾಭ್ಯಾಸ ಕಲಿತು ಖ್ಯಾತ ಋಷಿಗಳಾದರು. ಆದರೆ ಐತರೇಯ ಮೂಗನಂತೆ ಇದ್ದುಬಿಟ್ಟ. ಒಂದು ದಿನ ಐತರೇಯನ ತಂದೆ ತನ್ನ ಇತರ ಮಕ್ಕಳೊಂದಿಗೆ ಯಾವುದೋ ಒಂದು ಯಜ್ಞ ಕಾರ್ಯಕ್ಕಾಗಿ ತೆರಳಿದ್ದ. ಆದರೆ ಆತ ಐತರೇಯ ಮೂಗನೆಂದು ತಿಳಿದಿದ್ದರಿಂದ, ಅವನನ್ನು ಮನೆಯಲ್ಲೇ ಬಿಟ್ಟು ಹೋಗಿದ್ದ. ಆಗ ಹೆತ್ತ ಕರುಳಿಗೆ ಬೇಸರವಾಗುತ್ತದೆ. ಆಕೆ ಕಣ್ಣೀರು ತೆಗೆದು ಹೇಳುತ್ತಾಳೆ: “ನಿನಗೆ ಮಾತು ಬರುತ್ತಿದ್ದರೆ ತಂದೆ ಜೊತೆಯಲ್ಲಿ ಹೋಗಿ ಯಜ್ಞದಲ್ಲಿ ಪಾಲ್ಗೊಂಡು ವೇದಮಂತ್ರ ಹೇಳಬಹುದಿತ್ತು. ಆದರೆ ನನ್ನ ದೌರ್ಭಾಗ್ಯದಿಂದ ನಿನಗೆ ಮಾತೇ ಬರುತ್ತಿಲ್ಲ” ಎಂದು.  ಆಗ ಬಾಲಕ ಐತರೇಯ ಮಾತನಾಡುತ್ತಾನೆ ಮತ್ತು ಹೇಳುತ್ತಾನೆ: “ಅಮ್ಮಾ, ನೀನು ಬಾಯಿ ಮುಚ್ಚು ಎಂದಿದ್ದಕ್ಕೆ ನಾನು ಮಾತನಾಡುತ್ತಿಲ್ಲ. ನೀನು ಅನುಮತಿ ಕೊಟ್ಟರೆ ನಾನು ವೇದಮಂತ್ರ ಹೇಳಬಲ್ಲೆ” ಎಂದು. ಆಗ ತಾಯಿಗೆ ಎಲ್ಲಿಲ್ಲದ ಸಂತೋಷವಾಗುತ್ತದೆ. ಆಕೆ ಅನುಮತಿ ಕೊಟ್ಟು ಆತನನ್ನು ತಂದೆ ಇದ್ದಲ್ಲಿಗೆ ಕಳುಹಿಸಿಕೊಡುತ್ತಾಳೆ.
 ಇದ್ದಕ್ಕಿದ್ದಂತೆ ಯಾಗಶಾಲೆಗೆ ಬಂದ ಐತರೇಯನನ್ನು ಕಂಡು ತಂದೆಗೆ ಕೋಪ ಬರುತ್ತದೆ. ಮೂಗನಾದ ತನ್ನ ಮಗನಿಂದಾಗಿ ಎಲ್ಲರ ಮುಂದೆ ತನ್ನ ಮುಖಭಂಗವಾಗುತ್ತದೆ ಎನ್ನುವ ಭಯ ಆತನಿಗೆ. ನೇರವಾಗಿ ಬಂದ ಐತರೇಯ ತಂದೆಯ ತೊಡೆಯ ಮೇಲೆ ಕುಳಿತುಕೊಳ್ಳಬಯಸುತ್ತಾನೆ. ಆಗ ತಂದೆ ಕೋಪದಿಂದ ಆತನನ್ನು ದೂರ ತಳ್ಳುತ್ತಾನೆ. ಇದನ್ನು ಕಂಡ ಭೂಮಾತೆಗೆ ತಡೆಯಲಾಗುವುದಿಲ್ಲ. ಆಕೆ ತಕ್ಷಣ ಐತರೇಯನಿಗೆ ಆಸನವನ್ನು ಕೊಡುತ್ತಾಳೆ. ಐತರೇಯ ಹೀಗೆ ಭೂಮಿಯಿಂದ ಎದ್ದು ಬಂದ ಆಸನದ ಮೇಲೆ ಕುಳಿತು, ನಿರರ್ಗಳವಾಗಿ, ಯಾರೂ ಎಂದೂ ಕೇಳರಿಯದ ವೇದಮಂತ್ರವನ್ನು ಉಚ್ಛರಿಸುತ್ತಾನೆ. ಐತರೇಯನ ಈ ಪ್ರವಚನವನ್ನು  ಬ್ರಹ್ಮಾದಿ-ದೇವತೆಗಳು, ಸ್ವಯಂ ಶ್ರೀಲಕ್ಷ್ಮಿ ಕುಳಿತು ಕೇಳಿಸಿಕೊಳ್ಳುತ್ತಾರೆ. ಇದೇ ಐತರೇಯ ಋಷಿ ರೂಪದಲ್ಲಿ ಭಗವಂತನಿಂದ ಭೂಮಿಗಿಳಿದು ಬಂದ ೪೦ ಅಧ್ಯಾಯಗಳ ಐತರೇಯ ಬ್ರಾಹ್ಮಣ, ೧೪ ಅಧ್ಯಾಯಗಳ ಐತರೇಯ ಅರಣ್ಯಕ ಮತ್ತು ೯ ಅಧ್ಯಾಯಗಳ ಐತರೇಯ ಉಪನಿಷತ್ತು. ಮಹಿದತ್ತವಾದ ಆಸನದಲ್ಲಿ ಕುಳಿತವನಾದ್ದರಿಂದ ಐತರೇಯನಿಗೆ ಮಹಿದಾಸ ಎನ್ನುವ ಹೆಸರು ಬಂತು. ಅಷ್ಟೇ ಅಲ್ಲದೇ, ಮಹಾತ್ಮರಾದ ಬ್ರಹ್ಮಾದಿ ದೇವತೆಗಳು ಆತನ ಪ್ರವಚನ ಕೇಳಿರುವುದರಿಂದ ಆತ ಮಹಿದಾಸನಾದ; ಐತರೇಯನ ಪಾಂಡಿತ್ಯವನ್ನು ಕಂಡು ಆತನ ಮಲತಾಯಿಗೂ ಕಣ್ತೆರೆಯಿತು. ಮಹಿಳೆಯ ಮದ ನಿರಸನ ಮಾಡಿರುವುದರಿಂದಲೂ ಐತರೇಯ ಮಹಿದಾಸನಾದ.
ಹೀಗೆ ಒಂದು ವೇದದ ಆವಿಷ್ಕಾರಕ್ಕೋಸ್ಕರ ಋಷಿಯಾಗಿ, ಮಹಿದಾಸನಾಗಿ ಭಗವಂತ ಅವತರಿಸಿದ ಎನ್ನುವ ಕಥೆಯನ್ನು ಪುರಾಣ ಹೇಳುತ್ತದೆ. ಇಂದು ಲಭ್ಯವಿರುವ  ಋಕ್ ಸಂಹಿತೆಯ ಹತ್ತು ಮಂಡಲಗಳಿಗೆ ಐತರೇಯ ಸಂಹಿತ ಎಂದೇ ಹೆಸರು. ಇಂತಹ ಅಖಂಡವಾದ ಬ್ರಾಹ್ಮಣಾರಣ್ಯಕ-ಉಪನಿಷತ್ತುಗಳ ಆವಿಷ್ಕಾರವಾಗಿರುವ ಭಗವಂತನ ಸ್ವಾಯಂಭುವ ಮನ್ವಂತರದ ಅಪೂರ್ವ ರೂಪವೇ ಭಗವಂತನ ಮೂರನೇ ಅವತಾರ.
[ಓದುಗರಿಗೆ ಸೂಚನೆ: ಐತರೇಯ ಮಹಿದಾಸ ಎನ್ನುವ ಒಬ್ಬ ಋಷಿ ಕೂಡಾ ಇದ್ದಾನೆ. ಈತನ ತಾಯಿಯ ಹೆಸರು ಕೂಡಾ ‘ಇತರ’. ಈ ಋಷಿಗೂ ಭಗವಂತನ ಐತರೇಯ ಅವತಾರಕ್ಕೂ ಯಾವುದೇ ಸಂಬಂಧವಿಲ್ಲ]

ತುರ್ಯೇ ಧರ್ಮಕಲಾಸರ್ಗೇ ನರನಾರಾಯಣಾವೃಷೀ
ಭೂತ್ವಾSSತ್ಮೋಪಶಮೋಪೇತಮಕರೋದ್ದುಶ್ಚರಂ ತಪಃ         

ಭಗವಂತನ ನಾಲ್ಕನೇ ಅವತಾರ ನರ-ನಾರಾಯಣಾವತಾರ. ನರ ಮತ್ತು ನಾರಾಯಣ ಅನ್ನುವುದು ಎರಡು ಅವತಾರವಲ್ಲ. ನರನಲ್ಲಿ ಭಗವಂತನ ವಿಶೇಷ ಆವೇಶ ಹಾಗೂ ನಾರಾಯಣ ಭಗವಂತನ ಅವತಾರ. ಸ್ವಾಯಂಭುವ ಮನುವಿಗೆ ದೇವಹೂತಿ, ಆಕೂತಿ ಮತ್ತು ಪ್ರಸೂತಿ ಎನ್ನುವ ಮೂರು ಮಂದಿ ಹೆಣ್ಣುಮಕ್ಕಳಿದ್ದರು. ಈ ಮೂವರಲ್ಲಿ ಪ್ರಸೂತಿಯನ್ನು ದಕ್ಷಪ್ರಜಾಪತಿ ಮದುವೆಯಾದ. ಇವರಿಬ್ಬರ ದಾಂಪತ್ಯದಲ್ಲಿ ಹುಟ್ಟದ ಮಕ್ಕಳಲ್ಲಿ ಕೊನೇಯ ಮಗಳ ಹೆಸರು ಮೂರ್ತಿ. ಈಕೆಯನ್ನು ಧರ್ಮದೇವತೆ ಮದುವೆಯಾದ. ಧರ್ಮ ಮತ್ತು ಮೂರ್ತಿಯ ದಾಂಪತ್ಯದಲ್ಲಿ ಹುಟ್ಟಿದ ಮಕ್ಕಳೇ –ಹರಿ, ಕೃಷ್ಣ, ನರ ಮತ್ತು ನಾರಾಯಣ. ಭಾಗವತ ಈ ನಾಲ್ಕು ಮಕ್ಕಳಲ್ಲಿ ಹರಿ ಮತ್ತು ಕೃಷ್ಣನ ಕುರಿತು ವಿವರಣೆ ನೀಡುವುದಿಲ್ಲ.
ನರ-ನಾರಾಯಣರು ತಮ್ಮ ಮನೋನಿಗ್ರಹದಿಂದ ಕೂಡಿದ ದುಶ್ಚರವಾದ ತಪಸ್ಸು ಮಾಡಿದರು ಎನ್ನುತ್ತದೆ ಈ ಶ್ಲೋಕ. ಇಲ್ಲಿ ನಮಗೊಂದು ಪ್ರಶ್ನೆ ಮೂಡುತ್ತದೆ: ದೇವರು ಕೂಡಾ ಮನೋನಿಗ್ರಹ ಮಾಡಿ ತಪಸ್ಸು ಮಾಡುವುದು ಎಂದರೇನು? ಇದಕ್ಕೆ ಉತ್ತರಿಸುತ್ತಾ ಆಚಾರ್ಯರು ಹೇಳುತ್ತಾರೆ: “ಲೋಕದೃಷ್ಟ್ಯಾ ಆತ್ಮಶಮೋಪೇತಂ” ಎಂದು.  ಅಂದರೆ ಆತ್ಮಶಮವನ್ನಿಟ್ಟುಕೊಂಡು, ಮನಸ್ಸನ್ನು ನಿಗ್ರಹ ಮಾಡಿ ತಪಸ್ಸು ಮಾಡುವುದು ಹೇಗೆ ಎಂದು ಪ್ರಪಂಚಕ್ಕೆ ತೋರಿದ ಭಗವಂತನ ವಿಶಿಷ್ಠ ಅವತಾರವಿದು. ಹಿಮಾಲಯದಲ್ಲಿರುವ ಬದರಿಕಾಶ್ರಮದಲ್ಲಿ ಇಂದಿಗೂ ನರ ಪರ್ವತ ಮತ್ತು ನಾರಾಯಣ ಪರ್ವತ ಎನ್ನುವ ಎರಡು ಪರ್ವತಗಳಿವೆ. ಸ್ವಾಯಂಭುವ ಮನ್ವಂತರದಲ್ಲಿ ಆದ ಈ ಅವತಾರವನ್ನು ಭಗವಂತ ಇನ್ನೂ ಉಪಸಂಹಾರ ಮಾಡಿಲ್ಲ. ಹಿಮಾಲಯದ ತಪ್ಪಲಿನಲ್ಲಿ ಇಂದಿಗೂ ಭಗವಂತ ಆ ರೂಪದಲ್ಲಿದ್ದಾನೆ ಎನ್ನುತ್ತಾರೆ ಜ್ಞಾನಿಗಳು.     

ಪಂಚಮಃ ಕಪಿಲೋ ನಾಮ ಸಿದ್ಧೇಶಃ ಕಾಲವಿಪ್ಲುತಮ್  
ಪ್ರೋವಾಚಾಸುರಯೇ ಸಾಂಖ್ಯಂ ತತ್ತ್ವಗ್ರಾಮವಿನಿರ್ಣಯಮ್     ೧೦

ಸ್ವಾಯಂಭುವ ಮನ್ವಂತರದಲ್ಲಿ ಆದ ಭಗವಂತನ ಪಂಚಮ ಅವತಾರ ಕಪಿಲ ವಾಸುದೇವ ಅವತಾರ. ಸ್ವಾಯಂಭುವ ಮನುವಿನ ಮಗಳು ದೇವಹೂತಿ ಮತ್ತು ಕರ್ದಮಪ್ರಜಾಪತಿಯ ದಾಂಪತ್ಯದಲ್ಲಿ ಕಪಿಲಮುನಿಯ ರೂಪದಲ್ಲಿ ಭಗವಂತನ ಅವತಾರವಾಯಿತು. ಕಪಿಲ ವಾಸುದೇವ ರೂಪದಲ್ಲಿ ಭಗವಂತ ‘ಆಸುರಿ’ ಎನ್ನುವ ತನ್ನ ಶಿಷ್ಯನ ಮುಖೇನ ವೈದಿಕ ಸಾಂಖ್ಯವನ್ನು ಪ್ರಪಂಚಕ್ಕೆ ನೀಡಿದ. ಭಗವಂತನ ಈ ಅವತಾರವನ್ನು ಕಪಿಲ ವಾಸುದೇವ ಎಂದು ಕರೆಯಲು ಒಂದು ವಿಶೇಷ ಕಾರಣವಿದೆ. ಸಾಂಖ್ಯವನ್ನು ಉಪದೇಶಿಸಿದ ಕಪಿಲ ಎನ್ನುವ ಒಬ್ಬ ಋಷಿ ಕೂಡಾ ಇದ್ದಾನೆ. ಆತನ ಶಿಷ್ಯನ ಹೆಸರು ಕೂಡಾ ಆಸುರಿ. ಆದರೆ ಆತ ಉಪದೇಶಿಸಿದ ಸಾಂಖ್ಯ ಪೂರ್ಣ ಅವೈದಿಕವಾದ ನಿರೀಶ್ವರ ಸಾಂಖ್ಯ.
ಕಾಲಕ್ರಮದಲ್ಲಿ ನಷ್ಟವಾಗಿ ಹೋಗಿರುವ ವೈದಿಕ ಸಾಂಖ್ಯವನ್ನು ಭಗವಂತ ಕಪಿಲ ವಾಸುದೇವನಾಗಿ ಆಸುರಿ ಎನ್ನುವ ಋಷಿಗೆ ಉಪದೇಶಿಸಿದ. [ಮೂಲತಃ ಭಗವಂತ ಸಾಂಖ್ಯಶಾಸ್ತ್ರವನ್ನು ಮೊದಲು ಉಪದೇಶಿಸಿರುವುದು ತನ್ನ ತಾಯಿ ದೇವಹೂತಿಗೆ. ಆನಂತರ ಅದನ್ನು ಆಸುರಿ ಎನ್ನುವ ಶಿಷ್ಯನಿಗೆ ಉಪದೇಶಿಸಿದ]. ಇದು ಕೇವಲ ವಿಶ್ವವನ್ನು ಅಂಕೆಯಲ್ಲಿ ನಿರೂಪಿಸುವ ಶಾಸ್ತ್ರವಷ್ಟೇ ಅಲ್ಲ, ಇಡೀ ಅಧ್ಯಾತ್ಮವನ್ನು ಸಂಖ್ಯೆಯ ಮೂಲಕ ಹೇಳುವ, ಯಥಾರ್ಥ ತಿಳುವಳಿಕೆ ಕೊಡುವ  ಅಪೂರ್ವಶಾಸ್ತ್ರ ಕೂಡಾ ಹೌದು.  

ಷಷ್ಠಮತ್ರೇರಪತ್ಯತ್ವಂ ವೃತಃ ಪ್ರಾಪ್ತೋSನಸೂಯಯಾ                       
ಆನ್ವೀಕ್ಷಿಕೀಮಳರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್                ೧೧

ಕಪಿಲ ವಾಸುದೇವನ ಸಹೋದರಿ ಅನುಸೂಯೆ. ಈಕೆಯ ಪತಿ ಅತ್ರಿ. ಅತ್ರಿ-ಅನುಸೂಯೆಯರು ತಮಗೆ  ಸೃಷ್ಟಿ-ಸ್ಥಿತಿ-ಸಂಹಾರ ಮಾಡುವ ಭಗವಂತ ಮಗನಾಗಿ ಹುಟ್ಟಬೇಕೆಂದು ತಪಸ್ಸು ಮಾಡುತ್ತಾರೆ. ಈ ತಪಸ್ಸಿನ ಫಲವಾಗಿ ಅವರಿಗೆ ಮೂರು ಮಂದಿ ಮಕ್ಕಳಾಗುತ್ತಾರೆ. ಸ್ವಯಂ ಸ್ಥಿತಿಗೆ ಕಾರಣನಾದ ಭಗವಂತ ‘ದತ್ತ’ ನಾಮಕನಾಗಿ ಅವರಲ್ಲಿ ಅವತರಿಸಿದ. ಅತ್ರಿಯ ಮಗನಾದ(ಅತ್ರೇಯ) ದತ್ತ, (ದತ್ತ+ಅತ್ರೇಯ) ದತ್ತಾತ್ರಯನಾದ. ಸಂಹಾರ ದೇವತೆ ಶಿವ ‘ದುರ್ವಾಸನಾಗಿ’ ಜನಿಸಿದ. ಬ್ರಹ್ಮನಿಗೆ ಭೂಮಿಯಲ್ಲಿ ಜನ್ಮವಿಲ್ಲದ್ದರಿಂದ, ಚತುರ್ಮುಖನಿಂದ ಆವಿಷ್ಠನಾದ ‘ಚಂದ್ರ’ ಅನುಸೂಯೆ-ಅತ್ರಿಯರ ಮಗನಾಗಿ ಹುಟ್ಟಿದ. [ಓದುಗರಿಗೆ ಸೂಚನೆ: ಸಾಮಾನ್ಯವಾಗಿ ದತ್ತಾತ್ರಯ ಎಂದಾಗ ಮೂರು ತಲೆ ಏಕ ಶರೀರ ಮತ್ತು ತಲೆಯಲ್ಲಿ ಚಂದ್ರನಿರುವ ಚಿತ್ರವನ್ನು ಚಿತ್ರಕಾರರು ಚಿತ್ರಿಸುತ್ತಾರೆ. ಆದರೆ ಶಾಸ್ತ್ರದಲ್ಲಿ ಎಲ್ಲೂ ಈ ರೀತಿ ರೂಪದ ವಿವರಣೆ ಇಲ್ಲ. ದತ್ತ, ದುರ್ವಾಸ ಮತ್ತು ಚಂದ್ರ ಈ ಮೂವರು, ಮೂರು ಶರೀರದಲ್ಲಿ ಅವತರಿಸಿ ಬಂದ ರೂಪಗಳು. ಇಲ್ಲಿ ಚಂದ್ರ ಎಂದರೆ ಚಂದ್ರ ಗ್ರಹವಲ್ಲ.] ದತ್ತಾತ್ರಯ ರೂಪದಲ್ಲಿ ಭಗವಂತ ತತ್ತ್ವವಿದ್ಯೆ ಎನ್ನುವ ಆನ್ವೀಕ್ಷಿಕಿಯನ್ನು ಅಲರ್ಕರಾಜ, ಪ್ರಹ್ಲಾದ ಮುಂತಾದವರಿಗೆ ಉಪದೇಶಿಸಿದ. ಇದು ಭಗವಂತನ ಆರನೇ ಅವತಾರ.